ದಲಿತ ವಿರೋಧಿ ಎಂದ ಬಿಜೆಪಿ ನಾಯಕರಿಗೆ ವಿಪಕ್ಷ ನಾಯಕ ಸಿದ್ದರಾಮಯ್ಯ ಸವಾಲು!
ಬೆಂಗಳೂರು, ನ.4: ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ದಲಿತರನ್ನು ಅವಮಾನಿಸಿದ್ದಾರೆ ಎಂದು ವಿರೋಧಿಸಿ ರಾಜ್ಯ ಬಿಜೆಪಿ ಹೋರಾಟ ನಡೆಸಿದೆ. ರಾಜ್ಯ ಬಿಜೆಪಿ ಆರೋಪಕ್ಕೆ ತಿರುಗೇಟು ಕೊಟ್ಟಿರುವ ಸಿದ್ದರಾಮಯ್ಯ ರಾಜ್ಯ ಬಿಜೆಪಿ ಸರ್ಕಾರಕ್ಕೆ ಸವಾಲು ಹಾಕಿದ್ದಾರೆ. ಈ ಬಗ್ಗೆ ಮಾತನಾಡಿರುವ ಅವರು, "ನಾನು ದಲಿತರನ್ನು ಅವಮಾನಿಸಿದ್ದೇನೆ ಎಂಬ ಸುಳ್ಳು ಆರೋಪದ ಮೂಲಕ ಅತ್ಯಂತ ಕೀಳುಮಟ್ಟದ ಆರೋಪಗಳನ್ನು ಬಿಜೆಪಿ ದಲಿತ ಮೋರ್ಚಾದ ಕೆಲವು ನಾಯಕರು ಮಾಡಿರುವುದನ್ನು ಮಾಧ್ಯಮಗಳ ವರದಿಗಳ ಮೂಲಕ ಗಮನಿಸಿದ್ದೇನೆ' ಎಂದು ಹೇಳಿದ್ದಾರೆ.
"ಸಿಂದಗಿಯಲ್ಲಿ ನಡೆದಿದ್ದ ಮಾದಿಗ ದಂಡೋರಾ ಸಭೆಯಲ್ಲಿ ಗೋವಿಂದ ಕಾರಜೋಳ, ರಮೇಶ್ ಜಿಗಜಿಣಗಿ, ನಾರಾಯಣ ಸ್ವಾಮಿ ಮೊದಲಾದ ನಾಯಕರು ಬಾಬಾಸಾಹೇಬ್ ಅಂಬೇಡ್ಕರ್ ಮತ್ತು ಸಂವಿಧಾನವನ್ನು ವಿರೋಧಿಸುವ ಬಿಜೆಪಿ ಜೊತೆ ಸ್ವಾರ್ಥಕ್ಕಾಗಿ ಸೇರಿದ್ದಾರೆ ಎಂದು ಹೇಳಿದ್ದೆ ಹೊರತು, ಎಲ್ಲಿಯೂ ದಲಿತರು ಹೊಟ್ಟೆಪಾಡಿಗಾಗಿ ಬಿಜೆಪಿ ಸೇರಿದ್ದಾರೆ ಎಂದು ಹೇಳಿಲ್ಲ" ಎಂದು ಸ್ಪಷ್ಟನೆ ಕೊಟ್ಟಿದ್ದಾರೆ. ಜೊತೆಗೆ ಆ ದಿನದ ಭಾಷಣದ ವಿಡಿಯೋ ಕೂಡಾ ಲಭ್ಯವಿದೆ ಎಂದು ಹೇಳಿದ್ದಾರೆ.
"ನನ್ನನ್ನು ದಲಿತ ವಿರೋಧಿ ಎಂದು ಚಿತ್ರಿಸಲು ಹೊರಟಿರುವ ಬಿಜೆಪಿ ದಲಿತ ಮೋರ್ಚಾದ ತಥಕಾಥಿತ ನಾಯಕರು, ಬಿಜೆಪಿ ಸಂಸದ ಅನಂತಕುಮಾರ ಹೆಗಡೆ ಸಂವಿಧಾನ ಬದಲಿಸುತ್ತೇವೆ ಎಂದಾಗ, ದಲಿತರನ್ನು ನಾಯಿಗಳು ಎಂದು ತುಚ್ಚೀಕರಿಸಿದಾಗ ಎಲ್ಲಿ ಹೋಗಿದ್ದರು? ಎಂಬುದನ್ನು ರಾಜ್ಯದ ಜನರಿಗೆ ತಿಳಿಸಬೇಕು" ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಸವಾಲು ಹಾಕಿದ್ದಾರೆ.
ದಲಿತರಿಗೆ ಹಣ ಖಾತರಿ ಕಾನೂನು ತಂದಿದ್ದೇ ನಾನು!
"ದಲಿತರ ಕಲ್ಯಾಣಕ್ಕಾಗಿ ನಮ್ಮ ಸರ್ಕಾರ ರಚಿಸಿದ್ದ ಕಾಯ್ದೆಗಳು, ರೂಪಿಸಿ ಜಾರಿಗೆ ತಂದಿರುವ ಕಾರ್ಯಕ್ರಮಗಳನ್ನು ಮುಂದಿಟ್ಟು ಸಾರ್ವಜನಿಕವಾಗಿ ಚರ್ಚೆ ನಡೆಸಿದರೆ ನಾನು ಅದರಲ್ಲಿ ಭಾಗವಹಿಸಲು ಸಿದ್ದನಿದ್ದೇನೆ. ಈ ಮೂಲಕ ಯಾವ ಪಕ್ಷ ದಲಿತರ ಪರವಾಗಿದೆ ಮತ್ತು ವಿರುದ್ಧವಾಗಿದೆ ಎನ್ನುವುದನ್ನು ಸಾರ್ವಜನಿಕರ ತೀರ್ಮಾನಿಸಲಿ.
ರಾಜ್ಯ ಬಜೆಟ್ನ ಶೇಕಡಾ 24.1ರಷ್ಟು ಭಾಗವನ್ನು ಮೀಸಲಿಡುವ ಎಸ್ಸಿಎಸ್ಟಿ/ಟಿಎಸ್ಪಿ ಕಾಯ್ದೆಯನ್ನು ನಾನು ಜಾರಿಗೆ ತಂದಿದ್ದೆ. ಆಂಧ್ರಪ್ರದೇಶ ಸರ್ಕಾರದಲ್ಲಿ ಇದೇ ಉದ್ದೇಶ ಕಾಯ್ದೆಯಿದ್ದರೂ ನಾವು ರಚಿಸಿದ ಕಾಯ್ದೆ ಹೆಚ್ಚು ಪ್ರಗತಿಪರವಾದುದು' ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ದಲಿತ ವಿರೋಧಿ? ನಾನಾ? ಬಿಜೆಪಿ ನಾಯಕರಾ?
ನಮ್ಮ ಸರ್ಕಾರ ಜಾರಿಗೆ ತಂದಿದ್ದ ಕಾಯ್ದೆಯ ಪ್ರಕಾರ ಮೀಸಲಿಟ್ಟ ಶೇಕಡಾ 24ರಷ್ಟು ಬಜೆಟ್ ಹಣ ಖರ್ಚಾಗದಿದ್ದರೆ ಅದನ್ನು ಮುಂದಿನ ವರ್ಷಕ್ಕೆ ಬಳಸಬಹುದಾಗಿದೆ. ಜೊತೆಗೆ ಮೀಸಲಿಟ್ಟ ಅನುದಾನವನ್ನು ಖರ್ಚು ಮಾಡದ ಸಂಬಂಧಿತ ಇಲಾಖಾ ಅಧಿಕಾರಿಗಳ ವಿರುದ್ದ ಕ್ರಮವನ್ನು ಕೈಗೊಳ್ಳಬಹುದಾಗಿದೆ. 2008-09ರಿಂದ 2012-13ನೇ ಸಾಲಿನವರೆಗೆ ಬಿಜೆಪಿ ಸರ್ಕಾರ ಎಸ್ಸಿಎಸ್ಟಿ/ಟಿಎಸ್ಪಿ ಯೋಜನೆಯಡಿ ಖರ್ಚು ಮಾಡಿದ್ದು ಕೇವಲ 22,261 ಕೋಟಿ ರೂಪಾಯಿಗಳು. ನಮ್ಮ ಸರ್ಕಾರದ ಅವಧಿಯಲ್ಲಿ 88,395 ಕೋಟಿ ರೂ.ಗಳು. ಹೀಗಾಗಿ ದಲಿತ ವಿರೋಧಿ? ನಾನಾ? ಬಿಜೆಪಿ ನಾಯಕರಾ? ಯಾರು? ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.
ಬಿಜೆಪಿ ನಾಯಕರೇ ನನ್ನ ಪರ ಜೈಕಾರ ಹಾಕಿದ್ದರು!
ಪರಿಶಿಷ್ಟ ಜಾತಿ/ಪಂಗಡದ ಸರ್ಕಾರಿ ನೌಕರರ ಮುಂಬಡ್ತಿ ಸೌಲಭ್ಯವನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸಿದಾಗ ಬಿಜೆಪಿಯ ದಲಿತ ನಾಯಕರು ಕಣ್ಣು ಮುಚ್ಚಿಕೂತಿದ್ದರು. ಸುಗ್ರಿವಾಜ್ಞೆ ಮೂಲಕ ಆ ಸೌಲಭ್ಯವನ್ನು ಮತ್ತೆ ನಮ್ಮ ಸರ್ಕಾರ ಜಾರಿಗೊಳಿಸಿತ್ತು. ಈಗ ನನ್ನ ವಿರುದ್ದ ಘೋಷಣೆ ಕೂಗುತ್ತಿರುವ ಕೆಲವು ನಾಯಕರೇ ಆಗ ನನ್ನ ಪರವಾಗಿ ಜೈಕಾರ ಹಾಕಿದ್ದರು ಎಂದು ಸಿದ್ದರಾಮಯ್ಯ ಅವರು ರಾಜ್ಯ ಬಿಜೆಪಿ ಪರಿಶಿಷ್ಟ ಜಾತಿಯ ನಾಯಕರಿಗೆ ತಿರುಗೇಟು ಕೊಟ್ಟಿದ್ದಾರೆ. ಇನ್ನು ಜೆಡಿಎಸ್ ವಿರುದ್ಧ ಸಿದ್ದರಾಮಯ್ಯ ಹರಿಹಾಯ್ದಿದ್ದಾರೆ.
ಜೆಡಿಎಸ್ ನಾಯಕರ ವಿರುದ್ಧ ಪರೋಕ್ಷ ವಾಗ್ದಾಳಿ!
"ನಾನು ಮುಸ್ಲಿಮ್ ವಿರೋಧಿ ಎಂಬ ಬೊಬ್ಬಿಟ್ಟ ಪಕ್ಷದ ಅಭ್ಯರ್ಥಿಗಳ ಠೇವಣಿ ಜಪ್ತಿ ಮಾಡಿಸಿ ಉಪ ಚುನಾವಣೆಯಲ್ಲಿ ಮತದಾರರು ಉತ್ತರ ಕೊಟ್ಟಿದ್ದಾರೆ. ಈಗ ಬಿಜೆಪಿಯ ಕೆಲವು ತಥಾಕಥಿತ ದಲಿತ ನಾಯಕರು ನಾನು ದಲಿತ ವಿರೋಧಿ ಎಂದು ಕೂಗಾಡುತ್ತಿದ್ದಾರೆ, ಅವರಿಗೂ ಮತದಾರರೇ ಉತ್ತರ ನೀಡುತ್ತಾರೆ' ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಆ ಮೂಲಕ ಜೆಡಿಎಸ್ ನಾಯಕರ ಮೇಲೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪರೋಕ್ಷ ವಾಗ್ದಾಳಿ ನಡೆಸಿದ್ದಾರೆ.