ಸ್ವಕ್ಷೇತ್ರದಲ್ಲಿ ಸಿದ್ದರಾಮಯ್ಯ ಸೋಲಲು ಪಠ್ಯ ಪರಿಷ್ಕರಣೆಯೇ ಕಾರಣ
ಬೆಂಗಳೂರು ಜೂ. 24: ಪಠ್ಯ ಪುಸ್ತಕ ಪರಿಷ್ಕರಣೆ ವಿಚಾರದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಕೆಸರೆರಚಾಟ ಮುಂದುವರಿದಿದ್ದು, ಸಿದ್ದರಾಮಯ್ಯ ತಮ್ಮ ಅವಧಿಯಲ್ಲಿ ಮೈಸೂರು ಚಾಮುಂಡೇಶ್ವರಿ ಕುರಿತ ಪಠ್ಯವನ್ನು ತೆಗೆಸಿದ್ದೆ ಸ್ವಕ್ಷೇತ್ರ ಚಾಮುಂಡೇಶ್ವರಿಯಲ್ಲಿ ಅವರು ಸೋಲಲು ಕಾರಣ ಎಂದು ಬಿಜೆಪಿ ಟೀಕಿಸಿದೆ.
ರಾಜ್ಯ ಸರ್ಕಾರ ರೋಹಿತ್ ಚಕ್ರತೀರ್ಥ ಅಧ್ಯಕ್ಷತೆಯಲ್ಲಿ ಮಾಡಿದ ಪಠ್ಯ ಪರಿಷ್ಕರಣೆ ವಿವಾದ ಕಾಂಗ್ರೆಸ್ ಗೆ ಅಸ್ತ್ರವಾಗಿ ಪರಿಣಮಿಸಿತು. ಬಿಜೆಪಿ ವಿರುದ್ಧ ಕಟುವಾಗಿ ಟೀಕಿಸಿ, ಪರಿಷ್ಕೃತ ಪಠ್ಯ ಹಿಂಪಡೆಯುವಂತೆಯೂ ಆಗ್ರಹಿಸಿತ್ತು. ಇದೀಗ ಪಠ್ಯಪುಸ್ತಕ ವಿವಾದ ತಣ್ಣಗಾಯಿತು ಎನ್ನುವಷ್ಟರಲ್ಲೇ ಕಾಂಗ್ರೆಸ್ ವಿರುದ್ಧ ಬಿಜೆಪಿ ಸರಣಿ ಟ್ವಿಟ್ ಮಾಡಿದೆ.
ಮಾಧ್ಯಮಗೋಷ್ಠಿಗಾಗಿಯೇ ಎರಡು ದಿನ 'ಚಕ್ರತೀರ್ಥ ಪಠ್ಯ' ಓದಿ ತಯಾರಾಗಿದ್ದ ಅಶೋಕ್
ಶಿಕ್ಷಣ ವಿರೋಧಿ ಕಾಂಗ್ರೆಸ್ ಎಂಬ ಹ್ಯಾಶ್ ಟ್ಯಾಗ್ ಹಾಕಿ, ಸಿದ್ದರಾಮಯ್ಯ ಅವಧಿಯಲ್ಲಿ ನಡೆದ ಪಠ್ಯ ಪರಿಷ್ಕರಣೆಯ ಹಲವು ವಿಚಾರಗಳನ್ನು ಪ್ರಸ್ತಾಪಿಸುವ ಮೂಲಕ ಸಿದ್ದರಾಮಯ್ಯನವರನ್ನು ಬಿಜೆಪಿ ಕುಟುಕಿದೆ.
ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದಾಗ ಭವ್ಯ ಭಾರತದ ಪರಂಪರೆ ಸಾರುವ ಮೈಸೂರು ಚಾಮುಂಡೇಶ್ವರಿ, ವಿಶ್ವ ವಿಖ್ಯಾತ ದಸರಾ ಉತ್ಸವ ಕುರಿತು ಹಲವು ಅಂಶಗಳನ್ನು ಕೈ ಬಿಡಲಾಯಿತು. ಪಠ್ಯದಲ್ಲಿ ಈ ಸಾಂಸ್ಕೃತಿಕ ವೈಭವವಿದ್ದರೆ ಟಿಪ್ಪು ಸುಲ್ತಾನನ್ನು ಮಸುಕು ಮಾಡಿಬಿಡುತ್ತದೆ ಎಂಬ ಕಾರಣಕ್ಕೆ ದೇವಿ ಹಾಗೂ ಮೈಸೂರು ಒಡೆಯರ್ ಪಾಠಕ್ಕೆ ಕಾಂಗ್ರೆಸ್ ಕತ್ತರಿ ಹಾಕಿತ್ತು. ಇದರ ಫಲವೇ ಎಂಬಂತೆ ಸಿದ್ದರಾಮಯ್ಯ ಸ್ವಕ್ಷೇತ್ರದಲ್ಲಿ 30ಸಾವಿರ ಮತಗಳ ಅಂತರದಿಂದ ಸೋಲು ಅನುಭವಿಸಬೇಕಾಯಿತು ಎಂದು ಬಿಜೆಪಿ ಬರೆದುಕೊಂಡಿದೆ.
ರಾಜವಂಶಸ್ಥರ ಅಂಶಗಳಿಗೆ ಕತ್ತರಿ
ಆರನೇ ತರಗತಿಯ ಸಮಾಜ ವಿಜ್ಞಾನ ಪಠ್ಯದಲ್ಲಿ ಬಿಜೆಪಿ ಅಳವಡಿಸಿದ್ದ ಮೈಸೂರು ರಾಜವಂಶಸ್ಥರ ಕುರಿತ ಅಧ್ಯಾಯವನ್ನು ಸಿದ್ದರಾಮಯ್ಯ ಸರ್ಕಾರ ಕಿತ್ತು ಹಾಕಿತ್ತು. ಆಗ ಕಾಂಗ್ರೆಸ್ ಗೆ ನಾಡಿನ ಸಂಸ್ಕೃತಿ, ಪರಂಪರೆ ಬಗ್ಗೆ ಗೌರವವಿರಲ್ಲಿಲ್ಲವೇ?. ಯಾವ ಕಾರಣಕ್ಕೆ ರಾಜವಂಶಸ್ಥರ ಅಂಶಗಳಿಗೆ ಕತ್ತರಿ ಹಾಕಲಾಯಿತು ಎಂದು ಟ್ವಿಟ್ನಲ್ಲಿ ಪ್ರಶ್ನಿಸಲಾಗಿದೆ.
ಮೈಸೂರು ಮಹಾರಾಜರ ಪಾತ್ರ ಮಹತ್ವದ್ದು
ರಾಜ್ಯದ ಅಭಿವೃದ್ಧಿಯಲ್ಲಿ ಮೈಸೂರು ಮಹಾರಾಜರ ಪಾತ್ರ ಮಹತ್ವದ್ದು. ನಾಡು ಕಟ್ಟಿ ಬೆಳೆಸಿ ಅದ್ವಿತೀಯ ಕೊಡುಗೆ ನೀಡಿದ ಮಹಾರಾಜರನ್ನು ಏಕಚನದಲ್ಲಿ ಸಂಬೋಧಿಸಿ ಸಿದ್ದರಾಮಯ್ಯ ಅವಮಾನ ಮಾಡಿದ್ದರು. ಅಂತದ್ದೆ ಕೀಳು ಅಭಿರುಚಿಯನ್ನು ಪಠ್ಯ ಕಡಿತಲ್ಲೂ ಅಳವಡಿಸಿದ್ದಾರೆ. ಆಣೆ ಕಟ್ಟು ನಿರ್ಮಾಣ, ಶಿಕ್ಷಣ, ಸಂಗೀತ, ಕಲೆ, ಸಾಹಿತ್ಯ ಕ್ಷೇತ್ರಕ್ಕೆ ಕೊಡುಗೆ ನೀಡಿದ ಮಹಾರಾಜರಿಗೆ ಸಂಬಂಧಿಸಿದ ಪಾಠಗಳಿಗೆ ಪಠ್ಯದಲ್ಲಿ ಸ್ಥಳವಿಲ್ಲ.
ರಾಜ್ಯ ಬಿಜೆಪಿ ದೂರು
ಹಿಂದೂಗಳ ಮಾರಣ ಹೋಮ ಮಾಡಿರುವ ಕನ್ನಡಿಗರ ಮೇಲೆ ಕನ್ನಡಕ್ಕೆ ಬದಲಾಗಿ ಪರ್ಷಿಯನ್ ಭಾಷೆ ಹೇರಿದ ಟಿಪ್ಪು ಸುಲ್ತಾನ್ ಕುರಿತು ಆರು ಪುಟಗಳ ಅಧ್ಯಾಯ ಸೇರ್ಪಡೆ ಮಾಡಲಾಗಿದೆ. ಈ ಮೂಲಕ ಸಿದ್ದರಾಮಯ್ಯ ಅಲ್ಪಸಂಖ್ಯಾತ ಮನವೊಲಿಸಲು ಮುಂದಾಗಿದ್ದು ಇದರಿಂದ ಸ್ಪಷ್ಟವಾಗುತ್ತದೆ ಎಂದು ರಾಜ್ಯ ಬಿಜೆಪಿ ದೂರಿದೆ.
ರಾಜಲಾಂಛನ ಕೈಬಿಟ್ಟು ಅಪಮಾನ
ಮೈಸೂರು ಒಡೆಯ ರಾಜಲಾಂಛನವು ಆದ ಗಂಡಭೇರುಂಡವನ್ನು ರಾಜ್ಯದ ರಾಜ ಲಾಂಭನವೆಂದೂ ಭಾವಿಸಲಾಗುತ್ತದೆ. ಸಿದ್ದರಾಮಯ್ಯ ನೇಮಿಸಿದ್ದ ಚಿಂತಕ ಡಾ.ಬರಗೂರು ರಾಮಚಂದ್ರಪ್ಪ ನೇತೃತ್ವದ ಸಮಿತಿ ರಾಜಲಾಂಛನ, ರಾಮನೆತನದ ಜತೆ ನಂಟು ಹೊಂದಿದ್ದ ಕನ್ನಡ ಎಲ್ಲ ಅಸ್ಮಿತೆಗಳನ್ನು ಕೈ ಬಿಟ್ಟಿತ್ತು. ಆರನೇ ತರಗತಿಯ ಪಠ್ಯದಲ್ಲಿದ್ದ ತಾಯಿ ಚಾಮುಂಡೇಶ್ವರಿ ಪಾಠ ಕೈ ಬಿಟ್ಟು ದೇವಿಗೆ ಆ ಸಮಿತಿಯಿಂದ ಅಪಮಾನವಾಗಿತ್ತು. ರಾಜಮನೆತದ ವಿರುದ್ಧ ಅಧಿಕಾರದಲ್ಲಿದ್ದ ಸಿದ್ದರಾಮಯ್ಯನವರೇ ಕೋರ್ಟ್ ಮೆಟ್ಟಿಲೇರಿದ್ದರು. ಪಠ್ಯದಲ್ಲೂ ಅದೇ ರೀತಿ ದ್ವೇಷ ತಿರೀಸಿಕೊಂಡರು ಎಂದು ಬಿಜೆಪಿ ವಾಗ್ದಾಳಿ ನಡೆಸಿತು.