ವಿಧಾನಸಭೆ: ನೂತನ ಸಚಿವರನ್ನು ಪರಿಚಯಿಸಲು ಸಿದ್ದರಾಮಯ್ಯ ಆಕ್ಷೇಪ!
ಬೆಂಗಳೂರು, ಫೆ. 18: ನೂತನ ಸಚಿವರನ್ನು ವಿಧಾನಸಭೆಗೆ ಪರಿಚಯಿಸಲು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮುಂದಾದಾಗ ವಿಪಕ್ಷ ನಾಯಕ ಸಿದ್ದರಾಮಯ್ಯ ಅದಕ್ಕೆ ಆಕ್ಷೇಪಡಿಸಿದ ಪ್ರಸಂಗ ವಿಧಾನಸಭೆಯಲ್ಲಿ ನಡೆಯಿತು.
ಜಂಟಿ ಅಧಿವೇಶನದ ಎರಡನೇ ದಿನ ವಿಧಾನಸಭೆ ಕಲಾಪ ಆರಂಭವಾಗುತ್ತಿದ್ದಂತೆಯೆ 2018ನೇ ಸಾಲಿನ ಸಿಎಜಿ ವರದಿಯನ್ನು ಸದನದಲ್ಲಿ ಮಂಡಿಸಿದರು. ಆ ಬಳಿಕ ನೂತನ ಸಚಿವರನ್ನು ಪರಿಚಯ ಮಾಡಿಕೊಡಲು ಸಿಎಂ ಯಡಿಯೂರಪ್ಪ ಮುಂದಾದರು. ನೂತನ ಸಚಿವರಾದ ರಮೇಶ್ ಜಾರಕಿಹೊಳಿ, ಬಿ.ಸಿ. ಪಾಟೀಲ್, ಡಾ. ಸುಧಾಕರ್, ಶಿವರಾಂ ಹೆಬ್ಬಾರ್ ಸೇರಿದಂತೆ ಎಲ್ಲ 10 ನೂತನ ಸಚಿವರ ಹೆರುಗಳನ್ನು ಹೇಳುತ್ತಿದ್ದರು. ಆಗ ಮಧ್ಯೆ ಪ್ರವೇಶ ಮಾಡಿದ ವಿಪಕ್ಷ ನಾಯಕ ಸಿದ್ದರಾಮಯ್ಯ, ನೂತನ ಸಚಿವರೇ ಸದನದಲ್ಲಿ ಇಲ್ಲ, ಸದನದಲ್ಲಿದ ಸಚಿವರನ್ನು ಏಕೇ ಪರಿಚಯ ಮಾಡಿಕೊಡುತ್ತೀರಿ? ಇದು ನಗೆಪಾಟಲಾಗುತ್ತದೆ. ಹಾಜರಿರುವ ಸಚಿವರನ್ನು ಮಾತ್ರ ಪರಿಚಯ ಮಾಡಿಕೊಡಿ ಎಂದರು.
ಟ್ರಂಪ್ ಆಗಮನಕ್ಕೆ ಪ್ರಧಾನಿ ಮೋದಿ 'ತಡೆಗೋಡೆ'ಗೆ ವಿಪಕ್ಷಗಳ ಕಿಡಿ!
ಇದರೊಂದಿಗೆ ಜಂಟಿ ಅಧೀವೇಶನದ ಎರಡನೇ ದಿನವೇ ಏನೂ ಚರ್ಚೆ ಮಾಡಬೇಕು ಎಂಬುದರ ಕುರಿತೇ ಅರ್ಧ ದಿನ ವಿಧಾನಸಭೆಯಲ್ಲಿ ಚರ್ಚೆ ನಡೆಯಿತು. ಆದರೂ ಒಮ್ಮತದ ನಿರ್ಣಯಕ್ಕೆ ಮಾತ್ರ ವಿಧಾನಸಭೆ ಬರಲಿಲ್ಲ.
ನೂತನ ಸಚಿವರೆಲ್ಲ ನಮ್ಮಲ್ಲಿದ್ದವರೇ ಎಂದ ಸಿದ್ದರಾಮಯ್ಯ
ಸದನದಲ್ಲಿ ಹಾಜರಿರದೇ ಇರುವ ಸಚಿವರ ಹೆಸರುಗಳನ್ನು ಬಿಟ್ಟು ಉಳಿದಂತೆ ಹಾಜರಿದ್ದ ಸಚಿವರಾದ ಶಿವರಾಂ ಹೆಬ್ಬಾರ್, ಬಿ.ಎ. ಬಸವರಾಜು ಅವರನ್ನು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸದನಕ್ಕೆ ಪರಿಚಯಿಸಿದ್ರು. ಆಗ ಮತ್ತೆ ಸಿಎಂ ಯಡಿಯೂರಪ್ಪ ಕಾಲೆಳೆದ ವಿಪಕ್ಷ ನಾಯಕ ಸಿದ್ದರಾಮಯ್ಯ, ಇರಲಿ ಬಿಡಿ ಅವರ ಪರಿಚಯದ ಅಗತ್ಯವಿಲ್ಲ. ಅವರೆಲ್ಲ ನಮ್ಮಲ್ಲಿದ್ದವರೆ ಎಂದರು. ಆಗ ಮಧ್ಯ ಪ್ರವೇಶ ಮಾಡಿದ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು, ಅವರು ನಿಮ್ಮಲ್ಲಿ ಇದ್ದವರೇ, ಆದರೆ ಇಲ್ಲಿದ್ದವರಿಗೂ ಆ ವಿಷಯ ಗೊತ್ತಾಗಲಿ ಎಂದು ಹಾಸ್ಯಚಟಾಕಿ ಹಾರಿಸಿದ್ರು.
ನಿಲುವಳಿ ಸೂಚನೆ ಮಂಡನೆಗೆ ಮುಂದಾದ ಸಿದ್ದರಾಮಯ್ಯ
ಸಚಿವರ ಪರಿಚಯ ಪ್ರಸಂಗ ಮುಗಿಯುತ್ತಿದ್ದಂತೆಯೆ, ರಾಜ್ಯದ ಕಾನೂನು ಸುವ್ಯವಸ್ಥೆ ಕುರಿತಂತೆ ನಿಲುವಳಿ ಸೂಚನೆ ಮಂಡನೆಗೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಮುಂದಾದರು. ಆದರೆ ಕಾನೂನು ಸುವ್ಯವಸ್ಥೆ ವಿಷಯಗಳನ್ನು ರಾಜ್ಯಪಾಲರ ಭಾಷಣಕ್ಕೆ ವಂದನೆ ಸೂಚಿಸುವ ನಿರ್ಣಯದ ಮೇಲಿನ ಭಾಷಣದಲ್ಲೇ ಪ್ರಸ್ತಾಪಿಸಬಹುದು ಎಂದು ವಿಧಾನಸಭಾಧ್ಯಕ್ಷ ಕಾಗೇರಿ ಅವಕಾಶ ನಿರಾಕರಿಸಿದ್ರು, ನಂತರ ನಿಲುವಳಿ ಸೂಚನೆ ಪ್ರಸ್ತಾವನೆಗೆ ಅವಕಾಶ ಮಾಡಿಕೊಟ್ಟ ಸ್ಪೀಕರ್, ಈಗ ಕೇವಲ ಆರಂಭಿಕ ಪ್ರಸ್ತಾವನೆ ಮಾತ್ರ ಮಾಡಿ, ನಿಲುವಳಿ ಸೂಚನೆ ಮೇಲಿನ ಚರ್ಚೆಗೆ ಅವಕಾಶವಿಲ್ಲ. ಪ್ರಾಥಮಿಕ ಪ್ರಸ್ತಾವನೆಗೆ ಮಾತ್ರ ಮಾಡಿ ಎಂದು ಸಿದ್ದರಾಮಯ್ಯ ಅವರಿಗೆ ಹೇಳಿದರು.
ಸ್ಪೀಕರ್ ನಡೆಯ ಬಗ್ಗೆ ಸಿದ್ದರಾಮಯ್ಯ ಅಸಮಾಧಾನ
ನಿಯಮ 69ರಡಿ ಚರ್ಚೆಗೆ ತಕ್ಷಣ ಅವಕಾಶ ಕೊಡದೇ ರಾಜ್ಯಪಾಲರ ಭಾಷಣದ ಮೇಲಿನ ಚರ್ಚೆಗೆ ಅವಕಾಶ ಕೊಟ್ಟಿದ್ದಕ್ಕೆ ವಿಪಕ್ಷ ಕಾಂಗ್ರೆಸ್ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದ್ರು. ಈಗಲೇ ಚರ್ಚೆಗೆ ಅವಕಾಶ ಕೊಡುವಂತೆ ವಿಪಕ್ಷ ನಾಯಕ ಸಿದ್ದರಾಮಯ್ಯ ಆಗ್ರಹಿಸಿ, ಸ್ಪೀಕರ್ ಕಾಗೇರಿ ತೀರ್ಮಾನ ಬದಲಿಸುವಂತೆ ಸಿದ್ದರಾಮಯ್ಯ ಪಟ್ಟುಹಿಡಿದಿದ್ದರು. ಆದರೆ ಸಮಯ ನಿಗದಿ ಮಾಡಿ ಚರ್ಚೆಗೆ ಅವಕಾಶ ನೀಡುವುದಾಗಿ ಹೇಳಿದ ಸ್ಪೀಕರ್ ನಡೆಗೆ ವಿಪಕ್ಷ ನಾಯಕ ಸಿದ್ದರಾಮಯ್ಯ ಅಸಮಾಧಾನ ವ್ಯಕ್ತಡಿಸಿ, ನಿಮಗಿಷ್ಟ ಬಂದ ಹಾಗೇ ಮಾಡೋದಾದರೆ ನೀವೆ ಮಾಡಿಕೊಂಡು ಹೋಗಿ. ವಿಪಕ್ಷ ಬೇಡ ಅನ್ನೋದಾದರೆ ನಮ್ಮನ್ನು ಕರೆಯಲೇಬೇಡಿ. ಅವಕಾಶ ಇಲ್ಲವೆಂದಾದ್ರೆ ನಾವು ಸದನಕ್ಕೆ ಬರುವುದರಲ್ಲಿ ಅರ್ಥವೇ ಇಲ್ಲ ಎಂದು ಸಿದ್ದರಾಮಯ್ಯ ಸದನದಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದರು. ಅದಕ್ಕೆ ಪ್ರತ್ಯುತ್ತರ ಕೊಟ್ಟ ಸ್ಪೀಕರ್ ಕಾಗೇರಿ ಅವರು, ರಾಜ್ಯಪಾಲರ ಭಾಷಣಕ್ಕೆ ವಂದನೆ ಸೂಚಿಸುವ ನಿರ್ಣಯ ಅಂಗೀಕಾರವೂ ಅಷ್ಟೇ ಮುಖ್ಯ ಎಂದರು.
ಸ್ಪೀಕರ್ ನಡೆ ವಿರೋಧಿಸಿ ಕಾಂಗ್ರೆಸ್ ಸದಸ್ಯರ ಸಭಾತ್ಯಾಗ
ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರ ಆದೇಶಕ್ಕೆ ವಿಪಕ್ಷ ನಾಯಕ ಸಿದ್ದರಾಮಯ್ಯ ತೀವ್ರ ವಿರೋಧ ವ್ಯಕ್ತಡೊಸಿದ್ರು. ನೀವು ಪ್ರತಿಪಕ್ಷ ಸದಸ್ಯರನ್ನ ರಕ್ಷಣೆ ಮಾಡಿ, ಇಲ್ಲವೇ ನೀವೇ ಸದನವನ್ನ ನಡೆಸಿಕೊಳ್ಳಿ ಎಂದು ಸ್ಪೀಕರ್ ಅವರಿಗೆ ಅಸಮಾಧಾನ ವ್ಯಕ್ತಡಪಸಿದ್ರು. ತಕ್ಷಣ ವಿಪಕ್ಷ ಸದಸ್ಯರನ್ನು ಸಮಾಧಾನ ಮಾಡಲು ಮುಂದಾದ ಸ್ಪೀಕರ್ ಕಾಗೇರಿ ಅವರು, ನೀವಿಲ್ಲದೆ ಸದನ ನಡೆಸೋದು ಹೇಗೆ? ನೀವು ಇರಬೇಕು, ಚರ್ಚೆಗೆ ಅವಕಾಶ ಸಿಗಬೇಕು ಎಂದು ಸಮಜಾಯಿಸಿ ಕೊಟ್ಟರು. ಇದೇ ಸಂದರ್ಭದಲ್ಲಿ ಆಡಳಿತ ಹಾಗೂ ವಿರೋಧ ಪಕ್ಷಗಳ ಸದಸ್ಯರ ಮಧ್ಯೆ ವಾಗ್ವಾದ ನಡೆದು ಸದನದಲ್ಲಿ ಗೊಂದಲದ ವಾತಾವರಣ ಉಂಟಾಯ್ತು. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಡುತ್ತಿರುವುದರ ಬಗ್ಗೆ ನಿಯಮ 69ರಡಿ ಚರ್ಚೆಗೆ ಅವಕಾಶ ಕೊಡಲಿಲ್ಲವೆಂದು ಆರೋಪಿಸಿ ಕಾಂಗ್ರೆಸ್ ಪಕ್ಷದ ಸದಸ್ಯರು ಸಭಾತ್ಯಾಗ ಮಾಡಿದ್ರು.
ಒಟ್ಟಾರೆ ಬೆಳಗ್ಗೆ ವಿಧಾನಸಭೆ ಕಲಾಪ ಆರಂಭವಾದಾಗಿನಿಂದಲೂ ಇದೇ ವಿಚಾರದ ಬಗ್ಗೆಯೆ ಪ್ರಸ್ತಾಪ, ಚರ್ಚೆ, ವಾಗ್ವಾದ ಆಗಿದ್ದಲ್ಲದೇ, ಕೊನೆಗೆ ವಿಪಕ್ಷ ಸದಸ್ಯರು ಸಭಾತ್ಯಾಗ ಮಾಡಲೂ ಕಾರಣವಾಯ್ತು. ಆದರೆ ಕಾಂಗ್ರೆಸ್ ಸದ್ಯರು ಸಭಾತ್ಯಾಗ ಮಾಡಿದ್ರೂ, ಜೆಡಿಎಸ್ ಸದಸ್ಯರು ಸದನದಲ್ಲಿದ್ದು ಬೇರೆ ವಿಷಯಗಳ ಚರ್ಚೆಗೆ ಅವಕಾಶ ಕೊಡಬೇಕೆಂದು ಸ್ಪೀಕರ್ ಅವರಿಗೆ ಮನವಿ ಮಾಡಿಕೊಂಡರು.