ಸಿದ್ದರಾಮಯ್ಯ ವಿದೇಶ ಪ್ರವಾಸ: ರಾಜ್ಯ ರಾಜಕಾರಣದಲ್ಲಿ ಪಲ್ಲಟ?
ಬೆಂಗಳೂರು, ಡಿಸೆಂಬರ್ 08: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿದೇಶಕ್ಕೆ ಹೊರಟಿದಿದ್ದಾರೆ. ವಿಧಾನಸಭೆ ಚುನಾವಣೆ ಬಳಿಕ ಇದು ಅವರ ಎರಡನೇ ಖಾಸಗಿ ಪ್ರವಾಸ.
ಕಳೆದ ಬಾರಿ ಸಿದ್ದರಾಮಯ್ಯ ಯೂರೋಪ್ ಪ್ರವಾಸ ಹೋಗಿದ್ದಾಗ ರಾಜ್ಯದಲ್ಲಿ ರಾಜಕೀಯ ಬಿಕ್ಕಟ್ಟು ಸೃಷ್ಠಿಯಾಗಿತ್ತು. ಜಾರಕಿಹೊಳಿ ಸಹೋದರರು ರಚ್ಚೆ ಹಿಡಿದು ಕೂತರು, ಎಂಟಿಬಿ ನಾಗರಾಜು ಸಹ ಸರ್ಕಾರದ ವಿರುದ್ಧ ತೊಡೆತಟ್ಟಿದ್ದರು.
ಈ ಬಾರಿ ಮತ್ತೆ ಸಿದ್ದರಾಮಯ್ಯ ಅವರು ಮಲೇಷ್ಯಾಕ್ಕೆ ಹೋಗುತ್ತಿದ್ದಾರೆ. ಅದೂ ಸಹ ಅಧಿವೇಶನ ಪ್ರಾರಂಭವಾಗುವ ಸಮಯದಲ್ಲಿ ಸಿದ್ದರಾಮಯ್ಯ ಅವರು ಸರ್ಕಾರದ ಜೊತೆಗಿರದೆ ಕೈಕೊಡುತ್ತಿದ್ದಾರೆ. ಇದರ ಹಿಂದೆ ರಾಜಕೀಯ ಉದ್ದೇಶವೇನಾದರೂ ಇದೆಯೇ ಎಂಬುದನ್ನು ಚರ್ಚಿಸಲೇಬೇಕಾಗಿದೆ.
ಶಾಸಕರು ಬೆಳಗಾವಿಗೆ, ಸಿದ್ದರಾಮಯ್ಯ ಮಲೇಷ್ಯಾಕ್ಕೆ, ಏನಿದರ ಒಳಮರ್ಮ?
ಸಿದ್ದರಾಮಯ್ಯ ಅವರಂತಹಾ ರಾಜಕೀಯ ಮುತ್ಸಧಿಗಳು, ಸಮ್ಮಿಶ್ರ ಸರ್ಕಾರ ರಚನೆಯಾಗಲೂ ಹಾಗೂ ಅದು ಸರಾಗ ನಡೆಯಲು ಹೆಗಲುಕೊಟ್ಟಿರುವ ಪ್ರಮುಖ ವ್ಯಕ್ತಿ ಸಿದ್ದರಾಮಯ್ಯ ಆಗಿದ್ದು, ಅವರ ಪ್ರತಿ ಮಾತು, ಹೇಳಿಕೆ, ಭೇಟಿ, ಪ್ರವಾಸ ಎಲ್ಲವೂ ಸಹ ರಾಜಕೀಯ ದೃಷ್ಠಿಯಿಂದ ನೋಡುವ ಅಗತ್ಯತೆ ಇದೆ.
ಸರ್ಕಾರದ ಜೊತೆಗಿಲ್ಲವೇ ಸಿದ್ದರಾಮಯ್ಯ
ಸಮನ್ವಯ ಸಮಿತಿಯ ಅಧ್ಯಕ್ಷ ಸಿದ್ದರಾಮಯ್ಯ ಅವರು, ಅಧಿವೇಶನಕ್ಕೆ ಗೈರಾಗುವ ಮೂಲಕ ತಾವು ಸರ್ಕಾರದ ಜೊತೆಗಿಲ್ಲ ಅಥವಾ ಅಥವಾ ಸರ್ಕಾರಕ್ಕೂ ನನಗೂ ಸಂಬಂಧವಿಲ್ಲ ಎಂಬುದನ್ನು ತೋರಿಸಲು ಅಧಿವೇಶನದ ಸಮಯದಲ್ಲಿಯೇ ಹೀಗೆ ಪ್ರವಾಸ ಹೋಗುತ್ತಿದ್ದಾರಾ ಎಂಬ ಅನುಮಾನ ಮೊದಲಿಗೆ ಹುಟ್ಟುತ್ತದೆ. ಅಧಿವೇಶನದ ಮೊದಲ ದಿನವೇ ಬಿಜೆಪಿ ಸರ್ಕಾರದ ವಿರುದ್ಧ ಪ್ರತಿಭಟನೆ ಮಾಡುತ್ತಿದೆ. ಅಧಿವೇಶನದಲ್ಲೂ ಅದು ಮುಂದುವರೆಯಲಿದೆ. ಇಂತಹಾ ಸಮಯದಲ್ಲಿ ಉತ್ತಮ ಸಂಸತ್ಪಟು ಸಿದ್ದರಾಮಯ್ಯ ಅವರು ತಮ್ಮ ಸರ್ಕಾರದ ಬೆಂಬಲಕ್ಕೆ ನಿಲ್ಲದೇ ಇರುವುದು ಸಹಜವಾಗಿಯೇ ಕುತೂಹಲ ಕೆರಳಿಸಿದೆ.
ಭ್ರಷ್ಟಾಚಾರ ಆರೋಪಕ್ಕೆ ಸಿದ್ದರಾಮಯ್ಯ ನೀಡಿದ ಸ್ಪಷ್ಟೀಕರಣವೇನು?
ಸಂಪುಟ ವಿಸ್ತರಣೆ ಗೊಂದಲದಿಂದ ದೂರ
ಸಿದ್ದರಾಮಯ್ಯ ಅವರು ರಾಜ್ಯದಲ್ಲಿ ಇದ್ದರೆ ಸಂಪುಟ ವಿಸ್ತರಣೆಗೆ ತಮ್ಮ ಬೆಂಬಲಿಗ ಶಾಸಕರು ದುಂಬಾಲು ಬೀಳುತ್ತಾರೆಂದು ಸಿದ್ದರಾಮಯ್ಯ ಅವರು ವಿದೇಶಕ್ಕೆ ಹಾರಿದ್ದಾರೆ ಎಂಬ ಸುದ್ದಿಯೂ ಇದೆ. ಸಿದ್ದರಾಮಯ್ಯ ಇಲ್ಲಿಯೇ ಇದ್ದರೆ ತಮ್ಮ ಬೆಂಬಲಿತ ಶಾಸಕರು ಪದೇ-ಪದೇ ಭೇಟಿಯಾಗಿ ಒತ್ತಡ ಹೇರುತ್ತಾರೆ ಎಂದು ಅವರು ವಿದೇಶಕ್ಕೆ ಹಾರಿದ್ದಾರೆ ಎನ್ನಲಾಗಿದೆ.
ಸಿಂಗಾಪುರಕ್ಕೆ ಹೋಗುತ್ತಿರುವ ಹಿಂದಿನ ಉದ್ದೇಶ ತಿಳಿಸಿದ ಸಿದ್ದರಾಮಯ್ಯ
ವಿದೇಶದಲ್ಲಿ ಕೂತು ಬಟನ್ ಒತ್ತುತ್ತಾರೆಯೆ?
ಕಳೆದ ಬಾರಿ ಸಿದ್ದರಾಮಯ್ಯ ಅವರು ವಿದೇಶಕ್ಕೆ ಹೋದಾಗ ರಾಜ್ಯ ರಾಜಕೀಯದಲ್ಲಿ ಬಿಕ್ಕಟ್ಟು ಸೃಷ್ಠಿಯಾಗಿತ್ತು. ಜಾರಕಿಹೊಳಿ ಸಹೋದರರು ಸರ್ಕಾರವನ್ನೇ ಬೀಳಿಸುವ ಮಟ್ಟಕ್ಕೆ ಹೋಗಿದ್ದರು. ಈ ಬಾರಿಯೂ ಅಂತಹುದೇ ಯಾವುದೋ ಘಟನೆಯ ಮುನ್ಸೂಚನೆ ಅರಿತು, ಅಥವಾ ಅಂತಹಾ ಘಟನೆಗೆ ಮುನ್ನುಡೆ ಬರೆದು ಸಿದ್ದರಾಮಯ್ಯ ಅವರು ವಿದೇಶಕ್ಕೆ ಹೋಗಿರುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ.
ಕುಮಾರಸ್ವಾಮಿಗೆ ಭಯ
ಸಿದ್ದರಾಮಯ್ಯ ಅವರು ವಿದೇಶಕ್ಕೆ ಹೋದರೆ ಕುಮಾರಸ್ವಾಮಿಗೆ ಭಯವಾಗುವುದು ಖಂಡಿತ. ಕಳೆದ ಬಾರಿ ಸಿದ್ದರಾಮಯ್ಯ ಯೂರೋಪ್ ಪ್ರವಾಸಕ್ಕೆ ಹೋದಾಗ ಅವಾಂತರ ಅವರಿನ್ನೂ ಮರೆತಿಲ್ಲ. ಅಷ್ಟೆ ಅಲ್ಲದೆ ಈ ಬಾರಿ ಬಿಜೆಪಿ ಸರ್ಕಾರದ ಮೇಲೆ ಟೀಕೆಗಳ ಗುಂಡಿನ ಸುರಿಮಳೆ ಸುರಿಸಲು ತಯಾರಾಗಿರುವ ವೇಳೆಯಲ್ಲೇ ಸಿದ್ದರಾಮಯ್ಯ, ಕುಮಾರಸ್ವಾಮಿ ಅವರನ್ನು ಒಂಟಿ ಮಾಡಿದ್ದಾರೆ.