ಮಾಜಿ ಸಿಎಂ ಸಿದ್ದರಾಮಯ್ಯ-ಬಿಜೆಪಿ ಶಾಸಕ ಮುನಿರತ್ನ ಭೇಟಿ: ಕುತೂಹಲ ಮೂಡಿಸಿದ ಮಾತು'ಕಥೆ'!
ಬೆಂಗಳೂರು, ಡಿ. 07: ಕುತೂಹಲಕಾರಿ ಬೆಳವಣಿಗೆಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಅವರನ್ನು ಆರ್ಆರ್ ನಗರ ಬಿಜೆಪಿ ಶಾಸಕ ಮುನಿರತ್ನ ಅವರು ಭೇಟಿ ಮಾಡಿ ಚರ್ಚೆ ನಡೆಸಿದ್ದಾರೆ. ಆರ್ಆರ್ ನಗರ ಉಪ ಚುನಾವಣೆಯಲ್ಲಿ 'ತಾಯಿ ಕುರಿತು' ಸಿದ್ದರಾಮಯ್ಯ ಅವರು ಆಡಿದ್ದ ಮಾತಿನಿಂದ ಮುನಿರತ್ನ ಅವರು ಕಣ್ಣೀರು ಹಾಕಿದ್ದರು. ನಾನು ತಾಯಿಯನ್ನು ಮಾರಾಟ ಮಾಡಿದ್ದೇನೆಂದು ಸಿದ್ದರಾಮಯ್ಯ ಅವರು ಹೇಳಿದ್ದಾರೆ. ಅವರ ಮಾತಿನಿಂದ ನನಗೆ ಭಾರಿ ನೋವಾಗಿದೆ ಎಂದು ಮುನಿರತ್ನ ಕಣ್ಣೀರಾಗಿದ್ದರು. ಸಿದ್ದರಾಮಯ್ಯ ಅವರ ಮಾತು ಶಿಷ್ಯ ಮುನಿರತ್ನ ಅವರಿಗೆ ಚುನಾವಣೆಯಲ್ಲಿ ಮತಗಳನ್ನು ತಂದು ಕೊಟ್ಟಿತು. ಆ ಮೂಲಕ ಶಿಷ್ಯನ ಗೆಲುವಿಗೆ ಸಿದ್ದರಾಮಯ್ಯ ಅವರು ಪರೋಕ್ಷ ಸಹಾಯ ಮಾಡಿದರು ಎಂಬ ಚರ್ಚೆ ಬಿಜೆಪಿಯಲ್ಲಿ ಒಳಗೊಳಗೆ ನಡೆದಿತ್ತು.
ಮೈತ್ರಿ ಸರ್ಕಾರಕ್ಕೆ 'ಕೈ'ಕೊಟ್ಟು ಕಮಲ ಪಾಳೆಯ ಸೇರಿದ ಬಳಿಕ ಇದೇ ಮೊದಲ ಬಾರಿ ಸಿದ್ದರಾಮಯ್ಯ ಹಾಗೂ ಮುನಿರತ್ನ ಅವರು ಇದೇ ಮೊದಲ ಬಾರಿಗೆ ಬಹಿರಂಗವಾಗಿ ಭೇಟಿ ಮಾಡಿದ್ದಾರೆ. ಹೀಗಾಗಿ ಇಬ್ಬರೂ ನಾಯಕರ ಭೇಟಿ ಕೈ-ಕಮಲ ಪಾಳೆಯದಲ್ಲಿ ಭಾರಿ ಚರ್ಚೆಯನ್ನು ಹುಟ್ಟು ಹಾಕಿದೆ.
ಶಿಷ್ಯನೊಂದಿಗೆ ಸಿದ್ದರಾಮಯ್ಯ ಚರ್ಚೆ
ಬೆಳಗ್ಗೆ ಸ್ವಲ್ಪ ತಡವಾಗಿ ಆರಂಭವಾದ ವಿಧಾನಸಬೆ ಕಲಾಪ ಮಧ್ಯಾಹ್ನ 2.30ಕ್ಕೆ ಮುಂದೂಡುತ್ತಲೇ ಸ್ವಾರಸ್ಯಕರ ಸನ್ನಿವೇಶ ನಡೆಯಿತು. ಬಹಳ ದಿನಗಳ ನಂತರ ತಮ್ಮ ಶಿಷ್ಯ ಮುನಿರತ್ನ ಅವರೊಂದಿಗೆ ವಿಪಕ್ಷ ನಾಯಕ ಸಿದ್ದರಾಮಯ್ಯ ಮಾತಿಗೆ ಕುಳಿತಿದ್ದರು. ಶಾಸಕ ಮುನಿರತ್ನ ಅವರು ಬಿಜೆಪಿಗೆ ಹೋಗಿ ಉಪಚುನಾವಣೆಯಲ್ಲಿ ಸ್ಪರ್ದಿಸಿ ಗೆದ್ದ ಬಳಿಕ ಮೊದಲ ಬಾರಿ ಗುರುಶಿಷ್ಯರ ಮುಖಾಮುಖಿಯಾಗಿರುವುದು ಸಹಜವಾಗಿಯೆ ಕುತೂಹಲ ಮೂಡಿಸಿತು.
ಕುತೂಹಲ ಮೂಡಿಸಿದ ಮಾತು'ಕಥೆ'
ವಿಧಾನಸಭೆ ಲಾಂಜ್ನಲ್ಲಿ ಸಿದ್ದರಾಮಯ್ಯ ಹಾಗೂ ಮುನಿರತ್ನ ಅವರು ಕೆಲಹೊತ್ತು ಗಹನವಾದ ಚರ್ಚೆಯನ್ನು ನಡೆಸಿದರು. ಬಿಜೆಪಿ ಬೆಳವಣಿಗೆಗಳು, ಉಪಚುನಾವಣೆ ಗೆಲುವು ಸೇರಿದಂತೆ ಹಲವು ವಿಚಾರಗಳನ್ನು ಮಾಜಿ ಶಿಷ್ಯನೊಂದಿಗೆ ಸಿದ್ದರಾಮಯ್ಯ ಚರ್ಚೆ ಮಾಡಿದರು ಎಂದು ತಿಳಿದು ಬಂದಿದೆ. ಆದರೆ ಸಿದ್ದರಾಮಯ್ಯ-ಮುನಿರತ್ನ ಅವರು ಏನು ಮಾತನಾಡಿದರು ಎಂಬುದಕ್ಕಿಂತ, ಆರ್ಆರ್ ನಗರ ಉಪ ಚುನಾವಣೆಯಲ್ಲಿ ಆಗಿದ್ದ ವಾಕ್ಸಮರದ ಬಳಿಕ ಬೇಟಿಯಾಗಿರುವುದು ಕುತೂಹಲ ಮೂಡಿಸಿದೆ.
ಇದೆನಾ ಮಾತನಾಡಿದ ವಿಚಾರ?
ವಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಶಾಸಕ ಮುನಿರತ್ನ ನಡುವೆ ನಡೆದ ಸ್ವಾರಸ್ಯಕರ ಚರ್ಚೆ ಉಪ ಚುನಾವಣೆ ಕುರೊತು ನಡೆಯಿತು ಎನ್ನಲಾಗಿದೆ. ಜೊತೆಗೆ ಸದ್ಯದ ರಾಜಕೀಯ ಪರಿಸ್ಥಿತಿಯ ಚರ್ಚೆಯೂ ನಡೆಸಿದ್ದಾರೆ ಎನ್ನಲಾಗಿದೆ. ಸಿದ್ದರಾಮಯ್ಯ ಅವರು ಏನಯ್ಯ ಮುನಿರತ್ನ? ಬೈ ಎಲೆಕ್ಷನ್ನಲ್ಲಿ ಅಷ್ಟು ಲೀಡ್ ಹೇಗೆ ಬಂತು ನಿಂಗೆ? ಅಂತಾ ಕೇಳಿದ್ದಾರೆ. ಆಗ ಮುನಿರತ್ನ ಅವರು ನೀವೇ ಹೇಳಬೇಕು ಸರ್ ಎಂದಿದ್ದಾರೆ ಎನ್ನಲಾಗಿದೆ.
ಅದಕ್ಕೆ ಸಿದ್ದರಾಮಯ್ಯ ಅವರ ನಿಂಗೆ ನಾನು ಸಿಎಂ ಆಗಿದ್ದಾಗ ಕೊಟ್ಟ ಅನುದಾನದಿಂದಲೇ ನೀನು ಗೆದ್ದಿದಿಯಾ. ಕೇಳದಾಗೆಲ್ಲಾ ಕ್ಷೇತ್ರಕ್ಕೆ ಅನುದಾನ ಕೊಟ್ಟಿದಿನಿ. ಎಲೆಕ್ಷನ್ ಸಂದರ್ಭದಲ್ಲಿ ಅದನ್ನೇ ಹೇಳಿದ್ನಲ್ಲವಾ? ನಾನು ಕೊಟ್ಟ ಅನುದಾನದಲ್ಲೇ ಆರ್ಆರ್ ನಗರ ಅಭಿವೃದ್ಧಿ ಆಗಿದೆ ಅಂತ. ಅದಕ್ಕೆ ಮುನಿರತ್ನ ಅವರು ನಗುತ್ತಲೇ ಮತ್ತೆ ಯಾಕೆ ನಿಮ್ ಕ್ಯಾಂಡಿಡೇಟ್ ಗೆಲ್ಲಲಿಲ್ಲ ಹಾಗಾದರೆ? ಎಂದಿದ್ದಾರೆ. ಸಿದ್ದರಾಮಯ್ಯ- ಹೋಗಲಿ ಬಿಡು, ಮುಗೀತಲ್ಲಾ ಎಂದರಂತೆ.
Recommended Video
ಮಂತ್ರಿ ಆಗ್ತಿ ಬಿಡ್ಕಣಯ್ಯ ನೀನು!
ಮಂತ್ರಿ ಆಗ್ತಿಯಾ ಕಣಯ್ಯ ನೀನು. ಅವರಿಬ್ಬರೂ ಆಗಿದ್ದಾರೆ. ನೀನೂ ಆಗ್ತಿಯಾ ಬುಡು (ಅವರಿಬ್ಬರೂ ಅಂದರೆ ಎಸ್ ಟಿ ಸೋಮಶೇಖರ್, ಭೈರತಿ ಬಸವರಾಜು) ಅಂದ್ರಂತೆ. ಅದಕ್ಕೆ ಶಾಸಕ ಮುನಿರತ್ನ ಅವರು ನೋಡೋಣ ಸರ್ ಯಾವಾಗ ಮಂತ್ರಿ ಮಾಡ್ತಾರೋ ಮಾಡಲಿ ಎಂದು ಉತ್ತರಿಸಿದರಂತೆ. ಇದೆ ಚರ್ಚೆ ನಡೆದಿದೆ ಎಂದು ತಿಳಿದು ಬಂದಿದೆ. ಏನೇನು ಮಾತನಾಡಿದ್ದಾರೆ ಎಂಬುದನ್ನು ಅಧಿಕೃತವಾಗಿ ಸಿದ್ದರಾಮಯ್ಯ ಹಾಗೂ ಮುನಿರತ್ನ ಅವರೇ ಹೇಳಬೇಕು.
ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಮುನಿರತ್ನ ಅವರು ಮಾತನಾಡುವಾಗ ಕೆಪಿಸಿಸಿ ಕಾಯಾಧ್ಯಕ್ಷ ಈಶ್ವರ್ ಖಂಡ್ರೆ ಸೇರಿದಂತೆ ಕೆಲವು ಕಾಂಗ್ರೆಸ್ ಮುಖಂಡರು ಜೊತೆಗದಿದ್ದರು.