ಕುರುಬ ಸಮುದಾಯದ ಭಾರೀ ಸಮಾವೇಶ: 'ಇಲ್ಲ..ಇಲ್ಲ.. ನಮ್ಮ ಪಾಲಿಗೆ ಸಿದ್ದರಾಮಯ್ಯ ಇನ್ನಿಲ್ಲ..' ಘೋಷಣೆ
ಮೀಸಲಾತಿಗೆ ಒತ್ತಾಯಿಸಿ ಕಾಗಿನೆಲೆಯಿಂದ ಆಗಮಿಸಿದ್ದ ಕುರುಬ ಸಮುದಾಯದ ಪಾದಯಾತ್ರೆ, ರಾಜಧಾನಿ ಬೆಂಗಳೂರಿನ ಬಿಐಇಸಿ ಆವರಣದಲ್ಲಿ ಭರ್ಜರಿ ಸಮಾವೇಶದ ಮೂಲಕ ಮುಕ್ತಾಯಗೊಂಡಿದೆ. ಈ ಸಮಾವೇಶದಲ್ಲಿ ರಾಜ್ಯದ ಮೂಲೆಮೂಲೆಗಳಿಂದ ಸುಮಾರು 5-7ಲಕ್ಷ ಜನ ಭಾಗವಹಿಸಿದ್ದರು.
ಪಾದಪಾತ್ರೆ ಆರಂಭದಿಂದ ಸಮಾವೇಶದವರೆಗೂ ಸಮುದಾಯದ ಪ್ರಮುಖ ಮುಖಂಡ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಗೈರಾದರು. ಆ ಮೂಲಕ, ಈ ಸಮಾವೇಶ ರಾಜಕೀಯ ಪ್ರೇರಿತ ಎನ್ನುವ ತಮ್ಮ ನಿಲುವಿನಿಂದ ಸಿದ್ದರಾಮಯ್ಯ ಹಿಂದಕ್ಕೆ ಸರಿಯಲಿಲ್ಲ.
ಕುರುಬರ ಎಸ್ಟಿ ಹೋರಾಟ ಪಾದಯಾತ್ರೆ ಅಂತ್ಯ ; ಸರ್ಕಾರಕ್ಕೆ ಮನವಿ ಸಲ್ಲಿಕೆ
ಪಾದಯಾತ್ರೆ ನಡೆಸುವ ನಿರ್ಧಾರಕ್ಕೆ ಮುನ್ನ ನನ್ನ ಬಳಿ ಮಾತುಕತೆ ನಡೆಸಿಲ್ಲ ಎನ್ನುವ ಸಿದ್ದರಾಮಯ್ಯನವರ ಸಿಟ್ಟು, ಈ ಹೋರಾಟ ಆರ್ ಎಸ್ ಎಸ್ ಪ್ರೇರಿತ ಎನ್ನುವವರೆಗೂ ಬಂತು. ಈ ವಿಚಾರದಲ್ಲಿ ಸಚಿವ ಕೆ.ಎಸ್.ಈಶ್ವರಪ್ಪ ಬಹಿರಂಗವಾಗಿ ಭಾಗವಹಿಸುವಂತೆ ಒತ್ತಾಯಿಸಿದರೂ ಸಿದ್ದರಾಮಯ್ಯನವರು ಅದಕ್ಕೆ ಓಗೂಡಲಿಲ್ಲ.
ಎಸ್ಟಿ ಹೋರಾಟಕ್ಕೆ ಅಭೂತಪೂರ್ವ ಬೆಂಬಲ ಸಿಕ್ಕಿದೆ; ಶ್ರೀಗಳು
ನಿರಂಜನಾನಂದ ಪುರಿ ಶ್ರೀಗಳ ನೇತೃತ್ವದಲ್ಲಿ ಜನವರಿ ಹದಿನೈದರಿಂದ ಕಾಗಿನೆಲೆಯಿಂದ ಆರಂಭವಾದ ಈ ಪಾದಯಾತ್ರೆ ನಂತರ ಮುಕ್ತಾಯದ ಸಮಾವೇಶದ ಮೂಲಕ ಕುರುಬ ಸಮುದಾಯ ಭರ್ಜರಿಯಾಗಿ ತಮ್ಮ ಶಕ್ತಿ ಪ್ರದರ್ಶನವನ್ನೇನೋ ಮಾಡಿತು. ಆದರೆ, ಈಶ್ವರಪ್ಪ-ಸಿದ್ದರಾಮಯ್ಯನವರನ್ನು ಒಂದೇ ವೇದಿಕೆಗೆ ತರುವ ಪ್ರಯತ್ನ ಮಾತ್ರ ಕೈಗೂಡಲಿಲ್ಲ. ಅದಕ್ಕೆ ಕಾರಣ ಇಲ್ಲದಿಲ್ಲ..
ಸಂಗೊಳ್ಳಿ ರಾಯಣ್ಣ ಬ್ರಿಗೇಡ್
ಈ ಹಿಂದೆ ತಮ್ಮ ಸರಕಾರ ಅಧಿಕಾರದಲ್ಲಿದ್ದಾಗಲೇ ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಅನ್ನು ಈಶ್ವರಪ್ಪ ಹುಟ್ಟುಹಾಕಿ ನಂತರ ಅದನ್ನು ಮರೆತಿದ್ದರು. ಅದೇ ರೀತಿ ಈಗಿನ ಕುರುಬ ಸಮುದಾಯದ ಹೋರಾಟ. ಕುರುಬ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕೆನ್ನುವ ಕೂಗು ಇಂದು ನಿನ್ನೆಯದಲ್ಲ. ಆದರೆ, ಈಗ ಈಶ್ವರಪ್ಪ ಹೋರಾಟದ ವೇಗ ಹೆಚ್ಚಿಸುವ ಹುಮ್ಮಸ್ಸು ತೋರುತ್ತಿರುವುದರಿಂದ ಹಿಂದೆ, ತಮ್ಮ ಅಸ್ತಿತ್ವ ಬಲಪಡಿಸಿಕೊಳ್ಳಲಾ ಎನ್ನುವ ಅನುಮಾನದ ಘಾಟು ಬರಲಾರಂಭಿಸಿದೆ.
ಈಶ್ವರಪ್ಪ ಪುತ್ರ ಕಾಂತೇಶ್
ಸಂಪುಟ ವಿಸ್ತರಣೆಯ ವೇಳೆ ಈಶ್ವರಪ್ಪ ಅವರ ತಲೆದಂಡ ಆಗಬಹುದು ಎನ್ನುವ ಮಾತು ಕೇಳಿಬರುತ್ತಿತ್ತು. ಹಾಗಾಗಿ ಈ ಸಮುದಾಯದ ಹೋರಾಟಕ್ಕೆ ಅವರು ವಿಶೇಷ ಕಾಳಜಿ ತೋರಿದರು. ಜೊತೆಗೆ, ಅವರ ಪುತ್ರ ಕಾಂತೇಶ್ ಅವರನ್ನು ಸಮುದಾಯದ ನಾಯಕರನ್ನಾಗಿ ಗುರುತಿಸಿ, ರಾಜ್ಯ ರಾಜಕೀಯದಲ್ಲೂ ಮುನ್ನಲೆಗೆ ತರಲು ಈಶ್ವರಪ್ಪ ಈ ವೇದಿಕೆ ಬಳಸಿಕೊಳ್ಳುತ್ತಿದ್ದಾರೆ ಎನ್ನುವ ಮಾತೂ ಕೇಳಿಬರುತ್ತಿದೆ.
ಇಲ್ಲ..ಇಲ್ಲ.. ನಮ್ಮ ಪಾಲಿಗೆ ಸಿದ್ದರಾಮಯ್ಯ ಇನ್ನಿಲ್ಲ
ಬೆಂಗಳೂರಿನಲ್ಲಿ ನಡೆದ ಸಮಾವೇಶದಲ್ಲಿ ಸಿದ್ದರಾಮಯ್ಯನವರ ಅನುಪಸ್ಥಿತಿ ಎದ್ದು ಕಾಣುತ್ತಿತ್ತು. ಎಚ್.ವಿಶ್ವನಾಥ್ ಮತ್ತು ಈಶ್ವರಪ್ಪನವರು ಪರೋಕ್ಷವಾಗಿ ತಮ್ಮ ಭಾಷಣದಲ್ಲಿ ಉಲ್ಲೇಖಿಸಿದರು. ಸಿದ್ದರಾಮಯ್ಯ ಸಮಾವೇಶದಲ್ಲಿ ಗೈರಾಗಿದ್ದಕ್ಕೆ 'ಇಲ್ಲ..ಇಲ್ಲ.. ನಮ್ಮ ಪಾಲಿಗೆ ಸಿದ್ದರಾಮಯ್ಯ ಇನ್ನಿಲ್ಲ..' ಎನ್ನುವ ಘೋಷಣೆಯೂ ಕೇಳಿ ಬಂತು. ಸಿದ್ದರಾಮಯ್ಯನವರ ಜೊತೆಗೆ ಅವರ ಆಪ್ತ ಹೆಬ್ಬಾಳದ ಶಾಸಕ ಬೈರತಿ ಸುರೇಶ್ ಕೂಡಾ ಗೈರಾಗಿದ್ದರು.
Recommended Video
ಸಿದ್ದರಾಮಯ್ಯ ವರ್ಸಸ್ ಈಶ್ವರಪ್ಪ
ಸಮುದಾಯದ ಈ ಬೃಹತ್ ಹೋರಾಟದ ಯಶಸ್ಸನ್ನು ಮುಂದಿನ ದಿನಗಳಲ್ಲಿ ಈಶ್ವರಪ್ಪ ಯಾವರೀತಿ ಪಡೆದುಕೊಳ್ಳಲಿದ್ದಾರೆ ಎನ್ನುವುದು ಒಂದು ಕಡೆಯಾದರೆ. ಈ ಹೋರಾಟದಲ್ಲಿ ಭಾಗಿಯಾಗದೇ ಇದ್ದದ್ದು ಸಿದ್ದರಾಮಯ್ಯನವರಿಗೆ ಮುಂದಿನ ದಿನಗಳಲ್ಲಿ ಹಿನ್ನಡೆಯಾಗಲಿದೆಯಾ ಎನ್ನುವುದನ್ನು ಕಾದು ನೋಡಬೇಕಿದೆ. ಒಟ್ಟಿನಲ್ಲಿ, ಕುರುಬರ ಈ ಹೋರಾಟವನ್ನು ಕೆಲವರಂತೂ ಪ್ರತಿಷ್ಠೆಯಾಗಿ ತೆಗೆದುಕೊಂಡರು.