ಸಿದ್ದರಾಮಯ್ಯ ಕಟ್ಟಲು ಹೊರಟಿರುವ ಅಹಿಂದ ಸೈನ್ಯದ ಸದಸ್ಯರ ಪಟ್ಟಿ?
ಬೆಂಗಳೂರು, ಜುಲೈ 1: ಸಮ್ಮಿಶ್ರ ಸರಕಾರದ ಪಾಲುದಾರ ಪಕ್ಷಗಳೇ ಸಮಾವೇಶ ನಡೆಸಲು ಮುಂದಾಗಿವೆ. ಒಂದು ಕಡೆ ಸಿದ್ದರಾಮಯ್ಯನವರು ಅಹಿಂದ ಸಮಾವೇಶ ನಡೆಸಲು ಸಜ್ಜಾಗುತ್ತಿದ್ದಾರೆ ಎನ್ನುವ ಸುದ್ದಿಯ ನಡುವೆ, ಮಾಜಿ ಪ್ರಧಾನಿ ದೇವೇಗೌಡ್ರು ಪಾದಯಾತ್ರೆ ನಡೆಸಲು ಮುಂದಾಗಿದ್ದಾರೆ.
ಅಹಿಂದ ವರ್ಗ ಯಾವತ್ತಿದ್ದರೂ ಕಾಂಗ್ರೆಸ್ ಪಕ್ಷದ ಬೆನ್ನಿಗೆ ನಿಲ್ಲುತ್ತದೆ ಎನ್ನುವ ಮಾತನ್ನು ಸಿದ್ದರಾಮಯ್ಯ ಹೇಳಿದ್ದರೂ, ಕಳೆದ ಅಸೆಂಬ್ಲಿ ಚುನಾವಣೆಯಲ್ಲಿ ಮತ್ತು ಇತ್ತೀಚಿನ ಲೋಕಸಭಾ ಚುನಾವಣೆಯಲ್ಲಿ ಅಹಿಂದ ವರ್ಗ ತಮ್ಮಿಂದ ದೂರವಾಗುತ್ತಿದೆಯಾ ಎನ್ನುವ ಸಂಶಯವನ್ನು ಅವರು ಪರೋಕ್ಷವಾಗಿ ವ್ಯಕ್ತಪಡಿಸಿದ್ದರು.
ಸಿದ್ದರಾಮಯ್ಯ ಇಷ್ಟೊಂದು ತಲೆಕೆಡಿಸಿಕೊಳ್ಳುತ್ತಿರುವುದಕ್ಕೆ ಇದಾ ಕಾರಣ?
2013ರ ಅಸೆಂಬ್ಲಿ ಚುನಾವಣೆಯಲ್ಲಿ ತಾನು ಬಲವಾಗಿ ನಂಬಿದ್ದ ವರ್ಗದಿಂದ ಮುಖ್ಯಮಂತ್ರಿ ಹುದ್ದೆಗೇರುವಷ್ಟರ ಮಟ್ಟಿಗೆ ಸಿದ್ದರಾಮಯ್ಯನವರಿಗೆ ಅವರಿಂದ ಬೆಂಬಲ ವ್ಯಕ್ತವಾಗಿತ್ತು. ಇದಾದ ನಂತರ, 2018ರ ಅಸೆಂಬ್ಲಿ ಚುನಾವಣೆಯಲ್ಲಿ ಇದು ಪುನರಾವರ್ತನೆ ಗೊಂಡಿರಲಿಲ್ಲ.
ಅರಸು ಕಾಲದಲ್ಲಿ ಕಟ್ಟಿದ್ದ ಅಹಿಂದ ಸೈನ್ಯವೆಲ್ಲಿ? ರಾಹುಲ್ ಗಾಂಧಿ ಕೇಳುತ್ತಿದ್ದಾರೆ!
ಕಳೆದ ಲೋಕಸಭಾ ಚುನಾವಣೆಯಲ್ಲಿ ಪಕ್ಷಕ್ಕೆ ನಿರೀಕ್ಷಿತ ಬೆಂಬಲ ಸಿಗದೇ, ಕಾಂಗ್ರೆಸ್ ಹೀನಾಯ ಸೋಲನ್ನು ಅನುಭವಿಸಿತ್ತು. ಪಕ್ಷ ಬಲವರ್ಧನೆ ಹೆಸರಿನಲ್ಲಿ ಮತ್ತೆ ಸಿದ್ದರಾಮಯ್ಯ ಅಹಿಂದ ಸಮಾವೇಶ ನಡೆಸಲು ಹೊರಟಿದ್ದಾರೆ. ಇದಕ್ಕೆ ಟೀಂ ಅನ್ನೂ ರೆಡಿ ಮಾಡುತ್ತಿದ್ದಾರೆ. ಸಿದ್ದು ಅಹಿಂದ ಟೀಂನ ಸಂಭಾವ್ಯ ಸದಸ್ಯರು..
ಸಮ್ಮಿಶ್ರ ಸರಕಾರಕ್ಕೆ ಕಿಂಚಿತ್ತೂ ತೊಂದರೆ ಬರದ ರೀತಿಯಲ್ಲಿ ಪಾದಯಾತ್ರೆ
ಸಮ್ಮಿಶ್ರ ಸರಕಾರಕ್ಕೆ ಕಿಂಚಿತ್ತೂ ತೊಂದರೆ ಬರದ ರೀತಿಯಲ್ಲಿ ಪಾದಯಾತ್ರೆ ನಡೆಸಲಾಗುವುದು ಎಂದು ಜೆಡಿಎಸ್ ವರಿಷ್ಠ ದೇವೇಗೌಡ್ರು ಹೇಳಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ಸೋತು ಹೈರಾಣವಾಗಿರುವುದರಿಂದ, ಪಕ್ಷದ ಕಾರ್ಯಕರ್ತರು ಮತ್ತು ಸ್ಥಳೀಯ ಮುಖಂಡರಿಗೆ ಧೈರ್ಯ, ಉತ್ಸಾಹ ತುಂಬಲು ಈ ಪಾದಯಾತ್ರೆ ಎಂದು ದೇವೇಗೌಡರು ಹೇಳಿದ್ದಾರೆ.
ಸಿದ್ದರಾಮಯ್ಯ ಅಹಿಂದ ಸಮಾವೇಶ ನಡೆಸಲು ಸಜ್ಜಾಗುತ್ತಿದ್ದಾರೆ
ಜೆಡಿಎಸ್ ಪಾದಯಾತ್ರೆ ನಡೆಸುವುದು ಖಚಿತ ಎನ್ನುವ ದೇವೇಗೌಡರ ಹೇಳಿಕೆಯ ನಂತರ, ಸಿದ್ದರಾಮಯ್ಯ ಕೂಡಾ ಅಹಿಂದ ಸಮಾವೇಶ ನಡೆಸಲು ಸಜ್ಜಾಗುತ್ತಿದ್ದಾರೆ. ಇದಕ್ಕಾಗಿ, ಟೀಂ ಕಟ್ಟುವ ಕೆಲಸಕ್ಕೆ ಸಿದ್ದರಾಮಯ್ಯ ಮುಂದಾಗಿದ್ದಾರೆ. ಹಿಂದಿನಿಂದಲೂ ತಮ್ಮ ಪರಮಾಪ್ತ ವಲಯದಲ್ಲಿ ಕಾಣಿಸಿಕೊಂಡವರನ್ನೇ ಸಿದ್ದರಾಮಯ್ಯ ಆಯ್ಕೆ ಮಾಡುವುದು ಬಹುತೇಕ ಖಚಿತ. ಜೆಡಿಎಸ್ ನಲ್ಲಿದ್ದ ಸಿದ್ದರಾಮಯ್ಯನವರನ್ನು ಅಹಿಂದ ಸಮಾವೇಶ ನಡೆಸಿದ್ದಕ್ಕಾಗಿಯೇ ಗೌಡ್ರು ಪಕ್ಷದಿಂದ ಉಚ್ಚಾಟಿಸಿದ್ದರು.
ಅವಧಿಗೆ ಮುನ್ನವೇ ಎದುರಾಗಬಹುದಾದ ಅಸೆಂಬ್ಲಿ ಚುನಾವಣೆ
ಅಹಿಂದ ವರ್ಗ ಕಾಂಗ್ರೆಸ್ ಪಕ್ಷದ ಜೊತೆಗಿದೆ, ಬೇರೆ ಸಮಾವೇಶ ನಡೆಸುವ ಅಗತ್ಯವಿಲ್ಲ ಎಂದು ಸಿದ್ದರಾಮಯ್ಯ ಹೇಳಿದ್ದರೂ, ಅವಧಿಗೆ ಮುನ್ನವೇ ಎದುರಾಗಬಹುದಾದ ಅಸೆಂಬ್ಲಿ ಚುನಾವಣೆಗೆ ಸಜ್ಜಾಗಲು, ಈ ಸಮಾವೇಶ ನಡೆಯುವುದು ಬಹುತೇಕ ಖಚಿತ ಎಂದು ಹೇಳಲಾಗುತ್ತಿದೆ. ಆದರೆ, ಯಾವ ಸಮಯದಲ್ಲಿ ಈ ಸಮಾವೇಶ ಆರಂಭವಾಗಬಹುದು ಎನ್ನುವುದರ ಬಗ್ಗೆ ಇನ್ನೂ ಅಂತಿಮ ನಿರ್ಧಾರವಾಗಿಲ್ಲ.
ಭೈರತಿ ಬ್ರದರ್ಸ್, ಜಮೀರ್, ಆಂಜನೇಯ, ನರೇಂದ್ರಸ್ವಾಮಿ
ಕೆಲವೊಂದು ಮೂಲಗಳ ಪ್ರಕಾರ ಸಿದ್ದರಾಮಯ್ಯನವರ ಅಹಿಂದ ಟೀಂನಲ್ಲಿ ಅವರ ಆಪ್ತವಲಯದವರೇ ಇರಲಿದ್ದಾರೆ. ಬೆಂಗಳೂರು ಕೆ ಆರ್ ಪುರಂ ಶಾಸಕ ಭೈರತಿ ಬಸವರಾಜು, ಹೆಬ್ಬಾಳ ಶಾಸಕ ಭೈರತಿ ಸುರೇಶ್, ಚಾಮರಾಜಪೇಟೆ ಶಾಸಕ ಜಮೀರ್ ಅಹಮದ್, ಮಾಜಿ ಸಚಿವರಾದ ಆಂಜನೇಯ ಮತ್ತು ನರೇಂದ್ರಸ್ವಾಮಿಗೆ ಸಮಾವೇಶದ ಜವಾಬ್ದಾರಿಗಳನ್ನು ಸಿದ್ದರಾಮಯ್ಯ ವಹಿಸುವ ಸಾಧ್ಯತೆಯಿದೆ.
ಜನಪ್ರಿಯಗೊಳ್ಳುತ್ತಿರುವ ಮುಖ್ಯಮಂತ್ರಿಗಳ ಗ್ರಾಮವಾಸ್ತವ್ಯ
ಜನಪ್ರಿಯಗೊಳ್ಳುತ್ತಿರುವ ಮುಖ್ಯಮಂತ್ರಿಗಳ ಗ್ರಾಮವಾಸ್ತವ್ಯದ ಜೊತೆಗೆ, ದೇವೇಗೌಡರು ನಡೆಸಲು ಮುಂದಾಗಿರುವ ಪಾದಯಾತ್ರೆಯಿಂದಾಗಿ, ಅಹಿಂದ ಸಮಾವೇಶ ನಡೆಸಲು ಸಿದ್ದರಾಮಯ್ಯ ತಮ್ಮಾಪ್ತರ ಬಳಿ ಸಮಾಲೋಚನೆ ನಡೆಸಿದ್ದಾರೆಂದು ತಿಳಿದು ಬಂದಿದೆ.