ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೋವಿಡ್ ಅಸ್ತ್ರ ಬಳಸಿ ಸರ್ಕಾರದಿಂದ ಜನವಿರೋಧಿ ಕಾಯಿದೆಗಳ ಜಾರಿ!

|
Google Oneindia Kannada News

ಬೆಂಗಳೂರು, ಜೂ. 17: ದೇಶದ ಜನರು ಕೊರೊನಾ ವೈರಸ್‌ ಆತಂಕದಲ್ಲಿದ್ದಾರೆ. ಇದೇ ಸಂದರ್ಭದಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಒಂದಾದರ ಮೇಲೊಂದರಂತೆ ಕಾಯಿದೆಗಳಿಗೆ ತಿದ್ದುಪಡಿ ತರುತ್ತಿವೆ. ಎಪಿಎಂಸಿ, ಕಾರ್ಮಿಕ ಕಾಯ್ದೆಗಳ ಬಳಿಕ ಇದೀಗ ಕರ್ನಾಟಕ ಭೂ ಸುಧಾರಣಾ ಕಾಯಿದೆಗೆ ಸುಗ್ರೀವಾಜ್ಞೆ ಮೂಲಕ ತಿದ್ದುಪಡಿ ತರಲಾಗಿದೆ. ಇದಕ್ಕೆ ಸಂಬಂಧಿಸಿದಂತೆ ಈಗಾಗಲೇ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಸಂಪುಟ ಸದಸ್ಯರೊಂದಿಗೆ ಚರ್ಚೆ ನಡೆಸಿ, ತೀರ್ಮಾನ ಮಾಡಿದ್ದಾರೆ.

Recommended Video

History of India China border dispute | Oneindia Kannada

ಭೂ ಸುಧಾರಣಾ ಕಾಯಿದೆ ತಿದ್ದುಪಡಿಗೆ ವಿರೋಧ ಪಕ್ಷಗಳು, ರೈತ ಸಂಘಟನೆಗಳು, ರೈತರು ಹಾಗೂ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ಷೇಪ ವ್ಯಕ್ತವಾಗಿದೆ. ರಾಜ್ಯ ಬಿಜೆಪಿ ಸರ್ಕಾರ ಎಪಿಎಂಸಿ ಕಾಯಿದೆ, ಭೂ ಸುಧಾರಣಾ ಕಾಯಿದೆ ತಿದ್ದುಪಡಿಗೆ ಸುಗ್ರೀವಾಜ್ಞೆ ಕೈ ಬಿಡಲು ವಿರೋಧ ಪಕ್ಷ ನಾಯಕ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ. ತಿದ್ದುಪಡಿ ಹೆಸರಲ್ಲಿ ಕಾಯಿದೆಯ ಆತ್ಮವನ್ನೇ ಸರ್ಕಾರ ಕೊಲ್ಲಲು ಹೊರಟಿದೆ ಎಂದು ಸಿದ್ದರಾಮಯ್ಯ ಆರೋಪಿಸಿದ್ದಾರೆ. ಜೊತೆಗೆ ತಿದ್ದುಪಡಿ ತೀರ್ಮಾನ ಕೈ ಬಿಡದಿದ್ದರೆ ಜನರೊಂದಿಗೆ ಚಳವಳಿ ಮಾಡುವ ಎಚ್ಚರಿಕೆಯನ್ನು ಸಿದ್ದರಾಮಯ್ಯ ಕೊಟ್ಟಿದ್ದಾರೆ.

ಭೂಸುಧಾರಣೆ ಕಾಯಿದೆ ತಿದ್ದುಪಡಿಯಲ್ಲಿ ಏನೇನು ಅಂಶಗಳು ರೈತ ವಿರೋಧಿ ಆಗಿವೆ ಎಂಬುದನ್ನು ವಿರೋಧ ಪಕ್ಷ ನಾಯಕ ಸಿದ್ದರಾಮಯ್ಯ ಅವರು ಸಿಎಂ ಯಡಿಯೂರಪ್ಪ ಅವರ ಗಮನಕ್ಕೆ ತಂದಿದ್ದಾರೆ.

ಏನೇನು ತಿದ್ದುಪಡಿ?

ಏನೇನು ತಿದ್ದುಪಡಿ?

ಕಳೆದ ಜೂನ್ 11, 2020 ರಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಸರ್ಕಾರವು 1961ರಲ್ಲಿ ಜಾರಿಗೆ ಬಂದಿದ್ದ ಕರ್ನಾಟಕ ಭೂ ಸುಧಾರಣೆ ಕಾಯ್ದೆ ಸೆಕ್ಷನ್ 79 ಎ, ಬಿ, ಸಿ ಮತ್ತು 80ಕ್ಕೆ ಪೂರ್ವಾನ್ವಯವಾಗುವಂತೆ ರದ್ದುಪಡಿಸುವುದು ಹಾಗೂ ಪ್ರಸ್ತುತ ಬಾಕಿ ಉಳಿದಿರುವ 79ಎ ಮತ್ತು 79ಬಿ ಪ್ರಕರಣಗಳನ್ನು ವಜಾ ಮಾಡುವುದು. ಸೆಕ್ಷನ್ 63 ರಡಿ ವ್ಯಕ್ತಿಗೆ ಅಥವಾ ಒಂದು ಕುಟುಂಬ ಕೃಷಿ ಭೂಮಿ ಹೊಂದಬಹುದಾದ ಪ್ರಮಾಣವನ್ನು 10 ಯುನಿಟ್‌ಗಳಿಂದ 20 ಯುನಿಟ್‌ಗೆ, ಗರಿಷ್ಠ 40 ಯುನಿಟ್‌ಗೆ ಹೆಚ್ಚಿಸಲು ತೀರ್ಮಾನಿಸಲಾಗಿದೆ.


ಕೇರಳ ರಾಜ್ಯದಲ್ಲಿ ಕುಟುಂಬವೊಂದು ಗರಿಷ್ಠ 20 ಎಕರೆ ಭೂಮಿಯನ್ನು ಹೊಂದಬಹುದು. ತಮಿಳುನಾಡಿನಲ್ಲಿ 30 ಎಕರೆ, ಆಂಧ್ರಪ್ರದೇಶದಲ್ಲಿ 54 ಎಕರೆ, ಬಿಹಾರದಲ್ಲಿ 45 ಎಕರೆಗಳನ್ನು ಹೊಂದಬಹುದಾಗಿದೆ. ಆದರೆ ಕರ್ನಾಟಕದಲ್ಲಿ 216 ಎಕರೆ ಭೂಮಿಯನ್ನು ಹೊಂದಲು ಅವಕಾಶ ಕಲ್ಪಿಸಲಾಗಿದೆ. ಅಕ್ಕಪಕ್ಕದ ಎಲ್ಲಾ ರಾಜ್ಯಗಳಲ್ಲಿ ತೋಟದ ಭೂಮಿ 10 ಎಕರೆ ಹೊಂದಬಹುದಾದರೆ ನಮ್ಮಲ್ಲಿ 56 ಎಕರೆ ಮತ್ತು ನೀರಾವರಿ ಭೂಮಿಯನ್ನು 80 ಎಕರೆಯವರೆಗೆ ಹೊಂದಲು ಅವಕಾಶ ಮಾಡಲು ಹೊರಟಿರುವುದಾಗಿ ತಿಳಿದು ಬಂದಿದೆ ಇದರಿಂದಾಗಿ ನೀರಾವರಿ ಭೂಮಿಯು ಬಂಡವಾಳಶಾಹಿಗಳ ಪಾಲಾಗುತ್ತದೆ ಎಂಬ ಆತಂಕವನ್ನು ಸಿದ್ದರಾಮಯ್ಯ ಅವರು ವ್ಯಕ್ತಪಡಿಸಿದ್ದಾರೆ.

ಕಾಯಿದೆಗೆ ಇತಿಹಾಸವಿದೆ

ಕಾಯಿದೆಗೆ ಇತಿಹಾಸವಿದೆ

ಕರ್ನಾಟಕ ಭೂ ಸುಧಾರಣೆ ಕಾಯ್ದೆಗೆ ಅತ್ಯಂತ ದೊಡ್ಡ ಇತಿಹಾಸವಿದೆ. ಸ್ವಾತಂತ್ರ್ಯ ಹೋರಾಟದಲ್ಲಿ ಭೂ ಸುಧಾರಣೆಯು ಸಹ ಮುಖ್ಯ ಅಜೆಂಡಾವಾಗಿತ್ತು. ಬಾಬಾ ಸಾಹೇಬ್ ಅಂಬೇಡ್ಕರ್ ಅವರು 1935ರಲ್ಲಿಯೆ ಭೂಮಿಯು ರಾಷ್ಟ್ರೀಕರಣ ಆಗಬೇಕೆಂದು ಹೇಳಿದ್ದರು. ಅಸಂಖ್ಯಾತ ಜನ ಭೂ ಸುಧಾರಣೆಗಾಗಿ ಪ್ರಾಣ ತೆತ್ತಿದ್ದಾರೆ. ಶಿವಮೊಗ್ಗ ಜಿಲ್ಲೆಯ ಕಾಗೋಡಿನ ಗೇಣಿ ಪದ್ಧತಿ ವಿರುದ್ಧದ ಹೋರಾಟವು 1961 ರ ಭೂ ಸುಧಾರಣಾ ಕಾಯ್ದೆಗೆ ದಾರಿ ಮಾಡಿಕೊಟ್ಟಿತ್ತು.


ಆನಂತರ ದೇವರಾಜು ಅರಸು ರವರು 1974ರಲ್ಲಿ ತಂದ ತಿದ್ದುಪಡಿಗಳಿಂದಾಗಿ ರಾಜ್ಯದ ಕೃಷಿಕರು ನೆಮ್ಮದಿ ಕಾಣುವಂತಾಯಿತು. ಒಬ್ಬರಿಗೆ ಒಂದು ವೃತ್ತಿ ಎಂಬ ಸಮಾಜವಾದಿ ತತ್ವದಡಿಯಲ್ಲಿ ಕರ್ನಾಟಕ ಭೂ ಸುಧಾರಣೆ ಕಾಯ್ದೆ ಸೆಕ್ಷನ್ 79ಎ, ಬಿ, ಸಿ, ಮತ್ತು 80 ಹಾಗೂ 63ನ್ನು ರೂಪಿಸಿ ಜಾರಿಗೊಳಿಸಿದರು. ಈ ತಿದ್ದುಪಡಿಯು ಆ ಕಾಯ್ದೆಯ ಆತ್ಮರೂಪಿಯೆಂದೆನ್ನಿಸಿಕೊಂಡಿತು. ಕರ್ನಾಟಕದಂತಹ ರಾಜ್ಯಗಳು ದೇಶದ ಆರ್ಥಿಕತೆಯಲ್ಲಿ ಮಹತ್ವದ ಪಾತ್ರವಹಿಸಿದ್ದರೆ ಅದರ ಹಿಂದೆ ಭೂ ಸುಧಾರಣೆಯ ಅಡಿಪಾಯವಿದೆ.

ಕೈಗಾರಿಕೆಯೂ ಅಭಿವೃದ್ಧಿ

ಕೈಗಾರಿಕೆಯೂ ಅಭಿವೃದ್ಧಿ

ರಾಜ್ಯದಲ್ಲಿ ಕೈಗಾರಿಕೆ ಹಾಗೂ ಕೃಷಿ ಎರಡೂ ಅಭಿವೃದ್ಧಿಯಾಗಲು ದೇವರಾಜು ಅರಸುರವರು ತಂದಿರುವ ಕಾಯಿದೆ ಕಾರಣ ಎಂದು ಸಿದ್ದರಾಮಯ್ಯ ಅವರು ವಿವರಿಸಿದ್ದಾರೆ. ಕೃಷಿ ಮತ್ತು ಕೈಗಾರಿಕೆಗಳೆರಡು ಒಟ್ಟೊಟ್ಟಿಗೆ ಅಭಿವೃದ್ಧಿ ಸಾಧಿಸಲು ಭೂಮಿಯ ಹಂಚಿಕೆ ಕಾರಣವಾಗಿದೆ. ಸಾಮಾಜಿಕ ಮೂಲಭೂತ ಸೌಕರ್ಯವಾದ ಭೂಮಿಯ ಲಭ್ಯತೆಯ ಆಧಾರದ ಮೇಲೆಯೇ ರಾಜ್ಯದ ರೈತರ ಖರೀದಿ ಸಾಮರ್ಥ್ಯ ಹೆಚ್ಚಿ ಆರ್ಥಿಕತೆಗೆ ವೇಗ ಬರಲು ಸಾಧ್ಯವಾಗಿದೆ. ರೈತರು ಭೂಮಿ ಮಾರಾಟ ಮಾಡುವುದರಿಂದ ತಕ್ಷಣಕ್ಕೆ ಆರ್ಥಿಕತೆಗೆ ಚೈತನ್ಯ ಬರಬಹುದಾದರೂ ಭವಿಷ್ಯದಲ್ಲಿ ಜನರ ಕೈಯಲ್ಲಿದ್ದ ಹಣ ಖರ್ಚಾಗಿ ಖರೀದಿ ಸಾಮರ್ಥ್ಯ ಕುಸಿದು ರಾಜ್ಯದ ಆರ್ಥಿಕತೆ ಪಾತಾಳದತ್ತ ಸಾಗುತ್ತದೆ.

4 ಕೋಟಿ ಜನರು ಕೃಷಿಯಲ್ಲಿ ನೇರ ಭಾಗಿ

4 ಕೋಟಿ ಜನರು ಕೃಷಿಯಲ್ಲಿ ನೇರ ಭಾಗಿ

2015-16ರ ಕೃಷಿ ಗಣತಿ ಪ್ರಕಾರ ರಾಜ್ಯದಲ್ಲಿ 86.81 ಲಕ್ಷ ರೈತರು 2 ಕೋಟಿ 60 ಲಕ್ಷ ಎಕರೆ ಭೂಮಿಯಲ್ಲಿ ಕೃಷಿ ಚಟುವಟಿಕೆಗಳನ್ನು ಮಾಡುತ್ತಿದ್ದಾರೆ. ಕುಟುಂಬವೊಂದು ಸರಾಸರಿ 3 ಎಕರೆ ಭೂಮಿ ಹೊಂದಿದೆ. 2015-16 ರಲ್ಲಿ ಪರಿಶಿಷ್ಟ ಜಾತಿಯ 97,300 ಕುಟುಂಬಗಳು 2,43,760 ಎಕರೆ ಭೂಮಿಯ ಒಡೆತನ ಹೊಂದಿದ್ದರೆ,ಪರಿಶಿಷ್ಟ ಪಂಗಡದ 52,100 ಕುಟುಂಬಗಳು 1,60,600 ಎಕರೆ ಭೂಮಿಯ ಒಡೆತನವನ್ನು ಹೊಂದಿವೆ. ಅಂದರೆ ಸುಮಾರು 4 ಕೋಟಿ ಜನ ಕೃಷಿ ಚಟುವಟಿಕೆಯಲ್ಲಿ ನೇರವಾಗಿ ತೊಡಗಿದ್ದಾರೆಂಬುದು ಇದರ ಅರ್ಥ.

ರಾಜ್ಯ ಸರ್ಕಾರ ಭೂ ಸುಧಾರಣಾ ಕಾಯ್ದೆ ತಿದ್ದುಪಡಿಯನ್ನು ಸಮರ್ಥಿಸಲು ಮುಖ್ಯವಾಗಿ ಮಂಡಿಸುತ್ತಿರುವ ವಾದ ರಾಜ್ಯಕ್ಕೆ ಬಂಡವಾಳದ ಹರಿವು ಹೆಚ್ಚಾಗುತ್ತದೆ ಎಂಬುದಾಗಿದೆ. ವಾಸ್ತವ ಏನೆಂದರೆ ದೇಶಗಳ ಮುಂದಿನ ಭವಿಷ್ಯ ರೂಪುಗೊಳ್ಳುವುದೇ ಜ್ಞಾನ ಆಧಾರಿತ ಆರ್ಥಿಕತೆಯಿಂದ. ನಾಲೆಡ್ಜ್ ಎಕಾನಮಿ ಮೂಲಭೂತ ಸೌಕರ್ಯಗಳನ್ನು ಆಧರಿಸಿ ರೂಪುಗೊಳ್ಳುತ್ತದೆಯೇ ಹೊರತು ಭೂಮಿಯನ್ನು ಆಧರಿಸಿ ಅಲ್ಲ.

ಜನವಿರೋಧಿ ಕಾಯ್ದೆ

ಜನವಿರೋಧಿ ಕಾಯ್ದೆ

ರಾಷ್ಟ್ರದುದ್ದಕ್ಕು ಕೊರೋನಾ ಸಂಕಷ್ಟ ಆವರಿಸಿಕೊಂಡು ಜನತೆ ತತ್ತರಿಸುತ್ತಿರುವ ಈ ಸಂದರ್ಭದಲ್ಲಿ ಕೇಂದ್ರ ಮತ್ತು ರಾಜ್ಯಗಳೆರಡು ಹಠಕ್ಕೆ ಬಿದ್ದ ಹಾಗೆ ಜನ ವಿರೋಧಿಯಾದ ಕಾಯ್ದೆಗಳನ್ನು ತರಲು ಸುಗ್ರೀವಾಜ್ಞೆಗಳ ಮೊರೆ ಹೋಗಲಾಗುತ್ತಿದೆ. ಜನದ್ರೋಹಿಯಾದ ಮತ್ತು ಕಾರ್ಪೊರೇಟ್ ಪರವಾದ ಕಾನೂನುಗಳನ್ನು ತರುತ್ತಿದ್ದೀರಿ. ಸಣ್ಣ ಪ್ರಮಾಣದ ಭೂಮಿಯ ಆಸರೆ ಇದ್ದರೂ ಕೂಡ ರೈತಾಪಿ ಕುಟುಂಬಗಳು ಬಿಕ್ಕಟ್ಟನ್ನು ನಿಭಾಯಿಸುತ್ತವೆ. ಹೊಟ್ಟೆ ಬಟ್ಟೆಗೆ ಆಗುವಷ್ಟಾದರೂ ಬೆಳೆದು ಜೀವ ಉಳಿಸಿಕೊಳ್ಳಲು ಭೂಮಿಯನ್ನು ಆಶ್ರಯಿಸುತ್ತವೆ.

ನೀವೀಗ ಕರ್ನಾಟಕ ಭೂ ಸುಧಾರಣೆ ಕಾಯ್ದೆಗೆ ತಿದ್ದುಪಡಿ ತಂದು ನೇರವಾಗಿ ರೈತರ ಹೊಟ್ಟೆಗೆ ಬೆಂಕಿ ಹಾಕಲು ಹೊರಟಿದ್ದೀರಿ.ಉಳುವವನೆ ಹೊಲದ ಒಡೆಯನೆಂಬ ಕಾಗೋಡು ಸತ್ಯಾಗ್ರಹದ ಆಶಯವನ್ನು ನೀವು ಉಳ್ಳವನೇ ಭೂಮಿಯ ಒಡೆಯ ಎಂದು ಬದಲಾಯಿಸಿ ರಾಜ್ಯದ ಚರಿತ್ರೆಯಲ್ಲಿ ಶಾಶ್ವತವಾಗಿ ಖಳನಾಯಕನ ಪಾತ್ರವನ್ನು ವಹಿಸಿಕೊಳ್ಳಲು ಹೊರಟಿದ್ದೀರಿ. ಹಾಗಾಗಲು ಬಿಡದೆ ಕರ್ನಾಟಕ ಭೂ ಸುಧಾರಣಾ ಕಾಯ್ದೆಯನ್ನು ದುರ್ಬಲಗೊಳಿಸದೆ ಕಾಯ್ದೆಯ ಆಶಯಗಳನ್ನು ಇನ್ನಷ್ಟು ಶಕ್ತಗೊಳಿಸಬೇಕೆಂದು ಒತ್ತಾಯಿಸುತ್ತೇನೆ.

ನಾಮಕಾವಸ್ತೆ ಯೋಜನೆ

ನಾಮಕಾವಸ್ತೆ ಯೋಜನೆ

ಗ್ರಾಮೀಣ ಆರ್ಥಿಕತೆಯನ್ನು ಉತ್ತೇಜಿಸಲು ಡಾ. ಎಂ.ಎಸ್. ಸ್ವಾಮಿನಾಥನ್ ರವರ ಶಿಫಾರಸ್ಸುಗಳನ್ನು ಜಾರಿಗೆ ತರಬೇಕು. ರೈತ ಬೆಳೆದ ಬೆಳೆಗಳಿಗೆ ನ್ಯಾಯುತವಾದ ವೈಜ್ಞಾನಿಕ ಬೆಲೆಯನ್ನು ಕಲ್ಪಿಸಬೇಕು. ಈಗ ನಾಮಕಾವಸ್ತೆಗೆ ಇರುವ ಕೇಂದ್ರದ ಫಸಲ್ ವಿಮಾ ಯೋಜನೆಯ ಬದಲಾಗಿ ನಿಜಾರ್ಥದಲ್ಲಿ ಕೃಷಿ ವಿಮಾ ನೀತಿಯನ್ನು ಜಾರಿಗೊಳಿಸಬೇಕು.

ಅತೀ ಹೆಚ್ಚಿನ ಸಂಖ್ಯೆಯ ಉದ್ಯೋಗವನ್ನು ಒದಗಿಸಿರುವ ಕೃಷಿ ವಲಯವನ್ನು ಸಶಕ್ತಗೊಳಿಸಬೇಕಾಗಿದೆ ಮತ್ತು ಭೂ ಸುಧಾರಣೆ ಕಾಯ್ದೆಯ ಆಶಯಗಳನ್ನು ಇನ್ನಷ್ಟು ಕಠಿಣ ರೂಪದಲ್ಲಿ ಜಾರಿಗೊಳಿಸಬೇಕಾದ ಅಗತ್ಯ ಇದೆ. ಅದರ ಬದಲಾಗಿ ನೀವು ಇಡೀ ಭೂ ಸುಧಾರಣಾ ಕಾಯ್ದೆಯ ಆಶಯಗಳನ್ನೆ ನಾಶ ಮಾಡಲು ಹೊರಟಿದ್ದೀರಿ ಎಂದು ಸಿದ್ದರಾಮಯ್ಯ ಆರೋಪಿಸಿದ್ದಾರೆ.

ಕೈಗಾರಿಕೆ ಮುಂಚೂಣಿಯಲ್ಲಿದೆ

ಕೈಗಾರಿಕೆ ಮುಂಚೂಣಿಯಲ್ಲಿದೆ

ಸಧ್ಯ ನಮ್ಮಲ್ಲಿ ಇರುವ ಭೂ ಸುಧಾರಣಾ ಕಾಯ್ದೆಯಿಂದಲೇ ಕೈಗಾರಿಕಾ ವಲಯದಲ್ಲಿ ರಾಜ್ಯ ಹಿಂದೆ ಯಾವಾಗಲೂ ಮುಂಚೂಣಿದೆ. ವಿಶ್ವದ ಕೈಗಾರಿಕೋದ್ಯಮಿಗಳು ಕರ್ನಾಟಕದಲ್ಲಿ ಬಂಡವಾಳ ಹೂಡಲು ಬಯಸುತ್ತಿದ್ದರು. ಕೃಷಿ ಮತ್ತು ಕೈಗಾರಿಕೆಗಳ ಸಮತೋಲಿತ ಬೆಳವಣಿಗೆಯಿಂದಾಗಿ ರಾಜ್ಯದಲ್ಲಿ ನಿರುದ್ಯೋಗದ ಪ್ರಮಾಣ ಇಡೀ ದೇಶದಲ್ಲೇ ಅತ್ಯಂತ ಕಡಿಮೆ ಇತ್ತು.

ಇಂಥ ಸುಗಮವಾದ, ಸುಭದ್ರವಾದ ವ್ಯವಸ್ಥೆಯನ್ನು ನೀವು ಸಂಪೂರ್ಣ ನಾಶ ಮಾಡಲು ಹೊರಟಿದ್ದೀರಿ. ಗ್ರಾಮೀಣ ಆರ್ಥಿಕತೆಯನ್ನು ಸಂಪೂರ್ಣ ನಾಶ ಮಾಡಿ ನಗರಗಳಲ್ಲಿ ಬಿಡಿಗಾಸಿಗೆ ದುಡಿಯುವ ಕಾರ್ಮಿಕ ವರ್ಗವನ್ನು ಸೃಷ್ಟಿಸುವುದು ಸಹ ಇದರ ಹಿಂದೆ ಇರುವ ಹುನ್ನಾರಗಳಲ್ಲಿ ಒಂದು ಎಂದು ಸಿದ್ದರಾಮಯ್ಯ ಕಿಡಿ ಕಾರಿದ್ದಾರೆ.

ಕೃಷಿ ವಲಯ ನಾಶ

ಕೃಷಿ ವಲಯ ನಾಶ

ಭೂ ಸುಧಾರಣಾ ಕಾಯ್ದೆಗೆ ತಿದ್ದುಪಡಿ ತರಲು ಹೊರಟಿರುವ ರಾಜ್ಯ ಸರ್ಕಾರ ಹಣ ಇದ್ದವರು ಎಷ್ಟು ಬೇಕಾದರೂ ಭೂಮಿಯನ್ನು ಪಡೆಯಬಹುದು ಎನ್ನುವ ಆಘಾತಕಾರಿ ನಿಯಮ ಜಾರಿಗೆ ತರಲು ಹೊರಟಿದೆ. ಈ ಮೂಲಕ ಸರ್ಕಾರ ಕೃಷಿ ವಲಯವನ್ನು ನಾಶ ಮಾಡಿ, ಗ್ರಾಮೀಣ ಆರ್ಥಿಕತೆಯನ್ನು ಸಂಪೂರ್ಣ ಕೊಂದು ಹಾಕಿ ಇಡೀ ದೇಶದ ಆರ್ಥಿಕತೆಯನ್ನು ಅಲ್ಲೋಲ ಕಲ್ಲೋಲ ಮಾಡಲು ಹೊರಟಿದೆ.

ದಮನಿತ ವರ್ಗಗಳು ಆರ್ಥಿಕ ಚೈತನ್ಯ ಕಳೆದುಕೊಂಡರೆ, ಅಧಿಕಾರದಿಂದ ವಂಚಿತಗೊಂಡರೆ ಶಾಶ್ವತವಾಗಿ ಗುಲಾಮಗಿರಿಯತ್ತ ಸಾಗುತ್ತವೆ. ಈ ದುರುದ್ದೇಶವನ್ನು ಇಟ್ಟುಕೊಂಡೇ ಬಿಜೆಪಿ ನೇತೃತ್ವದ ಕೇಂದ್ರ ಮತ್ತು ರಾಜ್ಯ ಸರ್ಕಾರಗಳೆರಡು ದಮನಿತರು, ಹಿಂದುಳಿದವರು, ಅಲ್ಪಸಂಖ್ಯಾತರ ಆರ್ಥಿಕ ಚೈತನ್ಯವನ್ನು ಕುಗ್ಗಿಸುತ್ತಿದ್ದವು. ಇದೀಗ ಭೂಮಿ ಸಂಬಂಧಿತ, ಕೃಷಿ ಸಂಬಂಧಿತ ಕಾಯಿದೆಗಳಿಗೆ ತಿದ್ದುಪಡಿ ತರುವ ಮೂಲಕ ಕೃಷಿ ವಲಯಕ್ಕೆ ಹಣ ಉಳ್ಳವರನ್ನು ಸೇರಿಸಿ ಅವರಿಂದ ರೈತರ ಭೂಮಿ ಕುಸಿಯುವ ಮೂಲಕ ಅನ್ನದಾತರ ಆರ್ಥಿಕ ಚೈತನ್ಯವನ್ನು ಶಾಶ್ವತವಾಗಿ ನಾಶ ಮಾಡುವ ಹುನ್ನಾರ ಆರಂಭವಾಗಿದೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಕೃಷಿ ಭೂಮಿಗೆ ಲಗ್ಗೆ

ಕೃಷಿ ಭೂಮಿಗೆ ಲಗ್ಗೆ

ಕಾರ್ಪೋರೇಟ್ ಕಂಪನಿಗಳು ಈ ವರೆಗೂ ನಮ್ಮಲ್ಲಿ ಕೃಷಿ ಉತ್ಪಾದನೆಗೆ ಕೈ ಹಾಕಲು ಸಾಧ್ಯವಾಗಿರಲಿಲ್ಲ. ಈಗ ನೀವು ತರಲು ಹೊರಟಿರುವ ಮಾರ್ಪಾಡಿನಿಂದಾಗಿ ಕಾರ್ಪೊರೇಟ್ ಕಂಪನಿಗಳು ಕೃಷಿ ಭೂಮಿಗೆ ಲಗ್ಗೆ ಹಾಕುತ್ತವೆ. ಕೃಷಿ ಕ್ಷೇತ್ರ ತನ್ನ ಮೂಲ ಸ್ವರೂಪ ಕಳೆದುಕೊಂಡು ಕೈಗಾರೀಕರಣದತ್ತ ಹೊರಳುತ್ತದೆ. ಇದರಿಂದಾಗಿ ಅಂತರ್ಜಲ ಕುಸಿತವಾಗುತ್ತದೆ.ವಿಪರೀತ ಪ್ರಮಾಣದ ಔಷಧ,ರಸಗೊಬ್ಬರ ಮುಂತಾದ ರಾಸಾಯನಿಕಗಳನ್ನು ಬಳಕೆ ಮಾಡುವುದರಿಂದ ಭೂಮಿ ನಾಶವಾಗುತ್ತದೆ.

ಇದರಿಂದ ಜೀವ ವೈವಿಧ್ಯ ನಾಶವಾಗಿ ಉಳಿದ ರೈತರು ಕೃಷಿ ಮಾಡುವುದೇ ದುಸ್ತರವಾಗುತ್ತದೆ. ಭೂಮಿ ತನ್ನ ಸೃಷ್ಟಿಶೀಳತೆಯನ್ನು ಕಳೆದುಕೊಂಡು ಬರಡಾಗುತ್ತದೆ.ವಿಷಯುಕ್ತ ನೀರು, ಕ್ಷಾರಯುಕ್ತ ಭೂಮಿ ಮುಂತಾದವುಗಳ ಸಮಸ್ಯೆ ವಿಪರೀತವಾಗುತ್ತದೆ. ಭೂಮಿ ಕುರಿತಾದ ವ್ಯಾಜ್ಯಗಳಿಗೂ ಇದು ದಾರಿ ಮಾಡಿಕೊಡುತ್ತದೆ. ಕೃಷಿ ವೈವಿಧ್ಯ ನಾಶವಾಗಿ ಏಕರೂಪಿ ಕೃಷಿ ಸಂಸ್ಕಂತಿ ಪ್ರಾರಂಭವಾಗುತ್ತದೆ ಎಂದು ಸಿದ್ದರಾಮಯ್ಯ ವಿಶ್ಲೇಷಣೆ ಮಾಡಿದ್ದಾರೆ.

ಕೆಲವರ ಕೈಯಲ್ಲಿ ಕೃಷಿ ಅಪಾಯಕಾರಿ

ಕೆಲವರ ಕೈಯಲ್ಲಿ ಕೃಷಿ ಅಪಾಯಕಾರಿ

ಬಂಡವಾಳಿಗರಲ್ಲಿರುವ ಅಪಾರ ಪ್ರಮಾಣದ ಹಣದಿಂದ ಸಣ್ಣಪುಟ್ಟ ರೈತರ ಭೂಮಿಯನ್ನು ಕಸಿದುಕೊಳ್ಳಲು ಸಾಧ್ಯವಾಗುತ್ತದೆ. ಕೃಷಿಯಲ್ಲಿ ಬಂಡವಾಳಿಗರ ಏಕಸ್ವಾಮ್ಯ (ಮೊನಾಪಲಿ) ಸಾಧಿಸಲಾಗುತ್ತದೆ. ಬಹುಪಾಲು ಜನರು ಸೇರಿ ಉತ್ಪಾದನೆ ಮಾಡಿ ಎಲ್ಲರೂ ಬದುಕುವ ವಾತಾವರಣ ನಿರ್ಮಾಣವಾಗುವುದರ ಬದಲು ಕೆಲವರು ಉತ್ಪಾದನೆ ಮಾಡಿ ಇಡೀ ದೇಶಕ್ಕೆ ಹಂಚುವ ಅಪಾಯಕಾರಿ ದಿನಗಳು ಬರಲಿವೆ. ಇದರಿಂದ ಜನರ ಆಹಾರದ ಹಕ್ಕು ಮೊಟಕಾಗುತ್ತದೆ. ವಿಪರೀತ ನಿರುದ್ಯೋಗ ಸಮಸ್ಯೆ ಪ್ರಾರಂಭವಾಗುತ್ತದೆ.

ದೊಡ್ಡ ಬಹುರಾಷ್ಟ್ರೀಯ ಕಂಪೆನಿಗಳು, ದೊಡ್ಡ ಬಂಡವಾಳಿಗರಿಗೆ ಬೇಕಾದ ವೇದಿಕೆಯನ್ನು ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರಗಳೆರಡು ಹಠಕ್ಕೆ ಬಿದ್ದ ಹಾಗೆ ಜಾರಿಗೆ ತರುತ್ತಿದ್ದೀರಿ. ಅವರುಗಳಿಗೆ ರತ್ನಗಂಬಳಿ ಹಾಸಿ ಕೃಷಿ ಕ್ಷೇತ್ರಕ್ಕೆ ಸ್ವಾಗತಿಸಲು ನಿಂತಿದ್ದೀರಿ. ಅವರುಗಳ ಮಾರುಕಟ್ಟೆ ಸುಗುಮವಾಗಿರಲೆಂದು ಎ.ಪಿ.ಎಂ.ಸಿ. ಕಾಯ್ದೆಗೆ ತಿದ್ದುಪಡಿ ತರುತ್ತಿದ್ದೀರಿ. ರೈತರೊಂದಿಗೆ ಕೃಷಿ ಕ್ಷೇತ್ರದಲ್ಲಿ ಒಪ್ಪಂದದ ಕೃಷಿ ಮಾಡಲು ಕಾಯ್ದೆಯನ್ನು ತರುತ್ತಿದ್ದೀರಿ. ಇವೆಲ್ಲವೂ ಮುಂದಿನ ದಿನಗಳಲ್ಲಿ ಸರ್ಕಾರ ಹಾಗೂ ಜನರ ಮೇಲೆ ನೇರ ಪರಿಣಾಮವನ್ನುಂಟು ಮಾಡುತ್ತವೆ ಎಂದು ಸಿದ್ದರಾಮಯ್ಯ ಎಚ್ಚರಿಕೆ ಕೊಟ್ಟಿದ್ದಾರೆ.

ನಗರ ಗ್ರಾಹಕರ ಮೇಲೆ ಪರಿಣಾಮ

ನಗರ ಗ್ರಾಹಕರ ಮೇಲೆ ಪರಿಣಾಮ

ಬಂಡವಾಳಿಗ ಬೆಳೆದ ಆಹಾರ ಧಾನ್ಯಗಳು, ಬೇಳೆ ಕಾಳುಗಳು, ಎಣ್ಣೆ ಕಾಳುಗಳು, ಖಾದ್ಯತೈಲ, ಈರುಳ್ಳಿ, ಆಲೂಗಡ್ಡೆ ಮುಂತಾದ ಬೆಳೆಗಳನ್ನು ಎಷ್ಟು ಪ್ರಮಾಣದಲ್ಲಿ ಸಂಗ್ರಹಿಸಿಕೊಳ್ಳಲು ಎಸ್ಮಾ ಕಾಯ್ದೆಗೆ ತಿದ್ದುಪಡಿ ತಂದು ಕೇಂದ್ರ ಸರ್ಕಾರ ಕೆಲವರಿಗಷ್ಟೆ ಅನುಕೂಲ ಮಾಡಲು ಹೊರಟಿದೆ.ಇದರಿಂದ ಬೆಲೆ ಮೇಲೆ ನಿಯಂತ್ರಣ ತಪ್ಪಿ ನಗರದ ಗ್ರಾಹಕರ ಮೇಲೂ ದುಷ್ಪರಿಣಾಮ ಬೀರುತ್ತದೆ.

ಕೇಂದ್ರ ಹಾಗೂ ರಾಜ್ಯಗಳಲ್ಲಿ ಒಂದೇ ಪಕ್ಷದ ಸರ್ಕಾರಗಳಿದ್ದರೆ ಸ್ವರ್ಗ ಸೃಷಿಯಾಗುತ್ತದೆ ಎಂದು ನಂಬಿಸಿ ರೈತನ ಬಡವರ, ಹಿಂದುಳಿದವರ, ದಮನಿತರ ಶೋಷಗೊಳಗಾದವರ ಮೈಯಲ್ಲಿ ಜಾಗವೇ ಇಲ್ಲದಷ್ಟು ಪ್ರಮಾಣದಲ್ಲಿ ಇರಿಯುತ್ತಿದ್ದೀರಿ. ಇದು ರೈತರ ಹೆಸರು ಹೇಳಿ ಅಧಿಕಾರಕ್ಕೆ ಬಂದ ನಿಮ್ಮಂಥವರಿಗೆ ಶೋಭೆ ತರುವ ವಿಚಾರವಲ್ಲ ಎಂದು ಮುಂದಿನ ದಿನಗಳಲ್ಲಿ ನಗರ ಪ್ರದೇಶಗಳ ಜನರು ಎದುರಿಸಬಹುದಾದ ಸಮಸ್ಯೆಗಳನ್ನು ವಿವರಿಸಿದ್ದಾರೆ.

ಕೋಟ್ಯಂತರ ರೈತರ ಮೇಲೆ ಸಮಾಧಿ

ಕೋಟ್ಯಂತರ ರೈತರ ಮೇಲೆ ಸಮಾಧಿ

ಕಾಯಿದೆಯ ಅನುಷ್ಠಾನದಲ್ಲಿ ಲೋಪದೋಷಗಳಿರಬಹುದು. ಕೆಲವು ಲಜ್ಜೆಗೆಟ್ಟ ಅಧಿಕಾರಿಗಳು ತಪ್ಪು ಮಾಡುತ್ತಿರಬಹುದು. ಅದನ್ನು ಸರಿಪಡಿಸಬೇಕಾದ್ದು ಸರ್ಕಾರದ ಕರ್ತವ್ಯ. ಅಧಿಕಾರಿಗಳು ತಪ್ಪು ಮಾಡುತ್ತಿದ್ದಾರೆ ಎಂಬ ನೆಪ ಹೇಳಿ ಕಾಯ್ದೆಯನ್ನೇ ರದ್ದುಪಡಿಸಲು ಹೊರಟಿರುವುದು ಮೂರ್ಖತನದ ಪರಮಾವಧಿ.

ಕೆಲವು ಅಧಿಕಾರಿಗಳ ದುರ್ವರ್ತನೆಯನ್ನು ನೆಪವಾಗಿಟ್ಟುಕೊಂಡು ಬೆರಳೆಣಿಕೆಯಷ್ಟು ಕಾರ್ಪೊರೇಟ್ ಕಂಪನಿಗಳ ಅಥವಾ ಉಳ್ಳವರ ಹಿತಾಸಕ್ತಿಗಾಗಿ ಕೋಟ್ಯಂತರ ರೈತರ ಮೇಲೆ ಸಮಾಧಿ ಕಟ್ಟಲು ಹೊರಟಿರುವುದು ಅಕ್ಷಮ್ಯ ಅಪರಾಧ. ಇದು ನಾಗರಿಕ ಸರ್ಕಾರವೊಂದರಿಂದ ಘಟಿಸಬಹುದಾದ ಘೋರ ಕೃತ್ಯ ಎಂದು ಮುನ್ನೆಚ್ಚರಿಕೆ ಕೊಟ್ಟಿದ್ದಾರೆ.

ಕೊರೊನಾ ವೈರಸ್ ಅಸ್ತ್ರ ಬಳಕೆ

ಕೊರೊನಾ ವೈರಸ್ ಅಸ್ತ್ರ ಬಳಕೆ

ದೇಶದಲ್ಲಿ ಕೊರೊನಾ ವೈರಸ್ ಸೋಂಕಿನ ಹಿನ್ನೆಲೆಯಲ್ಲಿ ಪ್ರತಿಭಟನೆಗಳನ್ನು ನಿರ್ಬಂಧಿಸಲಾಗಿದೆ. ಇದನ್ನೇ ಅಸ್ತ್ರವಾಗಿ ಬಳಸಿಕೊಂಡು ಜನವಿರೋಧ ಕಾಯ್ದೆಗಳನ್ನು ಜಾರಿಗೆ ತರುವ ದುಷ್ಟತನವನ್ನು ಕೇಂದ್ರ, ರಾಜ್ಯ ಸರ್ಕಾರಗಳೆರಡು ಮಾಡುತ್ತಿವೆ. ಸರ್ಕಾರಗಳು ಕೊರೋನ ಸಮಸ್ಯೆಯನ್ನು ಬಗೆ ಹರಿಸುವ ಬದಲು ಇಂಥ ಘಾತುಕ ಕೃತ್ಯ ಮಾಡಲು ಹೊರಟರೆ ನಿಮ್ಮನ್ನು ರಕ್ಷಕರೆನ್ನಲಾದೀತೆ?

ಕೇಂದ್ರ ರಾಜ್ಯ ಸರ್ಕಾರಗಳು ಜನರ ಸಂಕಷ್ಟವನ್ನು ದುರುಪಯೋಗ ಮಾಡಿಕೊಂಡು ಬೆನ್ನಲ್ಲಿ ಇರಿಯಹೊರಟಿರುವ ಕೃತ್ಯವನ್ನು ನಿಲ್ಲಿಸಿ ಈಗ ಹೊರಡಿಸಿರುವ ಸುಗ್ರೀವಾಜ್ಞೆಗಳನ್ನು ರದ್ದು ಪಡಿಸದಿದ್ದರೆ, ಸರ್ಕಾರಗಳ ವಿರುದ್ಧ ಜನರ ಚಳುವಳಿಯನ್ನು ಪ್ರಾರಂಭಿಸಬೇಕಾದ ಅನಿವಾರ್ಯತೆ ಸೃಷಿಯಾಗುತ್ತದೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು ಎಂದು ಸಿದ್ದರಾಮಯ್ಯ ತಿಳಿ ಹೇಳಿದ್ದಾರೆ.

ಆದುದರಿಂದ, ಕರ್ನಾಟಕ ಭೂ ಸುಧಾರಣಾ ಕಾಯ್ದೆಗೆ ತಿದ್ದುಪಡಿ ತರುವ ಹೆಸರಿನಲ್ಲಿ ಕಾಯ್ದೆಯ ಆತ್ಮವನ್ನೇ ಕೊಲ್ಲಲು ಹೊರಟಿರುವ ತೀರ್ಮಾನವನ್ನು ತಕ್ಷಣವೇ ಕೈ ಬಿಡಬೇಕು. ಜೊತೆಗೆ ಎ.ಪಿ.ಎಂ.ಸಿ. ಕಾಯ್ದೆಗೆ ತಿದ್ದುಪಡಿ ತರಲು ಹೊರಡಿಸಿರುವ ಸುಗ್ರೀವಾಜ್ಞೆಯನ್ನು ಈ ಕ್ಷಣದಿಂದ ರದ್ದುಪಡಿಸಬೇಕು. ಮತ್ತು ಕೇಂದ್ರ ಸರ್ಕಾರ ಈ ಎರಡು ಕಾಯ್ದೆಗಳನ್ನು ಕೇಂದ್ರವು ಕೈಬಿಡುವಂತೆ ರಾಜ್ಯ ಸರ್ಕಾರ ಒತ್ತಾಯಿಸಬೇಕೆಂದು ಆಗ್ರಹಿಸುತ್ತೇನೆ ಎಂದು ಸಿದ್ದರಾಮಯ್ಯ ಅವರು ಸಿಎಂಗೆ ಬರೆದಿರುವ ಪತ್ರದಲ್ಲಿ ವಿವರಿಸಿದ್ದಾರೆ.

English summary
Leader of the Opposition Siddaramaiah demanded that the amendment to the Land Acquisition Act be amended, He has written a letter to CM Yeddyurappa,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X