ಸಿಎಂಗೆ ಅಧಿಕಾರ ದಾಹ, ಬಿಜೆಪಿ ಜತೆ ಕೈಜೋಡಿಸಿದರೂ ಅಚ್ಚರಿಯಿಲ್ಲ: ದೇವೇಗೌಡ
ಬೆಂಗಳೂರು, ಫೆಬ್ರವರಿ 21: "ಮುಖ್ಯಮಂತ್ರಿ ಸಿದ್ದರಾಮಯ್ಯ ಅಧಿಕಾರದ ದಾಹ ಹೊಂದಿರುವ ರಾಜಕಾರಣಿ. ಅವರು ಬಿಜೆಪಿ ಜತೆಗೆ ಹೋಗಲೂಬಹುದು. ಆದರೆ ನಾವು ಮಾತ್ರ ವಿರೋಧ ಪಕ್ಷದಲ್ಲೇ ಕೂರುತ್ತೇವೆ." ಹೀಗಂತ ಜೆಡಿಎಸ್ ವರಿಷ್ಠ ಎಚ್.ಡಿ ದೇವೇಗೌಡ 'ನ್ಯೂಸ್ 18'ಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.
ಸಂದರ್ಶನದಲ್ಲಿ ಕರ್ನಾಟಕದ ಹಿರಿಯ ರಾಜಕಾರಣಿ ಹಲವು ವಿಚಾರಗಳನ್ನು ಬಿಚ್ಚಿಟ್ಟಿದ್ದಾರೆ. 'ನಮ್ಮನ್ನು ಈ ಬಾರಿ ಯಾರೂ ಹಗುರವಾಗಿ ಸ್ವೀಕರಿಸಲು ಸಾಧ್ಯವಿಲ್ಲ. ಆರ್ಥಿಕವಾಗಿ ಬಲಾಢ್ಯವಾಗಿರುವ ರಾಷ್ಟ್ರೀಯ ಪಕ್ಷಗಳ ವಿರುದ್ಧ ಹೋರಾಡಲು ನಮ್ಮ ಬಡ ಪಕ್ಷ ತನ್ನದೇ ರಣತಂತ್ರಗಳ ಮೂಲಕ ಸಿದ್ಧವಾಗಿದೆ. ಇದು ನಮ್ಮ ಪಕ್ಷಕ್ಕೆ ಮತ್ತು ಕರ್ನಾಟಕಕ್ಕೆ ಪ್ರಮುಖ ಚುನಾವಣೆ' ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಎನ್ಸಿಪಿ, ಬಿಎಸ್ಪಿ ಜೊತೆ ಜೆಡಿಎಸ್ ಮೈತ್ರಿಯ ಹಿಂದಿನ 'ಮರ್ಮ'ವೇನು?
ಖಾತೆ ತೆರೆಯಲಿದೆ ಬಿಎಸ್ಪಿ
ಬಿಜೆಪಿ ಮತ್ತು ಕಾಂಗ್ರೆಸೇತರ ಪಕ್ಷಗಳ ಮತಗಳು ಒಡೆದು ಹೋಗಬಾರದು ಎಂಬ ಕಾರಣಕ್ಕೆ ನಾವು ಈ ಬಾರಿ ಬಿಎಸ್ಪಿ ಮತ್ತು ಎನ್ ಸಿಪಿ ಜತೆ ಹೊಂದಾಣಿಕೆ ಮಾಡಿಕೊಂಡಿದ್ದೇವೆ ಎಂದು ಅವರು ಸಂದರ್ಶನದಲ್ಲಿ ಹೇಳಿದ್ದಾರೆ.
ಕಾಂಗ್ರೆಸ್ ಮತ್ತು ಬಿಜೆಪಿ ಎರಡೂ ಪಕ್ಷಗಳು ದಲಿತ ವಿರೋಧಿ ಪಕ್ಷಗಳು. ಬಿಎಸ್ಪಿ ಜತೆಗಿನ ಮೈತ್ರಿಯನ್ನು ದಲಿತರು ಸ್ವಾಗತಿಸಿದ್ದಾರೆ. ಮಾಯಾವತಿಯವರು ಮೇರು ದಲಿತ ನಾಯಕಿಯಾಗಿದ್ದು ಮೈತ್ರಿಯಿಂದ ದಲಿತ ಮತಗಳೂ ಜೆಡಿಎಸ್ ಗೆ ಬೀಳಲಿವೆ. ಅಲ್ಲದೆ ಬಿಎಸ್ಪಿ ಕರ್ನಾಟಕದಲ್ಲಿ ಈ ಬಾರಿ ಖಾತೆ ತೆರಯಲಿದೆ ಎಂದೂ ಅವರು ಹೇಳಿದ್ದಾರೆ.
ಮತ್ತೊಂದು ಮೆಗಾ ರ್ಯಾಲಿ
ಬೆಂಗಳೂರಿನಲ್ಲಿ ನಡೆದ ನಮ್ಮ ಜಂಟಿ ರ್ಯಾಲಿಯಲ್ಲಿ 8 ಲಕ್ಷಕ್ಕೂ ಹೆಚ್ಚು ಜನರು ಭಾಗವಹಿಸಿದ್ದು ಇಂಥಹದ್ದೇ ಮತ್ತೊಂದು ಮೆಗಾ ರ್ಯಾಲಿಯನ್ನು ಮುಂಬೈ ಕರ್ನಾಟಕದಲ್ಲಿ ನಡೆಸಲಿದ್ದೇವೆ ಎಂದು ದೇವೇಗೌಡರು ಮಾಹಿತಿ ನೀಡಿದ್ದಾರೆ.
ಬಿಜೆಪಿಗೆ ಲಾಭ ಮಾಡಿಕೊಳ್ಳಲು ಬಿಎಸ್ಪಿ ಜತೆ ಸೇರಿ ಕಾಂಗ್ರೆಸ್ ಮತಗಳನ್ನು ತಿನ್ನುತ್ತಿದ್ದೀರಿ ಎಂಬ ಆರೋಪವನ್ನು ಇದೇ ಸಂದರ್ಭದಲ್ಲಿ ಗೌಡರು ತಳ್ಳಿ ಹಾಕಿದ್ದಾರೆ. "ನಾನು ಯಾವತ್ತೂ ಹಾಗೆ ಮಾಡಿಲ್ಲ. ಇಬ್ಬರೂ ನಮಗೆ ವೈರಿಗಳು. ಇಬ್ಬರಿಂದಲೂ ಸಮಾನ ಅಂತರವನ್ನು ನಾವು ಕಾಪಾಡಿಕೊಂಡಿದ್ದೇವೆ. ನಾವ್ಯಾಕೆ ಬಿಜೆಪಿಗೆ ಸಹಾಯ ಮಾಡಲಿ?" ಎಂದು ಅವರು ಪ್ರಶ್ನಿಸಿದ್ದಾರೆ.
ಸಮ್ಮಿಶ್ರ ಸರಕಾರವಿಲ್ಲ
ಅತಂತ್ರ ವಿಧಾನಸಭೆ ಸೃಷ್ಟಿಯಾದರೆ ಯಾರ ಜತೆ ಹೋಗುತ್ತೀರಿ ಎಂಬ ಪ್ರಶ್ನೆಗೆ ಉತ್ತರಿಸಿದ ದೇವೇಗೌಡರು, ನಾವು ಯಾರ ಜತೆಗೂ ಹೋಗಲ್ಲ. ಸ್ವಂತ ಬಲದ ಮೇಲೆ ಅಧಿಕಾರ ಹಿಡಿಯುತ್ತೇವೆ. ಅಂಥಹ ಸಂದರ್ಭ ಬಂದರೆ ವಿರೋಧ ಪಕ್ಷದಲ್ಲಿ ಇರುತ್ತೇವೆ. ಅದಕ್ಕಿಂತಲೂ ಹೆಚ್ಚಾಗಿ ನಾವು ಹೊಸ ಚುನಾವಣೆ ಎದುರಿಸಬಹುದು. ಇದನ್ನು ಕುಮಾರಸ್ವಾಮಿಯವರು ಈಗಾಗಲೇ ಹೇಳಿದ್ದಾರೆ ಎಂದಿದ್ದಾರೆ.
ವಿಕಾಸಪರ್ವ ಯಶಸ್ಸಿನ ನಂತರ ಜೆಡಿಎಸ್ ಮುಂದಿದೆ ಸವಾಲುಗಳು!
ಸಿದ್ದರಾಮಯ್ಯನವರಿಗೆ ಅಧಿಕಾರ ದಾಹ
ಒಂದೊಮ್ಮೆ ಬಹುಮತ ಸಿಗದಿದ್ದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬಿಜೆಪಿ ಜತೆಗೂ ಹೋಗಬಹುದು. ಅವರು ಅಧಿಕಾರ ದಾಹವಿರುವ ರಾಜಕಾರಣಿ. ಅವರು ಅಧಿಕಾರಕ್ಕಾಗಿ ಏನು ಬೇಕಾದರೂ ಮಾಡುತ್ತಾರೆ. ಅವರಿಗೆ ಜೀವನದಲ್ಲಿ ಮೌಲ್ಯ ಎನ್ನುವುದೇ ಇಲ್ಲ. ಆದರೆ ನಾನು ಹಾಗಲ್ಲ ಎಂದು ಅವರು ಇದೇ ಸಂದರ್ಭದಲ್ಲಿ ಹೇಳಿದ್ದಾರೆ.
"ಇನ್ನು ಚುನಾವಣೆ ಮುಗಿದ ಮೇಲೆಯೂ ನಾವು ನಮ್ಮ ನಿರ್ಧಾರವನ್ನು ಬದಲಿಸುವುದಿಲ್ಲ. ನಿಮಗೆ ಮಾಯಾವತಿ, ಶರದ್ ಪವಾರ್ ಅವರು ಬಿಜೆಪಿ ಜತೆಗೆ ಹೋಗುತ್ತಾರೆ ಎಂದು ಅನಿಸುತ್ತಿದೆಯಾ? ಸಾಧ್ಯವೇ ಇಲ್ಲ," ಎಂದು ಅವರು ಖಂಡಾತುಂಡವಾಗಿ ಹೇಳಿದ್ದಾರೆ.
ಮೋದಿ, ಅಮಿತ್ ಶಾಗೆ ಸಿದ್ದರಾಮಯ್ಯ 5 ಪ್ರಶ್ನೆಗಳು!
ಒಂದು ಕಾಲದ ನೀಲಿ ಕಂಗಳ ಹುಡುಗ
"ಒಂದು ಕಾಲದಲ್ಲಿ ಸಿದ್ದರಾಮಯ್ಯ ನನ್ನ ನೀಲಿ ಕಂಗಳ ಹುಡುಗನಾಗಿದ್ದ. ಅವರು ಇವತ್ತು ಏನಾಗಿದ್ದಾರೋ ಅದಕ್ಕೆ ಕಾರಣ ನಾನು. ಎರಡು ಬಾರಿ ಅವರನ್ನು ನಾನು ಉಪಮುಖ್ಯಮಂತ್ರಿ ಮಾಡಿದೆ. ಆದರೆ ನಂತರ ನನಗೆ ದ್ರೋಹ ಬಗೆದರು. ತಾವು ತೆಗಳುತ್ತಿದ್ದ ಕಾಂಗ್ರೆಸ್ ಗೇ ಹೋಗಿ ಸೇರಿದರು. ಅವರ ಸರಕಾರ ಕರ್ನಾಟಕದ ಇತಿಹಾಸದಲ್ಲೇ ಭ್ರಷ್ಟ, ಅತ್ಯಂತ ಕೆಟ್ಟ ಸರಕಾರ. ತಾನು ರಾಜಕೀಯವನ್ನು ಅರೆದು ಕುಡಿದ್ದೇನೆ. ಜಯಗಳಿಸುತ್ತೇನೆ ಎಂದುಕೊಂಡಿದ್ದಾರೆ. ಅವರಿಗೆ ಜನರು ಬುದ್ಧಿ ಕಲಿಸುತ್ತಾರೆ," ಎಂದ ದೇವೇಗೌಡರು ಆಕ್ರೋಶದ ಹೇಳಿಕೆ ನೀಡಿದ್ದಾರೆ.
ಇನ್ನು ಕಾಂಗ್ರೆಸ್ ಹೈಕಮಾಂಡ್ ಜತೆ ತಮಗೇ ಯಾವುದೇ ಸಂಬಂಧವಿಲ್ಲ ಎಂದು ದೇವೇಗೌಡರು ಸ್ಪಷ್ಟಪಡಿಸಿದ್ದಾರೆ. ಎಲ್ಲರ ಜತೆಗೂ ಸೌಹಾರ್ದ ಸಂಬಂಧವನ್ನಷ್ಟೇ ಉಳಿಸಿಕೊಂಡಿದ್ದೇನೆ ಎಂದಿದ್ದಾರೆ.
ಬಿಜೆಪಿಗೆ ರಾಜ್ಯದಲ್ಲಿ ಅವಕಾಶವೇ ಇಲ್ಲ
ರಾಜ್ಯದಲ್ಲಿ ಬಿಜೆಪಿಗೆ ಅಧಿಕಾರಕ್ಕೇರುವ ಅವಕಾಶವೇ ಇಲ್ಲ ಎಂದು ದೇವೇಗೌಡರು ವಿಶ್ಲೇಷಿಸಿದ್ದಾರೆ. ಬಿಜೆಪಿಯ 5 ವರ್ಷಗಳ ದುರಾಡಳಿತ ಆಘಾತಕಾರಿಯಾಗಿತ್ತು. ರಾಜ್ಯವವನ್ನು ಲೂಟಿ ಮಾಡಿದರು. ಚೆಕ್ ನಲ್ಲಿ ಲಂಚ ಪಡೆದು ಯಡಿಯೂರಪ್ಪ ಜೈಲಿಗೂ ಹೋಗಿ ಬಂದರು. ನಾವು ಅವರನ್ನು ಉಪಮುಖ್ಯಮಂತ್ರಿ ಮಾಡಿದರೆ ಅದನ್ನೇ ಬಳಸಿಕೊಂಡು ಮುಖ್ಯಮಂತ್ರಿಯಾದರು. ಬಿಜೆಪಿ ಜತೆಗೆ ಹೋಗಿದ್ದಕ್ಕೆ ನಾವು ರಾಜ್ಯದ ಜನರ ಕ್ಷಮೆ ಕೇಳಿದ್ದೇವೆ ಎಂದು ದೇವೇಗೌಡರು ತಿಳಿಸಿದ್ದಾರೆ.
ಮೋದಿ ಜನಪ್ರಿಯತೆ ಕುಸಿಯುತ್ತಿದೆ
ಪ್ರಧಾನಿ ನರೇಂದ್ರ ಮೋದಿ ಬಿಜೆಪಿಯವರ ಮೇರು ವ್ಯಕ್ತಿಯಾಗಿದ್ದು ಪ್ರಚಾರವನ್ನು ಮುನ್ನಡೆಸುತ್ತಿದ್ದಾರೆ. ಆದರೆ ಅವರ ಜನಪ್ರಿಯತೆ ಕುಸಿಯುತ್ತಿದೆ. ಗುಜರಾತ್ ಚುನಾವಣೆಯನ್ನು ಕಷ್ಟಪಟ್ಟು ಗೆದ್ದಿದ್ದಾರೆ. ರಾಜಸ್ಥಾನ ಉಪಚುನಾವಣೆಯಲ್ಲೂ ಸೋತಿದ್ದಾರೆ. ಆರ್ಥಿಕ ಬಿಕ್ಕಟ್ಟು ಕೂಡ ಅವರ ಸಮಸ್ಯೆಯನ್ನು ಹೆಚ್ಚಾಗಿಸಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಮತ್ತೆ ಚುನಾವಣೆಗೆ ನಿಲ್ಲಲ್ಲ
56 ವರ್ಷಗಳ ರಾಜಕೀಯ ಜೀವನದಲ್ಲಿ ಹಲವು ಏಳು ಬೀಳುಗಳನ್ನು ನೋಡಿದ್ದೇನೆ. ಸಾರ್ವಜನಿಕ ಸಮಾರಂಭಗಳಲ್ಲಿ ಭಾಗವಹಿಸಲು ಮಾತನಾಡಲು ನನ್ನ ಆರೋಗ್ಯ ಸಹಕರಿಸುತ್ತಿಲ್ಲ. ವೈಯಕ್ತಿಕವಾಗಿ ಮುಂದಿನ ಚುನಾವಣೆಯಲ್ಲಿ ನಿಲ್ಲಬಾರದು ಎಂದು ನಿರ್ಧರಿಸಿದ್ದೇನೆ ಎಂದು ದೇವೇಗೌಡರು ತಮ್ಮ ಮನದಾಳದ ಮಾತು ತಿಳಿಸಿದ್ದಾರೆ. ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳನ್ನು ಎದುರಿಸಲು ಪ್ರಾದೇಶಿಕ ಪಕ್ಷಗಳು ಒಟ್ಟಾಗುವುದು ಅಗತ್ಯ ಎಂದೂ ಅವರು ಇದೇ ಸಂದರ್ಭದಲ್ಲಿ ಪ್ರತಿಪಾದಿಸಿದ್ದಾರೆ.
ಅಭ್ಯರ್ಥಿಗಳ 2ನೇ ಪಟ್ಟಿ ಬಿಡುಗಡೆ
ಯಾವತ್ತೂ ನಾಮಪತ್ರ ಸಲ್ಲಿಸುವ ಕೊನೆಯ ದಿನ ತನ್ನ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡುತ್ತಿದದ ಜೆಡಿಎಸ್ ಈ ಬಾರಿ ಎಲ್ಲರಿಗಿಂತ ಮೊದಲು 126 ಕ್ಷೇತ್ರಗಳಿಗೆ ತನ್ನ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದೆ. ಇನ್ನು 98 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಿಸಬೇಕಿದ್ದು ಇದರಲ್ಲಿ ತಲಾ 20 ಕ್ಷೇತ್ರಗಳನ್ನು ಎನ್.ಸಿ.ಪಿ ಮತ್ತು ಬಿಎಸ್ಪಿಗೆ ಬಿಟ್ಟು ಕೊಡಲು ಜೆಡಿಎಸ್ ನಿರ್ಧರಿಸಿದೆ. ಉಳಿದ 58 ಕ್ಷೇತ್ರಗಳಿಗೆ ಸದ್ಯದಲ್ಲೇ ಪಟ್ಟಿ ಬಿಡುಗಡೆ ಮಾಡುವುದಾಗಿ ದೇವೇಗೌಡರು ಹೇಳಿದ್ದಾರೆ.