ಯಡಿಯೂರಪ್ಪರನ್ನು ತಡರಾತ್ರಿ ಭೇಟಿ ಮಾಡಿದ್ದರೆ ರಾಜಕೀಯ ನಿವೃತ್ತಿ: ಸಿದ್ದರಾಮಯ್ಯ
ಬೆಂಗಳೂರು, ಅ.13: "ಬಿ.ಎಸ್. ಯಡಿಯೂರಪ್ಪ ಅವರನ್ನು ನಾನು ತಡರಾತ್ರಿ ಭೇಟಿ ಮಾಡಿರುವುದನ್ನು ಎಚ್.ಡಿ. ಕುಮಾರಸ್ವಾಮಿ ಸಾಬೀತುಪಡಿಸಿದರೆ ನಾನು ರಾಜಕೀಯ ನಿವೃತ್ತಿ ತೆಗೆದುಕೊಳ್ಳುತ್ತೇನೆ" ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಸವಾಲು ಹಾಕಿದರು.
"ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮತ್ತು ಸಿದ್ದರಾಮಯ್ಯ ಅವರು ತಡರಾತ್ರಿ ಭೇಟಿ ಮಾಡಿದ್ದೇ ಆದಾಯ ತೆರಿಗೆ ದಾಳಿಗೆ ಮೂಲಕ ಕಾರಣ" ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ. ಕುಮಾರಸ್ವಾಮಿ ಇತ್ತೀಚೆಗೆ ಗಂಭೀರ ಆರೋಪ ಮಾಡಿದ್ದರು. ಇದಕ್ಕೆ ಸಿದ್ದರಾಮಯ್ಯ ಖಾರವಾಗಿ ಪ್ರತಿಕ್ರಿಯೆ ನೀಡಿದ್ದಾರೆ.
"ಕುಮಾರಸ್ವಾಮಿ ಯಾವಾಗಲೂ ಸುಳ್ಳು ಆರೋಪಗಳನ್ನು ಮಾಡುವುದರಲ್ಲಿಯೇ ನಿಸ್ಸೀಮರು. ಅವರ ಬಗ್ಗೆ ಮಾತನಾಡಬಾರದು ಎಂದುಕೊಂಡಿದ್ದೆ. ಆದರೆ, ಅವರೇ ಕಾಲುಕೆರೆದು ಜಗಳಕ್ಕೆ ಬರುತ್ತಿದ್ದಾರೆ" ಎಂದು ಸಿದ್ದರಾಮಯ್ಯ ಬುಧವಾರ ಕಲಬುರ್ಗಿಯಲ್ಲಿ ಸುದ್ದಿಗಾರರಿಗೆ ತಿಳಿಸಿದರು.
"ಯಡಿಯೂರಪ್ಪ ಅವರ ಹುಟ್ಟುಹಬ್ಬದ ದಿನ ಮಾತ್ರ ಅವರನನ್ನು ನೇರವಾಗಿ ಭೇಟಿ ಮಾಡಿದ್ದೆ. ಅದನ್ನು ಹೊರತುಪಡಿಸಿದರೆ ಅವರೊಂದಿಗೆ ಯಾವುದೇ ಸಂಪರ್ಕ ಇಟ್ಟುಕೊಂಡಿಲ್ಲ. ತಡರಾತ್ರಿ ನಾನು ಅವರನ್ನು ಭೇಟಿ ಮಾಡಿದ್ದೆ ಎಂಬುದು ಸತ್ಯಕ್ಕೆ ದೂರವಾದುದು. ಒಂದು ವೇಳೆ ನಾನು ಅವರನ್ನು ತಡರಾತ್ರಿ ಭೇಟಿ ಮಾಡಿರುವುದನ್ನು ಕುಮಾರಸ್ವಾಮಿ ಸಾಬೀತು ಮಾಡಲಿ. ಆಗ ನಾನು ರಾಜಕೀಯದಿಂದಲೇ ನಿವೃತ್ತಿ ತೆಗೆದುಕೊಳ್ಳುತ್ತೇನೆ'' ಎಂದರು.
"ವಿರೋಧ ಪಕ್ಷದಲ್ಲಿ ಇರುವವರು ಆಡಳಿತ ಪಕ್ಷದವರೊಂದಿಗೆ ಸಂಪರ್ಕದಲ್ಲಿ ಇರಬೇಕು. ರಾಜ್ಯಕ್ಕೆ ಸಂಬಂಧಿಸಿದ ಯಾವುದೇ ವಿಷಯಗಳ ಸರ್ಕಾರದ ಜೊತೆ ಚರ್ಚಿಸಬೇಕಾಗುತ್ತದೆ. ಈ ಕಾರಣಕ್ಕಾಗಿ ನಾನು ಕುರಿತು ಆಡಳಿತದಲ್ಲಿ ಇರುವವರೊಂದಿಗೆ ದೂರವಾಣಿ ಮೂಲಕ ಮಾತ್ರ ಮಾತನಾಡಿದ್ದೇನೆ. ಅದನ್ನು ಹೊರತುಪಡಿಸಿ ತಡರಾತ್ರಿ ಭೇಟಿ ಮಾಡುವಂತಹ ರಾಜಕೀಯವನ್ನು ಮಾಡಿಲ್ಲ" ಎಂದರು.
ಪುಟಗೋಸಿ ಹೇಳಿಕೆಗೆ ಆಕ್ರೋಶ
"ಸಿದ್ದರಾಮಯ್ಯ ಪುಟಗೋಸಿ ವಿರೋಧ ಪಕ್ಷದ ಸ್ಥಾನ್ಕಾಗಿ ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರ ಬೀಳಿಸಿದರು" ಎಂಬ ಕುಮಾರಸ್ವಾಮಿ ಹೇಳಿಕೆಗೂ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಸಿದ್ದರಾಮಯ್ಯ, "ಹಿಂದೆ ಅವರ ತಂದೆ ದೇವೇಗೌಡ ಅವರೂ ವಿರೋಧ ಪಕ್ಷದ ನಾಯಕರಾಗಿದ್ದರು. ಹಾಗಾದರೆ ದೇವೇಗೌಡರೂ ಪುಟಗೋಸಿಯೇ?" ಎಂದು ಪ್ರಶ್ನಿಸಿದರು.
ವಿರೋಧ ಪಕ್ಷದ ನಾಯಕ ಸ್ಥಾನ ಎಂಬುದು ಒಂದು ಸಾಂವಿಧಾನಿಕ ಹುದ್ದೆ. ಅದರ ಮಹತ್ವ ಕುಮಾರಸ್ವಾಮಿ ಅವರಿಗೆ ತಿಳಿದಿಲ್ಲ. ಎರಡು ಬಾರಿ ಮುಖ್ಯಮಂತ್ರಿಯಾದಂತಹ ವ್ಯಕ್ತಿ ಈ ರೀತಿ ಬಾಲಿಷ ಹೇಳಿಕೆಗಳನ್ನು ನೀಡಬಾರದು ಎಂದು ಹೇಳಿದರು.
ಭೂಕಂಪ: ಸರ್ಕಾರ ಗಂಭೀರವಾಗಿಲ್ಲ
ಕಲಬುರ್ಗಿ ಜಿಲ್ಲೆಯಲ್ಲಿ ಸಂಭವಿಸುತ್ತಿರುವ ಭೂಕಂಪದಿಂದ ಜನರು ಭಯಭೀತರಾಗಿದ್ದಾರೆ. ಆದರೆ, ಜನರ ಸಮಸ್ಯೆಯ ಬಗ್ಗೆ ಸರ್ಕಾರ ಗಭೀರವಾಗಿಲ್ಲ ಎಂದು ಸಿದ್ದರಾಮಯ್ಯ ಆರೋಪಿಸಿದರು.
ಚಿಂಚೋಳಿ ತಾಲ್ಲೂಕಿನ ಗಡಿಕೇಶ್ವರ ಮುಂತಾದ ಹಳ್ಳಗಳಲ್ಲಿ ಶೇ.75ರಷ್ಟು ಜನರು ಗ್ರಾಮಗಳನ್ನು ತೊರೆದಿದ್ದಾರೆ. ಆದರೆ, ಇಲ್ಲಿನ ಯಾವೊಬ್ಬ ಶಾಸಕರೂ, ಸಚಿವರು, ಸಂಸದರು ಭೇಟಿ ನೀಡಿ ಜನರ ಸಮಸ್ಯೆ ಏನೆಂದು ಕೇಳಿಲ್ಲ. ಕಾಂಗ್ರೆಸ್ ಕಾರ್ಯಕರ್ತರು ಹೋಗಿ ಪ್ರತಿಭಟನೆ ಮಾಡಿದರೂ ಸರ್ಕಾರ ಅಥವಾ ಜಿಲ್ಲಾಡಳಿತ ಎಚ್ಚೆತ್ತುಕೊಂಡಿಲ್ಲ. ಜಿಲ್ಲಾ ಉಸ್ತುವಾರಿ ಸಚಿವ ಮುರುಗೇಶ ನಿರಾಣಿ ಅವರೂ ಭೇಟಿ ನೀಡಿಲ್ಲ. ಅವರಿಗೆ ನಿರಾಣಿ ಶುಗರ್ಸ್ ಕಂಪನಿ ನೋಡಿಕೊಳ್ಳುವುದೇ ದೊಡ್ಡ ಕೆಲಸವಾಗಿದೆ ಎಂದು ಟೀಕಿಸಿದರು.
"ಗಡಿಕೇಶ್ವರ ಗ್ರಾಮಕ್ಕೆ ನಿನ್ನೆ ನಾನು ಭೇಟಿ ನೀಡಿದ್ದೆ. ಅಲ್ಲಿ ಕೂತು ಮಾತನಾಡುತ್ತಿರುವಾಗಲೇ ಭೂಕಂಪನದ ಅನುಭವ ಆಯಿತು. ಇಂತಹ ವಾತಾವರಣದಲ್ಲಿ ಜನ ಹೇಗೆ ಬದುಕಬೇಕು. ಜನರು ತಮಗೆ ಆಗುತ್ತಿರುವ ತೊಂದರೆಗಳನ್ನು ಸ್ಥಳದಲ್ಲಿಯೇ ನನ್ನ ಮುಂದೆ ಅಳಲು ತೋಡಿಕೊಂಡರು. ಕೂಡಲೇ ನಾನು ಮುಖ್ಯಮಂತ್ರಿ ಹಾಗೂ ಕಂದಾಯ ಸಚಿವರಿಗೆ ದೂರವಾಣಿ ಕರೆ ಮಾಡಿ ಕೂಡಲೇ ತುರ್ತು ಪರಿಹಾರ ಕಾರ್ಯ ಸೂಚಿಸಿದ್ದೆ. ಸರ್ಕಾರದವರು ಈಗ ಪ್ರತಿಕ್ರಿಯಿಸುತ್ತಿದ್ದಾರೆ ಎಂದು ಸಿದ್ದರಾಮಯ್ಯ ಹೇಳಿದರು.