ಐದು ವರ್ಷ ಪೂರ್ಣಗೊಳಿಸಿದ ಎರಡನೇ ಮುಖ್ಯಮಂತ್ರಿ ಸಿದ್ದರಾಮಯ್ಯ!
ಬೆಂಗಳೂರು, ಮೇ 13: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಹುದ್ದೆಯನ್ನು ಸಂಪೂರ್ಣ ಐದು ವರ್ಷಗಳ ಕಾಲ ನಿಭಾಯಿಸಿದ ಎರಡನೇ ಮುಖ್ಯಮಂತ್ರಿ ಎಂಬ ಕೀರ್ತಿಗೆ ಭಾಜನರಾಗಿದ್ದು, ಭಾನುವಾರಕ್ಕೆ ಸರಿಯಾಗಿ ಐದು ವರ್ಷದ ಅವಧಿ ಪೂರ್ಣಗೊಳಿಸಿದ್ದಾರೆ.
ಈ ಹಿಂದೆ ನಾಲ್ಕವೇ ವಿಧಾನಸಭೆಯಲ್ಲಿ ದಿವಂಗತ ಡಿ.ದೇವರಾಜ ಅರಸು ಅವರು 1972ರ ಮಾರ್ಚ್ 20ರಿಂದ 1977ರ ಡಿಸೆಂಬರ್ 31ರವರೆಗೆ ಐದು ವರ್ಷ 286 ದಿನಗಳ ಕಾಲ ಮುಖ್ಯಮಂತ್ರಿ ಹುದ್ದೆಯಲ್ಲಿದ್ದರು. ಅರಸು ಬಳಿಕ ಸಂಪೂರ್ಣ ಐದು ವರ್ಷಗಳ ಕಾಲ ಸಿಎಂ ಹುದ್ದೆ ನಿಭಾಯಿಸಿರುವುದು ಸಿದ್ದರಾಮಯ್ಯ ಒಬ್ಬರೇ.
ಕರ್ನಾಟಕ ವಿಧಾನಸಭೆ ಇತಿಹಾಸ ನಿಮಗೆಷ್ಟು ಗೊತ್ತು?
2013ರಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ 122 ಸ್ಥಾನಗಳನ್ನು ಗೆಲ್ಲುವ ಮೂಲಕ ಸ್ಪಷ್ಟ ಬಹುಮತದೊಂದಿಗೆ ಅಧಿಕಾರಕ್ಕೆ ಬಂದಿತ್ತು. ಆಗ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕರಾಗಿ ಸಿದ್ದರಾಮಯ್ಯ ಅವಿರೋಧವಾಗಿ ಆಯ್ಕೆಯಾಗಿದ್ದರು. 2013ರ ಮೇ 13ರಂದು ಕಂಠೀರವ ಕ್ರೀಡಾಂಗಣದಲ್ಲಿ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದರು.
ಐದು ವರ್ಷಗಳ ಅವಧಿಯಲ್ಲಿ ಐಎಎಸ್ ಅಧಿಕಾರಿ ಡಿ.ಕೆ.ರವಿ, ಡಿವೈಎಸ್ಪಿ ಎಂ.ಕೆ.ಗಣಪತಿ ಪ್ರಕರಣಗಳು, ಪುತ್ರ ಡಾ.ಯತೀಂದ್ರ ಪಾಲುದಾರಿಕೆ ಕಂಪನಿಗೆ ಲ್ಯಾಬ್ ಗುತ್ತಿಗೆ ನೀಡಿದ್ದ ಪ್ರಕರಣ, ಹ್ಯುಬ್ಲೋಟ್ ವಾಚ್ ಕಾಣಿಕೆ ಪ್ರಕರಣ ಹೀಗೆ ಹಲವು ಮುಜುಗರದ ಸನ್ನಿವೇಶಗಳನ್ನು ಎದುರಿಸಿದರೂ ತಮ್ಮ ನಾಯಕತ್ವಕ್ಕೆ ಚ್ಯುತಿ ಬಾರದಂತೆ ಯಶಸ್ವಿಯಾಗಿ ನಿರ್ವಹಿಸಿದ ಚಾಣಾಕ್ಷ ರಾಜಕಾರಣಿ ಸಿದ್ದರಾಮಯ್ಯ.
ಒಂದು ಹಂತದಲ್ಲಿ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಸಿಎಂ ಹುದ್ದೆ ನೀಡಬೇಕೆಂಬ ಪ್ರಬಲ ದಲಿತ ಮುಖ್ಯಮಂತ್ರಿ ಧ್ವನಿ ಎದ್ದಾಗಲೂ ಕೂಡ ಅಷ್ಟೇ ಜಾಣ್ಮೆಯಿಂದ ಹುದ್ದೆಗೆ ಚ್ಯುತಿ ಬಾರದಂತೆ ನೋಡಿಕೊಂಡ ಸಿದ್ದರಾಮಯ್ಯ ಅವರು ಗುಂಡ್ಲುಪೇಟೆ ಮತ್ತು ನಂಜನಗೂಡು ಉಪ ಚುನಾವಣೆಯಲ್ಲಿ ದೊರೆತ ಗೆಲುವಿನ ನಂತರ ಮತ್ತೆ ತಿರುಗಿ ನೋಡಲಿಲ್ಲ.
ಕರ್ನಾಟಕ ಸಮೀಕ್ಷೆ ಸರಾಸರಿ : ಬಿಜೆಪಿಗೆ 107, ಅಧಿಕಾರಕ್ಕೆ ಹತ್ತಿರ
ಆರಂಭದಿಂದಲೇ ಅನ್ನಭಾಗ್ಯದಂತಹ ಜನಪ್ರಿಯ ಯೋಜನೆಗಳನ್ನು ಆರಂಭಿಸಿ ಇತ್ತೀಚಿನ ಇಂದಿರಾ ಕ್ಯಾಂಟೀನ್ ಯೋಜನೆ ತನಕ ತಮ್ಮ ಹಾಗೂ ಸರ್ಕಾರದ ಕಾರ್ಯವೈಖರಿಯನ್ನು ಸಮರ್ಥಿಸುವಂತಹ ಕಾರ್ಯಕ್ರಮಗಳನ್ನೇ ನೀಡಿದರು. ವೀರಶೈವ ಲಿಂಗಾಯತ ಧರ್ಮ ವಿಭಜನೆ, ಟಿಪ್ಪು ಜಯಂತಿ ಹಾಗೂ ಜಾತಿ ಗಣತಿಯಂತಹ ವಿವಾದಾತ್ಮಕ ವಿಚಾರಗಳಲ್ಲೂ ಮೇಲುಗೈ ಸಾಧಿಸಿದ್ದರು.
ಸಿದ್ದರಾಮಯ್ಯ ನಾಯಕತ್ವದಲ್ಲೇ ಮತ್ತೊಂದು ವಿಧಾನಸಭೆ ಚುನಾವಣೆ ನಡೆಸುವ ನಿರ್ಧಾರಕ್ಕೆ ಅನಿವಾರ್ಯವಾಗಿ ಕಾಂಗ್ರೆಸ್ ಹೈಕಮಾಂಡ್ ಬರುವಂತೆ ಮಾಡುವಲ್ಲೂ ಸಿದ್ದರಾಮಯ್ಯ ರಾಜಕೀಯ ನಿಪುಣತೆ ಎದ್ದು ಕಾಣುತ್ತದೆ. ಮೂಲ ಹಾಗೂ ವಲಸೆ ಕಾಂಗ್ರೆಸ್ ಎಂಬ ಧ್ವನಿಯನ್ನು ಸಿದ್ದರಾಮಯ್ಯ ಸಂಪೂರ್ಣ ಅಡಗಿಸಿದ್ದರೂ ಅಂತಹ ಅಭಿಪ್ರಾಯ ಪಕ್ಷದಲ್ಲಿ ಕೆಲಮಟ್ಟಿಗೆ ಮಡುಗಟ್ಟಿರುವುದನ್ನು ಕೂಡ ಸಂಪೂರ್ಣ ಅಲ್ಲಗಳೆಯುವಂತಿಲ್ಲ.
ಇಂತಹ ಪರಿಸ್ಥಿತಿಯಲ್ಲಿ ವಿಧಾನಸಭೆ ಅವಧಿ ಐದು ವರ್ಷ ಪೂರ್ಣಗೊಂಡಿದ್ದರಿಂದ ಮತ್ತೊಮ್ಮೆ ಜನಾದೇಶ ಬಯಸಿ ಕಾಂಗ್ರೆಸ್ ಚುನಾವಣೆ ಎದುರಿಸಿದೆ. ಟಿಕೆಟ್ ಹಂಚಿಕೆಯಲ್ಲೂ ಸಿದ್ದರಾಮಯ್ಯ ಪಕ್ಷದ ಆಂತರಿಕ ವಿಚಾರದಲ್ಲಿ ಹಿಡಿತ ಸಾಧಿಸಿದ್ದು, ಮೇ 15ರಂದು ಪ್ರಕಟಗೊಳ್ಳುವ ಲಿತಾಂಶ ಅವರ ಮುಂದಿನ ರಾಜಕೀಯ ಭವಿಷ್ಯಕ್ಕೆ ನಿರ್ಣಾಯಕವಾಗಲಿದೆ. ಹಾಗೆಯೇ ಕಾಂಗ್ರೆಸ್ ಪಕ್ಷಕ್ಕೂ ಅಷ್ಟೇ ನಿರ್ಣಾಯಕ ಕೂಡ.