ದೇವೇಗೌಡರ ಕುಟುಂಬದ ವಿರುದ್ಧ ಸೇಡು ತೀರಿಸಿಕೊಂಡ ಸಿದ್ದರಾಮಯ್ಯ?
Recommended Video
ಬೆಂಗಳೂರು, ಮೇ 24 : ಲೋಕಸಭಾ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಕಾಂಗ್ರೆಸ್ ಕೇವಲ 1 ಸ್ಥಾನದಲ್ಲಿ ಜಯಗಳಿಸುವ ಮೂಲಕ ಕಳಪೆ ಸಾಧನೆ ಮಾಡದೆ. ಆದರೆ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಜೆಡಿಎಸ್ ವಿರುದ್ಧ ತಮಗಿದ್ದ ಸೇಡನ್ನು ತೀರಿಸಿಕೊಂಡರೆ ಎಂಬ ಪ್ರಶ್ನೆ ಹುಟ್ಟಿಕೊಂಡಿದೆ?
ಕರ್ನಾಟಕ 28 ಕ್ಷೇತ್ರಗಳ ಪೈಕಿ ಬಿಜೆಪಿ 25, ಕಾಂಗ್ರೆಸ್ ಮತ್ತು ಜೆಡಿಎಸ್ ತಲಾ 1 ಸ್ಥಾನದಲ್ಲಿ ಜಯಗಳಿಸಿವೆ. ಮಂಡ್ಯದಲ್ಲಿ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಅವರು ಗೆಲುವು ಸಾಧಿಸಿ, ಮೊದಲ ಬಾರಿಗೆ ಸಂಸತ್ ಪ್ರವೇಶಿಸಿದ್ದಾರೆ.
ಲೋಕಸಭಾ ಚುನಾವಣೆ : ದೇವೇಗೌಡರ ಕುಟುಂಬದ ಕಥೆ ಏನು?
ಮಾಜಿ ಮುಖ್ಯಮಂತ್ರಿ ಮತ್ತು ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಅವರಿಗೆ ಕಾಂಗ್ರೆಸ್ ಸಾಧನೆ ತುಂಬಾ ಬೇಸರ ಉಂಟು ಮಾಡಿದೆ. ಆದರೆ, ಅವರು ತಮ್ಮ ಹದಿಮೂರು ವರ್ಷಗಳ ಹಿಂದಿನ ಸೇಡನ್ನು ತೀರಿಸಿಕೊಂಡಿದ್ದಾರೆ.
ಲೋಕಸಭಾ ಚುನಾವಣೆ 2019 : ಕರ್ನಾಟಕದಲ್ಲಿ ಗೆದ್ದವರು, ಸೋತವರು
ಜೆಡಿಎಸ್ನಿಂದ ಸಿದ್ದರಾಮಯ್ಯ ಉಚ್ಛಾಟನೆಗೊಂಡಾಗ ದೇವೇಗೌಡರ ಕುಟುಂಬಕ್ಕೆ ದೊಡ್ಡ ಅಘಾತ ನೀಡುವ ಹಠ ತೊಟ್ಟಿದ್ದರು. 2019ರ ಲೋಕಸಭಾ ಚುನಾವಣೆಯಲ್ಲಿ ಇದು ಈಡೇರಿದೆ. ಸ್ವತಃ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರೇ ತುಮಕೂರು ಕ್ಷೇತ್ರದಲ್ಲಿ 13,339 ಮತಗಳ ಅಂತರದಲ್ಲಿ ಸೋಲು ಕಂಡಿದ್ದಾರೆ.
ದೇವೇಗೌಡರ ಕುಟುಂಬದ ಮೇಲಿನ ಕೋಪ
ಕರ್ನಾಟಕದಲ್ಲಿ ಕಾಂಗ್ರೆಸ್-ಜೆಡಿಎಸ್ ಸರ್ಕಾರ ಅಸ್ತಿತ್ವಕ್ಕೆ ಬಂದಿರಬಹುದು. ಆದರೆ, ಸಿದ್ದರಾಮಯ್ಯ ಅವರಿಗೆ ದೇವೇಗೌಡರ ಕುಟುಂಬದ ಮೇಲಿನ ಕೋಪ ಕಡಿಮೆಯಾಗಿಲ್ಲ. ದೇವೇಗೌಡರು ಮತ್ತು ಅವರ ಕುಟುಂಬ ಸದಸ್ಯರಿಗೆ ಹಿನ್ನಡೆ ಉಂಟಾಗಬೇಕು ಎಂದು ಸಿದ್ದರಾಮಯ್ಯ ಕಾಯುತ್ತಿದ್ದರು. ಲೋಕಸಭಾ ಚುನಾವಣೆಯಲ್ಲಿ ದೇವೇಗೌಡರು, ನಿಖಿಲ್ ಕುಮಾರಸ್ವಾಮಿ ಸೋತಿದ್ದಾರೆ. ಸಿದ್ದರಾಮಯ್ಯ ಹಠ ಸಾಧಿಸಿದಂತಾಗಿದೆ.
ತುಮಕೂರು ಕ್ಷೇತ್ರದಲ್ಲಿ ಸೋಲು
ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡರು ತುಮಕೂರಿನಿಂದ ಕಣಕ್ಕಿಳಿಯಲಿದ್ದಾರೆ ಎಂದಾಗಲೇ ಅಲ್ಲಿನ ಕಾಂಗ್ರೆಸ್ ನಾಯಕರು ವಿರೋಧ ವ್ಯಕ್ತಪಡಿಸಿದ್ದರು. ಅದರಲ್ಲಿಯೂ ಕೆ.ಎನ್.ರಾಜಣ್ಣ ಮತ್ತು ಹಾಲಿ ಸಂಸದ ಮುದ್ದಹನುಮೇಗೌಡ ಅವರು ದೇವೇಗೌಡರ ಪರವಾಗಿ ಕೆಲಸ ಮಾಡೋಲ್ಲ ಎಂದು ಹೇಳಿದ್ದರು.
ಆದರೆ, ಇದನ್ನು ಸಿದ್ದರಾಮಯ್ಯ ಗಂಭೀರವಾಗಿ ತೆಗೆದುಕೊಂಡು ಸಮಸ್ಯೆ ಬಗೆಹರಿಸುವ ಪ್ರಯತ್ನ ಮಾಡಲಿಲ್ಲ. ಎರಡು ದಿನ ದೇವೇಗೌಡರ ಪರವಾಗಿ ಹೋಗಿ ಪ್ರಚಾರ ಮಾಡಿ ಬಂದರು. ಪ್ರಚಾರದ ಸಮಯದಲ್ಲಿಯೂ ಜೆಡಿಎಸ್ನಿಂದ ನಾನು ಹೊರ ಬಂದಿಲ್ಲ. ನನ್ನನ್ನು ಪಕ್ಷದಿಂದ ಉಚ್ಛಾಟನೆ ಮಾಡಿದರು ಎಂದು ಹೇಳುವ ಮೂಲಕ ಹಳೆಯ ದ್ವೇಷವನ್ನು ನೆನಪು ಮಾಡಿಕೊಂಡಿದ್ದರು.
ಮಂಡ್ಯದಲ್ಲಿ ನಿಖಿಲ್ ಸೋಲು
ಮಂಡ್ಯದಲ್ಲಿ ನಿಖಿಲ್ ಕುಮಾರಸ್ವಾಮಿ ಸೋಲು ಕಾಣಲು ಕಾಂಗ್ರೆಸ್ ನಾಯಕರು ಕಾರಣ ಎಂಬುದು ಗುಟ್ಟಾಗಿ ಉಳಿದಿಲ್ಲ. ಅದರಲ್ಲೂ ಚಲುವರಾಯಸ್ವಾಮಿ, ರಮೇಶ್ ಬಂಡಿಸಿದ್ದೇಗೌಡ ಮುಂತಾದ ನಾಯಕರು ಸಿದ್ದರಾಮಯ್ಯ ಅವರ ಆಪ್ತರು.
ಮೈತ್ರಿ ಧರ್ಮ ಪಾಲನೆ ಮಾಡು ನಿಖಿಲ್ ಕುಮಾರಸ್ವಾಮಿ ಪರವಾಗಿ ಕೆಲಸ ಮಾಡುವುದಿಲ್ಲ ಎಂದು ಕಾಂಗ್ರೆಸ್ ನಾಯಕರು ಬಹಿರಂಗ ಹೇಳಿಕೆ ನೀಡಿದರೂ ಸಿದ್ದರಾಮಯ್ಯ ಅವರು ಇದನ್ನು ಗಂಭೀರವಾಗಿ ಪರಿಗಣಿಸಿ ಅವರನ್ನು ಸಮಾಧಾನ ಮಾಡಲು ಹೋಗಿಲ್ಲ. ಇದರ ಪರಿಣಾಮ ಚುನಾವಣೆಯಲ್ಲಿ ದೇವೇಗೌಡರ ಮೊಮ್ಮಗನಿಗೆ ಸೋಲು ಉಂಟಾಯಿತು.
ರೇವಣ್ಣ ಪರವಾಗಿ ಪ್ರೀತಿ
ಸಿದ್ದರಾಮಯ್ಯ ಅವರಿಗೆ ಎಚ್.ಡಿ.ರೇವಣ್ಣ ಮೇಲೆ ಮೊದಲಿನಿಂದಲೂ ವಿಶೇಷ ಪ್ರೀತಿ. ಪ್ರಜ್ವಲ್ ರೇವಣ್ಣ ಹಾಸನದಲ್ಲಿ ಚುನಾವಣೆಗೆ ನಿಲ್ಲುತ್ತಾರೆ ಎಂದಾಗ ಸಿದ್ದರಾಮಯ್ಯ ಬೆಂಬಲಿಸಿದ್ದರು. ಇದರಿಂದಾಗಿ ಎ.ಮಂಜು ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದರು. ಪ್ರಜ್ವಲ್ ರೇವಣ್ಣ ಅವರ ಪರವಾಗಿ ಹೋಗಿ ಪ್ರಚಾರವನ್ನು ಸಿದ್ದರಾಮಯ್ಯ ಮಾಡಿ ಬಂದರು. ಅಂತಿಮವಾಗಿ ಪ್ರಜ್ವಲ್ ರೇವಣ್ಣ 1,41,324 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.
ಪರಮೇಶ್ವರ ಹಿನ್ನಡೆ
ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ ಅವರಿಗೂ ಸಹ ಸಿದ್ದರಾಮಯ್ಯ ಹಿನ್ನಡೆ ಉಂಟು ಮಾಡಿದ್ದಾರೆ. ತುಮಕೂರಿನಲ್ಲಿ ದೇವೇಗೌಡರನ್ನು ಗೆಲ್ಲಿಸುತ್ತೇನೆ ಎಂದು ಪರಮೇಶ್ವರ ಪಣ ತೊಟ್ಟಿದ್ದರು. ಕ್ಷೇತ್ರದ ತುಂಬಾ ಸಂಚಾರ ನಡೆಸಿ, ಪ್ರಚಾರ ಮಾಡಿದ್ದರು. ಆದರೆ, ಸಿದ್ದರಾಮಯ್ಯ ಬೆಂಬಲಿಗರು ಚುನಾವಣೆಯಲ್ಲಿ ಮೌನಕ್ಕೆ ಶರಣಾದ ಕಾರಣ ದೇವೇಗೌಡರು ಸೋಲು ಕಾಣಬೇಕಾಯಿತು.