'ಪ್ರಜಾಪ್ರಭುತ್ವದ ಗಣಿತ' ಕಲಿತುಕೊಳ್ಳಿ: ಬಿಜೆಪಿಗೆ ಸಿದ್ದರಾಮಯ್ಯ ಪಾಠ
ಬೆಂಗಳೂರು, ಜುಲೈ 3: ವಿಜಯನಗರ ಶಾಸಕ ಆನಂದ್ ಸಿಂಗ್ ಮತ್ತು ಗೋಕಾಕ್ ಕಾಂಗ್ರೆಸ್ ಶಾಸಕ ರಮೇಶ್ ಜಾರಕಿಹೊಳಿ ಅವರ ರಾಜೀನಾಮೆಯ ಬೆನ್ನಲ್ಲೇ ರಾಜ್ಯದಲ್ಲಿ ಸರ್ಕಾರ ರಚಿಸಲು ಬಿಜೆಪಿ ತೆರೆಮರೆಯಲ್ಲಿ ಪ್ರಯತ್ನಗಳನ್ನು ಆರಂಭಿಸಿದೆ. ಆದರೆ ಅದಕ್ಕೆ ಅಗತ್ಯ ಸಂಖ್ಯಾಬಲದ ಕೊರತೆ ಇದೆ. ಇದನ್ನು ಕಾಂಗ್ರೆಸ್, ಮಾಜಿ ನಾಯಕ ಸಿದ್ದರಾಮಯ್ಯ ಬಿಜೆಪಿಗೆ ಮನವರಿಕೆ ಮಾಡಿದ್ದಾರೆ.
105 ಶಾಸಕರ ಬಲ ಹೊಂದಿರುವ ಬಿಜೆಪಿಗೆ ಜನರು ಬಹುಮತ ನೀಡಿರುವುದೇ ಹೊರತು ಕಾಂಗ್ರೆಸ್ ಜೆಡಿಎಸ್ಗೆ ಅಲ್ಲ ಎಂದು ಬಿಜೆಪಿ ಸಂಸದೆ ಶೋಭಾ ಕರಂದ್ಲಾಜೆ ಹೇಳಿದ್ದರು. ರಾಜೀನಾಮೆ ನಾಟಕವು ರಾಜ್ಯ ಬಿಜೆಪಿ ನಾಯಕರು ಸೃಷ್ಟಿಸಿರುವುದು. ರಾಜ್ಯ ವಿಧಾನಸಭೆಯಲ್ಲಿ ಜನರು ಬಿಜೆಪಿಗೆ ಬಹುಮತ ನೀಡದೆ ಇದ್ದರೂ ಅವರು ಹಿಂಬಾಗಿಲಿನಿಂದ ಅಧಿಕಾರ ಹಿಡಿಯಲು ಪ್ರಯತ್ನಿಸುತ್ತಿದ್ದಾರೆ ಎಂಬ ಸಿದ್ದರಾಮಯ್ಯ ಅವರ ಆರೋಪಕ್ಕೆ ಶೋಭಾ ಕರಂದ್ಲಾಜೆ ಈ ರೀತಿ ತಿರುಗೇಟು ನೀಡಿದ್ದರು.
ರಾಜ್ಯ ಸರಕಾರ ಕೆಡವಲು ಅಮಿತ್ ಶಾ, ಮೋದಿ ನೇರ ಭಾಗಿ: ಸಿದ್ದರಾಮಯ್ಯ
ಶೋಭಾ ಕರಂದ್ಲಾಜೆ ಅವರ ಟ್ವೀಟ್ಗೆ ಪ್ರತಿಯಾಗಿ ಸಿದ್ದರಾಮಯ್ಯ 'ಪ್ರಜಾಪ್ರಭುತ್ವದ ಗಣಿತ'ದ ಪಾಠ ಮಾಡಿದ್ದಾರೆ. ಜತೆಗೆ 105 ಶಾಸಕರ ಬೆಂಬಲದೊಂದಿಗೆ ಸರ್ಕಾರ ರಚಿಸುವ ವಿಶ್ವಾಸವಿದ್ದರೆ ಮಾಡಿ. ಬಹುಮತ ಸಾಬೀತಾದರೆ ನಾವು ಸರ್ಕಾರದಿಂದ ಹೊರನಡೆಯುತ್ತೇವೆ ಎಂಬ ಸವಾಲನ್ನು ಕೂಡ ಸಿದ್ದರಾಮಯ್ಯ ಹಾಕಿದ್ದಾರೆ. ಜತೆಗೆ 'ಏಕ್ ಮಿನಿಟ್' ಎಂದು ಕೋಟ್ ಮಾಡಿ ಹೇಳುವ ಮೂಲಕ ಶೋಭಾ ಕರಂದ್ಲಾಜೆಯವರು ಲೋಕಸಭೆಯಲ್ಲಿ ಮಾಡಿದ ಹಿಂದಿ ಭಾಷಣವನ್ನು ಕೂಡ ಅಣಕಿಸಿದ್ದಾರೆ.
ಸರ್ಕಾರದಿಂದ ಹೊರನಡೆಯುತ್ತೇವೆ
105 ಶಾಸಕರ ಬಲದೊಂದಿಗೆ ಸರ್ಕಾರ ರಚಿಸಲು ನಿಮಗೆ ಆತ್ಮವಿಶ್ವಾಸವಿದ್ದರೆ ರಾಜ್ಯಪಾಲರಿಗೆ ನಿಮ್ಮ ಬಹುಮತ ಮಂಡನೆಯ ಹಕ್ಕನ್ನು ಸಲ್ಲಿಸಿ. ನಿಮ್ಮ ಹೇಳಿಕೆ ಸಾಬೀತಾದರೆ ನಾವು ಸರ್ಕಾರದಿಂದ ನಿರ್ಗಮಿಸುತ್ತೇವೆ ಎಂದು ಸಿದ್ದರಾಮಯ್ಯ ಸವಾಲು ಹಾಕಿದ್ದಾರೆ.
ಪ್ರಜಾಪ್ರಭುತ್ವದ ಗಣಿತ
ನನ್ನ ತಿಳಿವಳಿಕೆ ಪ್ರಕಾರ 113, 105ಕ್ಕಿಂತ ದೊಡ್ಡದು ಮತ್ತು ಸಂಪೂರ್ಣ ಆಯ್ಕೆಯಾದ ಕರ್ನಾಟಕ ವಿಧಾನಸಭೆಯಲ್ಲಿ ಯಾರಿಗಾದರೂ ಸರ್ಕಾರ ರಚಿಸಲು 113 ಸೀಟುಗಳು ಬೇಕು. ನಿಮ್ಮ ಜಾಣ ರಾಜಕೀಯದಿಂದ ಒಂದು ನಿಮಿಷ ಆಚೆ ಬನ್ನಿ. 'ಪ್ರಜಾಪ್ರಭುತ್ವದ ಗಣಿತ' ಕಲಿತುಕೊಳ್ಳಿ ಎಂದು ಸಿದ್ದರಾಮಯ್ಯ ಅವರು ಶೋಭಾ ಕರಂದ್ಲಾಜೆ ಅವರಿಗೆ ಟಾಂಗ್ ನೀಡಿದ್ದಾರೆ.
ರಾಜ್ಯದ ಜನಕ್ಕೆ ರಾಜಕೀಯ ದೊಂಬರಾಟ ನೋಡೋ ಅನಿವಾರ್ಯತೆ!
ಆನಂದ್ ಸಿಂಗ್, ರಮೇಶ್ ಕೈಗೆ ಸಿಗುತ್ತಿಲ್ಲ
ಮೈತ್ರಿ ಸರ್ಕಾರಕ್ಕೆ ಏನೂ ಆಗುವುದಿಲ್ಲ. ಆನಂದ್ ಸಿಂಗ್ ಒಬ್ಬರೇ ರಾಜೀನಾಮೆ ಕೊಟ್ಟಿರುವುದು. ಈ ರಾಜೀನಾಮೆ ಬಗ್ಗೆ ಸ್ಪೀಕರ್ ತೀರ್ಮಾನ ತೆಗೆದುಕೊಳ್ಳುತ್ತಾರೆ. ಯಾರೇ ರಾಜೀನಾಮೆ ಕೊಟ್ಟರೂ ಸರ್ಕಾರಕ್ಕೆ ಏನೂ ಆಗೊಲ್ಲ. ಆನಂದ್ ಸಿಂಗ್ ಮತ್ತು ರಮೇಶ್ ಜಾರಕಿಹೊಳಿ ಇಬ್ಬರೂ ಮಾತನಾಡಲು ಸಿಗುತ್ತಿಲ್ಲ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ನಿಮ್ಮ ಸಂಚು ಮುಚ್ಚಿಹಾಕಲು ನಾಟಕ
ಇತ್ತೀಚಿನ ರಾಜೀನಾಮೆ ನಾಟಕಗಳು ಬಿಜೆಪಿ ಕೃಪಾಪೋಷಿತ. ಜನರು ಬಹುಮತ ನೀಡದ ಕಾರಣ ಹತಾಶೆಯಿಂದ ಹಿಂಬಾಗಿಲಿನಿಂದ ಪ್ರವೇಶಿಸಲು ಅವರು ಪ್ರಯತ್ನಿಸುತ್ತಿದ್ದಾರೆ ಎಂಬ ಸಿದ್ದರಾಮಯ್ಯ ಹೇಳಿಕೆಗೆ ತಿರುಗೇಟು ನೀಡಿದ್ದ ಶೋಭಾ ಕರಂದ್ಲಾಜೆ, ಶಾಸಕರ ನಡುವೆ ಗುಂಪುಗಳನ್ನು ಸೃಷ್ಟಿಸುವುದರಲ್ಲಿ ಬಿಜಿಯಾಗಿರುವ ನೀವು, ನಿಮ್ಮ ಸಂಚನ್ನು ಮುಚ್ಚಿಹಾಕಲು ಬಿಜೆಪಿ ಮೇಲೆ ಅಪವಾದ ಹೊರಿಸುತ್ತಿದ್ದೀರಿ. ಮತದಾರರ ತೀರ್ಪನ್ನು ಗೌರವಿಸಲು ಕಲಿಯಿರಿ. ನಿಮ್ಮ ಸಮ್ಮಿಶ್ರ ಸರ್ಕಾರದ ವೈಫಲ್ಯಗಳಿಗೆ ಬಿಜೆಪಿಯನ್ನು ದೂಷಿಸುವ ಕೀಳು ರಾಜಕೀಯವನ್ನು ಕೈಬಿಡಿ ಎಂದು ಕಿಡಿಕಾರಿದ್ದರು.
ಮುಂದುವರೆದ ರಾಜೀನಾಮೆ ಪರ್ವ: ಮತ್ತೆ ಮೂವರು ಕೈ ಶಾಸಕರ ರಾಜೀನಾಮೆ?
ಸಾಮಾನ್ಯ ಜ್ಞಾನ ಕಳೆದುಕೊಂಡಿರಾ?
78, 105ಕ್ಕಿಂತ ಚಿಕ್ಕದು. ಜನರು ಬಿಜೆಪಿಗೆ ಬಹುಮತ ನೀಡಿದ್ದರೂ ಕಾಂಗ್ರೆಸ್ ಮತ್ತು ಜೆಡಿಎಸ್ ಅಪವಿತ್ರ ಮೈತ್ರಿಯ ಮೂಲಕ ಸರ್ಕಾರ ರಚಿಸಿವೆ. ಲೋಕಸಭೆ ಚುನಾವಣೆಯಲ್ಲಿ ಮುಗ್ಗರಿಸಿದ್ದು ನಿಮ್ಮ ಸಾಮಾನ್ಯ ಜ್ಞಾನ ಕಳೆದುಕೊಳ್ಳುವಂತೆ ಮಾಡುತ್ತಿದೆಯೇ? ಎಂದು ಶೋಭಾ ವ್ಯಂಗ್ಯವಾಡಿದ್ದಾರೆ.