ನಿರಾಶ್ರಿತರಿಗೆ ಪುನರ್ವಸತಿ ಕಲ್ಪಿಸುವಂತೆ ಗೋವಾ ಸಿಎಂಗೆ ಸಿದ್ದರಾಮಯ್ಯ ಪತ್ರ
ಬೆಂಗಳೂರು, ಸೆಪ್ಟೆಂಬರ್ 28: ಗೋವಾ ರಾಜ್ಯದ ಬೈನಾ ಬೀಚ್ ನಲ್ಲಿ ನೆಲೆಸಿರುವ ಕನ್ನಡಿಗರ ಮನೆಗಳನ್ನು ತೆರವುಗೊಳಿಸಿರುವ ಗೋವಾ ಸರ್ಕಾರದ ನಿಲುವನ್ನು ಆಕ್ಷೇಪಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಗೋವಾ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ಗೆ ಪತ್ರ ಬರೆದಿದ್ದಾರೆ.
ಗೋವಾ ಕನ್ನಡಿಗರ ಮನೆ ನೆಲಸಮಕ್ಕೆ ಸಿಎಂ ತೀವ್ರ ಅಸಮಾಧಾನ
ಪತ್ರದಲ್ಲಿ ಕನ್ನಡಿಗರ ಮನೆಗಳನ್ನು ತೆರವುಗೊಳಿಸಿರುವ ಗೋವಾ ಸರ್ಕಾರದ ಕ್ರಮಕ್ಕೆ ಆಕ್ಷೇಪ ವ್ಯಕ್ತಪಡಿಸಿರುವ ಸಿದ್ದರಾಮಯ್ಯ, ಬಡ ಕುಟುಂಬಗಳಿಗೆ ಪುನರ್ವಸತಿ ಕಲ್ಪಿಸುವಂತೆ ಒತ್ತಾಯಿಸಿದ್ದಾರೆ.
ಮನೆ ಕಳೆದುಕೊಂಡ ಕನ್ನಡಿಗರು ಗೋವಾದಲ್ಲಿ ದೀರ್ಘ ಕಾಲದಿಂದ ವಾಸವಾಗಿದ್ದಾರೆ. ಅಷ್ಟೇ ಅಲ್ಲದೆ ಇವರೆಲ್ಲಾ ಪಡಿತರ ಚೀಟಿಯನ್ನೂ ಹೊಂದಿದ್ದಾರೆ. ಇವರಲ್ಲಿ ಬಹುತೇಕ ಮಂದಿ ಕಟ್ಟಡ ಕಾರ್ಮಿಕರಾಗಿದ್ದು, ಇವರ ಮನೆಗಳನ್ನು ತೆರವುಗೊಳಿಸುವಾಗ ಮಾನವೀಯ ನೆಲೆಗಟ್ಟಿನಲ್ಲಿ ವರ್ತಿಸಬೇಕಾಗಿತ್ತು ಎಂದು ಪತ್ರದಲ್ಲಿ ತಮ್ಮ ಅಸಮಧಾನ ಹೊರ ಹಾಕಿದ್ದಾರೆ.
ಬೈನಾ ಕಡಲ ತಡಿಯಲ್ಲಿ ಕನ್ನಡಿಗರ ಕಣ್ಣೀರು
ಮನೆ ಕಳೆದುಕೊಂಡವರು ತೀರಾ ಬಡವರಾಗಿದ್ದು, ಇವರಿಗೆ ಸರ್ಕಾರ ಅಗತ್ಯ ಪುನರ್ವಸತಿ ಕಲ್ಪಿಸಿ ರಕ್ಷಣೆ ನೀಡಬೇಕೆಂದು ಸಿದ್ದರಾಮಯ್ಯ ಪತ್ರದಲ್ಲಿ ಕೋರಿದ್ದಾರೆ.