ಸಿದ್ದರಾಮಯ್ಯರಿಗೆ ಮಣಿದ ಹೈಕಮಾಂಡ್; ಕೆಪಿಸಿಸಿ ಅಧ್ಯಕ್ಷರಾದ ಡಿಕೆಶಿ
ಬೆಂಗಳೂರು, ಮಾ. 11: ನಿರೀಕ್ಷೆಯಂತೆ ಮಾಜಿ ಸಚಿವ ಡಿ.ಕೆ. ಶಿವಕುಮಾರ್ ಅವರನ್ನು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಗೆ ಅಧ್ಯಕ್ಷರನ್ನಾಗಿ ನೇಮಕ ಮಾಡಿದ್ದು, ಮಾಜಿ ಸಿಎಂ ಸಿದ್ದರಾಮಯ್ಯ ಅವರೆ ವಿಧಾನಸಭೆ ವಿರೋಧ ಪಕ್ಷದ ನಾಯಕರಾಗಿ ಮುಂದುವರೆಯಲಿದ್ದಾರೆ. ಆ ಮೂಲಕ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಮಾತಿಗೆ ಕಾಂಗ್ರೆಸ್ ಹೈಕಮಾಂಡ್ ಮಣೆ ಹಾಕಿರುವುದು ಮತ್ತೊಮ್ಮೆ ಸಾಬೀತಾಗಿದೆ. ಮೂವರು ಕಾರ್ಯಾಧ್ಯಕ್ಷರ ಹುದ್ದೆಗೆ ಸಿದ್ದರಾಮಯ್ಯ ಅವರು ಹೈಕಮಾಂಡ್ ಎದುರು ಬೇಡಿಕೆ ಇಟ್ಟಿದ್ದರು.
Recommended Video
ಅದರಂತೆ ಮತ್ತಿಬ್ಬರನ್ನು ಕಾರ್ಯಾಧ್ಯಕ್ಷರ ಹುದ್ದೆಗೆ ನೇಮಕ ಮಾಡಿದ್ದು, ವಿರೋಧ ಪಕ್ಷ ನಾಯಕ ಹಾಗೂ ಶಾಸಕಾಂಗ ಪಕ್ಷದ ನಾಯಕ ಹುದ್ದೆಗಳನ್ನು ಪ್ರತ್ಯೇಕಿಸದಂತೆ ಸಿದ್ದರಾಮಯ್ಯ ಅವರು ಇಟ್ಟಿದ್ದ ಬೇಡಿಕೆಗೆ ಹೈಕಮಾಂಡ್ ಒಪ್ಪಿದೆ. ಜೊತೆಗೆ ಸಿದ್ದರಾಮಯ್ಯ ಅವರೆ ಎರಡೂ ಹುದ್ದೆಗಳಲ್ಲಿ ಮುಂದುವೆಯುವಂತೆ ಹೈಕಮಾಂಡ್ ಸೂಚಿಸಿದೆ.
ಕೆಪಿಸಿಸಿಯ ನೂತನ ಸಾರಥಿಗೆ ಅಭಿನಂದನೆಗಳ ಮಹಾಪೂರ
ಸಿದ್ದರಾಮಯ್ಯ ಬೇಡಿಕೆಗೆ ಮಣಿದ ಕಾಂಗ್ರೆಸ್ ಹೈಕಮಾಂಡ್
ಕೆಪಿಸಿಸಿ ಅಧ್ಯಕ್ಷರ ನೇಮಕ ಹಾಗೂ ವಿರೋಧ ಪಕ್ಷ ನಾಯಕ ಸ್ಥಾನ ಕುರಿತು ಕಾಂಗ್ರೆಸ್ ಹೈಕಮಾಂಡ್ ಸಿದ್ದರಾಮಯ್ಯ ಅವರು ಇಟ್ಟಿದ್ದ ಬೇಡಿಕೆಗೆ ಮಣಿದಿದೆ. ಕೆಪಿಸಿಸಿ ಅಧ್ಯಕ್ಷರ ನೇಮಕವನ್ನು ಮಾತ್ರ ನೇಮಕ ಮಾಡಬೇಕು, ಕಾರ್ಯಾಧ್ಯಕ್ಷರ ನೇಮಕ ಮಾಡಬಾರದು. ಜೊತೆಗೆ ವಿಧಾನಸಭೆ ವಿರೋಧ ಪಕ್ಷ ನಾಯಕ ಹಾಗೂ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸ್ಥಾನಗಳನ್ನು ಪ್ರತ್ಯೇಕಿಸಿ ನೇಮಕ ಮಾಡಬೇಕು ಎಂದು ಸಿದ್ದರಾಮಯ್ಯ ವಿರೋಧಿ ಬಣ ಹೈಕಮಾಂಡ್ ಎದುರು ಬೇಡಿಕೆ ಇಟ್ಟಿತ್ತು.
ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದ ಸಿದ್ದರಾಮಯ್ಯ ಅವರು, ಶಾಸಕಾಂಗ ಪಕ್ಷ ಹಾಗೂ ವಿರೋಧ ಪಕ್ಷ ನಾಯಕ ಸ್ಥಾನಗಳಿಗೆ ಪ್ರತ್ಯೇಕಿಸಿ ನೇಮಕ ಮಾಡಬಾರದು. ಶಾಸಕಾಂಗ ಪಕ್ಷದ ನಾಯಕರೇ ವಿರೋಧ ಪಕ್ಷದ ನಾಯಕ ಆಗಿರಬೇಕು. ಜೊತೆಗೆ ಈಗಿರುವ ಕಾರ್ಯಾಧ್ಯಕ್ಷ ಹುದ್ದೆಯ ಜೊತೆಗೆ ಇನ್ನೂ ಎರಡು ಕಾರ್ಯಾಧ್ಯಕ್ಷ ಹುದ್ದೆಗಳನ್ನು ಸೃಷ್ಟಿಸಿ ಸಾಮಾಜಿಕ ನ್ಯಾಯದ ಆಧಾರದ ಮೇಲೆ ನೇಮಕ ಮಾಡಬೇಕು ಎಂದು ಹೈಕಮಾಂಡ್ ಎದುರು ಬೇಡಿಕೆ ಇಟ್ಟಿದ್ದರು.
ಮೂವರು ಕಾರ್ಯಾಧ್ಯಕ್ಷರು ಸಿದ್ದರಾಮಯ್ಯ ಆಪ್ತರು
ಈಗ ಎಐಸಿಸಿ ನೇಮಕ ಮಾಡಿರುವ ಮೂವರು ಕಾರ್ಯಾಧ್ಯಕ್ಷರು ವಿರೋಧ ಪಕ್ಷ ನಾಯಕ ಸಿದ್ದರಾಮಯ್ಯ ಅವರ ಆಪ್ತರು. ಕಾರ್ಯಾಧ್ಯಕ್ಷರಾಗಿ ಈಶ್ವರ್ ಖಂಡ್ರೆ ಮುಂದುವರೆದಿದ್ದಾರೆ. ಜೊತೆಗೆ ಮಾಜಿ ಸಚಿವ ಸತೀಶ್ ಜಾರಕಿಹೊಳಿ ಹಾಗೂ ಸಲೀಂ ಅಹ್ಮದ್ ಅವರನ್ನು ಕಾರ್ಯಾಧ್ಯಕ್ಷರನ್ನಾಗಿ ನೇಮಿಸಿ ಎಐಸಿಸಿ ಆದೇಶ ಮಾಡಿದೆ. ಸತೀಶ್ ಜಾರಕಿಹೊಳಿ ಹಾಗೂ ಸಲೀಂ ಅಹ್ಮದ್ ಇಬ್ಬರೂ ಕೂಡ ಸಿದ್ದರಾಮಯ್ಯ ಅವರಿಗೆ ಆಪ್ತರಾಗಿದ್ದಾರೆ.
ಕೆಪಿಸಿಸಿ ಅಧ್ಯಕ್ಷರಾಗಿ ಡಿ.ಕೆ. ಶಿವಕುಮಾರ್ ನೇಮಕ
ಕೆಪಿಸಿಸಿ ಅಧ್ಯಕ್ಷರನ್ನಾಗಿ ಮಾಜಿ ಸಚಿವ ಡಿ.ಕೆ. ಶಿವಕುಮಾರ್ ಅವರನ್ನು ನೇಮಕ ಮಾಡಲಾಗಿದೆ. ಆದರೆ ಜೊತೆಗೆ ಮೂವರು ಕಾರ್ಯಾಧ್ಯಕ್ಷರನ್ನೂ ನೇಮಕ ಮಾಡುವ ಮೂಲಕ ಅಧಿಕಾರ ವಿಕೇಂದ್ರಿಕರಣವನ್ನು ಕಾಂಗ್ರೆಸ್ ಹೈಕಮಾಂಡ್ ಮಾಡಿದೆ.
ಇದೀಗ ಈಶ್ವರ್ ಖಂಡ್ರೆ ಅವರ ಜೊತೆಗೆ ಸಲೀಂ ಅಹ್ಮದ್ ಹಾಗೂ ಸತೀಶ್ ಜಾರಕಿಹೊಳಿ ಅವರನ್ನು ಕಾರ್ಯಾಧ್ಯಕ್ಷರನ್ನಾಗಿ ನೇಮಕ ಮಾಡಿರುವುದು ಡಿ.ಕೆ. ಶಿವಕುಮಾರ್ ಅವರನ್ನು ಕಟ್ಟಿಹಾಕುವ ಪ್ರಯತ್ನ ಎಂದೇ ಹೇಳಲಾಗುತ್ತಿದೆ.
ವಿಧಾನಸಭೆ, ಪರಿಷತ್ಗೆ ಮುಖ್ಯಸಚೇತಕರ ನೇಮಕ
ಇನ್ನು ವಿಧಾನಸಭೆ ಹಾಗೂ ವಿಧಾನ ಪರಿಷತ್ಗೆ ಮುಖ್ಯ ವಿಪ್ಗಳ ನೇಮಕದಲ್ಲಿ ಎಐಸಿಸಿ ಮುಂಜಾಗ್ರತೆ ವಹಿಸಿದ್ದು, ಮೂಲ ಹಾಗೂ ವಲಸೆ ಕಾಂಗ್ರೆಸ್ಸಿಗರಲ್ಲದ ತಟಸ್ಥ ನಾಯಕರನ್ನು ನೇಮಕ ಮಾಡಿದೆ. ವಿಧಾನಸಭೆ ವಿರೋಧ ಪಕ್ಷದ ಮುಖ್ಯಸಚೇತಕರನ್ನಾಗಿ ಜೇವರ್ಗಿ ಶಾಸಕ ಡಾ. ಅಜಯ್ ಸಿಂಗ್, ವಿಧಾನ ಪರಿಷತ್ ವಿರೋಧ ಪಕ್ಷದ ಮುಖ್ಯ ಸಚೇತಕರನ್ನಾಗಿ ಎಂ. ನಾರಾಯಣಸ್ವಾಮಿ ಅವರನ್ನು ನೇಮಕ ಮಾಡಲಾಗಿದೆ.
CLP ಮತ್ತು ವಿಪಕ್ಷ ಸ್ಥಾನ ಪ್ರತ್ಯೇಕಿಸುವ ಬಗ್ಗೆ ಮುಂದೆ ತೀರ್ಮಾನ
ವಿಧಾನಸಭೆ ವಿರೋಧ ಪಕ್ಷ ನಾಯಕ ಹಾಗೂ ಶಾಸಕಾಂಗ ಪಕ್ಷದ ನಾಯಕ ಸ್ಥಾನಗಳನ್ನು ಪ್ರತ್ಯೇಕಿಸುವ ಬಗ್ಗೆ ಮುಂದೆ ಹೈಕಮಾಂಡ್ ನಿರ್ಣಯ ತೆಗೆದುಕಳ್ಳಿದೆ ಎಂದು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸ್ಥಾನದ ಆಕಾಂಕ್ಷಿಯಾಗಿದ್ದ ಮಾಜಿ ಸಚಿವ ಎಚ್.ಕೆ. ಪಾಟೀಲ್ ವಿಧಾನಸೌಧದಲ್ಲಿ ಹೇಳಿಕೆ ಕೊಟ್ಟಿದ್ದಾರೆ. ಪಕ್ಷದ ಹೈಕಮಾಂಡ್ ಡಿ ಕೆ ಶಿವಕುಮಾರ್ ಅವರನ್ನು ಅಧ್ಯಕ್ಷರನ್ನಾಗಿ ಘೋಷಣೆ ಮಾಡಿದೆ. ಜೊತೆಗೆ ಮೂವರನ್ನು ಕಾರ್ಯಾಧ್ಯಕ್ಷರನ್ನಾಗಿ ಮಾಡಿದೆ. ಹೈಕಮಾಂಡ್ ತೀರ್ಮಾನ ಸ್ವಾಗತಾರ್ಹ. ಶಿವಕುಮಾರ್ ಅವರ ಪಕ್ಷ ಸಂಘಟನೆಯಿಂದ ಕಾಂಗ್ರೆಸ್ ಚೈತನ್ಯ ಹೊಂದಲಿ ಅಂತ ಆಶಿಸುತ್ತೇನೆ. ಶಾಸಕಾಂಗ ಪಕ್ಷ ಹಾಗೂ ವಿಪಕ್ಷ ಸ್ಥಾನ ಪ್ರತ್ಯೇಕ ಮಾಡುವ ಬಗ್ಗೆ ಇನ್ನು ನಿರ್ಣಯ ಆಗಿಲ್ಲ. ಈ ಬಗ್ಗೆ ಮುಂದೆ ತೀರ್ಮಾನ ತಗೆದುಕೊಳ್ಳಬಹುದು ಎಂದು ಎಚ್.ಕೆ. ಪಾಟೀಲ್ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.