ಸಿದ್ದರಾಮಯ್ಯ ವಿಪಕ್ಷದ ನಾಯಕ: ದೇವೇಗೌಡ್ರು, ಕುಮಾರಸ್ವಾಮಿಗೆ ಹೇಗಾಗಿರಬೇಡ?
ಸಮ್ಮಿಶ್ರ ಸರಕಾರದ ಅವಧಿಯಲ್ಲಿ ದೇವೇಗೌಡ್ರು - ಕುಮಾರಸ್ವಾಮಿ - ಸಿದ್ದರಾಮಯ್ಯ ಇವರದ್ದು ಮೇಲ್ನೋಟಕ್ಕೆ ಮಾತ್ರ ಗಳಸ್ಯ ಕಂಠಸ್ಯ. ಹಿನ್ನೋಟದಲ್ಲಿ ಹಿಂದಿನ ರಾಜಕೀಯ ದುಷ್ಮನಿಗಳಿಗೆ ರಿವೆಂಜ್ ತೆಗೆದುಕೊಳ್ಳುವ ಯಾವ ಅವಕಾಶಗಳನ್ನೂ ಬಿಟ್ಟುಕೊಡುತ್ತಿರಲಿಲ್ಲ.
ಕುಮಾರಸ್ವಾಮಿ, ಕಾಂಗ್ರೆಸ್ ಬೆಂಬಲದೊಂದಿಗೆ ಸಿಎಂ ಆಗಿದ್ದ ವೇಳೆಯಲ್ಲಿ, ಸರಕಾರದಲ್ಲಿ ಏನೇ ಭಿನ್ನಾಭಿಪ್ರಾಯ ತೋರಿದರೂ, ಅದಕ್ಕೆ ಸಿದ್ದರಾಮಯ್ಯನವರ ಕಡೆ ಬೊಟ್ಟು ಮಾಡಲಾಗುತ್ತಿತ್ತು. ಪ್ರತೀ ವಿದ್ಯಮಾನಗಳು ಹೈಕಮಾಂಡ್ ಅಂಗಣಕ್ಕೆ ಸಾಗುತ್ತಿತ್ತು.
ಟಗರು ಡಿಚ್ಚಿಗೆ ಮೂಲ ಕಾಂಗ್ರೆಸ್ಸಿಗರು ಸೈಲೆಂಟ್: ಸಿದ್ದರಾಮಯ್ಯ ಆಯ್ಕೆಗೆ ಕಾರಣವಾದ 6 ಅಂಶಗಳು
ಮಗನಿಗೆ, ಸರಿಯಾಗಿ ಅಧಿಕಾರ ನಡೆಸಲು ಬಿಡುತ್ತಿಲ್ಲ ಎಂದು ಅಂದಿನ ಎಐಸಿಸಿ ಅಧ್ಯಕ್ಷರಾದ ರಾಹುಲ್ ಗಾಂಧಿ ಮುಂದೆ, ಜೆಡಿಎಸ್ ವರಿಷ್ಟರು ಹಲವು ಬಾರಿ ಅವಲತ್ತು ತೋಡಿಕೊಂಡಿದ್ದುಂಟು. ಅದು, ಬಹಳಷ್ಟು ಬಾರಿ ಬಹಿರಂಗವೂ ಆಗಿತ್ತು. ಅದಕ್ಕೆ ಸೂಕ್ತ ಕಾರಣ ಗೌಡ್ರ ಬಳಿ ಇದ್ದಿರಲೂ ಬಹುದು.
ಇಂದಿನಿಂದ ಅಧಿವೇಶನ: ಬಿಎಸ್ವೈ ಸರಕಾರವನ್ನು ರುಬ್ಬಲು ವಿಪಕ್ಷಗಳ 'ಪಂಚಸೂತ್ರ' ರೆಡಿ
ಮಂಡ್ಯ ಲೋಕಸಭಾ ಚುನಾವಣೆಯ ವೇಳೆ, ಸ್ಥಳೀಯ ಕಾಂಗ್ರೆಸ್ ಮುಖಂಡರು ಸುಮಲತಾ ಪರವಾಗಿ ಕೆಲಸ ಮಾಡಿದ್ದರು. ಆ ವೇಳೆ, ಗೌಡ್ರ ಕುಟುಂಬ ಮತ್ತು ಸಿದ್ದರಾಮಯ್ಯ ನಡುವಿನ ಶೀತಲ ಸಮರ ಇನ್ನೊಂದು ಆಯಾಮಕ್ಕೆ ಸಾಗಿತ್ತು. ಯಾವಾಗ, ಸಮ್ಮಿಶ್ರ ಸರಕಾರ ಪತನಗೊಂಡಿತೋ, ಆಗ, ಗೌಡ್ರು, ಎಚ್ಡಿಕೆ, ಸಿದ್ದರಾಮಯ್ಯನವರ ಅಂತರಂಗವೆಲ್ಲಾ ಬಹಿರಂಗಗೊಂಡಿತ್ತು.
ಕಾಂಗ್ರೆಸ್ ಹೈಕಮಾಂಡ್, ಸಿದ್ದರಾಮಯ್ಯನವರಿಗೆ ಇನ್ನಷ್ಟು ಶಕ್ತಿ ನೀಡಿದೆ
ಸಮ್ಮಿಶ್ರ ಸರಕಾರದ ಸಮಸ್ಯೆಗಳ ಜೊತೆ, ಮೂಲ ಕಾಂಗ್ರೆಸ್ಸಿಗರ ದೂರುದುಮ್ಮಾನಗಳನ್ನೂ ಗೌಡ್ರು ಕಾಂಗ್ರೆಸ್ ಹೈಕಮಾಂಡಿಗೆ ತಲುಪಿಸಿದ್ದರಂತೆ ಎನ್ನುವ ಸುದ್ದಿಯೂ ಇತ್ತು. ಕಳೆದ ಲೋಕಸಭಾ ಚುನಾವಣೆಯಲ್ಲಿ ಎರಡೂ ಪಕ್ಷಗಳಿಗೆ ಹಿನ್ನಡೆಯಾಗಲು ಸಿದ್ದರಾಮಯ್ಯ ಕಾರಣ ಎಂದು ಅವರ ಮೇಲೆ ಸೋಲು ಕಟ್ಟಲು ನೋಡಲಾಯಿತು. ಆದರೆ, ಇದ್ಯಾವುದಕ್ಕೂ ತಲೆಕೆಡಿಸಿಕೊಳ್ಳದ ಕಾಂಗ್ರೆಸ್ ಹೈಕಮಾಂಡ್, ಸಿದ್ದರಾಮಯ್ಯನವರಿಗೆ ಇನ್ನಷ್ಟು ಶಕ್ತಿ ನೀಡಿದೆ.
ಗೌಡ್ರ ಕುಟುಂಬ ಮತ್ತು ಸಿದ್ದರಾಮಯ್ಯ
ಈ ಹಿಂದೆ, ಪಕ್ಷದ ಫರ್ಮಾನಿಗೆ ಅನಿವಾರ್ಯವಾಗಿ ತಲೆದೂಗಿಸಲೇ ಬೇಕಾದ ಅನಿವಾರ್ಯತೆಯಲ್ಲಿ ಸಿದ್ದರಾಮಯ್ಯ ಇದ್ದರು. ಈಗ, ವಿರೋಧ ಪಕ್ಷದ ನಾಯಕರಾಗಿ ಅವರು ಅಯ್ಕೆಯಾಗಿದ್ದಾರೆ. ಜೊತೆಗೆ, ಜೆಡಿಎಸ್ ಜೊತೆ ಹೇಗೂ ಸಂಬಂಧವನ್ನು ಕಡಿದುಕೊಂಡಾಗಿದೆ. ಹಾಗಾಗಿ, ಗೌಡ್ರ ಕುಟುಂಬ ಮತ್ತು ಸಿದ್ದರಾಮಯ್ಯ ನಡುವೆ, ಮುಂದಿನ ದಿನಗಳಲ್ಲಿ ರಾಜಕೀಯ ಮೇಲಾಟ ಕಾವು ಪಡೆದುಕೊಳ್ಳಬಹುದು.
ಚಳಿಗಾಲದ ಅಧಿವೇಶನ
ಸದ್ಯಕ್ಕೆ ಎದುರಾಗಿರುವ ಚಳಿಗಾಲದ ಅಧಿವೇಶನ ಮತ್ತು ಉಪಚುನಾವಣೆಯನ್ನು ಸಮರ್ಥವಾಗಿ ಎದುರಿಸುವುದು ಸಿದ್ದರಾಮಯ್ಯನವರಿಗೆ ಇರುವ ಚಾಲೆಂಜ್. ಇದರ ಜೊತೆಗೆ, ಪಕ್ಷದೊಳಗೆ ಇವರ ವಿರುದ್ದ ಕಿಡಿಕಾರುತ್ತಿರುವವರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಸಾಗಬೇಕಿದೆ. ನಮ್ಮ ಮೊದಲ ಶತ್ರು ಸಿದ್ದರಾಮಯ್ಯ ಎಂದು ಈಗಾಗಲೇ ಮಾಜಿ ಸಿಎಂ ಕುಮಾರಸ್ವಾಮಿ ಹೇಳಿದ್ದಾಗಿದೆ, ಅದನ್ನೂ ನೋಡಿಕೊಳ್ಲಬೇಕು.
ಸಿದ್ದರಾಮಯ್ಯ ನನ್ನ ಮೊದಲ ಶತ್ರುವಾಗಿದ್ದರು
ಸಮ್ಮಿಶ್ರ ಸರಕಾರ ನಡೆಸುತ್ತಾ, ಸಿದ್ದರಾಮಯ್ಯನವರನ್ನು ಮೂಲೆಗುಂಪು ಮಾಡುವ ಪ್ರಯತ್ನ ನಡೆಯುತ್ತಲೇ ಇತ್ತು. "ಮೈತ್ರಿ ಸರ್ಕಾರದಲ್ಲಿ ನಾನು ಸಿಎಂ ಆಗಿರಲಿಲ್ಲ. ಕ್ಲರ್ಕ್ ರೀತಿಯಲ್ಲಿ ಕೆಲಸ ಮಾಡುತ್ತಿದ್ದೆ. ಸಿದ್ದರಾಮಯ್ಯ ನನ್ನ ಮೊದಲ ಶತ್ರುವಾಗಿದ್ದರು. ಸಿದ್ದರಾಮಯ್ಯನವರ ಬೃಹನ್ನಾಟಕವನ್ನು ಅರಿಯದವನು ನಾನಲ್ಲ" ಎಂದು ಕುಮಾರಸ್ವಾಮಿ ಹೇಳಿದ್ದರು. ಇದಕ್ಕೆ, " ಮೈತ್ರಿ ಸರಕಾರ ಪತನಗೊಳ್ಳುವುದಕ್ಕೆ ಅಪ್ಪ-ಮಕ್ಕಳೇ ಕಾರಣ" ಎಂದು ಸಿದ್ದರಾಮಯ್ಯ ತಿರುಗೇಟು ನೀಡಿದ್ದರು.
ಸಿದ್ದರಾಮಯ್ಯನವರನ್ನು ಮೂಲೆಗುಂಪು ಮಾಡಬೇಕು ಎನ್ನುವ ಗೌಡರ ಎಲ್ಲಾ ಯೋಜನೆಗ ಉಲ್ಟಾ
ಒಟ್ಟಿನಲ್ಲಿ, ಸದ್ಯದ ರಾಜಕೀಯವನ್ನು ಅವಲೋಕಿಸುವುದಾದರೆ, ಸಿದ್ದರಾಮಯ್ಯನವರನ್ನು ಮೂಲೆಗುಂಪು ಮಾಡಬೇಕು ಎನ್ನುವ ದೇವೇಗೌಡರ ಎಲ್ಲಾ ಯೋಜನೆಗಳು ಉಲ್ಟಾ ಆಗಿದೆ. ಹೈಕಮಾಂಡ್, ಸಿದ್ದರಾಮಯ್ಯನವರ ಮೇಲೆ ವಿಶ್ವಾಸವಿಟ್ಟು ಇನ್ನಷ್ಟು ಬಲತುಂಬಿದೆ. ಹಾಗಾಗಿ, ಸಿದ್ದರಾಮಯ್ಯನವರನ್ನು ವಿಪಕ್ಷದ ನಾಯಕರನ್ನಾಗಿ ಮಾಡಿದ ಮೇಲೆ, ಮೂಲ ಕಾಂಗ್ರೆಸ್ಸಿಗರಿಗೆ ಹೇಗೆ ಹಿನ್ನಡೆಯಾಯಿತೋ, ಅದೇ ರೀತಿ ಗೌಡ್ರ ಕುಟುಂಬಕ್ಕೂ ಕೂಡಾ..