ಬೆಂಗಳೂರಿನ ಉಪ್ಪಾರಪೇಟೆ ಪೊಲೀಸ್ ಠಾಣೆಗೆ ಹೋಗಲು 2 ಕೋಟಿ ರೂ. ಲಂಚ?
ಬೆಂಗಳೂರು, ಸೆ. 02: ರಾಜ್ಯ ಬಿಜೆಪಿ ನಾಯಕತ್ವ ಬದಲಾವಣೆ ಬಳಿಕ ಆಡಳಿತ ಸುಸೂತ್ರವಾಗಿ ನಡೆಯಬಹುದು ಎಂಬ ನಂಬಿಕೆಯಲ್ಲಿ ಆಡಳಿತ ಹಾಗೂ ವಿರೋಧ ಪಕ್ಷಗಳ ನಾಯಕರಿದ್ದರು. ಆದರೆ ಬಿಜೆಪಿ ಹೈಕಮಾಂಡ್ ರಾಜ್ಯ ಬಿಜೆಪಿ ನಾಯಕತ್ವ ಬದಲಾವಣೆ ಮಾಡಿದರೂ ಹೆಚ್ಚಿನ ಬದಲಾವಣೆ ಆಗಿಲ್ಲ ಎಂಬ ಆರೋಪಗಳು ಇದೀಗ ಕೇಳಿ ಬರುತ್ತಿವೆ. ರಾಜ್ಯದಲ್ಲಿ ಭ್ರಷ್ಟಾಚಾರ ಮಿತಿ ಮೀರುತ್ತಿದೆ ಎಂಬ ಆರೋಪ ಎದುರಾಗಿದೆ.
ಇದೇ ಸಂದರ್ಭದಲ್ಲಿ ಮೂರು ಮಹಾನಗರ ಪಾಲಿಕೆಗಳ ಚುನಾವಣೆಯೂ ನಡೆಯುತ್ತಿದೆ. ನಾಯಕತ್ವದ ಬದಲಾವಣೆ, ನೂತನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಆಡಳಿತದ ಪರಿಣಾಮವನ್ನು ಈ ಚುನಾವಣೆಯ ಮೂಲಕ ಮೌಲ್ಯಮಾಪನ ಮಾಡುವುದು ತೀರಾ ಬೇಗನೆ ಆಯಿತು ಎನ್ನಬಹುದು. ಆದರೂ ಕೆಲವು ವಿಷಯಗಳ ಬಗ್ಗೆ ಸರ್ಕಾರ ಹಾಗೂ ಸಿಎಂ ಬೊಮ್ಮಾಯಿ ಗಂಭೀರವಾಗಿ ಪರಿಶೀಲನೆ ಮಾಡಬೇಕಾಗಿದೆ ಎಂಬ ಒತ್ತಾಯ ಕೇಳಿ ಬಂದಿದೆ.
ಬೆಂಗಳೂರಿನ ಉಪ್ಪಾರ ಪೇಟೆ ಪೊಲೀಸ್ ಇನ್ಸ್ಪೆಕ್ಟರ್ ಹುದ್ದೆಗೆ ವರ್ಗಾವಣೆ ಆಗಲು 2 ಕೋಟಿ ರೂಪಾಯಿಗಳನ್ನು ಕೊಡಬೇಕು ಎಂಬ ಗಂಭೀರ ವಿಚಾರ ಇದೀಗ ಬಹಿರಂಗವಾಗಿದೆ. ಈ ವಿಚಾರ ಬಹಿರಂಗಪಡಿಸಿರುವುದು ಸಾಮಾನ್ಯರಲ್ಲ, ಬದಲಿಗೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ!
ಉಪ್ಪಾರಪೇಟೆ ಠಾಣೆಗೆ ಹೋಗಲು 2 ಕೋಟಿ ರೂ.?
ಹತ್ತು ದಿನಗಳ ಪ್ರಕೃತಿ ಚಿಕಿತ್ಸೆ ಬಳಿಕ ವಿಪಕ್ಷ ನಾಯಕ ಸಿದ್ದರಾಮಯ್ಯ ಸುದ್ದಿಗೋಷ್ಠಿ ನಡೆಸಿದ್ದಾರೆ. ರಾಜ್ಯ ಹಾಗೂ ಕೇಂದ್ರ ಸರ್ಕಾರಗಳ ಕುರಿತು ಮಾತನಾಡಿದ್ದಾರೆ. ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಬಳಿಕ ಭ್ರಷ್ಟಾಚಾರ ಕಡಿಮೆಯಾಗುತ್ತದೆ ಎಂದುಕೊಳ್ಳಲಾಗಿತ್ತು. ಆದರೆ ಅದಾಗಿಲ್ಲ. ಪರಿಸ್ಥಿತಿ ಮತ್ತಷ್ಟು ಹದಗೆಡುತ್ತಿದೆ. ಈ ಸರ್ಕಾರದಲ್ಲಿ ಐಪಿಎಸ್ ಅಧಿಕಾರಿಗಳ ವರ್ಗಾವಣೆಗೂ ಲಂಚ ಪಡೆಯುತ್ತಿದ್ದಾರೆ. ಇನ್ನು ಉಪ್ಪಾರಪೇಟೆ ಠಾಣೆಗೆ ಇನ್ಸ್ಪೆಕ್ಟರ್ ಹುದ್ದೆ ಬೇಕೆಂದು ವರ್ಗಾವಣೆಗೆ ಕೇಳಿದರೆ ಕೋಟಿ ರೂಪಾಯಿಗಳನ್ನು ಕೊಡಬೇಕು. ಈ ಸರ್ಕಾರದಲ್ಲಿ ಲಂಚ ಹೊಡೆದಿದ್ದೇ ಸಾಧನೆ ಎಂಬಂತಾಗಿದೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಗಂಭೀರ ಆರೋಪ ಮಾಡಿದ್ದಾರೆ. ಇದರೊಂದಿಗೆ ಇನ್ನೂ ಹಲವು ಸ್ಫೋಟಕ ವಿಚಾರಗಳನ್ನು ಮಾಜಿ ಸಿಎಂ ಸಿದ್ದರಾಮಯ್ಯ ಹಂಚಿಕೊಂಡಿದ್ದಾರೆ.
ದೇಶವನ್ನು ಸ್ವರ್ಗ ಮಾಡುತ್ತೇನೆ ಎಂದಿದ್ದ ಮೋದಿ!
ನಾಳೆ ರಾಜ್ಯದಲ್ಲಿ 3 ಮಹಾನಗರ ಪಾಲಿಕೆಗಳಿಗೆ ಚುನಾವಣೆ ನಡೆಯುತ್ತಿದೆ. ನಾನು ಚುನಾವಣಾ ಪ್ರಚಾರಕ್ಕೆ ಹೋಗಲಿಲ್ಲ. ಬೆಳಗಾವಿ, ಕಲಬುರಗಿ, ಹುಬ್ಬಳ್ಳಿ ಧಾರವಾಡ ಮಹಾನಗರಗಳ ಮತದಾರರಿಗೆ ನಾನು ಮನವಿ ಮಾಡುತ್ತೇನೆ. 2014ರಲ್ಲಿ ನರೇಂದ್ರ ಮೋದಿ ದೇಶವನ್ನು ಸ್ವರ್ಗ ಮಾಡುತ್ತೇನೆ ಎಂದಿದ್ದರು. ದೇಶದ ಜನರಲ್ಲಿ ಭ್ರಮೆ ಮೂಡಿಸಿದ್ದರು. ಈಗ ಆಧಿಕಾರಕ್ಕೆ ಬಂದು 7 ವರ್ಷ ಮುಗಿದು ಹೋಗಿವೆ. ಆದರೆ ಯಾವ ಅಚ್ಚೇ ದಿನ್ ಕೂಡ ಬರಲಿಲ್ಲ ಎಂದು ಪ್ರಧಾನಿ ಮೋದಿ ವಿರುದ್ಧ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.
ಆದರೆ ಪ್ರಧಾನಿ ಮೋದಿ ಮಾಡಿದ್ದು ಏನು?
ಪ್ರಧಾನಿ ನರೇಂದ್ರ ಮೋದಿ ನಮ್ಮ ದೇಶವನ್ನು ಸ್ವರ್ಗ ಮಾಡುವುದು ಒಂದು ಕಡೆ ಇರಲಿ. ಒಟ್ಟು ತಲಾ ಆದಾಯ(ಜಿಡಿಪಿ)ಯಲ್ಲಿ ಬಾಂಗ್ಲಾದೇಶ ನಮಗಿಂತ ಮುಂದೆ ಹೋಗಿದೆ. ನಮ್ಮ ದೇಶದ ಜಿಡಿಪಿ ಕುಸಿದಿದೆ. ಜಿಎಸ್ಟಿ ತೆರಿಗೆ ಸಾಮಾನ್ಯರ ಮೇಲೆ ಬೀಳಲಿದೆ. ಕೇಂದ್ರ ಹಾಗೂ ರಾಜಗ್ಯದಲ್ಲಿನ ಬಿಜೆಪಿ ಸರ್ಕಾರಗಳು ಉದ್ಯಮಿಗಳ ಪರವಾಗಿ ಕೆಲಸ ಮಾಡುದ್ದಾರೆ. ಭಾರತ, ಸಂಸ್ಕೃತಿ ಎಂದೆಲ್ಲ ಬೊಗಳೆ ಬಿಡುವ ಇವರು ದೇಶದ ಜನರ ತೆರಿಗೆ ಹಣದಲ್ಲಿ ಸ್ಥಾಪಿತವಾಗಿರುವ 6 ಲಕ್ಷ ಕೋಟಿ ರೂಪಾಯಿಗಳ ಆಸ್ತಿಯನ್ನು ಖಾಸಗಿಯವರಿಗೆ ಮಾರಾಟ ಮಾಡಲು ಮುಂದಾಗಿದ್ದಾರೆ. ಆ ಮೂಲಕ ದೇಶವನ್ನೇ ಮಾರಾಟ ಮಾಡಲು ಹೊರಟಿದ್ದಾರೆ. ಇನ್ನು ಉದ್ಯೋಗ ಸೃಷ್ಟಿಯಲ್ಲಿಯಂತೂ ಕೇಂದ್ರ ಸರ್ಕಾರ ಎಲ್ಲವನ್ನೂ ಹಾಳು ಮಾಡಿದೆ ಎಂದು ಸಿದ್ದರಾಮಯ್ಯ ಆರೋಪಿಸಿದ್ದಾರೆ.
ಡಿಕೆಶಿಗೆ ಪರೋಕ್ಷ ಎದಿರೇಟು ಕೊಟ್ಟ ಸಿದ್ದರಾಮಯ್ಯ?
ಹಿಂದುಳಿದ ವರ್ಗಗಳ ಸಮಾವೇಶ ನಡೆಸುವ ವಿಚಾರವಾಗಿ ಸಿದ್ದರಾಮಯ್ಯ ಸ್ಪಷ್ಟನೆ ಕೊಟ್ಟಿದ್ದಾರೆ. ಈ ಬಗ್ಗೆ ಮಾತನಾಡಿರುವ ಅವರು, "ನಾನು ಯಾವಾಗಲೂ ಹಿಂದಳಿದ ವರ್ಗಗಳ ಪರವಾಗಿದ್ದೇನೆ. ಕಾಂಗ್ರೆಸ್ ಪಕ್ಷ ಕೂಡ ಹಿಂದುಳಿದವರ ಪರವಾಗಿದೆ. ನಾನು ಹಿಂದುಳಿದವರ ಸಭೆಗೂ ಹೋಗುತ್ತೇನೆ" ಎಂದು ಹೇಳುವ ಮೂಲಕ ಹಿಂದುಳಿದ ವರ್ಗಗಳ ಸಮಾವೇಶದಲ್ಲಿ ಭಾಗವಹಿಸುವುದನ್ನು ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ.
ಈ ಹಿಂದೆ ಹಿಂದುಳಿದ ವರ್ಗಗಳ ಸಮಾವೇಶ ನಡೆಸಲು ಕಾಂಗ್ರೆಸ್ ಪಕ್ಷದಲ್ಲಿಯೇ ವಿರೋಧ ವ್ಯಕ್ತವಾಗಿದೆ ಎಂಬ ಮಾಹಿತಿ ಬಂದಿತ್ತು. ಸಿದ್ದರಾಮಯ್ಯ ಅವರು ಹಿಂದುಳಿದ ವರ್ಗಗಳ ಸಮಾವೇಶದ ಕುರಿತು ಕಾಂಗ್ರೆಸ್ ಹೈಕಮಾಂಡ್ ಕೂಡ ಸಮಾವೇಶ ಮಾಡದಂತೆ ಸಿದ್ದರಾಮಯ್ಯ ಅವರಿಗೆ ಸೂಚನೆ ಕೊಟ್ಟಿತ್ತು ಎಂಬದು ಕಾಂಗ್ರೆಸ್ ವಲಯದಿಂದ ತಿಳಿದು ಬಂದಿತ್ತು. ಇದೀಗ ಸಮಾವೇಶ ಮಾಡುವುದಾಗಿ ಸಿದ್ದರಾಮಯ್ಯ ಅವರು ಸ್ಪಷ್ಟವಾಗಿ ಹೇಳಿದ್ದಾರೆ. ಹೀಗಾಗಿ ಅದನ್ನು ರಾಜ್ಯ ಹಾಗೂ ಕೇಂದ್ರದ ನಾಯಕರು ಹೇಗೆ ತೆಗೆದು ಕೊಳ್ಳುತ್ತಾರೆ ಎಂಬುದನ್ನು ಕಾಯ್ದು ನೋಡಬೇಕಿದೆ.
Recommended Video