ಕಾಂಗ್ರೆಸ್ಗೆ ಹೋಗಿ ಕೆಟ್ಟ ಸಿದ್ದರಾಮಯ್ಯ: ಬಸವರಾಜ ಬೊಮ್ಮಾಯಿ ಲೇವಡಿ
ಬೆಂಗಳೂರು, ಅ.20: ಸಿದ್ದರಾಮಯ್ಯ ಹಿಂದೆ ನಮ್ಮ ಜೊತೆ (ಜನತಾ ಪರಿವಾರ) ಇದ್ದಾಗ ಚೆನ್ನಾಗಿದ್ದರು. ಕಾಂಗ್ರೆಸ್ಗೆ ಹೋಗಿ ಕೆಟ್ಟುಹೋದರು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಲೇವಡಿ ಮಾಡಿದರು.
ಸಿಂದಗಿ ಉಪ ಚುನಾವಣೆ ಹಿನ್ನೆಲೆಯಲ್ಲಿ ಕ್ಷೇತ್ರದ ಅಲಮೇಲ ಪಟ್ಟಣದಲ್ಲಿ ಆಯೋಜಿಸಲಾಗಿದ್ದ ಬೃಹತ್ ಬಿಜೆಪಿ ಸಮಾವೇಶದಲ್ಲಿ ಅವರು ಕಾಂಗ್ರೆಸ್ ಮತ್ತು ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದರು.
ಪ್ರಧಾನಿ ನರೇಂದ್ರ ಮೋದಿ ಅವರ ಬಗ್ಗೆ ಕಾಂಗ್ರೆಸ್ನವರು ಹಗುರವಾಗಿ ಮಾತನಾಡುತ್ತಾರೆ. ಇವರ ಮಾತುಗಳಿಂದ ಮೋದಿಯವರು ಸಣ್ಣವರಾಗುವುದಿಲ್ಲ, ಕಾಂಗ್ರೆಸ್ನವರ ಸಣ್ಣತನ ಎಷ್ಟಿದೆಯೆಂದು ಅವರೇ ತೋರಿಸುತ್ತಿದ್ದಾರೆ. ಸಿದ್ದರಾಮಯ್ಯ ಅವರು ಸಹವಾಸ ದೋಷದಿಂದ ಸಂಪೂರ್ಣವಾಗಿ ಕೆಟ್ಟುಹೋಗಿದ್ದಾರೆ. ಮನಸ್ಸಿಗೆ ತೋಚಿದಂತೆ ಮಾತನಾಡುತ್ತಿದ್ದಾರೆ ಎಂದು ಹೇಳಿದರು.
ಕಾಂಗ್ರೆಸ್ ಮುಳುಗುತ್ತಿರುವ ಹಡಗು. ಕಾಂಗ್ರೆಸ್ ಪಕ್ಷವನ್ನು ವಿಸರ್ಜನೆ ಮಾಡಿ ಅಂತ ಮಹಾತ್ಮ ಗಾಂಧಿಯವರು ಅಂದೇ ಹೇಳಿದ್ದರು. ಆದರೆ ಅಧಿಕಾರದ ಆಸೆಗೆ ಅವರು ಹೇಳಿದಂತೆ ಕಾಂಗ್ರೆಸ್ ನಡೆದುಕೊಳ್ಳಲಿಲ್ಲ. ಆದರೆ ಭಾರತದ ಜನ ಕಾಂಗ್ರೆಸ್ಸನ್ನು ಸಂಪೂರ್ಣವಾಗಿ ದೇಶದಿಂದ ವಿಸರ್ಜನೆ ಮಾಡುತ್ತಾರೆ. ಮತ್ತೊಮ್ಮೆ ನರೇಂದ್ರ ಮೋದಿಯವರನ್ನು ಈ ದೇಶದ ಪ್ರಧಾನಿಯಾಗಿ ಜನ ಆಯ್ಕೆ ಮಾಡುತ್ತಾರೆ ಎಂದು ಅವರು ಹೇಳಿದರು.
ಕಾಂಗ್ರೆಸ್ ಭಾಗ್ಯ ಯಾರ ಮನೆ ಬಾಗಿಲಿಗೂ ಬರಲಿಲ್ಲ
ಸಿದ್ದರಾಮಯ್ಯ ಅವರು ಕಾಂಗ್ರೆಸ್ ಸರ್ಕಾರ ಇದ್ದಾಗ ಹಲವು ಭಾಗ್ಯಗಳನ್ನು ನೀಡಿದೆ ಎಂದು ಹೇಳುತ್ತಲೇ ಇರುತ್ತಾರೆ. ಆದರೆ, ಕರ್ನಾಟಕದಲ್ಲಿ ಕಾಂಗ್ರೆಸ್ ಕೊಟ್ಟಂತಹ ಭಾಗ್ಯ ಯಾರ ಮನೆ ಬಾಗಿಲಿಗೂ ತಲುಪಲಿಲ್ಲ. ಹೀಗಾಗಿ ಸಿದ್ದರಾಮಯ್ಯ ಸರ್ಕಾರ ಕರ್ನಾಟಕದ ಪಾಲಿಗೆ ದೌರ್ಭಾಗ್ಯವಾಯಿತು. ಅದಕ್ಕಾಗಿಯೇ ರಾಜ್ಯದ ಜನ ಕಾಂಗ್ರೆಸ್ ಪಕ್ಷವನ್ನು ಕಳೆದ ಚುನಾವಣೆಯಲ್ಲಿ ತಿರಸ್ಕರಿಸಿದರು ಎಂದು ಅವರು ಲೇವಡಿ ಮಾಡಿದರು.
"ಸಿಂದಗಿ ಮತಕ್ಷೇತ್ರ ಅಭಿವೃದ್ಧಿಯಾಗಿದ್ದು ರಮೇಶ ಭೂಸನೂರ ಅವರ ಅವಧಿಯಲ್ಲಿ ಎಂದು ಹೆಮ್ಮೆಯಿಂದ ಹೇಳುತ್ತೇನೆ. ಗುತ್ತಿ ಬಸವಣ್ಣ ಯೋಜನೆ ಮೂಲಕ ಜನರಿಗೆ ನೀರು ಕೊಡಬೇಕು, 90 ಕಿಲೋಮೀಟರ್ ನಿಂದ 150 ಕಿಲೋಮೀಟರ್ ವರೆಗೆ ವಿಸ್ತರಣೆ ಮಾಡಿ ಜನರ ಕಷ್ಟ ನೀಗಿಸಬೇಕೆಂದು ಶ್ರಮಿಸಿದವರು. ಈ ಯೋಜನೆ ಜಾರಿಯಾಗುವ ಹಿಂದಿನ ದೊಡ್ಡ ಶಕ್ತಿಯೆಂದರೆ ರಮೇಶ ಭೂಸನೂರ" ಎಂದು ಅವರ ಕೆಲಸವನ್ನು ಮುಖ್ಯಮಂತ್ರಿಗಳು ಶ್ಲಾಘಿಸಿದರು.
ಬಿಜೆಪಿ ಸರಕಾರದ ಅವಧಿಯಲ್ಲಿ ಚಿಮ್ಮಲಗಿ ಏತ ನೀರಾವರಿ ಮುಳವಾಡ ಏತ ನೀರಾವರಿ ಕಾರ್ಯರೂಪಕ್ಕೆ ಬಂದಿದೆ ಆದರೆ ಕಾಂಗ್ರೆಸ್ ಅವಧಿಯಲ್ಲಿ ಈ ಭಾಗದ ಯೋಜನೆಗಳನ್ನು ನಿರ್ಲಕ್ಷ ಮಾಡಲಾಗಿತ್ತು. ಮುಳವಾಡ ಏತ ನೀರಾವರಿಯನ್ನು 2012ರಲ್ಲಿ ಬೆಳಿಗ್ಗೆ ಐದು ಗಂಟೆಗೆ ಹೋಗಿ ಮೂರನೇ ಹಂತದ ಕಾಮಗಾರಿಯ ಭೂಮಿಪೂಜೆಯನ್ನು ಮಾಡಿದ್ದೇವೆ. ಬಿಜೆಪಿ ಸರ್ಕಾರದ ಅಭಿವೃದ್ಧಿಪರ ಬದ್ಧತೆಯನ್ನು ಇದು ಎತ್ತಿತೋರಿಸುತ್ತದೆ ಉತ್ತರ ಕರ್ನಾಟಕ ಭಾಗದ ಅಭಿವೃದ್ಧಿಗೆ ನಮ್ಮ ಸರ್ಕಾರದಲ್ಲಿ ಜಾರಿಯಾದ ಯೋಜನೆಗಳನ್ನು ನಾವೇ ಪ್ರಾರಂಭಿಸುವ ಸದಾವಕಾಶ ಬಂದಿದೆ. ಸಿಂದಗಿಯಲ್ಲಿ ರಮೇಶ ಭೂಸನೂರ ಜಯಭೇರಿ ಬಾರಿಸಿ ಗುತ್ತಿ ಬಸವಣ್ಣ ಏತ ನೀರಾವರಿ ನೀರನ್ನು ಹರಿಸುವ ಕೆಲಸ ಮಾಡುತ್ತಾರೆ ಎಂದು ಗೆಲುವಿನ ವಿಶ್ವಾಸವನ್ನು ಬೊಮ್ಮಾಯಿ ವ್ಯಕ್ತಪಡಿಸಿದರು.
ಭೂಗರ್ಭಶಾಸ್ತ್ರಜ್ಞರ ವರದಿ ಆಧರಿಸಿ ಮುಂದಿನ ಕ್ರಮ
ಬಳಿಕ ಕಲಬುರ್ಗಿ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಬಸವರಾಜ ಬೊಮ್ಮಾಯಿ, "ವಿಜಯಪುರ ಜಿಲ್ಲೆಯಲ್ಲಿ ಭೂಕಂಪನ ಆಗುತ್ತಿರುವ ಬಗ್ಗೆ ಭೂಗರ್ಭಶಾಸ್ತ್ರಜ್ಞರು ಭೇಟಿ ನೀಡಿದ್ದಾರೆ. ಅವರು ನೀಡುವ ವರದಿ ಬಂದ ಮೇಲೆ ಅದರ ತೀವ್ರತೆಯನ್ನು ಆಧರಿಸಿ ಮುಂದೆ ಕ್ರಮ ಕೈಗೊಳ್ಳುತ್ತೇನೆ. ಯಾವ ಕಾರಣದಿಂದಾಗಿ ಭೂಕಂಪನ ಸಂಭವಿಸುತ್ತಿದೆ, ಯಾವ ನಿರ್ದಿಷ್ಟ ಸ್ಥಳದಲ್ಲಿ ಸಂಭವಿಸುತ್ತಿದೆ ಹಾಗೂ ಯಾವ ಕಾರಣಗಳಿಂದ ಈ ಭಾಗದಲ್ಲಿ ಭೂಮಿ ಕಂಪಿಸುತ್ತಿದೆ ಎಂಬ ಬಗ್ಗೆ ವರದಿ ನೀಡಲಿದ್ದಾರೆ. ಕಂದಾಯ ಸಚಿವರಾದ ಆರ್. ಅಶೋಕ್ ವಿಜಯಪುರ ಜಿಲ್ಲಾಧಿಕಾರಿಗಳೊಂದಿಗೆ ಭೂಕಂಪ ಪೀಡಿತ ಗ್ರಾಮಗಳಿಗೆ ಭೇಟಿ ನೀಡಿ ಚರ್ಚೆ ನಡೆಸಿದ್ದಾರೆ. ಭೂಕಂಪನ ಸಂಭವಿಸಿ ಹಾನಿಗೊಳಗಾದ ಮನೆಗಳಿಗೆ ಪರಿಹಾರ ನೀಡಲು ಮತ್ತು ತಾತ್ಕಾಲಿಕ ಶೆಡ್ ನಿರ್ಮಾಣ ಮಾಡಲು ಜಿಲ್ಲಾಧಿಕಾರಿಗಳಿಗೆ ಸೂಚಿಸಿರುವುದಾಗಿ ಹೇಳಿದರು.
ಸದ್ಯ ಕಲ್ಯಾಣ ಕರ್ನಾಟಕ ಭಾಗಕ್ಕೆ ನೀಡಿರುವ ರೂ 1500 ಕೋಟಿ ರೂ. ಅನುದಾನವನ್ನು ಅಭಿವೃದ್ಧಿ ಕಾರ್ಯಗಳಿಗೆ ಬಳಕೆ ಮಾಡಬೇಕು ಎಂದು ಅವರು ತಿಳಿಸಿದರು. ಬಳಕೆ ಮಾಡಿದರೆ ಹೆಚ್ಚುವರಿ ರೂ.1500 ಕೋಟಿ ರೂ. ನೆರವು ಒದಗಿಸುವುದಾಗಿ ಹೇಳಿದ್ದೆ. ಆದರೆ ಅದರ ಜತೆಗೆ ಅಗತ್ಯ ಯೋಜನೆ ಹಾಗೂ ಡಿಪಿಆರ್ ಸಿದ್ದ ಪಡಿಸಿದರೆ ಹೆಚ್ಚುವರಿಯಾಗಿ 1500 ಕೋಟಿ ರೂ. ಅನುದಾನ ಒದಗಿಸುವ ಭರವಸೆಯನ್ನು ಸಿಎಂ ನೀಡಿದರು.
Recommended Video