ಮೋದಿ ಹಿಟ್ಲರ್, ಅಮಿತ್ ಶಾ ಗೂಬೆಲ್ಸ್: ಸಿದ್ದರಾಮಯ್ಯ ಕಿಡಿ
ಬೆಂಗಳೂರು, ಮೇ 19: ಪ್ರಧಾನಿ ನರೇಂದ್ರ ಮೋದಿ ಹಿಟ್ಲರ್, ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಹಿಟ್ಲರ್ ಸಂಪುಟದಲ್ಲಿದ್ದ ಗೂಬೆಲ್ಸ್ (ಜೋಸೆಫ್ ಗೂಬೆಲ್ಸ್). ಇವರಿಗೆ ಬರೀ ಅಪಪ್ರಚಾರ ಮಾಡುವುದೇ ಕೆಲಸ. ಬೇರೆಯವರ ದಾರಿ ತಪ್ಪಿಸುವುದು ಬಿಟ್ಟರೆ ಬೇರೆ ಗೊತ್ತಿಲ್ಲ ಎಂದು ಕಾಂಗ್ರೆಸ್ ಸಂಸದೀಯ ಪಕ್ಷದ ನಾಯಕ ಸಿದ್ದರಾಮಯ್ಯ ಕಿಡಿಕಾರಿದರು.
ವಿಶ್ವಾಸ ಮತ ಯಾಚಿಸದೆ ರಾಜೀನಾಮೆ ನಿರ್ಧಾರ ಪ್ರಕಟಿಸಿದ ಬಿಎಸ್ವೈ
ಸದನದಲ್ಲಿ ಬಹುಮತವಿಲ್ಲದೆ ಮುಖ್ಯಮಂತ್ರಿ ಯಡಿಯೂರಪ್ಪ ರಾಜೀನಾಮೆ ನೀಡಿದ ನಂತರ ಪತ್ರಿಕಾಗೋಷ್ಠಿ ನಡೆಸಿದ ಅವರು, "ಭಾರತದ ರಾಜಕಾರಣದಲ್ಲಿ ಇದು ಒಂದು ಐತಿಹಾಸಿಕ ಘಟನೆ. ಯಡಿಯೂರಪ್ಪನವರು ವಿಧಾನಸೌಧದಲ್ಲಿ ವಿಶ್ವಾಸ ಮತಯಾಚನೆಗೆ ಒಪ್ಪಿಕೊಂಡಿದ್ದರು. ಆದರೆ ಬಹುಮತವಿಲ್ಲದೆ ರಾಜೀನಾಮೆ ನೀಡಿದ್ದಾರೆ," ಎಂದು ಹೇಳಿದರು.
ಪ್ರಜಾಪ್ರಭುತ್ವದ ಕಗ್ಗೊಲೆ
ತಮ್ಮ ಹಳೆಯ ಗತ್ತು ಗೈರತ್ತಿನಲ್ಲೇ ಮಾತನಾಡಿದ ಸಿದ್ದರಾಮಯ್ಯ, "ರಾಜ್ಯಪಾಲರ ಮೇಲೆ ನರೇಂದ್ರ ಮೋದಿ, ಅಮಿತ್ ಷಾ ಅವರಿಂದ ಒತ್ತಡ ಹಾಕಿಸಿ, ಸಂವಿಧಾನ, ಸರ್ವೋಚ್ಛ ನ್ಯಾಯಾಲಯದ ತೀರ್ಪಿನ ವಿರುದ್ಧವಾಗಿದ್ದಾಗಲೂ ಕೂಡ ರಾಜ್ಯಪಾಲರು ಸರಕಾರ ರಚನೆಗೆ ಅವಕಾಶ ಮಾಡಿಕೊಟ್ಟಿದ್ದು ಪ್ರಜಾಪ್ರಭುತ್ವದ ಕಗ್ಗೊಲೆ," ಎಂದು ಬಣ್ಣಿಸಿದರು.
"ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ, ಚುನಾವಣೆಯಲ್ಲಿ ಜನರು ಕೊಟ್ಟ ತೀರ್ಪನ್ನು ಒಪ್ಪಿಕೊಳ್ಳಬೇಕಾಗಿರುವುದು ಎಲ್ಲಾ ಪ್ರಜಾಪ್ರಭುತ್ವವಾದಿಗಳ ಕರ್ತವ್ಯ ಮತ್ತು ಜವಾಬ್ದಾರಿ. ಆದರೆ ಪ್ರಜಾಪ್ರಭುತ್ವಕ್ಕೆ ವಿರುದ್ಧವಾಗಿ ಈ ದೇಶದ ಪ್ರಧಾನಿ ಮೋದಿ, ಬಿಜೆಪಿ ಅಧ್ಯಕ್ಷ ಅಮಿತ್ ಶಾ, ಕೇಂದ್ರದ ಕೆಲವು ಮಂತ್ರಿಗಳು ನಡೆದುಕೊಂಡಿರುವ ರೀತಿ ಅತ್ಯಂತ ಖಂಡನೀಯ," ಎಂದರು.ಉರುಳಿದ ಬಿಜೆಪಿ ಸರ್ಕಾರ: ಸಿದ್ದರಾಮಯ್ಯ ಮೊದಲ ಟ್ವೀಟ್ ಪ್ರತಿಕ್ರಿಯೆ
ಮೋದಿ ನಡೆ ಖಂಡನೀಯ
"ಇದರ ಜೊತೆಗೆ ಯಡಿಯೂರಪ್ಪನವರು ಪ್ರಮಾಣ ವಚನ ತೆಗೆದುಕೊಂಡ ಮೇಲೆ ಅವರು ಕೇಳಿದ್ದು ಒಂದು ವಾರದ ಸಮಯ. ಆದರೆ ರಾಜ್ಯಪಾಲರು ಕೊಟ್ಟದ್ದು 15 ದಿನ. ಪ್ರಧಾನಿ ಮೋದಿಯವರು ಬಹುಮತ ಬಂದಿಲ್ಲ, 104 ಸ್ಥಾನ ಬಂದಿದೆ ಅತಂತ್ರ ಪರಿಸ್ಥತಿ ಇದೆ ಎಂದು ಗೊತ್ತಿದ್ದರೂ, ನಾವು ಸರಕಾರ ಮಾಡೇ ಮಾಡ್ತೀವಿ. ಬೇರೆಯವರನ್ನು ಸರಕಾರ ಮಾಡಲು ಬಿಡುವುದಿಲ್ಲ ಎಂದಿರುವುದು ಇನ್ನೂ ಖಂಡನೀಯ," ಎಂದು ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದರು.
"ಕುದುರೆ ವ್ಯಾಪಾರ ಮಾಡಲು ರಾಜ್ಯಪಾಲರು ಕುಮ್ಮಕ್ಕು ಕೊಟ್ಟಿದ್ದಾರೆ. ಇದೀಗ ಯಡಿಯೂರಪ್ಪನವರು ಕಾಂಗ್ರೆಸ್ ಪಕ್ಷದವನ್ನು ಸಂಪರ್ಕ ಮಾಡಿದ್ದು ನಿಜ ಎಂದು ಒಪ್ಪಿಕೊಂಡಿದ್ದಾರೆ. ಬಿಜೆಪಿಯವರಿಗೆ ಸಂವಿಧಾನ, ಪ್ರಜಾಪ್ರಭುತ್ವದ ಬಗ್ಗೆ ಕಿಂಚಿತ್ತು ಗೌರವವಿಲ್ಲ ಎಂಬುದು ಗೊತ್ತಾಗುತ್ತದೆ. ಇವರು ಢೋಂಗಿಗಳು ಎಂಬುದು ತಿಳಿಯುತ್ತದೆ. ಸಂವಿಧಾನ, ಪ್ರಜಾಪ್ರಭುತ್ವದ ವಿರೋಧಿಗಳು," ಎಂದು ಸಿದ್ದರಾಮಯ್ಯ ಹರಿಹಾಯ್ದರು.ಮೂರು ದಿನಗಳ ಮುಖ್ಯಮಂತ್ರಿ ಯಡಿಯೂರಪ್ಪ: ಸಿದ್ದರಾಮಯ್ಯ ಟ್ವೀಟ್
ಮೋದಿ ಹಿಟ್ಟಲರ್, ಶಾ ಗೂಬೆಲ್ಸ್
ನಂತರ ಮೋದಿ ಮತ್ತು ಶಾ ವಿರುದ್ಧ ವಾಗ್ದಾಳಿ ನಡೆಸಿದ ಅವರು, "ನರೇಂದ್ರ ಮೋದಿ ಹಿಟ್ಲರ್, ಅಮಿತ್ ಶಾ ಗೊಬೆಲ್ಸ್. ಬರೀ ಅಪಪ್ರಚಾರ ಮಾಡುವುವು ಬಿಟ್ಟರೆ ಇವರಿಗೆ ಏನೂ ಗೊತ್ತಿಲ್ಲ. ಬೇರೆಯವರ ದಾರಿ ತಪ್ಪಿಸುವುದೇ ಕೆಲಸ. ಅವರ ಪ್ರಚಾರವನ್ನೇ ನೋಡಿ, ಅಭಿವೃದ್ಧಿ ಬಗ್ಗೆ ಚರ್ಚೆಯನ್ನೇ ಮಾಡಲಿಲ್ಲ," ಎಂದರು.
"ಅವರು ಇವತ್ತು ರಾಜ್ಯಪಾಲರು ನಮ್ಮವರಿದ್ದಾರೆ. ಆರ್.ಎಸ್.ಎಸ್ ಮೂಲದಿಂದ ಬಂದವರಿದ್ದಾರೆ. ನಮ್ಮ ತಾಳಕ್ಕೆ ತಕ್ಕಂತೆ ಕುಣಿಯಬಹುದು ಎಂದುಕೊಂಡಿದ್ದರು. ಆದರೆ ಇದಕ್ಕೆ ನ್ಯಾಯಾಲಯ ಅನುವು ಮಾಡಿಕೊಟ್ಟಿಲ್ಲ," ಎಂದರು.
ಶಾ ತಂತ್ರ ಕರ್ನಾಟಕದಲ್ಲಿ ನಡೆಯಲ್ಲ, ನಡೆಯಲೂ ಬಿಡುವುದಿಲ್ಲ: ಸಿದ್ದರಾಮಯ್ಯ
ಶಾಸಕರಿಗೆ ಧನ್ಯವಾದ
"ನಮ್ಮ ಶಾಸಕರು, ಜೆಡಿಎಸ್ ಶಾಸಕರಿಗೆ ನಾನು ಧನ್ಯವಾದ ಹೇಳುತ್ತೇನೆ. ಎಷ್ಟೇ ಆಮಿಷ ತೋರಿಸಿದರೂ ಪಕ್ಷದ ಗೌರವ ಕಾಪಾಡಿದ್ದಾರೆ. ಅವರಿಗೆ ಧನ್ಯವಾದಗಳನ್ನು ಹೇಳುತ್ತೇನೆ," ಎಂದು ಸಿದ್ದರಾಮಯ್ಯ ತಿಳಿಸಿದರು.
"ಕೋಮುವಾದಿ ಪಕ್ಷ ಅಧಿಕಾರಕ್ಕೆ ಬರುತ್ತದೆ ಎಂದು ರಾಜ್ಯದ ಜನರು ಆತಂಕಕ್ಕೆ ಒಳಗಾಗಿದ್ದರು. ಇದೀಗ ಅವರ ಆತಂಕ ದೂರವಾಗಿದೆ. ಜನರ ಆದೇಶವೂ ಇದೇ ಆಗಿತ್ತು," ಎಂದು ಅವರು ವಿಶ್ಲೇಷಿಸಿದರು.
ಇತಿಹಾಸದಲ್ಲೇ ನಾನು ಇಂಥ ಸರ್ಕಾರ ಕಂಡಿಲ್ಲ
ಮೋದಿ ಮತ್ತು ಶಾ ಚುನಾವಣೆಯಲ್ಲಿ ಅಪಪ್ರಚಾರವನ್ನೇ ದೊಡ್ಡದಾಗಿ ಪ್ರಚಾರ ಮಾಡಿದರು. ಬಹಳ ಮುಖ್ಯವಾಗಿ ಕೇಂದ್ರ ಸರಕಾರದ ಅಧೀನದಲ್ಲಿರುವ ಇಡಿ, ಐಟಿ, ಸಿಬಿಐ ಸಂಸ್ಥೆಗಳನ್ನು ಸ್ವೇಚ್ಛೇಯಾಗಿ ದುರ್ಬಳಕೆ ಮಾಡಿಕೊಂಡಿದ್ದಾರೆ. ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳನ್ನು ಅವರ ಹಿಂಬಾಲಕರನ್ನು, ಆಪ್ತರ ಮೇಲೆ ರೈಡ್ ಮಾಡಿ ಭಯ ಹುಟ್ಟುಹಾಕಿದ್ದು ಭಾರತೀಯ ಜನತಾ ಸರ್ಕಾರ. ಸ್ವಾತಂತ್ರ್ಯ ಭಾರತದ ಇತಿಹಾಸದಲ್ಲೇ ನಾನು ಇಂಥಹದ್ದನ್ನು ಕಂಡಿಲ್ಲ ಎಂದು ಸಿದ್ದರಾಮಯ್ಯ ಅಭಿಪ್ರಾಯಪಟ್ಟರು.
ಇಂಥಹದ್ದನ್ನೆಲ್ಲಾ ಮಾಡಿ ಅಧಿಕಾರಕ್ಕೆ ಹಿಡಿಯಲು ಬಿಜೆಪಿಯವರು ಹೊರಟಿದ್ದರು. ಈ ಯತ್ನದಲ್ಲಿ ಸಂಪುರ್ಣವಾಗಿ ವಿಫಲವಾಗಿದ್ದಾರೆ. ಮುಂದೆ ನಾವೀಗ ಜೆಡಿಎಸ್ ಮತ್ತು ಕಾಂಗ್ರೆಸ್ ನವರು ಕೂತು ಚರ್ಚೆ ಮಾಡುತ್ತೇವೆ. ಇವತ್ತೇ ನಾವು ನಿರ್ಧಾರ ತೆಗೆದುಕೊಳ್ಳುತ್ತೇವೆ ಸರಕಾರ ರಚಿಸುತ್ತೇವೆ ಎಂದು ಅವರು ವಿವರಿಸಿದರು.