ಮತ್ತೆ ಟಿಕ್ ಟಿಕ್ ಎನ್ನುತ್ತಿದೆ ಸಿದ್ದರಾಮಯ್ಯನವರ ಉಬ್ಲೋ ವಾಚ್!
ಬೆಂಗಳೂರು, ಅಕ್ಟೋಬರ್. 08 : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಜ್ರ ಖಚಿತ ಉಬ್ಲೋ ವಾಚ್ ಮತ್ತೆ ಸದ್ದು ಮಾಡುತ್ತಿದೆ. ಸಾಮಾಜಿಕ ಕಾರ್ಯಕರ್ತ ಟಿ.ಜೆ.ಅಬ್ರಾಹಂ ಅವರು ವಿಶೇಷ ಲೋಕಾಯುಕ್ತ ಕೋರ್ಟ್ ಗೆ ಸಲ್ಲಿಸಿದ್ದ ಖಾಸಗಿ ದೂರು ನವೆಂಬರ್ 5ರಂದು ವಿಚಾರಣೆ ನಡೆಯಲಿದೆ.
ಬಿಡಿಎ ಇಂಜಿನಿಯರ್ ಎಲ್. ರಘು ಅವರು ಸುಮಾರು 45 ಲಕ್ಷ ಮೌಲ್ಯದ ದುಬಾರಿ ವಾಚ್ ಅನ್ನು ಮುಖ್ಯಮಂತ್ರಿಗಳಿಗೆ ಕೊಡುಗೆಯಾಗಿ ನೀಡಿದ್ದಾರೆ . ಈ ಬಗ್ಗೆ ರಘು ಅವರ ವಿರುದ್ಧ ಭ್ರಷ್ಟಾಚಾರ ನಿಗ್ರಹ ದಳಕ್ಕೆ (ಎಸಿಬಿ) ಗೆ ನಾನು ದೂರು ಕೊಟ್ಟಿದ್ದೇನೆ. ಈ ಪ್ರಕರಣದಲ್ಲಿ ರಘು ಅವರ ವಿರುದ್ಧ ವಿಚಾರಣೆಗೆ ಸಿದ್ದರಾಮಯ್ಯ ಅವರು ಪೂರ್ವಾನುಮತಿ ನೀಡಲಿಲ್ಲ ಎಂದು ಅಬ್ರಾಹಂ ದೂರಿನಲ್ಲಿ ತಿಳಿಸಿದ್ದಾರೆ. [ಊಬ್ಲೋ ವಾಚ್ ವಾರ್ : ಎಚ್ಡಿಕೆಯಿಂದ ಕಾಗೋಡು ತಿಮ್ಮಪ್ಪ ತನಕ!]
ಇಂಜಿನಿಯರ್ ರಘು ಅವರಿಗೆ ಲೋಕೋಪಯೋಗಿ ಸಚಿವ ಎಚ್.ಸಿ.ಮಹದೇವಪ್ಪ, ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಲಕ್ಷ್ಮಣ ಸ್ನೇಹಿತರು. ಆದ್ದರಿಂದ, ಈ ವಾಚ್ ವರ್ಗಾವಣೆಯಲ್ಲಿ ಇವರ ಪಾತ್ರವೂ ಇದ್ದು, ಅವರ ವಿರುದ್ಧವೂ ಕ್ರಮ ಕೈಗೊಳ್ಳಬೇಕು ಎಂದು ದೂರಿನಲ್ಲಿ ಮನವಿ ಮಾಡಲಾಗಿದೆ.
ಉಬ್ಲೋ ವಾಚ್ ಅನ್ನು ತಮಗೆ ದುಬೈನಲ್ಲಿ ನೆಲೆಸಿರುವ ಸ್ನೇಹಿತ ಡಾ.ಗಿರೀಶ್ ಚಂದ್ರ ವರ್ಮಾ ನೀಡಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ವಾಚ್ ಪ್ರಕರಣದ ಬಗ್ಗೆ ಎಸಿಬಿಯಲ್ಲಿಯೂ ದೂರು ದಾಖಲಾಗಿದೆ.
ಎಸಿಬಿ ವಿಚಾರಣೆ ಎದುರಿಸಿರುವ ಗಿರೀಶ್ ಚಂದ್ರ ವರ್ಮಾ ಅವರು, ಸಿದ್ದರಾಮಯ್ಯ ಅವರು 15 ವರ್ಷಗಳಿಂದ ಪರಿಚಿತರು. ಸ್ನೇಹ, ಆತ್ಮೀಯತೆಯಿಂದಾಗಿ ವಾಚ್ ಉಡುಗೊರೆ ನೀಡಲಾಗಿದೆ ಎಂದು ಹೇಳಿಕೆ ನೀಡಿದ್ದಾರೆ.