ಅಮಿತ್ ಶಾ ಏಕ ಪಕ್ಷ ಪ್ರಸ್ತಾವಕ್ಕೆ ಸಿದ್ದರಾಮಯ್ಯ ಟ್ವೀಟ್ ಏಟು
ಬೆಂಗಳೂರು, ಸೆಪ್ಟೆಂಬರ್ 17: ಏಕ ರಾಜಕೀಯ ಪಕ್ಷದ ಪ್ರಸ್ತಾವ ಮಾಡಿರುವ ಗೃಹ ಮಂತ್ರಿ ಅಮಿತ್ ಶಾ ಅವರಿಗೆ ಸಿದ್ದರಾಮಯ್ಯ ಅವರು ಟ್ವೀಟ್ ಮೂಲಕ ತಿರುಗೇಟು ನೀಡಿದ್ದಾರೆ.
'ಸಂವಿಧಾನ ಬಹುಪಕ್ಷಗಳ ರಾಜಕೀಯ ವ್ಯವಸ್ಥೆಗೆ ಅವಕಾಶ ನೀಡಿದೆ. ಆದರೆ ಈ ಬಹುಪಕ್ಷ ರಾಜಕೀಯದಿಂದ ದೇಶಕ್ಕೆ ಯಾವ ಉಪಯೋಗವು ಆಗಿಲ್ಲ, ಇದನ್ನು ಬದಲಾಯಿಸಿ ಏಕ ರಾಜಕೀಯ ಪಕ್ಷ ವ್ಯವಸ್ಥೆ ಜಾರಿಗೆ ತರಬೇಕು' ಎಂಬರ್ಥದಲ್ಲಿ ಅಮಿತ್ ಶಾ ಮಾತನಾಡಿದ್ದರು. ಇದು ಸಿದ್ದರಾಮಯ್ಯ ಅವರನ್ನು ಕೆರಳಿಸಿದೆ.
ಹಿಂದಿ ಹೇರಿಕೆ: ಯಡಿಯೂರಪ್ಪ ಹೇಳಿಕೆಗೆ ಅಮಿತ್ ಶಾ ಚೆಕ್ ಮೇಟ್!
ಅಮಿತ್ ಶಾ ಅವರು ಪ್ರಸ್ತಾಪಿಸಿರುವ ಏಕ ರಾಜಕೀಯ ಪಕ್ಷ ವ್ಯವಸ್ಥೆಯನ್ನು ಕಟುವಾಗಿ ವಿರೋಧಿಸಿರುವ ಸಿದ್ದರಾಮಯ್ಯ, ಭ್ರಷ್ಟಾಚಾರ, ಅಸುರಕ್ಷಿತ ಗಡಿ, ಮಹಿಳಾ ದೌರ್ಜನ್ಯ ...ಹೀಗೆ ಎಲ್ಲದ್ದಕ್ಕೂ ಬಹುಪಕ್ಷೀಯ ರಾಜಕೀಯ ವ್ಯವಸ್ಥೆಯನ್ನು ಹೊಣೆಮಾಡಿರುವ ಕೇಂದ್ರ ಗೃಹಸಚಿವ ಅಮಿತ್ ಶಾ, 1998ರಿಂದ 2004 ರ ವರೆಗೆ ಅಧಿಕಾರದಲ್ಲಿದ್ದ ವಾಜಪೇಯಿ ನೇತೃತ್ವದ ಎನ್ ಡಿಎ ಆಡಳಿತವನ್ನು ದೂರಲು ಹೊರಟಿದ್ದಾರೆಯೇ? ಎಂದು ವ್ಯಂಗ್ಯ ಮಾಡಿದ್ದಾರೆ.
|
2014 ರಿಂದ ದೇಶದಲ್ಲಿ ಏಕಚಕ್ರಾಧಿಪತ್ಯ ಇದೆ: ಸಿದ್ದರಾಮಯ್ಯ
2014ರಿಂದ ದೇಶದಲ್ಲಿರುವುದು ಏಕಚಕ್ರಾಧಿಪತ್ಯ. ರಪೇಲ್ ಹಗರಣ, ಜಿಡಿಪಿ ಶೇ.5ಕ್ಕೆ ಇಳಿದಿದ್ದು, ನಿರುದ್ಯೋಗ 45ವರ್ಷಗಳಲ್ಲಿಯೇ ಅತ್ಯಧಿಕವಾಗಿದ್ದು, ಬ್ಯಾಂಕ್ ಲೂಟಿಮಾಡಿ ದೇಶ ಬಿಟ್ಟು ಓಡಿದ್ದು, ಕಾಶ್ಮೀರದಲ್ಲಿ ಉಗ್ರರ ದಾಳಿ 42% ಹೆಚ್ಚಿದ್ದು, ಮಹಿಳಾ ಅತ್ಯಾಚಾರ 22% ಹೆಚ್ಚಿದ್ದು... ಇದೇ ಅವಧಿಯಲ್ಲಿ ಅಲ್ಲವೇ? ಎಂದು ಅಮಿತ್ ಶಾ ಅವರನ್ನು ಪ್ರಶ್ನೆ ಮಾಡಿದ್ದಾರೆ ಸಿದ್ದರಾಮಯ್ಯ.
|
ಮಿತ್ರ ಪಕ್ಷಗಳಿಗೆ ವಿಚ್ಛೇದನ ನೀಡುತ್ತಾರೆಯೇ: ಸಿದ್ದರಾಮಯ್ಯ
ಬಹುಪಕ್ಷೀಯ ರಾಜಕೀಯ ವ್ಯವಸ್ಥೆಯನ್ನು ವಿರೋಧಿಸುತ್ತಿರುವ ಅಮಿತ್ ಶಾ, ಬಿಹಾರ, ಗೋವಾ, ಮಹಾರಾಷ್ಟ್ರ ಮತ್ತು ಈಶಾನ್ಯ ರಾಜ್ಯಗಳ ಬಿಜೆಪಿಯ ಮಿತ್ರಪಕ್ಷಗಳಿಗೆ ವಿಚ್ಛೇದನದ ಸಂದೇಶ ಕಳುಹಿಸುತ್ತಿದ್ದಾರೆಯೇ? ಅಲ್ಲಿರುವುದು ಬಹುಪಕ್ಷೀಯ ಸರ್ಕಾರವಲ್ಲವೇ? ಎಂದು ಕೇಳಿದ್ದಾರೆ ಸಿದ್ದರಾಮಯ್ಯ.
ದಿನಕ್ಕೊಂದು ದೇಶ ಸುತ್ತುವ ಪ್ರಧಾನಿ ಎಲ್ಲಿದ್ದಾರೆ?; ಸಿದ್ದರಾಮಯ್ಯ
|
ಅಮಿತ್ ಶಾ ಏಕತ್ವದ ವ್ಯಸನಗ್ರಸ್ತರಾಗಿದ್ದಾರೆ: ಸಿದ್ದರಾಮಯ್ಯ
ಗೃಹಸಚಿವ ಅಮಿತ್ ಶಾ ಏಕತ್ವದ ವ್ಯಸನಗ್ರಸ್ತರಾಗಿದ್ದಾರೆ. ಬಹುಭಾಷೆಗಳನ್ನು ಮೂಲೆಗೆ ತಳ್ಳುವ ಪ್ರಯತ್ನದ ನಂತರ ಈಗ ಬಹುಪಕ್ಷೀಯ ರಾಜಕೀಯ ವ್ಯವಸ್ಥೆಯನ್ನು ಎಲ್ಲ ಅನಿಷ್ಠಗಳಿಗೆ ಹೊಣೆ ಮಾಡಿದ್ದಾರೆ. ಅವರಿಗೆ ಯಾರಾದರೂ ಈ ದೇಶದ ರಾಜಕೀಯ,ಸಾಮಾಜಿಕ ಮತ್ತು ಸಾಂಸ್ಕೃತಿಕ ಇತಿಹಾಸದ ಪಾಠ ಮಾಡಬೇಕಾಗಿದೆ.
ಏಕ ದೃಷ್ಟಿಕೋನದಿಂದ ನೋಡುತ್ತಿರುವ ಕೇಂದ್ರ
ಕೇಂದ್ರ ಸರ್ಕಾರವು ಎಲ್ಲವನ್ನೂ ಏಕ ಕೇಂದ್ರಿತ ದೃಷ್ಟಿಯಿಂದ ನೋಡುವ ಪ್ರಯತ್ನ ಮಾಡುತ್ತಿರುವಂತಿದೆ. ಏಕ ದೇಶ, ಏಕ ಭಾಷೆ ಎಂದು ಕೆಲವು ದಿನಗಳ ಹಿಂದಷ್ಟೆ ಹೇಳಿರುವ ಅಮಿತ್ ಶಾ ಅವರ ಮಾತಿಗೆ ದಕ್ಷಿಣ ಭಾರತ ಈಗಾಗಲೇ ಆಕ್ರೋಶ ವ್ಯಕ್ತಪಡಿಸಿದೆ. ಈಗ ಬಹು ರಾಜಕೀಯ ಪಕ್ಷ ವ್ಯವಸ್ಥೆಯನ್ನು ತೆಗೆದುಹಾಕುವ ಸುಳಿವು ನೀಡಿದ್ದಾರೆ. ಇದೂ ಸಹ ದೇಶವ್ಯಾಪಿ ಆಕ್ರೋಶ ಹೊರಹಾಕುವ ಸಾಧ್ಯತೆ ಇದೆ.