ಬಜೆಟ್ ಮಂಡನೆ ದಿನವೇ ಸಿಎಲ್ಪಿ ಸಭೆ ಕರೆದ ಸಿದ್ದರಾಮಯ್ಯ!
ಬೆಂಗಳೂರು, ಫೆಬ್ರವರಿ 06 : ಬಜೆಟ್ ಮಂಡನೆ ದಿನವೇ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ಕರೆಯಲಾಗಿದೆ. ಶಾಸಕರ ಸತತ ಗೈರು ಹಾಜರಿ ಹಿನ್ನಲೆಯಲ್ಲಿ ಈ ಸಿಎಲ್ಪಿ ಸಭೆ ಕುತೂಹಲಕ್ಕೆ ಕಾರಣವಾಗಿದೆ.
ಫೆ.8ರ ಶುಕ್ರವಾರ ಮಧ್ಯಾಹ್ನ 12.30ಕ್ಕೆ ಹಣಕಾಸು ಸಚಿವರೂ ಆಗಿರುವ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಬಜೆಟ್ ಮಂಡನೆ ಮಾಡಲಿದ್ದಾರೆ. ಅದಕ್ಕೂ ಮೊದಲು ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ನಡೆಯಲಿದೆ.
ಆಪರೇಷನ್ ಕಮಲ : ಮುಂಬೈನಲ್ಲಿದ್ದಾರೆ ಅತೃಪ್ತ ಕಾಂಗ್ರೆಸ್ ಶಾಸಕರು
ಜಂಟಿ ಅಧಿವೇಶದನ ಮೊದಲ ದಿನವಾದ ಬುಧವಾರ ಕಾಂಗ್ರೆಸ್ನ 8 ಅತೃಪ್ತ ಶಾಸಕರು ಸದನಕ್ಕೆ ಗೈರಾಗಿದ್ದರು. ಜನವರಿ 18ರಂದು ನಡೆದ ಸಿಎಲ್ಪಿ ಸಭೆಗೆ ನಾಲ್ವರು ಶಾಸಕರು ಗೈರಾಗಿದ್ದರು. ಫೆ.8ರಂದು 70 ಕಾಂಗ್ರೆಸ್ ಶಾಸಕರ ಪೈಕಿ ಎಷ್ಟು ಜನರು ಸಿಎಲ್ಪಿ ಸಭೆಗೆ ಗೈರಾಗಲಿದ್ದಾರೆ? ಎಂದು ಕಾದು ನೋಡಬೇಕು.
ಅತೃಪ್ತ ಶಾಸಕ ಜಾಧವ್ ಒಲಿಸಿಕೊಳ್ಳಲು ಕೆಪಿಸಿಸಿ ಕಸರತ್ತು
ಈಗಾಗಲೇ ಸಿಎಲ್ಪಿ ಸಭೆಗೆ ಪದೇ-ಪದೇ ಗೈರಾಗುತ್ತಿರುವ ಶಾಸಕರಿಗೆ ಬಿಸಿ ಮುಟ್ಟಿಸಲು ಕಾಂಗ್ರೆಸ್ ನಾಯಕರು ತೀರ್ಮಾನಿಸಿದ್ದಾರೆ. ಫೆ.8ರಂದು ಗೈರಾದರೆ ಪಕ್ಷದಿಂದ ಅಮಾನತುಗೊಳಿಸುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.
ಅಧಿವೇಶನಕ್ಕೆ ಆರು 'ಕೈ' ಶಾಸಕರು ಗೈರು? ಬಿಜೆಪಿಯ ಭಾರಿ ರಣತಂತ್ರ
ಬುಧವಾರ ಜಂಟಿ ಅಧಿವೇಶನಕ್ಕೆ ರಮೇಶ್ ಜಾರಕಿಹೊಳಿ, ಬಿ.ನಾಗೇಂದ್ರ, ಮಹೇಶ್ ಕುಮಟಳ್ಳಿ, ಡಾ.ಕೆ.ಸುಧಾಕರ್, ಬಿ.ಸಿ.ಪಾಟೀಲ್, ರಾಮಲಿಂಗಾ ರೆಡ್ಡಿ, ಸೌಮ್ಯಾ ರೆಡ್ಡಿ, ಜೆ.ಎನ್.ಗಣೇಶ್ ಸೇರಿದಂತೆ ಹಲವು ಶಾಸಕರು ಗೈರಾಗಿದ್ದರು.
ಎಲ್ಲಾ ಶಾಸಕರು ಕಡ್ಡಾಯವಾಗಿ ಆಗಮಿಸಬೇಕು ಎಂದು ಸಿದ್ದರಾಮಯ್ಯ ಸೂಚಿಸಿದ್ದು, ಕಂಪ್ಲಿ ಶಾಸಕ ಜೆ.ಎನ್.ಗಣೇಶ್ಗೆ ಸಂಕಷ್ಟ ಎದುರಾಗಿದೆ. ವಿಜಯನಗರ ಕ್ಷೇತ್ರದ ಶಾಸಕ ಆನಂದ್ ಸಿಂಗ್ ಮೇಲೆ ಹಲ್ಲೆ ಮಾಡಿರುವ ಗಣೇಶ್ ಬೆಂಗಳೂರಿಗೆ ಬಂದರೆ ಬಿಡದಿ ಪೊಲೀಸರು ಅವರನ್ನು ಬಂಧಿಸಲಿದ್ದಾರೆ.
ರಮೇಶ್ ಜಾಕಿಹೊಳಿ ಬರ್ತಾರಾ? : ಸಂಪುಟ ವಿಸ್ತರಣೆ ಬಳಿಕ ಪಕ್ಷದ ಚಟುವಟಿಕೆಗಳಿಂದ ದೂರವುಳಿದು, ಪಕ್ಷದ ಯಾವ ನಾಯಕರ ಕೈಗೂ ಸಿಗದೇ ತಪ್ಪಿಸಿಕೊಳ್ಳುತ್ತಿರುವ ಗೋಕಾಕ್ ಕ್ಷೇತ್ರದ ಶಾಸಕ ರಮೇಶ್ ಜಾರಕಿಹೊಳಿ ಅವರು ಸಿಎಲ್ಪಿ ಸಭೆಗೆ ಆಗಮಿಸಲಿದ್ದಾರೆಯೇ? ಕಾದು ನೋಡಬೇಕು.