ಆರು ಸಚಿವರು ಮೊದಲು ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಡಿ: ವಿಧಾನಸಭೆಯಲ್ಲಿ ಸಿದ್ದರಾಮಯ್ಯ ಆಗ್ರಹ!
ಬೆಂಗಳೂರು, ಮಾ. 22: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರ 'ಸಿಡಿ' ಬಿಡಗಡೆ ಹಾಗೂ ಆರು ಜನ ಸಚಿವರು ಕೋರ್ಟ್ ಮೊರೆ ಹೋಗಿರುವ ಪ್ರಕರಣ ವಿಧಾನಸಭೆಯಲ್ಲಿ ಪ್ರತಿಧ್ವನಿಸುತ್ತಿದೆ. ಭೋಜನ ವಿಮದ ಬಳಿಕ ಚರ್ಚೆ ನಡೆಸುತ್ತಿರುವ ವಿಪಕ್ಷ ನಾಯಕರ ಸಿದ್ದರಾಮಯ್ಯ ಅವರು ತೇಜೋವಧೆ ಎಂದು ಕೋರ್ಟ್ ಮೊರೆ ಹೋಗಿರುವ ಆರೂ ಜನರ ಸಚಿವರ ರಾಜೀನಾಮೆಗೆ ಒತ್ತಾಯಿಸಿದ್ದಾರೆ.
ನಿಯಮ 69ರಡಿ ವಿಧಾನಸಬೆಯಲ್ಲಿ ಚರ್ಚೆ ಮಾಡುತ್ತಿರುವ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು, ಆರು ಸಚಿವರು ಕೋರ್ಟ್ ಮೆಟ್ಟಿಲೇರಿದ್ದಾರೆ. ಅವರ ಹೆಸರು ನಿಮ್ಮೆಲ್ಲರಿಗೂ ಗೊತ್ತಿದೆ. ಬಿ.ಸಿ. ಪಾಟೀಲ್, ಎಸ್.ಟಿ. ಸೋಮಶೇಖರ್, ಡಾ. ಸುಧಾಕರ್, ನಾರಾಯಣಗೌಡ, ಶಿವರಾಂ ಹೆಬ್ಬಾರ್ ಹಾಗೂ ಭೈರತಿ ಬಸವರಾಜು ಸಿಟಿ ಸಿವಿಲ್ ಕೋರ್ಟ್ ಮೊರೆ ಹೋಗಿದ್ದಾರೆ.
ವಿಧಾನಸಭೆಯಲ್ಲಿ ಸಿಡಿದ 'ಸಿಡಿ': ದಿನೇಶ್ ಕಲ್ಲಹಳ್ಳಿ ದೂರು ಯಾಕೆ ದಾಖಲಾಗಲಿಲ್ಲ? ಸರ್ಕಾರಕ್ಕೆ ಸಿದ್ದರಾಮಯ್ಯ ಪ್ರಶ್ನೆ!
ಮಾಧ್ಯಮಗಳಲ್ಲಿ ತೇಜೋವಧೆ ಮಾಡದಂತೆ ಮಧ್ಯಂತರ ಆದೇಶ ತಂದಿದ್ದಾರೆ. ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರ 'ಸಿಡಿ' ರಿಲೀಸ್ ಬಳಿಕ ಸ್ಟೇ ತಂದಿದ್ದಾರೆ. ಒಟ್ಟು 69 ಮಾಧ್ಯಮಗಳ ವಿರುದ್ಧ ಸ್ಟೇ ತಂದಿದ್ದಾರೆ. ಅಷ್ಟೇ ಅಲ್ಲ ರಾಜಶೇಖರ್ ಮುಲಾಲಿ ವಿರುದ್ಧವೂ ಸ್ಟೇ ತಂದಿದ್ದಾರೆ ಎಂದು ಸಿದ್ದರಾಮಯ್ಯ ವಿವರಿಸಿದ್ದಾರೆ.
ಕೋರ್ಟ್ ಮೊರೆ ಹೋಗಿರುವುದು ಮಾಧ್ಯಮಗಳ ಗಮನಕ್ಕೆ ಬರುತ್ತದೆ. ಆಗ ಮಾಧ್ಯಮಗಳು ಅದನ್ನ ವರದಿ ಮಾಡುತ್ತವೆ. ರಾಜಶೇಖರ್ ಮುಲಾಲಿ ಕೂಡ ಹೇಳಿಕೆ ಕೊಡುತ್ತಾರೆ. 19 ಸಚಿವರು, ಶಾಸಕರ 'ಸಿಡಿ'ಗಳು ಇವೆ ಎಂದು ಹೇಳಿದ್ದಾರೆ. ಅದೊಂದು ಕಲ್ಪಿತ ಆಪಾದನೆ. ಕುಂಬಳಕಾಯಿ ಕಳ್ಳ ಅಂದ್ರೆ ಹೆಗಲು ಮುಟ್ಟಿಕೊಂಡ್ರಂತೆ. ಇದು ನಮ್ಮ ಕಡೆ ಇರುವ ಗಾದೆ ಮಾತು. ತಮ್ಮದು ಯಾವುದೇ ತಪ್ಪಿಲ್ಲದಿದ್ದರೆ ಈ ಸಚಿವರು ಯಾಕೆ ಕೋರ್ಟ್ನಲ್ಲಿ ಸ್ಟೇ ತರಬೇಕು? ಸಿಟಿ ಸಿವಿಲ್ ಕೋರ್ಟ್ ಮಾರ್ಚ್ 31 ರವರೆಗೆ ಮಧ್ಯಂತರ ತಡೆ ಕೊಟ್ಟಿದೆ ಎಂದು ಸಿದ್ದರಾಮಯ್ಯ ಚರ್ಚೆಯಲ್ಲಿ ಆರೋಪಿಸಿದ್ದಾರೆ.
ಜೊತೆಗೆ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಅವರು ಷಡ್ಯಂತ್ರ ನಡೆಯಬಹುದು ಎಂದು ಹೇಳಿದ್ದಾರೆ. ಹಾಗಾದ್ರೆ ನೀವೇಕೆ ಅಂದುಕೊಂಡಿಲ್ಲ? ಸಚಿವರಾದ ಈಶ್ವರಪ್ಪ, ಶೆಟ್ಟರ್, ಕಾರಜೋಳ ಯಾರೂ ಷಡ್ಯಂತ್ರ ಅಂದುಕೊಂಡಿಲ್ಲ. ಆದರೆ ಬಾಂಬೆಗೆ ಹೋದವರೇ ಯಾಕೆ ಹಾಗೆ ಅಂದುಕೊಂಡಿದ್ದಾರೆ? ಎಂದು ಸಿದ್ದರಾಮಯ್ಯ ಪ್ರಶ್ನೆ ಮಾಡಿದ್ದಾರೆ.
ಆರೂ ಜನರು ಮೊದಲು ರಾಜೀನಾಮೆ ಕೊಡಿ: ನೀವ್ಯಾರು ಶಾಸಕರಲ್ಲ, ಎಲ್ಲರೂ ಸಚಿವರೇ. ನೀವು ಈ ಸದನಕ್ಕೆ ಹಕ್ಕು ಬಾಧ್ಯರು. ಈಗ ಮಧ್ಯಂತರ ತಡೆ ಆದೇಶ ತಂದಿದ್ದೀರಿ, ನಮ್ಮ ಅಭ್ಯಂತರವಿಲ್ಲ. ಆದರೆ ನೀವ್ಯಾಕೆ ಪೊಲೀಸ್ ಠಾಣೆಗೆ ದೂರು ಕೊಡಲಿಲ್ಲ. ಸಚಿವರಾಗಿ ಕೆಲಸ ಮಾಡೋಕೆ ಸಾಧ್ಯವಾಗುತ್ತಾ? ನೀವು ಸಚಿವರಾಗಿ ಯಾಕೆ ಠಾಣೆಗೆ ದೂರು ಕೊಡಲಿಲ್ಲ? ನನ್ನ ಪ್ರಶ್ನೆ ಇಷ್ಟೇ ನೀವು ನಿಮ್ಮನ್ನೇ ರಕ್ಷಣೆ ಮಾಡಿಕೊಳ್ಳೋಕೆ ಆಗುತ್ತಿಲ್ಲ. ಇನ್ನು ಜನರನ್ನು ಹೇಗೆ ರಕ್ಷಣೆ ಮಾಡೋದು? ಹೀಗಾಗಿ ನೀವು ಮಂತ್ರಿಸ್ಥಾನದಲ್ಲಿ ಮುಂದುವರಿಯೋಕೆ ಸಾಧ್ಯವಿಲ್ಲ. ಸಚಿವರಾಗಿ ಉಳಿಯೋಕೆ ನಿಮ್ಮಲ್ಲಿ ಯಾವುದೇ ನೈತಿಕತೆ ಇಲ್ಲ. ನಿಮ್ಮ ಆರೋಪ ನಿರಾಧಾರವಾದರೆ ಸ್ಥಾನಕ್ಕೆ ಮತ್ತೆ ಬನ್ನಿ. ಈಗ ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಡಿ ಎಂದು ಆರು ಸಚಿವರಿಗೆ ಸಿದ್ದರಾಮಯ್ಯ ಆಗ್ರಹ ಮಾಡಿದ್ದಾರೆ.
Recommended Video
ಕಳೆದ ಮಾರ್ಚ್ 2 ರಂದು ರಮೇಶ್ ಜಾರಕಿಹೊಳಿ ಅವರು ಇದ್ದಾರೆ ಎಂಬ ದೃಶ್ಯಗಳಿರುವ ಸಿಡಿ ಬಿಡುಗಡೆಯಾಗಿತ್ತು. ನಾಗರಿಕ ಹಕ್ಕು ಹೋರಾಟ ಸಮಿತಿ ಅಧ್ಯಕ್ಷ ದಿನೇಶ್ ಕಲ್ಲಹಳ್ಳಿ 'ಸಿಡಿ'ಯೊಂದಿಗೆ ದೂರು ಸಲ್ಲಿಸಿದ್ದರು. ಅದೇ ಸಂದರ್ಭದಲ್ಲಿ 'ಸಿಡಿ'ಯಲ್ಲಿನ ದೃಶ್ಯಾವಳಿಗಳೂ ಬಿಡುಗಡೆ ಆಗಿದ್ದವು. ಅದಾದ ಬಳಿಕ ಮಾರ್ಚ್ 3 ರಂದು ಸಚಿವ ಸ್ಥಾನಕ್ಕೆ ರಮೇಶ್ ಜಾರಕಿಹೊಳಿ ರಾಜೀನಾಮೆ ಕೊಟ್ಟಿದ್ದರು. ನಂತರ ರಮೇಶ್ ಜಾರಕಿಹೊಳಿ ಅವರ ಮನವಿಯಂತೆ ರಾಜ್ಯ ಸರ್ಕಾರ ಪ್ರಕರಣದ ತನಿಖೆಗೆ ಮಾರ್ಚ್ 12ರಂದು ವಿಶೇಷ ತನಿಖಾ ತಂಡ (ಎಸ್ಐಟಿ) ರಚಿಸಿತ್ತು. ಮರುದಿನ ಅಂದರೆ ಮಾರ್ಚ್ 13ರಂದು ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರು ದೂರು ಸಲ್ಲಿಸಿದ್ದರು. ದೂರು ಆಧರಿಸಿ ಎಫ್ಐಆರ್ ಹಾಕಿದ್ದ ಬೆಂಗಳೂರಿನ ಸದಾಶಿವನಗರ ಪೊಲೀಸರು ನಂತರ ಪ್ರಕರಣವನ್ನು ಎಸ್ಐಟಿಗೆ ಹಸ್ತಾಂತರಿಸಿದ್ದರು.