ರಾಜ್ಯ ಬಿಜೆಪಿ ಸರ್ಕಾರದಲ್ಲಿ ಇಬ್ಬರು ಮುಖ್ಯಮಂತ್ರಿಗಳು: ಸಿದ್ದರಾಮಯ್ಯ!
ಬೆಂಗಳೂರು, ಸೆ. 17: ಡ್ರಗ್ಸ್ ಹಗರಣದಲ್ಲಿ ಪೊಲೀಸರು ಸರ್ಕಾರದ ಕೈಗೊಂಬೆಯಂತೆ ವರ್ತಿಸುತ್ತಿದ್ದಾರೆ. ಪ್ರಮುಖ ಆರೋಪಿಗಳನ್ನು ಬಂಧಿಸಿದಂತೆ ಸರ್ಕಾರ ಒತ್ತಡ ಹೇರುತ್ತಿದೆ. ಆದ್ದರಿಂದ ಇಡೀ ಹಗರಣವನ್ನು ನ್ಯಾಯಾಂಗ ತನಿಖೆಗೆ ವಹಿಸುವುದು ಸೂಕ್ತ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಆಗ್ರಹಿಸಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿರುವ ಅವರು, ಹೈಕೋರ್ಟ್ ಹಾಲಿ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ಡ್ರಗ್ಸ್ ಮಾಫಿಯಾ ಕುರಿತು ನ್ಯಾಯಾಂಗ ತನಿಖೆ ನಡೆಯಬೇಕು ಎಂದು ಒತ್ತಾಯಿಸಿದರು.
ಇದೇ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಹುಟ್ಟುಹಬ್ಬದ ಶುಭಾಶಯ ಕೋರಿದ ಸಿದ್ದರಾಮಯ್ಯ ಅವರು, ಅವರಿಗೆ ನಾನು ಶುಭಾಶಯ ಹೇಳುತ್ತೇನೆ. ಹುಟ್ಟುಹಬ್ಬಕ್ಕೆ ಕೋಟ್ಯಂತರ ರೂಪಾಯಿ ಖರ್ಚು ಮಾಡಿ ಪತ್ರಿಕೆಗಳಿಗೆ ಪುಟಗಟ್ಟಲೆ ಜಾಹಿರಾತು ನೀಡಲಾಗಿದೆ. ಮೋದಿ ಅವರು ಭಾರಿ ಸಾಧನೆ ಮಾಡಿದ್ದಾರೆ ಎಂದು ಜಾಹಿರಾತಿನಲ್ಲಿ ಬಿಂಬಿಸಲಾಗಿದೆ ಎಂದು ಆರೋಪಿಸಿದರು.
ಬಂಧಿಸದಂತೆ ಸರ್ಕಾರದ ಒತ್ತಡ
ಡ್ರಗ್ಸ್ ಹಗರಣದಲ್ಲಿ ಪ್ರಮುಖ ಆರೋಪಿಗಳನ್ನು ಪೊಲೀಸರು ಇದುವರೆಗೂ ಬಂಧಿಸಿಲ್ಲ. ಸರ್ಕಾರದ ಒತ್ತಡವೂ ಇದಕ್ಕೆ ಕಾರಣ ಇರಬಹುದು. ಅದನ್ನು ನಾನು ಅಲ್ಲಗಳೆಯುವುದಿಲ್ಲ. ಪೊಲೀಸರು ಈ ವಿಷಯದಲ್ಲಿ ಸರ್ಕಾರದ ಕೈಗೊಂಬೆಗಳಾಗಿದ್ದಾರೆ. ಸರ್ಕಾರ ಹೇಳಿದಂತೆ ಕೇಳುತ್ತಿದ್ದಾರೆ. ನಮ್ಮ ಸರ್ಕಾರ ಇದ್ದಾಗ ಬಿಜೆಪಿಯವರು ಎಲ್ಲದಕ್ಕೂ ಸಿಬಿಐ ತನಿಖೆಗೆ ಆಗ್ರಹ ಮಾಡುತ್ತಿದ್ದರು.
ಯಡಿಯೂರಪ್ಪ ಮೇಲಿನ ಮೃದು ಧೋರಣೆ 'ಕೈ'ಬಿಟ್ಟ ಸಿದ್ದರಾಮಯ್ಯ!
ವಿಜಯೇಂದ್ರ ಸೂಪರ್ ಸಿಎಂ
ರಾಜ್ಯದಲ್ಲಿ ಇಬ್ಬರು ಮುಖ್ಯಮಂತ್ರಿಗಳು ಇದ್ದಾರೆ. ಯಡಿಯೂರಪ್ಪ ಅವರ ಜೊತೆಗೆ ಪುತ್ರ ವಿಜಯೇಂದ್ರ ಅವರೂ ಪರ್ಯಾಯ ಮುಖ್ಯಮಂತ್ರಿಯಂತೆ ಕೆಲಸ ಮಾಡುತ್ತಿದ್ದಾರೆ. ವೈದ್ಯರ ಜೊತೆ ಸಭೆ ನಡೆಸಲು ಬಿಜೆಪಿಯಲ್ಲಿ ಬೇರೆ ಪದಾಧಿಕಾರಿಗಳು ಇರಲಿಲ್ಲವೇ ? ಮಾಧ್ಯಮಗಳು ಜನರ ಧ್ವನಿಯಾಗಿ ಸರ್ಕಾರದಲ್ಲಿ ನಡೆಯುತ್ತಿರುವ ಭ್ರಷ್ಟಾಚಾರ, ಹುಳುಕು, ಸ್ಥಗಿತಗೊಂಡಿರುವ ಅಭಿವೃದ್ಧಿ ಕಾರ್ಯಗಳ ಕುರಿತು ಬೆಳಕು ಚೆಲ್ಲಬೇಕು.
ಗ್ರಾಮ ಪಂಚಾಯತಿ ಸದಸ್ಯರೂ ಅಲ್ಲದ ಸಿಎಂ ಪುತ್ರ ವಿಜಯೇಂದ್ರಗೆ ಸರಕಾರದಲ್ಲಿ ಏನು ಕೆಲಸ?
ನಮ್ಮ ಸರ್ಕಾರ ಇದ್ದಾಗ ಆರಂಭವಾದ ಶಿವಾನಂದ ವೃತ್ತದ ಉಕ್ಕಿನ ಸೇತುವೆ ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲ. 53 ಸಾವಿರ ಕೋಟಿ ರೂ. ಸಾಲ ಪಡೆಯುವುದಾಗಿ ಸರ್ಕಾರ ಬಜೆಟ್ನಲ್ಲಿ ಹೇಳಿದೆ. ಇದರ ಜೊತೆಗೆ 33 ಸಾವಿರ ಕೋಟಿ ರೂ.ಗಳನ್ನು ಸಾಲವಾಗಿ ಪಡೆಯಲು ನಿರ್ಧರಿಸಿದೆ. ಈ ರೀತಿ ಆದರೆ ರಾಜ್ಯ ಉಳಿಯುವುದೇ ? ಕೊನೆಗೆ ಬಡ್ಡಿ, ಸಾಲ ತೀರಿಸಲು ಮಾತ್ರ ಹಣ ಇರುತ್ತೆದೆಯೇ ಹೊರತು ಅಭಿವೃದ್ಧಿ ಎಂಬುದು ಶೂನ್ಯವಾಗುತ್ತದೆ. ರಸ್ತೆ, ನೀರಾವರಿ, ಸಮಾಜ ಕಲ್ಯಾಣ ಇಲಾಖೆಗೆ ಕೊಡಲು ಅನುದಾನವೇ ಇರುವುದಿಲ್ಲ ಎಂದು ಸಿದ್ದರಾಮಯ್ಯ ಆರೋಪಿಸಿದ್ದಾರೆ.
ಜನರ ಬಳಿಗೆ ಹೋದರೆ ಏಟು ಖಚಿತ
ಬೆಂಗಳೂರಿನ ಚಿತ್ರಣವನ್ನೇ ಬದಲಾವಣೆ ಮಾಡುವುದಾಗಿ ಯಡಿಯೂರಪ್ಪ ಅವರು ಹೇಳಿದ್ದರು. ಅನುದಾನವೇ ಇಲ್ಲದ ಮೇಲೆ ಚಿತ್ರಣವನ್ನು ಅವರು ಹೇಗೆ ಬದಲಾವಣೆ ಮಾಡುವರೋ ತಿಳಿಯದು. ರಾಜ್ಯದಲ್ಲಿ ಮಧ್ಯಂತರ ಚುನಾವಣೆ ನಡೆಯದು. ಏಕೆಂದರೆ ಒಂದು ದಿನವನ್ನೂ ಯಡಿಯೂರಪ್ಪ ಅವರು ವ್ಯರ್ಥ ಮಾಡುವುದಿಲ್ಲ. ಜೊತೆಗೆ ಜನರ ಬಳಿಗೆ ಹೋಗುವುದಿಲ್ಲ. ಮುಖ್ಯಮಂತ್ರಿ, ಮಂತ್ರಿಗಳು ಬೆಂಗಳೂರಿನಲ್ಲೇ ಕಾಲ ಕಳೆಯುತ್ತಿದ್ದಾರೆ.
ನೀವು ಜನರ ಬಳಿಗೆ ಹೋಗಿ ಬಡಿಗೆ ತೆಗೆದುಕೊಂಡು ಹೊಡೆಯುತ್ತಾರೆ ಎಂದು ಯಡಿಯೂರಪ್ಪ ಅವರು ಪ್ರತಿಪಕ್ಷ ಸ್ಥಾನದಲ್ಲಿದ್ದಾಗ ನಮಗೆ ಹೇಳುತ್ತಿದ್ದರು. ಆದರೆ ನಮಗೆ ಯಾರೂ ಹೊಡೆಯಲಿಲ್ಲ. ಈಗ ಆಡಳಿತ ನಡೆಸುತ್ತಿರುವವರು ಏನಾದರೂ ಜನರ ಬಳಿಗೆ ಹೋದರೆ ಬಡಿಗೆ ಏಟು ಬೀಳುವುದು ಖಚಿತ.
ಬೆಂಗಳೂರಿನ ಜನಸಂಖ್ಯೆ 1.10 ಕೋಟಿ. ಕೇವಲ ವಲಯಗಳನ್ನು ಮಾಡಿ ಆಯುಕ್ತರ ಹುದ್ದೆಯನ್ನು ಮುಖ್ಯ ಆಯುಕ್ತರ ಹುದ್ದೆ ಎಂದು ಬದಲಾಯಿಸಿದರೆ ಮಹಾನಗರ ಅಭಿವೃದ್ಧಿ ಆಗುವುದೇ ? ಪ್ರತಿವರ್ಷ ಮಳೆ ಬರುತ್ತದೆ. ಈವರೆಗೆ ರಾಜ ಕಾಲುವೆಗಳ ದುರಸ್ತಿ ಆಗಿಲ್ಲ. ಪಾಲಿಕೆ ಆಸ್ತಿಯನ್ನು ಅಡಮಾನ ಇಟ್ಟವರು ಯಾರು? ಬಿಜೆಪಿಯವರಿಂದ ಬೆಂಗಳೂರು ಅಭಿವೃದ್ಧಿ ಅಸಾಧ್ಯ. ಕೇವಲ ಭಾಷಣ ಮತ್ತು ಭ್ರಷ್ಟಾಚಾರವನ್ನು ಮಾತ್ರ ಅವರಿಂದ ನಿರೀಕ್ಷೆ ಮಾಡಬಹುದು ಎಂದು ಸಿದ್ದರಾಮಯ್ಯ ಅವರು ಹೇಳಿದರು.
ಕೊರೊನಾ 2ನೇ ಸ್ಥಾನ ಮೋದಿ ಸಾಧನೆ
ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಈಗ 51 ಲಕ್ಷ ಮೀರಿದೆ. ಸೋಂಕಿನಲ್ಲಿ ಭಾರತ ಜಗತ್ತಿನಲ್ಲೇ ಎರಡನೇ ಸ್ಥಾನಕ್ಕೆ ಬಂದಿದೆ. ಇದು ಕೇಂದ್ರದ ಬಿಜೆಪಿ ಸರ್ಕಾರದ ಸಾಧನೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಟೀಕಿಸಿದರು.
ಉದ್ಯೋಗ ನೀಡುವ ಭರವಸೆ; ಮೋದಿಗೆ ಸಿದ್ದರಾಮಯ್ಯ ಪ್ರಶ್ನೆ
ನರೇಂದ್ರ ಮೋದಿ ಅವರು ಪ್ರಧಾನಿಯಾದ ಬಳಿಕ ದೇಶದ ಆರ್ಥಿಕ ಪರಿಸ್ಥಿತಿ ದಿವಾಳಿಯಾಗಿದೆ. ನೋಟು ಅಮಾನ್ಯ, ಅವೈಜ್ಞಾನಿಕ ಜಿ.ಎಸ್.ಟಿ ಹಾಗೂ ಕೆಟ್ಟ ಹಣಕಾಸು ನೀತಿಯಿಂದಾಗಿ ದೇಶ ಆರ್ಥಿಕವಾಗಿ ಭಾರಿ ಕೆಳಮಟ್ಟಕ್ಕೆ ಹೋಗಿದೆ. ಜಿಡಿಪಿಯೂ ಭಾರಿ ಕುಸಿತ ಕಂಡಿದೆ. ಇದರಿಂದ ಉದ್ಯೋಗ ಸೃಷ್ಟಿ ಆಗುತ್ತಿಲ್ಲ. ದೇಶದ ಸಂಪತ್ತು ಬೆಳವಣಿಗೆಯಾದಾಗ ಮಾತ್ರ ಉದ್ಯೋಗ ದೊರೆಯಲು ಸಾಧ್ಯ. ಕೃಷಿ ವಲಯ ಹೊರತುಪಡಿಸಿ ಬೇರೆ ಎಲ್ಲ ಕ್ಷೇತ್ರಗಳ ಬೆಳವಣಿಗೆ ನಕಾರಾತ್ಮಕವಾಗಿದೆ.
Recommended Video
ನಿರುದ್ಯೋಗ ದಿನಕ್ಕೆ ಬೆಂಬಲ
ಹೊಸದಾಗಿ ಉದ್ಯೋಗ ಕೊಡುವುದಿರಲಿ, ಇರುವ ಉದ್ಯೋಗಗಳೂ ಕಡಿತವಾಗುತ್ತಿವೆ. ಸೂಕ್ಷ್ಮ,ಸಣ್ಣ, ಅತಿ ಸಣ್ಣ ಹಾಗೂ ಮಧ್ಯಮ ಕೈಗಾರಿಕೆಗಳು ಮುಚ್ಚಿವೆ. ನಿರುದ್ಯೋಗ ಪ್ರಮಾಣ ಭಾರಿ ಎತ್ತರಕ್ಕೆ ಹೋಗಿದೆ. ಪ್ರತಿವರ್ಷ ಎರಡು ಕೋಟಿ ಉದ್ಯೋಗ ಸೃಷ್ಟಿ ಮಾಡುತ್ತೇವೆ ಎಂದು ಪ್ರಧಾನಿ ಅವರು ನೀಡಿದ್ದ ಭರವಸೆ ಹುಸಿಯಾಗಿದೆ. ಸ್ವಾಮಿನಾಥನ್ ವರದಿ ಜಾರಿಯಾಗದ ಪರಿಣಾಮ ರೈತರೂ ಕಷ್ಟಕ್ಕೆ ಸಿಲುಕಿದ್ದಾರೆ. ನಿರುದ್ಯೋಗದ ಪರಿಣಾಮ ಯುವಕರು ಜೀವನವೇ ಬೇಡ ಎನ್ನುವ ಹಂತ ತಲುಪಿದ್ದಾರೆ.
ನರೇಂದ್ರ ಮೋದಿ ಭಾರಿ ಬದಲಾವಣೆ ತರಲಿದ್ದಾರೆ ಎಂದು ಯುವಕ, ಯುವತಿಯರು ಅವರನ್ನು ಬೆಂಬಲಿಸಿದರು. ಆದರೆ ಈಗ ಉದ್ಯೋಗ ಸಿಗದೆ ಪರದಾಡುತ್ತಿದ್ದಾರೆ. ಹೀಗಾಗಿ ಅವರು ಮೋದಿಯವರ ಹುಟ್ಟುಹಬ್ಬವನ್ನು ನಿರುದ್ಯೋಗ ದಿನವನ್ನಾಗಿ ಆಚರಿಸುತ್ತಿರುವುದು ಸರಿಯಾಗಿದೆ. ನಿರಾಶರಾಗುವುದು, ಭ್ರಮನಿರಸನಗೊಳ್ಳುವುದು ಬೇಡ ಎಂದು ಯುವ ಜನರಿಗೆ ಮನವಿ ಮಾಡುತ್ತೇನೆ ಎಂದು ಸಿದ್ದರಾಮಯ್ಯ ಅವರು ಭರವಸೆ ತುಂಬಿದರು.