ಸಿದ್ದರಾಮಯ್ಯ ರಾಜೀನಾಮೆ ಹಿಂದಿರುವ ರಾಜಕೀಯ ಲೆಕ್ಕಾಚಾರಗಳೇನು?
ಬೆಂಗಳೂರು, ಡಿಸೆಂಬರ್ 9: ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಸಿದ್ದರಾಮಯ್ಯ, ಪ್ರತಿಪಕ್ಷ ನಾಯಕ ಸ್ಥಾನಕ್ಕೆ ಎಚ್. ಕೆ. ಪಾಟೀಲ್... ಇದು ಉಪಚುನಾವಣೆ ಸೋಲಿನ ಹಿನ್ನೆಲೆಯಲ್ಲಿ 'ಪ್ರಜಾಪ್ರಭುತ್ವದ ಮೌಲ್ಯಗಳನ್ನು ಎತ್ತಿಹಿಡಿಯಲು ಹಾಗೂ ಪಕ್ಷದ ಹಿತದೃಷ್ಟಿಯ' ನೆಪ ಮುಂದಿಟ್ಟು ಶಾಸಕಾಂಗ ಪಕ್ಷದ ನಾಯಕ ಹಾಗೂ ವಿಪಕ್ಷ ನಾಯಕ ಸ್ಥಾನಕ್ಕೆ ರಾಜೀನಾಮೆ ನೀಡುರುವ ಸಿದ್ದರಾಮಯ್ಯ ಅವರ ರಾಜಕೀಯ ನಡೆಯ ಹಿಂದಿರುವ ಲೆಕ್ಕಾಚಾರ.
'ಒನ್ ಇಂಡಿಯಾ ಕನ್ನಡ'ಕ್ಕೆ ಲಭ್ಯವಾಗಿರುವ ಮಾಹಿತಿ ಪ್ರಕಾರ, ಸಿದ್ದರಾಮಯ್ಯ ರಾಜೀನಾಮೆ ಹಿಂದೆ ಇಂತಹೊಂದು ಲೆಕ್ಕಾಚಾರ ಕೆಲಸ ಮಾಡಿದೆ. "ಸಿದ್ದರಾಮಯ್ಯ ಆಪ್ತ ವಲಯದಲ್ಲಿ ಚುನಾವಣೆಗೂ ಮೊದಲೇ ಕಳಪೆ ಫಲಿತಾಂಶ ಹೊರಬಿದ್ದರೆ ಮುಂದೇನು? ಎಂಬ ಪ್ರಶ್ನೆ ಚರ್ಚೆಯಾಗಿದೆ. ಈ ಸಮಯದಲ್ಲಿ ಕೆಪಿಸಿಸಿಯನ್ನು ಕೈಗೆ ತೆಗೆದುಕೊಂಡು ಪಕ್ಷವನ್ನು ತಳಮಟ್ಟದಿಂದ ಕಟ್ಟುವುದು ಮತ್ತು ಮುಂದಿನ ಚುನಾವಣೆ ಹೊತ್ತಿಗೆ ಬಿಜೆಪಿಯನ್ನು ಸಮರ್ಥವಾಗಿ ಎದುರಿಸಿ ಅಧಿಕಾರಕ್ಕೆ ಬರುವುದು ಅಗತ್ಯ ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ಈ ಕೆಲಸವನ್ನು ಸಿದ್ದರಾಮಯ್ಯ ಅವರೇ ಮಾಡಿದರೆ ಸೂಕ್ತ ಎಂಬ ಕಾರಣಕ್ಕೆ ರಾಜೀನಾಮೆ ನೀಡಿದ್ದಾರೆ. ಮುಂದಿನ ನಿರ್ಧಾರ ಏನಿದ್ದರು ಹೈಕಮಾಂಡ್ ತೆಗೆದುಕೊಳ್ಳಬೇಕು,'' ಎಂದು ಕಾಂಗ್ರೆಸ್ ನಾಯಕರು, ಸಿದ್ದರಾಮಯ್ಯ ಆಪ್ತವಲಯದ ಹಿರಿಯ ರಾಜಕಾರಣಿಯೊಬ್ಬರು ಹೇಳುತ್ತಾರೆ.
ಆಂತರಿಕ ಕಿತ್ತಾಟದ ಹಿನ್ನೆಲೆ
"ಬಿಜೆಪಿ ಒಳಗೂ ಸಮಸ್ಯೆಗಳಿವೆ, ನಾಯಕರ ನಡುವೆ ಕಚ್ಚಾಟಗಳಿವೆ. ಆದರೆ ಚುನಾವಣೆ ವಿಚಾರದಲ್ಲಿ ಒಗ್ಗಟ್ಟಾಗಿ ಕೆಲಸ ಮಾಡಿದ್ದಾರೆ,'' ಎನ್ನುವ ಕಾಂಗ್ರೆಸ್ ನಾಯಕರು, ಇಂತಹದೊಂದು ಪರಿಸ್ಥಿತಿ ಕೆಪಿಸಿಸಿಯಲ್ಲಿ ಇಲ್ಲ ಎಂದು ವಿಷಾಧ ವ್ಯಕ್ತಪಡಿಸುತ್ತಾರೆ. ಉಪ ಚುನಾವಣೆಯ ಉದ್ದಕ್ಕೂ ಸಿದ್ದರಾಮಯ್ಯ ಏಕಾಂಗಿಯಾಗಿ ಪಕ್ಷದ ಪರ, ಅಭ್ಯರ್ಥಿಗಳ ಪರ ಪ್ರಚಾರ ನಡೆಸಿದರು. ಚಿಕ್ಕ, ಪುಟ್ಟ ಮುನಿಸುಗಳನ್ನು ಮುಂದಿಟ್ಟುಕೊಂಡು ಕಾಂಗ್ರೆಸ್ನ ಹಲವು ನಾಯಕರು ಪ್ರಚಾರ ಕಣಕ್ಕಿಳಿಯದೇ ಹಿಂದೇಟು ಹಾಕಿದರು. ಈಗಲೂ ಮೂಲ ಕಾಂಗ್ರೆಸ್ಸಿಗರು, ವಲಸೆ ಬಂದವರು ಎಂಬ ಪ್ರತ್ಯೇಕ ಆಲೋಚನೆ ಪಕ್ಷದೊಳಗೆ ಕೆಲಸ ಮಾಡುತ್ತಿದೆ. ಇದೇ ಎಲ್ಲಾ ಸಮಸ್ಯೆಗಳಿಗೆ ಮೂಲ,'' ಎನ್ನುತ್ತಾರೆ ಕೆಪಿಸಿಸಿಯ ಇನ್ನೊಬ್ಬ ಹಿರಿಯ ನಾಯಕರು.
ಚುನಾವಣೆಯಲ್ಲಿ ಸೋಲು: ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಲಾಬಿಯೋ ಲಾಬಿ!
ಅಚ್ಚರಿಯ ರಾಜೀನಾಮೆಗಳು
ಈ ಎಲ್ಲಾ ಕಾರಣಗಳ ಹಿನ್ನೆಲೆಯಲ್ಲಿ ಖುದ್ದು ಪಕ್ಷದ ಕಾರ್ಯಕರ್ತರಿಗೇ ಅಚ್ಚರಿಯ ರೀತಿಯಲ್ಲಿ ಸಿದ್ದರಾಮಯ್ಯ ರಾಜೀನಾಮೆ ನಿರ್ಧಾರ ಹೊರಬಿದ್ದಿದೆ. ಬೆನ್ನಲ್ಲೇ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ದಿನೇಶ್ ಗುಂಡೂರಾವ್ ಕೂಡ ರಾಜೀನಾಮೆ ನೀಡಿದ್ದಾರೆ. "ಪಕ್ಷದ ಸೋಲಿಗೆ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡುತ್ತಿರುವುದಾಗಿ,'' ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಒಂದು ಬಣದ ನಾಯಕರ ರಾಜೀನಾಮೆ
ದಿನೇಶ್ ಗುಂಡೂರಾವ್, "ಸಿದ್ದರಾಮಯ್ಯ ರಾಜೀನಾಮೆಗೂ ನನ್ನ ರಾಜೀನಾಮೆಗೂ ಸಂಬಂಧ ಇಲ್ಲ,'' ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದ್ದಾರೆ. ಮೇಲ್ನೋಟಕ್ಕೆ ಈ ಎರಡೂ ರಾಜೀನಾಮೆಗಳು ಬೇರೆ ಬೇರೆ ಎಂದು ಬಿಂಬಿಸುವ ಪ್ರಯತ್ನವೊಂದು ಇದರ ಹಿಂದೆ ಸ್ಪಷ್ಟವಾಗಿ ಕಾಣಿಸುತ್ತಿದೆ. ಆದರೆ, ಕೆಪಿಸಿಸಿಯ ಒಂದು ಬಣದ ನಾಯಕರು ಸ್ಪಷ್ಟವಾದ ಮುನ್ನೋಟ ಇಟ್ಟುಕೊಂಡೇ ಈ ನಡೆಗಳನ್ನು ಜಂಟಿಯಾಗಿ ಇಟ್ಟಿದ್ದಾರೆ ಎಂಬುದನ್ನು ಪಕ್ಷದ ಮೂಲಗಳು ಹೇಳುತ್ತಿವೆ.
ಕಾಂಗ್ರೆಸ್ ನಾಯಕರ ಹೈಡ್ರಾಮ, ಸಿದ್ದರಾಮಯ್ಯ ರಾಜೀನಾಮೆ
ಕೆಪಿಸಿಸಿ ಪುನರ್ರಚನೆಗೆ ಮುಹೂರ್ತ ಫಿಕ್ಸ್
ಉಪ ಚುನಾವಣೆ ಫಲಿತಾಂಶ ಹೊರಬೀಳುತ್ತಲೇ ರಾಜ್ಯ ಕಾಂಗ್ರೆಸ್ ಪದಾಧಿಕಾರಿಗಳ ಪಟ್ಟಿಯ ಪುನರ್ರಚನೆಗೆ ಮಾನಸಿಕವಾಗಿ ಪಕ್ಷ ಸಿದ್ಧವಾಗಿತ್ತು. ಆಂತರಿಕ ಚುನಾವಣೆಗೆ ಸಿದ್ಧತೆಗಳು ಆರಂಭಗೊಂಡಿದ್ದವು. ಕೆಪಿಸಿಸಿ ಸ್ಥಾನದಿಂದ ದಿನೇಶ್ ಗುಂಡೂರಾವ್ ಕೆಳಗಿಳಿಯುವುದು ಹಾಗೂ ಡಿ. ಕೆ. ಶಿವಕುಮಾರ್ ಪಟ್ಟಕ್ಕೇರುವುದನ್ನು ಒಂದು ಬಣ ಊಹಿಸಿತ್ತು. ಆದರೆ ಸಿದ್ದರಾಮಯ್ಯ ರಾಜೀನಾಮೆ ಹಿನ್ನೆಲೆಯಲ್ಲಿ ಅಷ್ಟು ಸುಲಭವಾಗಿ ವಲಸೆ ಬಂದವರು ಪಕ್ಷವನ್ನು ಬಿಟ್ಟುಕೊಡುವ ಲಕ್ಷಣಗಳು ಕಾಣಿಸುತ್ತಿಲ್ಲ. ಏನಕ್ಕೂ ಎರಡೂ ರಾಜೀನಾಮೆಗಳ ಕೆಪಿಸಿಸಿಯಲ್ಲಿ ಕಂಪನ ಎಬ್ಬಿಸಿವೆ. ಹೈಕಮಾಂಡ್ ತೀರ್ಮಾನದತ್ತ ಎಲ್ಲರ ಚಿತ್ತ ನೆಟ್ಟಿದೆ.
ಸಿದ್ದರಾಮಯ್ಯ ಹಾದಿ ಹಿಡಿದ ದಿನೇಶ್ ಗುಂಡೂರಾವ್, ಅಧ್ಯಕ್ಷಗಿರಿಗೆ ರಾಜೀನಾಮೆ