ಕೂಡಗಿ ಗೋಲಿಬಾರ್ ಮ್ಯಾಜಿಸ್ಟ್ರೇಟ್ ತನಿಖೆಗೆ ಆದೇಶ
ಬಿಜಾಪುರ, ಜು.6: ಶಾಖೋತ್ಪನ ವಿದ್ಯುತ್ ಸ್ಥಾವರ ನಿರ್ಮಾಣ ವಿರೋಧಿಸಿ ನಿನ್ನೆ ಬಿಜಾಪುರ ಕೂಡಗಿಯಲ್ಲಿ ನಡೆದ ಪೊಲೀಸ್ ಗೋಲಿಬಾರ್ ಬಗ್ಗೆ ಮ್ಯಾಜಿಸ್ಟ್ರೇಟ್ ತನಿಖೆಗೆ ಆದೇಶ ನೀಡಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಕೂಡಗಿಯಲ್ಲಿ ಶನಿವಾರ ನಡೆದ ಪೊಲೀಸ್ ಗೋಲಿಬಾರ್ನಲ್ಲಿ ಗಾಯಗೊಂಡು ಇಲ್ಲಿನ ಕೆ.ಎಲ್.ಇ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಇಬ್ಬರು ರೈತರ ಆರೋಗ್ಯ ವಿಚಾರಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ವಿಜಾಪುರ ಜಿಲ್ಲೆಯ ಜಿಲ್ಲಾಧಿಕಾರಿಗಳಿಗೆ ವಿಚಾರಣೆ ನಡೆಸಿ ಆದಷ್ಟು ಬೇಗ ವರದಿ ನೀಡುವಂತೆ ಸೂಚಿಸಲಾಗಿದೆ ಎಂದು ತಿಳಿಸಿದರು.[ವಿದ್ಯುತ್ ಸ್ಥಾವರ ವಿರೋಧಿಸಿದ ರೈತರ ಮೇಲೆ ಗುಂಡು]
ಮುಖ್ಯಮಂತ್ರಿಗಳ ಜೊತೆಗೆ ಗೃಹ ಸಚಿವರಾದ ಕೆ.ಜೆ. ಜಾರ್ಜ್, ಕಾನೂನು ಸಚಿವ ಟಿ.ಬಿ. ಜಯಚಂದ್ರ, ಬೆಳಗಾವಿ ಉತ್ತರ ಶಾಸಕ ಫಿರೋಜ ಶೇಠ ಆಸ್ಪತ್ರೆಗೆ ಭೇಟಿ ನೀಡಿದ್ದರು.
ಮ್ಯಾಜಿಸ್ಟ್ರೇಟ್ ತನಿಖೆ ವರದಿ ಬಂದ ನಂತರ ಮುಂದಿನ ಕ್ರಮ:
ಮ್ಯಾಜಿಸ್ಟ್ರೇಟ್ ತನಿಖೆ ವರದಿ ಬಂದ ನಂತರ ಘಟನೆಯ ಬಗ್ಗೆ ಮುಂದಿನ ಕ್ರಮ ಗೊಳ್ಳಲಾಗುವುದು. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಇಬ್ಬರು ರೈತರ ಆರೋಗ್ಯ ಸ್ಥಿತಿ ಸ್ಥಿರವಾಗಿದ್ದು, ಸಾಧ್ಯವಿದ್ದ ಎಲ್ಲ ಉತ್ತಮ ಚಿಕಿತ್ಸೆಯನ್ನು ಈ ರೈತರಿಗೆ ನೀಡುವಂತೆ ವೈದ್ಯರಿಗೆ ತಿಳಿಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ತಪ್ಪು ಮಾಹಿತಿಯಿಂದ ಪ್ರತಿಭಟನೆ
ರೈತರಿಗೆ ತಪ್ಪು ಮಾಹಿತಿ ನೀಡುತ್ತಿರುವುದರಿಂದ ಈ ರೀತಿ ಪ್ರತಿಭಟನೆಗಳು ನಡೆಯುತ್ತಿವೆ. ರಾಜ್ಯಕ್ಕೆ ವಿದ್ಯುತ್ ಅಭಾವವಿರುವುದರಿಂದ ರೈತರು ಸಹ ತಮ್ಮ ಪ್ರತಿಭಟನೆಯನ್ನು ಕೈಬಿಟ್ಟು ರಾಜ್ಯ ಸರ್ಕಾರದೊಂದಿಗೆ ಸಹಕರಿಸಬೇಕೆಂದು ಮುಖ್ಯಮಂತ್ರಿಗಳು ಈ ಸಂದರ್ಭದಲ್ಲಿ ಮನವಿ ಮಾಡಿದರು.
ಶನಿವಾರ ಆಗಿದ್ದೇನು?
ಕೂಡಗಿಯಲ್ಲಿ ಕೇಂದ್ರ ಸರ್ಕಾರದ ಎನ್.ಟಿ.ಪಿ.ಸಿ. ವತಿಯಿಂದ ಹಾಗೂ ರಾಜ್ಯ ಸರ್ಕಾರದ ಸಹಕಾರದಿಂದ ವಿದ್ಯುತ್ ಸ್ಥಾವರವನ್ನು ನಿರ್ಮಿಸುತ್ತಿದೆ. ಈ ಸ್ಥಾವರದ ಸುತ್ತಮುತ್ತಲಿನ ಗ್ರಾಮಸ್ಥರು ಈ ಸ್ಥಾವರವನ್ನು ವಿರೋಧಿಸಿ ಪದೇ ಪದೇ ಪ್ರತಿಭಟನೆ ಮಾಡುತ್ತಿದ್ದು, ಶನಿವಾರದ ಪ್ರತಿಭಟನೆಯಲ್ಲಿ ಅನಿರೀಕ್ಷಿತವಾಗಿ ಹೆಚ್ಚಿನ ಜನರು ಅಲ್ಲಿ ಬಂದು ಸೇರಿದ್ದರು. ಈ ಸಂದರ್ಭದಲ್ಲಿ ಪೊಲೀಸ್ ಪಡೆ ಕಡಿಮೆ ಸಂಖ್ಯೆಯಲ್ಲಿ ಇತ್ತು.
ಚಿಕಿತ್ಸೆಗೆ ಸ್ಪಂದನೆ:
ಪರಿಸ್ಥಿತಿ ಕೈ ಮೀರಿದ್ದರಿಂದ ಹಾಗೂ ರೈತರು ಕಲ್ಲು ತೂರಾಟ ಮಾಡಿದ್ದರಿಂದ ಪೊಲೀಸ್ರು ಅನಿವಾರ್ಯವಾಗಿ ಲಘು ಲಾಠಿ ಪ್ರಹಾರ, ಆಶ್ರುವಾಯು ಬಳಕೆ ಹಾಗೂ ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ. ಗಾಳಿಯಲ್ಲಿ ಗುಂಡು ಹಾರಿಸಿದ್ದರಿಂದ ಇಬ್ಬರು ರೈತರಾದ ಚಂದಪ್ಪಾ ಹಾಲಪ್ಪಾ ಶೇಡಿ ಹಾಗೂ ಸದಾಶಿವ ಮಲ್ಲಪ್ಪಾ ಗಣಾಚಾರಿ ಅವರು ಗಾಯಗೊಂಡಿದ್ದರು. ಅವರಿಬ್ಬರಿಗೂ ಗುಂಡು ತಗುಲಿದ್ದು, ಗುಂಡು ಹೂರ ತೆಗೆದು ಈಗ ಚಿಕಿತ್ಸೆ ನೀಡಲಾಗುತ್ತಿದೆ. ಅವರು ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆಂದು ವೈದ್ಯರು ಹೇಳಿದ್ದಾರೆ.