ಮೀರ್ ಸಾದಿಕ್ ಮನೋಭಾವದ ಮಾಜಿ ಸಿಎಂ ಸಿದ್ದರಾಮಯ್ಯ!
ಬೆಂಗಳೂರು, ಫೆ. 18: ಶ್ರೀರಾಮ ಮಂದಿರ ನಿರ್ಮಾಣ ನಿಧಿ ಸಮರ್ಪಣಾ ಅಭಿಯಾನದ ವಿಚಾರದಲ್ಲಿ ಮಾಜಿ ಮುಖ್ಯಮಂತ್ರಿಗಳೂ ಸೇರಿದಂತೆ ಕೆಲವು ಅತೃಪ್ತ ಆತ್ಮಗಳು "ಮೊಸರಿನಲ್ಲಿ ಕಲ್ಲು ಹುಡುಕುವ" ವ್ಯರ್ಥ ಪ್ರಯತ್ನಕ್ಕೆ ಮುಂದಾಗಿರುವುದು ಖಂಡನೀಯ ಎಂದು ಬಿಜೆಪಿ ರಾಜ್ಯ ವಕ್ತಾರ ಕ್ಯಾ. ಗಣೇಶ್ ಕಾರ್ಣಿಕ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಂಗಳೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅಯೋಧ್ಯೆಯ ಶ್ರೀ ರಾಮ ಮಂದಿರದ ನಿರ್ಮಾಣ ಕಾರ್ಯಕ್ಕಾಗಿ ನಿಧಿ ಸಂಗ್ರಹ ಅಭಿಯಾನ ಅತ್ಯಂತ ಪಾರದರ್ಶಕವಾಗಿ ನಡೆದಿದೆ.
ಇದು ದೇಶದ ಬಹುತೇಕ ಎಲ್ಲಾ ವರ್ಗಗಳ ಎಲ್ಲಾ ಜನರನ್ನು ಸಂಮಪರ್ಕಿಸಿ ಜಾತಿ, ಮತ, ಭಾಷೆಗಳ ಹೆಸರಿನಲ್ಲಿ ಹರಿದು ಹಂಚಿ ಹೋಗಿರುವ ಸಮಾಜವನ್ನು ರಾಷ್ಟ್ರೀಯತೆಯ ಹೆಸರಿನಲ್ಲಿ ಜೋಡಿಸುವ ಒಂದು ಪ್ರಾಮಾಣಿಕ ಪ್ರಯತ್ನವಾಗಿದೆ ಎಂದರು. ಪ್ರಭು ಶ್ರೀ ರಾಮಚಂದ್ರ ಈ ದೇಶದ ರಾಷ್ಟ್ರೀಯ ಸಾಂಸ್ಕೃತಿಕ ಅಸ್ಮಿತೆಯ ಪ್ರತೀಕ. ನಮ್ಮ ಪರಂಪರೆಯ ಮೌಲ್ಯಗಳ ಸಂಕೇತ. ಅಯೋಧ್ಯಯಲ್ಲಿನ ಶ್ರೀ ರಾಮ ಮಂದಿರದ ನಿರ್ಮಾಣದಲ್ಲಿ ನಮ್ಮ ದೇಶದ ಸಾಂಸ್ಕೃತಿಕ ಪುನರುತ್ಥಾನದ ಸಂದೇಶವಿದೆ ಎಂದು ಹೇಳಿದ್ದಾರೆ.
ಓಲೈಕೆ ರಾಜಕಾರಣ
ಸದ್ಯದ ರಾಜಕೀಯ ಪರಿಸ್ಥಿತಿಯಲ್ಲಿ ಮೂಲೆಗುಂಪಾಗಿ ಕೆಲವೇ ಜಿಲ್ಲೆಗಳಲ್ಲಿ ಪ್ರಸ್ತುತವಾಗಿರುವ ಪಕ್ಷದ ಉಳಿವಿಗಾಗಿ ಒಂದು ವರ್ಗದ ಓಲೈಕೆಗಾಗಿ ರಾಜಕೀಯ ದುರುದ್ದೇಶದಿಂದ ನೀಡಿರುವ ಈ ಹೇಳಿಕೆ ಅವರ ಒಡೆದು ಆಳುವ ಮನಸ್ಸಿಗೆ ಕೈಗನ್ನಡಿಯಾಗಿದೆ. ರಾಜ್ಯದ ರಾಜಕೀಯ ಪರಿಸ್ಥಿತಿಯ ಸಾಂದರ್ಭಿಕ ಲಾಭ ಪಡೆದು ಎರಡು ಬಾರಿ ರಾಜ್ಯದ ಮುಖ್ಯಮಂತ್ರಿಯಾದವರು ಎನ್ನುವ ಒಂದೇ ಒಂದು ಕಾರಣಕ್ಕೆ ಕುಮಾರಸ್ವಾಮಿ ಅವರ ಬೇಜವಾಬ್ದಾರಿಯ ಹೇಳಿಕೆಯನ್ನು ಖಂಡಿಸುವ ಅವಶ್ಯಕತೆ ಇದೆ ಎಂದು ಗಣೇಶ್ ಕಾರ್ಣಿಕ್ ಹೇಳಿದರು.
ಈ ರೀತಿಯ ಬೇಜವಾಬ್ದಾರಿಯ ಹೇಳಿಕೆ ನೀಡಿ, ಕಣ್ಣೀರು ಸುರಿಸಿ ಇನ್ನೊಬ್ಬರ ಮೇಲೆ ಗೂಬೆ ಕೂರಿಸಿ ಪಲಾಯನ ಮಾಡುವುದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರ ಸ್ವಭಾವ. ಸಾರ್ವಜನಿಕ ಜೀವನದಲ್ಲಿ ಪಾರದರ್ಶಕತೆಯ ಪಾಠವನ್ನು ನಮ್ಮ ವಿಶ್ವ ಹಿಂದೂ ಪರಿಷತ್ತಿನ ಕಾರ್ಯಕರ್ತರು ಇವರಿಂದ ಕಲಿಯುವ ಅಗತ್ಯವಿಲ್ಲ ಎಂದು ತಿಳಿಸಿದರು.
ಭಂಡತನದ ವ್ಯಕ್ತಿತ್ವ
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ದ್ವೇಷಪೂರಿತ ಹೇಳಿಕೆ, ಸಮಾಜದಲ್ಲಿ ವಿಷಬೀಜವನ್ನು ಬಿತ್ತಿ ತಮ್ಮ ರಾಜಕೀಯ ಭವಿಷ್ಯವನ್ನು ಭದ್ರಗೊಳಿಸುವ ಉದ್ದೇಶದಿಂದ ಕೂಡಿರುವ ಒಂದು ವಿಕೃತಿ. ಹಿಂದಿನಿಂದಲೂ ಅವರು ಈ ರೀತಿ ನಡೆದುಕೊಂಡು ಸಮುದಾಯಗಳ ನಡುವೆ ವೈಷಮ್ಯ ಮೂಡಿಸಿ ತಮ್ಮ ರಾಜಕೀಯ ಭವಿಷ್ಯ ರೂಪಿಸಿರುವುದು ಸ್ಪಷ್ಟವಾಗಿದೆ. ಸಮಾಜದ ಕೆಲವು ವರ್ಗಗಳ ಬಗ್ಗೆ ಅವರಿಗಿರುವ ದ್ವೇಷ ಮತ್ತು ಅಸಹನೆ, ಓಲೈಸುವ ರಾಜಕಾರಣ, ತಮಗೆ ಅನುಕೂಲವೆನಿಸದಿದ್ದಲ್ಲಿ, ಸರ್ವೋಚ್ಚ ನ್ಯಾಯಾಲಯದ ತೀರ್ಪನ್ನೂ ಧಿಕ್ಕರಿಸುವ ಭಂಡತನ ಸಿದ್ದರಾಮಯ್ಯ ಅವರ ವ್ಯಕ್ತಿತ್ವದ ವಿಶೇಷ. ಇವರಿಂದ ಇನ್ನೇನನ್ನು ನಿರೀಕ್ಷಿಸಲು ಸಾಧ್ಯ. ಎಂದು ಅವರು ಪ್ರಶ್ನಿಸಿದ್ದಾರೆ.
ಶತಮಾನಗಳ ಸಮಸ್ಯೆ
ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣವಾಗುತ್ತಿರುವುದು ವಿವಾದಿತ ಸ್ಥಳದಲ್ಲಿ ಎಂಬ ನಿಮ್ಮ ಹೇಳಿಕೆ, ಸುಪ್ರೀಂ ಕೋರ್ಟ್ ನೀಡಿರುವ ತೀರ್ಪನ್ನು ಧಿಕ್ಕರಿಸುವ ವರ್ತನೆಯಾಗಿದೆ. ಕಾನೂನು ಪದವಿ ಪಡೆದ ರಾಜ್ಯದ ಮಾಜಿ ಮುಖ್ಯಮಂತ್ರಿಗಳಾದ ನಿಮ್ಮಿಂದ ಇದನ್ನು ನಿರೀಕ್ಷಿಸಿರಲಿಲ್ಲ. ನಿಮ್ಮ ಈ ಮಾನಸಿಕತೆ ಖಂಡನೀಯ.
ರಾಮ ಜನ್ಮಭೂಮಿಯ ಕುರಿತಾದ ಸುಪ್ರೀಂ ಕೋರ್ಟ್ ತೀರ್ಪು ಈ ಕುರಿತಾದ ಶತಮಾನಗಳ ಸಮಸ್ಯೆಯನ್ನು ಬಗೆಹರಿಸಿದ್ದು ದೇಶದ ಜನತೆ ಈ ತೀರ್ಪನ್ನು ಅತ್ಯಂತ ಗೌರವದಿಂದ ಸ್ವೀಕರಿಸಿ ಅತ್ಯಂತ ಜವಾಬ್ದಾರಿಯಿಂದ ನಡೆದುಕೊಂಡಿರುವುದು ನಮ್ಮ ಪರಂಪರೆಗೆ ಇನ್ನಷ್ಟು ಘನತೆ ತಂದಿದ್ದು ಸಮಾಜದಲ್ಲಿ ಶಾಂತಿ ಸುವ್ಯವಸ್ಥೆಗೆ ನಾಂದಿ ಹಾಡಿದೆ. ಈ ದೇಶವನ್ನು ಪ್ರೀತಿಸುವ, ಗೌರವಿಸುವ ಮತ್ತು ಆರಾಧಿಸುವ ಬಹುದೊಡ್ಡ ಸಮಾಜ ನಿಮ್ಮ ಈ ಒಡೆದು ಆಳುವ ಮಾನಸಿಕತೆಯನ್ನು ಚೆನ್ನಾಗಿ ಅರ್ಥೈಸಿಕೊಂಡಿದೆ ಎಂದರು.
Recommended Video
ಮೀರ್ ಸಾದಿಕ್
ಈ ಸಂದರ್ಭದಲ್ಲಿ ರಾಷ್ಟ್ರದ ಮುಖ್ಯವಾಹಿನಿಯೊಂದಿಗೆ ಕೈ ಜೋಡಿಸಬೇಕು. ಅದರ ಬದಲು ಈ ರೀತಿ ಒಡಕು ಮೂಡಿಸುವ ಈ ದುಷ್ಕೃತ್ಯ ಖಂಡನೀಯ. ನಿಮ್ಮ "ಮೀರ್ ಸಾದಿಕ್" ಮನೋಭಾವಕ್ಕೆ ತಕ್ಕ ಶಾಸ್ತಿ ಮಾಡುವ ಕಾಲ ಕೂಡಿ ಬರಲಿದೆ. ಈ ದುರಹಂಕಾರದ ಮತ್ತು ಅತಿರೇಕದ ವರ್ತನೆಯನ್ನು ಬಿಜೆಪಿ ಖಂಡಿಸುತ್ತದೆ ಎಂದು ಕಾರ್ಣಿಕ್ ಹೇಳಿದ್ದಾರೆ. ರಾಮ ಮಂದಿರ ನಿರ್ಮಾಣ ಕುರಿತು ಮಾತನಾಡಿರುವ ಮಾಜಿ ಸಿಎಂಗಳಾದ ಸಿದ್ದರಾಮಯ್ಯ ಹಾಗೂ ಎಚ್ಡಿ ಕುಮಾರಸ್ವಾಮಿ ಅವರು ತಕ್ಷಣ ನಾಡಿನ ಜನತೆಯ ಕ್ಷಮೆ ಯಾಚಿಸಬೇಕೆಂದು ಕ್ಯಾ. ಕಾರ್ಣಿಕ್ ಅವರು ಇದೇ ಸಂದರ್ಭದಲ್ಲಿ ಆಗ್ರಹಿಸಿದ್ದಾರೆ.