ಸಿದ್ದರಾಮಯ್ಯ ಸಂಪುಟದಲ್ಲಿ ಈಗ ಖಾತೆಗಾಗಿ ಕಿತ್ತಾಟ!
ಬೆಂಗಳೂರು, ಜ. 2 : ಡಿಕೆ ಶಿವಕುಮಾರ್ ಮತ್ತು ರೋಷನ್ ಬೇಗ್ ಅವರನ್ನು ಸೇರಿಸಿಕೊಂಡರು ತಮ್ಮದು ಕ್ಲೀನ್ ಕ್ಯಾಬಿನೆಟ್ ಎಂದು ಸಿಎಂ ಸಿದ್ದರಾಮಯ್ಯ ಗುರುವಾರ ಸಮರ್ಥನೆ ನೀಡಿದ್ದಾರೆ. ಆದರೆ, ಸದ್ಯ ಖಾತೆಗಳಿಗಾಗಿ ಸಿದ್ದರಾಮಯ್ಯ ಸಂಪುಟದಲ್ಲಿ ಕಿತ್ತಾಟ ಆರಂಭವಾಗಿದ್ದು, ಸಿಎಂ ಹಿರಿಯ ಸಚಿವರ ತುರ್ತು ಸಭೆ ಕರೆದಿದ್ದಾರೆ.
ನೂತನವಾಗಿ ಸಂಪುಟಕ್ಕೆ ಸೇರಿರುವ ಇಬ್ಬರು ಸಚಿವರಿಗೆ ಯಾವ ಖಾತೆ ನೀಡಬೇಕು ಎಂಬ ಬಗ್ಗೆ ಸಿಎಂ ಸಿದ್ದರಾಮಯ್ಯ ಇನ್ನೂ ಅಂತಿಮ ತೀರ್ಮಾನ ಕೈಗೊಂಡಿಲ್ಲ. ಅದರಲ್ಲೂ ರೋಷನ್ ಬೇಗ್ ಅವರಿಗೆ ಖಾತೆ ಹಂಚಿಕೆ ಕುರಿತು ಸಚಿವರ ನಡುವೆ ಕಿತ್ತಾಟ ಆರಂಭವಾಗಿದ್ದು, ಹಿರಿಯ ಸಚಿವ ಎಚ್.ಕೆ.ಪಾಟೀಲ್ ಅವರನ್ನು ಸಂಧಾನಕಾರರಾಗಿ ಸಿದ್ದರಾಮಯ್ಯ ನೇಮಿಸಿದ್ದಾರೆ. [ಡಿಕೆಶಿ, ರೋಷನ್ ಬೇಗ್ ಪ್ರಮಾಣ ವಚನ]
ಬುಧವಾರ ಪ್ರಮಾಣ ವಚನ ಸ್ವೀಕರಿಸಿದ ಸಚಿವ ರೋಷನ್ ಬೇಗ್ ಅವರಿಗೆ ಹಜ್ ಖಾತೆ ನೀಡಬೇಕು ಎಂದು ಸಿಎಂ ಬಯಸಿದ್ದಾರೆ. ರೊಷನ್ ಬೇಗ್ ಸಹ ಆ ಖಾತೆಗಾಗಿ ಬೇಡಿಕೆ ಇಟ್ಟಿದ್ದಾರೆ. ಆದರೆ, ಸದ್ಯ ಆ ಖಾತೆ ಹೊಂದಿರುವ ಖಮರುಲ್ ಇಸ್ಲಾಂ ಖಾತೆ ಬಿಟ್ಟು ಕೊಡಲು ಒಪ್ಪುತ್ತಿಲ್ಲ. ಇದರಿಂದ ಎಚ್.ಕೆ.ಪಾಟೀಲ್ ನೇತೃತ್ವದಲ್ಲಿ ಹಿರಿಯ ಸಚಿವರನ್ನು ಖಮರುಲ್ ಇಸ್ಲಾಂ ಮನವೊಲಿಸಲು ಅವರ ನಿವಾಸಕ್ಕೆ ಕಳುಹಿಸಲಾಗಿದೆ. [ಸಿದ್ದು ಸಂಪುಟ ಯಾರಿಗೆ ಯಾವ ಖಾತೆ?]
ಇನ್ನೊಂದು ಕಡೆ ಸಚಿವರಾದ ಟಿ.ಬಿ.ಜಯಚಂದ್ರ, ಮಹದೇವ ಪ್ರಸಾದ್, ಶ್ರೀನಿವಾಸ ಪ್ರಸಾದ್ ಸೇರಿದಂತೆ ಹಿರಿಯ ಸಚಿವರ ತುರ್ತು ಸಭೆಯನ್ನು ಗೃಹ ಕಚೇರಿಯಲ್ಲಿ ಸಿಎಂ ನಡೆಸುತ್ತಿದ್ದು, ಖಾತೆ ಹಂಚಿಕೆಯ ಕುರಿತು ಚರ್ಚೆ ನಡೆಸಿದ್ದಾರೆ. ಡಿಕೆ ಶಿವಕುಮಾರ್ ಅವರಿಗೆ ಯಾವ ಖಾತೆ ನೀಡಬೇಕು ಎಂದು ಸಭೆಯಲ್ಲಿ ಚರ್ಚೆ ನಡೆಸಲಾಗುತ್ತಿದೆ ಎಂದು ತಿಳಿದುಬಂದಿದೆ.
ನಮ್ಮದು ಶುದ್ಧ ಸಂಪುಟ ಸಿಎಂ : ಡಿ.ಕೆ. ಶಿವಕುಮಾರ್ ಮತ್ತು ಆರ್. ರೋಷನ್ ಬೇಗ್ ಅವರ ವಿರುದ್ಧ ಆರೋಪಗಳು ಇವೆ. ಆದರೆ, ಅವು ಸಾಬೀತಾಗಿಲ್ಲ. ಹೀಗಾಗಿ ನಮ್ಮದು ಈಗಲು ಶುದ್ಧ ಸಂಪುಟ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಸಂಪುಟ ವಿಸ್ತರಣೆ ಕ್ರಮವನ್ನು ಸಮರ್ಥಿಸಿಕೊಂಡಿದ್ದಾರೆ. ಗುರುವಾರ ಬೆಂಗಳೂರಿನಲ್ಲಿ ಮಾತನಾಡಿದ ಅವರು, ಆರೋಪ ಸಾಬೀತಾದರೆ ಅವರು ಆರೋಪಿಗಳಾಗುತ್ತಾರೆ. ಅವರ ವಿರುದ್ಧ ಕೇವಲ ಆರೋಪಗಳಿವೆ ಆದ್ದರಿಂದ ನಮ್ಮದು ಶುದ್ಧ ಸರ್ಕಾರ ಎಂದರು.