ಕಾಂಗ್ರೆಸ್ ಶಾಸಕರಿಗೆ ಸಿದ್ದರಾಮಯ್ಯ ಡಿನ್ನರ್ ಪಾರ್ಟಿ!
Recommended Video
ಬೆಂಗಳೂರು, ಜುಲೈ 03: ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಸ್ವಪಕ್ಷೀಯ ಶಾಸಕರಿಗೆ ಇಂದು ಔತಣಕೂಟ ಏರ್ಪಡಿಸಿದ್ದು, ಎಲ್ಲ ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ.
ಶಾಂತಿವನದಲ್ಲಿದ್ದಾಗ ವಿಡಿಯೋ ರಗಳೆಯಿಂದ ಬೇಸತ್ತಿದ್ದ ಹಾಗೂ ವಿಡಿಯೋ ವೈರಲ್ ಇಂದ ಪಕ್ಷದ ಶಾಸಕರಲ್ಲಿ ಉಂಟಾಗಿರಬಹುದಾದ ಅನುಮಾನಗಳನ್ನು ಪರಿಹರಿಸಲು ಹಾಗೂ ಬಜೆಟ್ಗೆ ಮುಂಚೆ ಪಕ್ಷದ ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲು ಈ ಔತಣಕೂಟ ಏರ್ಪಡಿಸಿದ್ದಾರೆ ಎನ್ನಲಾಗಿದೆ.
ಜಮೀರ್ಗೆ ಸಿಕ್ತು ಸಿದ್ದರಾಮಯ್ಯ ಬಳಸುತ್ತಿದ್ದ ಫಾರ್ಚೂನರ್ ಕಾರು
ಔತಣಕೂಟವು ಇಂದು (ಜುಲೈ 03) ರಾತ್ರಿ 7:30ಕ್ಕೆ ತಾಜ್ ವೆಸ್ಟ್ ಎಂಡ್ನಲ್ಲಿ ಆಯೋಜಿಸಲಾಗಿದ್ದು ವಿಧಾನಮಂಡಲದ ಜಂಟಿ ಸದನದ ಕಾಂಗ್ರೆಸ್ ಸದ್ಯರನ್ನು ಔತಣಕೂಟಕ್ಕೆ ಆಹ್ವಾನಿಸಲಾಗಿದೆ.
ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕರೂ ಆಗಿರುವ ಸಿದ್ದರಾಮಯ್ಯ ಅವರು ಪಕ್ಷದ ಶಾಸಕರನ್ನು ತಮ್ಮ ವಿಶ್ವಾಸದಲ್ಲಿ ಇಟ್ಟುಕೊಳ್ಳಬೇಕಾದ ಅವಶ್ಯಕತೆ ಇದ್ದು. ಅಲ್ಲದೆ ಇತ್ತೀಚಿನ ಬೆಳವಣಿಗೆಗಳಿಂದ ಸಿದ್ದರಾಮಯ್ಯ ಅವರು ಕಾಂಗ್ರೆಸ್ನ ಅತೃಪ್ತ ಬಣದ ನಾಯಕತ್ವ ವಹಿಸಿದ್ದಾರೆ ಎಂಬ ಊಹಾಪೋಹ ಹರಿದಾಡಿದ್ದರಿಂದ ಅದನ್ನು ಹೋಗಲಾಡಿಸಲೆಂದು ಈ ಔತಣಕೂಟ ಆಯೋಜಿಸಲಾಗಿದೆ ಎಂಬುದು ರಾಜಕೀಯ ತಜ್ಞರ ಲೆಕ್ಕಾಚಾರ.
ಸಿದ್ದರಾಮಯ್ಯ ಅವರ ಸೂಕ್ಷ್ಮ ರಾಜಕೀಯ ದಾಳವಾಗಿಯೂ ಈ ಔತಣಕೂಟವನ್ನು ನೋಡಲಾಗುತ್ತಿದ್ದು. ಸ್ವಪಕ್ಷೀಯರಿಗೆ ಔತಣಕೂಟ ಆಯೋಜಿಸುವ ಮೂಲಕ ಜೆಡಿಎಸ್ಗೆ, ಬಿಜೆಪಿಗೆ ತಾವು ಈಗಲೂ ಕಾಂಗ್ರೆಸ್ ಪಕ್ಷದ ಸೂಪರ್ ಪವರ್ ಎಂಬುದನ್ನು ಸಾಬೀತು ಮಾಡುತ್ತಿದ್ದಾರೆ ಜೊತೆಗೆ ಕಾಂಗ್ರೆಸ್ ಹೈಕಮಾಂಡ್ಗೂ ಸಂದೇಶ ರವಾನಿಸುತ್ತಿದ್ದಾರೆ ಎಂಬ ಲೆಕ್ಕಾಚಾರವೂ ಇದೆ.