ಸಿದ್ದರಾಮಯ್ಯಗೆ 75 ವರ್ಷ, ಇನ್ನೊಮ್ಮೆ ಮುಖ್ಯಮಂತ್ರಿ ಘೋಷವಾಕ್ಯ..!
ಬೆಂಗಳೂರು, ಜೂನ್ 28: ಕರ್ನಾಟಕ ರಾಜ್ಯದಲ್ಲಿ ಚುನಾವಣೆಯ ಎದುರಾಗಲು ಕೆಲವೇ ಕೆಲವು ತಿಂಗಳು ಮಾತ್ರ ಉಳಿದಿವೆ. ರಾಜ್ಯದ ಮುಂದಿನ ಮುಖ್ಯಮಂತ್ರಿ ಯಾರು ಅನ್ನೋದು ಚುನಾವಣೆ ಬಳಿಕ ನಿರ್ಧಾರವಾಗಲಿದೆ. ಆದರೆ ರಾಜಕೀಯವಾಗಿ ಮಹತ್ವದ ಸಂದೇಶಗಳನ್ನು ಜನತೆಗೆ ಮತ್ತು ಪಕ್ಷದ ಹೈಕಮಾಂಡ್ಗೆ ತಲುಪಿಸುವ ಕೆಲಸವಾಗುತ್ತಿರುತ್ತದೆ. ಇದೀಗ ಸಿದ್ದರಾಮಯ್ಯ ಅಭಿಮಾನಿಗಳ ತನ್ನ ನಾಯಕನಿಗಿರು ಜನ ಮನ್ನಣೆಯನ್ನು ಬೃಹತ್ ಸಮಾವೇಶದ ಮೂಲಕ ಸಾರಲು ಸಜ್ಜಾಗುತ್ತಿದ್ದಾರೆ.
ಸಿದ್ದರಾಮಯ್ಯ ರಾಜ್ಯ ಕಂಡ ಅದ್ಭುತ ಮುಖ್ಯಮಂತ್ರಿಗಳಲ್ಲೊಬ್ಬರು. ಆಗಸ್ಟ್ 12ಕ್ಕೆ ಸಿದ್ದರಾಮಯ್ಯರಿಗೆ 75 ವರ್ಷಕ್ಕೆ ಕಾಲಿಡಲಿದ್ದಾರೆ. ಸಿದ್ದರಾಮಯ್ಯರ ಹುಟ್ಟುಹಬ್ಬವನ್ನು ಅಮೃತ ಮಹೋತ್ಸವವನ್ನಾಗಿ ದಾವಣಗೆರೆಯಲ್ಲಿ ಅದ್ಧೂರಿಯಾಗಿ ಆಚರಿಸಲು ತೀರ್ಮಾನಿಸಲಾಗಿದೆ. ಈ ಕಾರ್ಯಕ್ರಮಕ್ಕೆ ರಾಜ್ಯದ ಮೂಲೆ ಮೂಲೆಗಳಿಂದಲು ಅಭಿಮಾನಿಗಳು ಆಗಮಿಸುವ ನಿರೀಕ್ಷೆಯನ್ನು ಹೊಂದಲಾಗಿದೆ.
ಅಮೃತ ಮಹೋತ್ಸವ ಕಾರ್ಯಕ್ರಮದಲ್ಲಿ 5 ಲಕ್ಷ ಜನರನ್ನು ಸೇರಿಸುವ ನಿರೀಕ್ಷೆಯನ್ನು ಹೊಂದಲಾಗಿದೆ. ಅದ್ದೂರಿ ಕಾರ್ಯಕ್ರಮವನ್ನು ಆಯೋಜಿಸಿ ಕಾಂಗ್ರೆಸ್ ವರಿಷ್ಠ ರಾಹುಲ್ ಗಾಂಧಿಯನ್ನು ಕರೆಸಿ ಕಾರ್ಯಕ್ರಮವನ್ನು ಉದ್ಘಾಟಿವ ಯೋಜನೆಯನ್ನು ಸಿದ್ದಾಮಯ್ಯ ಅಭಿಮಾನಿಗಳು ಹೊಂದಿದ್ದಾರೆ.
ಸಿದ್ದರಾಮಯ್ಯರಿಗೆ ಅಭಿನಂದಿಸುವ ಸಲುವಾಗಿಯೇ 'ಸಿದ್ದರಾಮಯ್ಯ 75 ಅಭಿನಂದನಾ ಸಮಿತಿ'ಯನ್ನು ರಚನೆ ಮಾಡಿಕೊಳ್ಳಲಾಗಿದೆ. ಈ ಸಮಿತಿಯಲ್ಲಿ ಹಿರಿಯ ನಾಯಕ ಆರ್ ವಿ ದೇಶಪಾಂಡೆ ಗೌರವಾಧ್ಯಕ್ಷ, ಕೆಎನ್ ರಾಜಣ್ಣ ಅಧ್ಯಕ್ಷ, ಬಸವರಾಜ ರಾಯರೆಡ್ಡಿ ಪ್ರಧಾನ ಕಾರ್ಯದರ್ಶಿಯಾಗಿದ್ದಾರೆ. ಶಾಸಕ ಬೈರತಿ ಸುರೇಶ್ ಖಜಾಂಚಿಯಾಗಿದ್ದಾರೆ. ಇನ್ನು ಈ ಸಮಿತಿಯಲ್ಲಿ ಶಾಸಕರು, ಮಾಜಿ ಶಾಸಕರು, ಮಾಜಿ ಸಚಿವರು , ಸಂಸದರು ಸೇರಿದಂತೆ 129 ಮಂದಿ ಸದಸ್ಯರು ಇದ್ದಾರೆ ಎನ್ನಲಾಗುತ್ತಿದೆ.
ಚಿರಂಚೀವಿ ಸ್ಟೈಲ್ನಲ್ಲಿ ಜನ ಸೇರಿಸೋ ಯತ್ನ
ದಾವಣಗೆರೆಯಲ್ಲಿ ಬೃಹತ್ ಅಭಿಮಾನಿಗಳನ್ನು ಸೇರಿಸುವ ಮೂಲಕ ರಾಜಕೀಯ ಅಖಾಡದಲ್ಲಿ ಸಿದ್ದರಮಯ್ಯರ ಶಕ್ತಿ ಪ್ರದರ್ಶನದ ವೇದಿಯನ್ನಾಗಿ ರೂಪಿಸಲು ಸಿದ್ದರಾಮಯ್ಯ ಅಭಿಮಾನಿಗಳು ಆಲೋಚಿಸಿದ್ದಾರೆ. ತೆಲಗು ಸೂಪರ್ ಸ್ಟಾರ್ ಚಿರಂಜೀವಿ ಪ್ರಜಾರಾಜ್ಯಂ ಘೋಷಿಸುವ ವೇಳೆಯಲ್ಲಿ ಸುಮಾರು ಐದು ಲಕ್ಷಕ್ಕೂ ಹೆಚ್ಚು ಜನರನ್ನು ಸೇರಿಸಿದ್ದರು. ಅದೇ ಮಾದರಿಯಲ್ಲಿ ಸಿದ್ದರಾಮಯ್ಯ ಅಮೃತ ಮಹೋತ್ಸವಕ್ಕೆ ಜನರನ್ನು ಸೇರಿಸುವ ಭೂಮಿಕೆಯನ್ನು ಸಿದ್ದಪಡಿಸಲಾಗುತ್ತಿದೆ. ರಾಜಕೀಯವಾಗಿ ಕೋಮುವಾದಿಗಳನ್ನು ಎದುರಿಸುವ ಶಕ್ತಿಯಿರುವುದು ಸಿದ್ದರಾಮಯ್ಯಗೆ ಮಾತ್ರವೇ ಎಂಬುದನ್ನು ಈ ಮೂಲಕ ಸಾರುವ ಯತ್ನವನ್ನು ಅಭಿಮಾನಿಗಳು ಮಾಡಲಿದ್ದು. ರಾಜ್ಯದ ಹಲವಾರು ಭಾಗದಿಂದ ಜನರನ್ನು ಕರೆಸಲು ಮತ್ತು ಪ್ರಗತಿಪರರು , ಸಾಹಿತಿಗಳು , ವಿದ್ವಾಂಸರು ಸೇರಿದಂತೆ ರಾಜ್ಯದ ಹಲವು ಗಣ್ಯರಿಗೆ ಆಹ್ವಾನ ನೀಡಲಿದ್ದಾರೆ.
ಶಾಮನೂರು ಶಿವಶಂಕರಪ್ಪಗೆ ಸೇರಿದ ಸ್ಥಳದಲ್ಲಿ ಸಮಾವೇಶ
ಸಿದ್ದರಾಮಯ್ಯರ ಅಮೃತ ಮಹೋತ್ಸವವನ್ನು ಮಾಡಲು ಕೋಟ್ಯಂತರ ರೂಪಾಯಿ ಹಣವೂ ವೆಚ್ಚವಾಗಲಿದೆ. ಸಿದ್ದರಾಮಯ್ಯರ ಅಭಿಮಾನಿಗಳು, ಶಾಸಕರು, ಸಂಸದರು, ಮಾಜಿ ಶಾಸಕರು, ಮಾಜಿ ಸಂಸದರು ಸೇರಿದಂತೆ ಹಿತೈಶಿಗಳು ಹಣವನ್ನು ಖರ್ಚು ಮಾಡಲಿದ್ದಾರೆ. ಬಸವರಾಜ ರಾಯರೆಡ್ಡಿ ಸೇರಿ ತಂಡದ ಇತರ ಸದಸ್ಯರು ಸಮಾವೇಶಕ್ಕೆ ಬರದ ಸಿದ್ದತೆಯನ್ನು ಮಾಡಿಕೊಳ್ಳುತ್ತಿದ್ದಾರೆ. ದಾವಣಗೆರೆ ಹರಿಹರದಲ್ಲಿರುವ ಶಾಮನೂರು ಶಿವಶಂಕರಪ್ಪಗೆ ಸೇರಿದ ವಿಶಾಲ ಸ್ಥಳದಲ್ಲಿ ಸಮಾವೇಶ ನಡೆಸಲು ತಯಾರಿಯನ್ನು ಮಾಡಲಾಗುತ್ತಿದೆ ಎನ್ನಲಾಗುತ್ತಿದೆ.
ಅಭಿಮಾನಿಗಳೊಂದಿಗೆ ಪಕ್ಷವೂ ಕೈ ಜೋಡಿಸುತ್ತಾ..?
ಸಿದ್ದರಾಮಯ್ಯ ಅಭಿಮಾನಿಗಳು ನಡೆಸುವ ಅಮೃತ ಮಹೋತ್ಸವ ಕಾರ್ಯಕ್ರಮವನ್ನು ಪಕ್ಷದ ಕಾರ್ಯಕ್ರಮವನ್ನಾಗಿಸಲು ಯತ್ನವು ನಡೆಯುತ್ತಿದೆ. ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿಯಿಂದ ಅಮೃತ ಮಹೋತ್ಸವವನ್ನು ಉದ್ಘಾಟನೆಯನ್ನು ಮಾಡಿಸುವ ಮೂಲಕ ಪಕ್ಷದ ಚೌಕಟ್ಟನ್ನು ತರಲು ನಿರ್ಧರಿಸಲಾಗಿದೆ. ರಾಹುಲ್ ಗಾಂಧಿಯ ಜೊತೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ ವೇಣುಗೋಪಾಲ್, ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ, ಡಿಕೆ ಶಿವಕುಮಾರ್, ಮಲ್ಲಿಕಾರ್ಜುನ ಖರ್ಗೆ, ಬಿಕೆ ಹರಿಪ್ರಸಾದ್ ಸೇರಿದಂತೆ ಪ್ರಮುಂಡರಿಗೂ ಆಹ್ವಾನವನ್ನು ನೀಡಲಾಗುತ್ತಿದೆ. ಈ ವೇದಿಯ ಮೂಲಕ ರಾಜ್ಯದ ಜನತೆಗೆ ಸ್ಪಷ್ಟವಾದ ಸಂದೇಶವನ್ನು ನೀಡಲು ಸಿದ್ದರಾಮಯ್ಯ ತಂಡ ಸಜ್ಜುಗೊಳ್ಳುತ್ತಿದೆ.
ಸಿದ್ದರಾಮಯ್ಯ ನಾಯಕತ್ವ ಸಂಭ್ರಮಿಸುವ ಸಮಾರಂಭ
"ಸಿದ್ದರಾಮಯ್ಯನವರೇ ಹಲವಾರು ವೇದಿಕೆಗಳಲ್ಲಿ ನನ್ನ ಹುಟ್ಟಿದ ದಿನಾಂಕವೇ ತಿಳಿದಿಲ್ಲ ಎಂದು ತಿಳಿಸಿದ್ದಾರೆ. ಶಾಲಾ ಶಿಕ್ಷಕರು ನೀಡಿರುವ ದಿನಾಂಕವೇ ಹುಟ್ಟಿದ ದಿನಾಂಕವಾಗಿದೆ. ನಾನಾಗಲಿ ಸಿದ್ದರಾಮಯ್ಯನವರಾಗಲಿ ಹುಟ್ಟುಹಬ್ಬ ಆಚರಿಸುವ ಮನಸ್ಸಿನವರಲ್ಲ. ಸಿದ್ದರಾಮಯ್ಯನವರ ವ್ಯಕ್ತಿತ್ವ ಮೇರು ವ್ಯಕ್ತಿತ್ವ. ಇಂತಹ ನಾಯಕರು ರಾಜಕಾರಣದಲ್ಲಿ 50 ವರ್ಷವನ್ನು ಪೂರೈಸಿದ್ದಾರೆ. 75ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಸಿದ್ದರಾಮಯ್ಯನವರ ನಾಯಕತ್ವವನ್ನು ಸಂಭ್ರಮಿಸುವ ಸಮಾರಂಭ ನಡೆಸಬೇಕು ಎಂಬ ಚಿಂತನೆ ಗೆಳೆಯರ ಬಳಿಯಿದೆ. ಆದರೆ ಇನ್ನು ಯಾವುದು ಅಂತಿಮವಾಗಿಲ್ಲ," ಎಂದು ಮಾಜಿ ಸಚಿವ ಎಚ್ಸಿ ಮಹದೇವಪ್ಪ ಹೇಳಿದ್ದಾರೆ.