ಮಳೆ ಹಾನಿ ಪರಿಹಾರಕ್ಕೆ ಕೇಂದ್ರಕ್ಕೆ ಮೊರೆ : ಸಿಎಂ
ಗುಲ್ಬರ್ಗ, ಸೆ.7 : ಅತಿವೃಷ್ಟಿಯಿಂದ ಹಾನಿಗೊಳಗಾದ ಜಿಲ್ಲೆಗಳಲ್ಲಿ ಪರಿಹಾರ ಕಾರ್ಯಗಳನ್ನು ಕೈಗೊಳ್ಳಲು ನೆರವು ನೀಡುವಂತೆ ಕೇಂದ್ರ ಸರ್ಕಾರವನ್ನು ಕೋರಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಅತಿವೃಷ್ಟಿ ಪೀಡಿತ ರಾಯಚೂರು ಮತ್ತು ಗುಲ್ಬರ್ಗಕ್ಕೆ ಶನಿವಾರ ಸಿಎಂ ಭೇಟಿ ನೀಡಿದ್ದರು.
ಅತಿವೃಷ್ಟಿ ಪೀಡಿತ ಪ್ರದೇಶಗಳ ಅಧ್ಯಯನ ನಡೆಸಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ ಅವರು, ಪ್ರಾಥಮಿಕ ಅಂದಾಜಿನಂತೆ ಖಾಸಗಿ-ಸಾರ್ವಜನಿಕ ಆಸ್ತಿಪಾಸ್ತಿ ಸೇರಿ ಒಟ್ಟು 400 ಕೋಟಿ ರೂ. ನಷ್ಟವಾಗಿದೆ ಎಂದರು. [ನೆರೆ ಪೀಡಿತ ಉತ್ತರ ಕರ್ನಾಟಕಕ್ಕೆ ಸಿಎಂ ಭೇಟಿ]
ಮಳೆಯಿಂದ ಆಗಿರುವ ಹಾನಿ ಪ್ರಮಾಣವನ್ನು ನಿಖರವಾಗಿ ತಿಳಿದುಕೊಳ್ಳಲು ಕಂದಾಯ ಮತ್ತು ಕೃಷಿ ಇಲಾಖೆ ಅಧಿಕಾರಿಗಳ ಜಂಟಿ ಸಮೀಕ್ಷೆ ನಡೆಸಲಾಗುತ್ತದೆ. ಈ ವರದಿ ಬಂದ ಬಳಿಕ ನಷ್ಟದ ನಿಖರ ಅಂದಾಜು ದೊರೆಯಲಿದ್ದು, ಬಳಿಕ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುತ್ತದೆ ಎಂದು ಮುಖ್ಯಮಂತ್ರಿಗಳು ಹೇಳಿದರು. ಮುಖ್ಯಮಂತ್ರಿಗಳ ಭೇಟಿಯ ಚಿತ್ರಗಳು
ರಾಜ್ಯದಲ್ಲಿ 125 ತಾಲೂಕುಗಳಲ್ಲಿ ಬರವಿದೆ
ರಾಜ್ಯದಲ್ಲಿ ಅತಿವೃಷ್ಟಿಯಿಂದ ಹಲವು ಜಿಲ್ಲೆಗಳಲ್ಲಿ ಹಾನಿಉಂಟಾಗಿದ್ದರೂ ರಾಜ್ಯದಲ್ಲಿ 125 ತಾಲೂಕುಗಳನ್ನು ಬರಪೀಡಿತ ಪ್ರದೇಶಗಳು ಎಂದು ಘೋಷಿಸಿಸಲಾಗಿದೆ ಎಂದು ಸಿದ್ದರಾಮಯ್ಯ ಹೇಳಿದರು. ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮೀಣ ಮತ್ತು ರಾಮನಗರ ಜಿಲ್ಲೆಗಳಲ್ಲಿ ಬರಗಾಲವಿದೆ ಎಂದು ಸಿಎಂ ತಿಳಿಸಿದರು.
ಪರಿಹಾರಕ್ಕೆ ಹಣದ ಕೊರತೆ ಇಲ್ಲ
ಮಳೆಯಿಂದ ಹಾನಿಗೊಳಗಾದ ಪ್ರದೇಶಗಳಲ್ಲಿ ಪರಿಹಾರ ಕಾರ್ಯಕೈಗೊಳ್ಳಲು ಹಣದ ಕೊರತೆ ಇಲ್ಲ ಎಂದು ಸಿಎಂ ತಿಳಿಸಿದರು. ಪ್ರಕೃತಿವಿಕೋಪ ಪರಿಹಾರ ನಿಧಿ ಅಡಿ 195 ಕೋಟಿ ರೂ. ಅನುದಾನವಿದೆ. ಈಗಾಗಲೇ 97 ಕೋಟಿ ರೂ.ಗಳನ್ನು ಜಿಲ್ಲಾಧಿಕಾರಿಗಳಿಗೆ ಬಿಡುಗಡೆ ಮಾಡಲಾಗಿದೆ. ಬರ ಹಾಗೂ ನೆರೆ ಪರಿಸ್ಥಿತಿಯನ್ನು ಸರ್ಕಾರ ಸಮರ್ಥವಾಗಿ ನಿಭಾಯಿಸಿದೆ ಎಂದರು.
ಎಲ್ಲಿ ಎಷ್ಟು ಹಾನಿಯಾಗಿದೆ
ರಾಜ್ಯದಲ್ಲಿ ಮಳೆ ಹೆಚ್ಚಾಗಿ 8 ಜಿಲ್ಲೆಗಳು, ಅದರಲ್ಲೂ ಗುಲ್ಬರ್ಗ, ರಾಯಚೂರು ಮತ್ತು ಗದಗದಲ್ಲಿ ಹೆಚ್ಚಿನ ಹಾನಿಯಾಗಿದೆ. 22 ಜನರು ಮೃತಪಟ್ಟಿದ್ದು, 54 ಜಾನುವಾರುಗಳು, 8200 ಮನೆಗಳು ಹಾನಿಗೀಡಾಗಿವೆ. ಒಟ್ಟಾರೆ 350- 400 ಕೋಟಿ ರೂ.ಗಳ ಹಾನಿಯಾಗಿದೆ. ಆಲಿಕಲ್ಲು ಮಳೆಯಿಂದ ಬೆಳೆ ನಷ್ಟವಾಗಿರುವುದಕ್ಕೆ ಕೇಂದ್ರ ಮತ್ತು ರಾಜ್ಯ ಸರ್ಕಾರ ಸೇರಿ 242 ಕೋಟಿ ರೂ.ಗಳನ್ನು ಬಿಡುಗಡೆ ಮಾಡಲಾಗಿದೆ ಎಂದು ಸಿಎಂ ಹೇಳಿದರು.
ರಾಜ್ಯದ ಆರ್ಥಿಕ ಸ್ಥಿತಿ ಚೆನ್ನಾಗಿದೆ
ಮಳೆಯಿಂದ ಹಾನಿಗೊಳಗಾದ ಪ್ರದೇಶಗಳಲ್ಲಿ ಪರಿಹಾರ ಕಾರ್ಯ ಕೈಗೊಳ್ಳಲು ಹಣ ಬೇಕೆಂದು ಜಿಲ್ಲಾಧಿಕಾರಿಗಳು ಪತ್ರ ಬರೆದ ಮರುದಿನವೇ ಹಣ ಬಿಡುಗಡೆ ಮಾಡಲಾಗುವುದು. ರಾಜ್ಯದ ಆರ್ಥಿಕ ಸ್ಥಿತಿ ಚೆನ್ನಾಗಿದೆ. ಈ ಹಿಂದಿನ ವರ್ಷಕ್ಕೆ ಹೋಲಿಸಿದರೆ ಈ ಬಾರಿ ತೆರಿಗೆ ಸಂಗ್ರಹ ಹೆಚ್ಚಾಗಿದೆ. ಬರ ಮತ್ತು ನೆರೆ ಹಾನಿ ಬಗ್ಗೆ ಜಂಟಿ ಸಮೀಕ್ಷೆ ಮುಕ್ತಾಯ ಹಂತದಲ್ಲಿದ್ದು, ವಾರದೊಳಗೆ ಕೇಂದ್ರಕ್ಕೆ ಪತ್ರ ಬರೆದು ಪರಿಹಾರ ಧನ ಕೋರಲಾಗುವುದು ಎಂದು ತಿಳಿಸಿದರು.
ಸಿಎಂ ಗದಗ ಭೇಟಿ ರದ್ದು
ಮಳೆ ಮತ್ತು ಹವಾಮಾನ ವೈಪರೀತ್ಯದಿಂದ ಸಿದ್ದರಾಮಯ್ಯ ಅವರ ಗದಗ ಜಿಲ್ಲೆ ಭೇಟಿ ಕೊನೆ ಕ್ಷಣದಲ್ಲಿ ರದ್ದಾಯಿತು. ಪೂರ್ವ ನಿಗದಿಯಂತೆ ಮುಖ್ಯಮಂತ್ರಿ ಶನಿವಾರ ಗುಲ್ಬರ್ಗ, ರಾಯಚೂರು ಜಿಲ್ಲೆಗಳಲ್ಲಿ ಮಳೆಯಿಂದಾಗಿರುವ ಮನೆ, ಬೆಳೆ ಹಾನಿ ವೀಕ್ಷಿಸಿದ ನಂತರ ಸಂಜೆ 5ಕ್ಕೆ ಗದಗ ಜಿಲ್ಲೆಗೆ ತೆರಳಬೇಕಾಗಿತ್ತು. ಆದರೆ, ಮಧ್ಯಾಹ್ನದಿಂದಲೇ ಗದಗ ಜಿಲ್ಲೆಯಲ್ಲಿ ಮಳೆ ಸುರಿದಿದ್ದರಿಂದ ಭೇಟಿ ರದ್ದಾಯಿತು.