ನನ್ನ ಮೊದಲ ಶತ್ರು ಸಿದ್ದರಾಮಯ್ಯ: ಎಚ್. ಡಿ. ಕುಮಾರಸ್ವಾಮಿ
ಬೆಂಗಳೂರು, ಆಗಸ್ಟ್ 25 : "ಮೈತ್ರಿ ಸರ್ಕಾರದಲ್ಲಿ ನಾನು ಸಿಎಂ ಆಗಿರಲಿಲ್ಲ. ಕ್ಲರ್ಕ್ ರೀತಿಯಲ್ಲಿ ಕೆಲಸ ಮಾಡುತ್ತಿದ್ದೆ. ಸಿದ್ದರಾಮಯ್ಯ ನನ್ನ ಮೊದಲ ಶತ್ರುವಾಗಿದ್ದರು" ಎಂದು ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಹೊರ ಬಾಂಬ್ ಸಿಡಿಸಿದ್ದಾರೆ.
ಕರ್ನಾಟಕದಲ್ಲಿ ಮೈತ್ರಿ ಸರ್ಕಾರ ಪತನಗೊಂಡ ಬಳಿಕ ಸಿದ್ದರಾಮಯ್ಯ ಮತ್ತು ದೇವೇಗೌಡರ ನಡುವೆ ಮಾತಿನ ಏಟು-ಎದಿರೇಟು ನಡೆಯುತ್ತಿದೆ. ಈಗ ಇದಕ್ಕೆ ಎಚ್. ಡಿ. ಕುಮಾರಸ್ವಾಮಿ ಸೇರಿಕೊಂಡಿದ್ದು, ಕಾಂಗ್ರೆಸ್ ನಾಯಕರ ವಿರುದ್ಧ ಗರಂ ಆಗಿದ್ದಾರೆ.
Recommended Video
ಸಿದ್ದರಾಮಯ್ಯ-ದೇವೇಗೌಡ ಯುದ್ಧ: ಕುಮಾರಸ್ವಾಮಿ ಶಾಂತಿ ಮಂತ್ರ
"ನಾನು ಮುಖ್ಯಮಂತ್ರಿಯಾಗಿದ್ದು ಸಿದ್ದರಾಮಯ್ಯ ಅವರಿಗೆ ಸಹಿಸಿಕೊಳ್ಳಲು ಸಾಧ್ಯವಾಗಲಿಲ್ಲ. ತಮ್ಮ ಆಪ್ತ ಶಾಸಕರನ್ನು ಸರ್ಕಾರದ ವಿರುದ್ಧ ಎತ್ತಿಕಟ್ಟುವ ಕೆಲಸ ಮಾಡಿಕೊಂಡು ಬಂದಿದ್ದರು. ಶಾಸಕರ ರಾಜೀನಾಮೆಗೂ ಸಿದ್ದರಾಮಯ್ಯ ನೇರ ಕಾರಣ" ಎಂದು ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದರು.
ದೇವೇಗೌಡರ 'ಹಳೆಯ ಆಟ' ನೆನಪಿಸಿ, ಮತ್ತೆ ಬೆಂಕಿಯುಗುಳಿದ ಸಿದ್ದರಾಮಯ್ಯ
ಶುಕ್ರವಾರ ಸಿದ್ದರಾಮಯ್ಯ ಪತ್ರಿಕಾಗೋಷ್ಠಿ ನಡೆಸಿದಾಗ ಟ್ವೀಟ್ ಮಾಡಿದ್ದ ಎಚ್. ಡಿ. ಕುಮಾರಸ್ವಾಮಿ, "ಮಾಜಿ ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯ ಅವರು ಮಾಡಿರುವ ಆರೋಪಗಳಿಗೆ ಉತ್ತರಿಸಲು ಇದು ಸಕಾಲವಲ್ಲ. ದೇಶದ ರಾಜಕೀಯ ವಿದ್ಯಮಾನಗಳು ಏಕರೂಪವಾಗಿವೆ. ಜಾತ್ಯತೀತ ಶಕ್ತಿಗಳು ಒಗ್ಗೂಡಬೇಕಾದ ಇಂತಹ ಸಂದರ್ಭದಲ್ಲಿ ಒಡಕಿನ ಮಾತುಗಳು ಆರೋಗ್ಯಕರವಲ್ಲ. ಕಾಲ ಕೂಡಿ ಬಂದಾಗ ಖಂಡಿತ ಎಲ್ಲದಕ್ಕೂ ಉತ್ತರಿಸುವೆ" ಎಂದು ಹೇಳಿದ್ದರು.
ದೇವೇಗೌಡರು ತುಳಿದ ರಾಜಕಾರಣಿಗಳ ಪಟ್ಟಿ ನೀಡಿದ ಸಿದ್ದರಾಮಯ್ಯ
ಹೈಕಮಾಂಡ್ ತೀರ್ಮಾನವಾಗಿತ್ತು
"ಕರ್ನಾಟಕದಲ್ಲಿ ಮೈತ್ರಿ ಸರ್ಕಾರ ಮುಂದುವರೆಯಬೇಕು ಎಂಬುದು ಕಾಂಗ್ರೆಸ್ ಹೈಕಮಾಂಡ್ ತೀರ್ಮಾನವಾಗಿತ್ತು. ಆದರೆ, ಸಿದ್ದರಾಮಯ್ಯಗೆ ಅದು ಇಷ್ಟವಿರಲಿಲ್ಲ. ಸಿಎಂ ಆಗಿ ನಾನು ಕೈಗೊಂಡ ಕೆಲವು ತೀರ್ಮಾನಗಳನ್ನು ಸಹಿಸಿಕೊಳ್ಳದೆ ಸರ್ಕಾರದ ಪತನಕ್ಕೆ ನಿರಂತರ ಪ್ರಯತ್ನ ಮಾಡಿದ್ದರು" ಎಂದು ಎಚ್. ಡಿ. ಕುಮಾರಸ್ವಾಮಿ ಆರೋಪಿಸಿದರು.
ಅವಕಾಶವನ್ನು ನೀಡಲಿಲ್ಲ
"ಪೋನ್ ಟ್ಯಾಪಿಂಗ್ ಪ್ರಕರಣ ಸಿಬಿಐ ತನಿಖೆಗೆ ವಹಿಸಿರುವುದಕ್ಕೆ ಕೂಡಾ ಸಿದ್ದರಾಮಯ್ಯ ಕರಾಮತ್ತು ಕಾರಣ. ಅತೃಪ್ತ ಶಾಸಕರು ಸರ್ಕಾರಕ್ಕೆ ಬೆಂಬಲ ನೀಡಲು ಸಿದ್ದರಾಗಿದ್ದರೂ ಅದಕ್ಕೆ ಅವಕಾಶ ನೀಡಲಿಲ್ಲ. ನಾನು ಸಿಎಂ ಕುರ್ಚಿಯಲ್ಲಿ ಕೂರುವುದನ್ನು ಸಹಿಸದ ಸಿದ್ದರಾಮಯ್ಯ ಸರ್ಕಾರ ಪತನದ ರೂವಾರಿಯಾದರು" ಎಂದು ಕುಮಾರಸ್ವಾಮಿ ದೂರಿದರು.
ನನ್ನ ವಿರುದ್ದ ಕತ್ತಿ ಮಸೆದರು
"ನಾನು ಕೈಗೊಂಡ ತೀರ್ಮಾನದ ವಿರುದ್ದ ತಮ್ಮ ಬೆಂಬಲಿಗರನ್ನು ಛೂಬಿಡುವ ಮೂಲಕ ಬಂಡಾಯಕ್ಕೆ ನಾಂದಿ ಹಾಡಿದ್ದರು. ಶಾಸಕರನ್ನು ವಿಶೇಷ ವಿಮಾನದಲ್ಲಿ ಕಳುಹಿಸುವ ಮೂಲಕ ಸರ್ಕಾರ ಪತನಕ್ಕೆ ಕಾರಣರಾದ ಸಿದ್ದರಾಮಯ್ಯ ಕಾಂಗ್ರೆಸ್ ಹೈಕಮಾಂಡ್ ಮಾತಿಗೂ ಕವಡೆ ಕಾಸಿನ ಕಿಮ್ಮತ್ತು ನೀಡಲಿಲ್ಲ" ಎಂದು ಕುಮಾರಸ್ವಾಮಿ ಹೇಳಿದರು.
ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ
ಸಿದ್ದರಾಮಯ್ಯ ದೇವೇಗೌಡರು ಮತ್ತು ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದರು. "ಕುಮಾರಸ್ವಾಮಿ ಸರ್ಕಾರಕ್ಕೆ ಸಂಪೂರ್ಣ ಸಹಕಾರ ನೀಡಿದ್ದೆವು. ಸರ್ಕಾರಕ್ಕೆ ಏನಾದರೂ ಕಿರುಕುಳ ನೀಡಿದ್ದ ಒಂದೇ ಒಂದು ಉದಾಹರಣೆ ಕೊಡಲಿ. ಕುಮಾರಸ್ವಾಮಿಯವರು ನಮ್ಮೆಲ್ಲ ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವಲ್ಲಿ ವಿಫಲರಾದರು. ಸಮನ್ವಯ ಸಮಿತಿಯಲ್ಲಿ ಕೈಗೊಂಡ ನಿರ್ಧಾರಗಳನ್ನು ಕೂಡಾ ಕುಮಾರಸ್ವಾಮಿ ಜಾರಿ ಮಾಡಲಿಲ್ಲ" ಎಂದು ಆರೋಪಿಸಿದರು.
|
ಸ್ಪಷ್ಟನೆ ನೀಡಿದ ಕುಮಾರಸ್ವಾಮಿ
ಸಿದ್ದರಾಮಯ್ಯ ಅವರು ಚುನಾವಣೆ ಮುನ್ನ ಬಿಜೆಪಿಗಿಂತ ನಮ್ಮ ಪಕ್ಷವನ್ನು ಹೆಚ್ಚು ಟೀಕಿಸುತ್ತಿದ್ದರು ಎಂದು ಹೇಳಿದ್ದೆ.ಆದರೆ ಸಿದ್ದರಾಮಯ್ಯ ಅವರು ನನ್ನ ಮೊದಲ ಶತ್ರು ಎಂದಿರಲಿಲ್ಲ.ಆ ಬಗ್ಗೆ ಅನಗತ್ಯ ಗೊಂದಲ ಬೇಡ ಎಂದು ಕುಮಾರಸ್ವಾಮಿ ಟ್ವೀಟ್ ಮಾಡಿದ್ದಾರೆ.