ರಾಜ್ಯ ರಾಜಕೀಯದಲ್ಲಿ ತಲ್ಲಣ ಸೃಷ್ಟಿಸಲಿದೆ ಸಿದ್ದು ಅಮೃತ ಮಹೋತ್ಸವ
ಬೆಂಗಳೂರು, ಜು. 11: ಜೀವನದಲ್ಲಿ ಎಂದೂ ಹುಟ್ಟುಹಬ್ಬವನ್ನು ಅಚರಿಸಿಕೊಳ್ಳದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಸಲ ಅದ್ಧೂರಿ 'ಹುಟ್ಟುಹಬ್ಬ'ದಲ್ಲಿ ಆಚರಿಸಿಕೊಳ್ಳಲಿದ್ದಾರೆ. ಸಿದ್ದರಾಮಯ್ಯ ಬೆಂಬಲಿಗ ನಾಯಕರು ದಾವಣಗೆರೆಯಲ್ಲಿ ಆ. 03 ರಂದು ಆಯೋಜಿಸಿರುವ ಈ ಹುಟ್ಟುಹಬ್ಬ ಸಿದ್ದರಾಮಯ್ಯ ಅವರ ಪಕ್ಷದ ಒಳಗಿನ ವಿರೋಧಿಗಳಿಗೂ ಹಾಗೂ ಎದುರಾಳಿ ಪಕ್ಷಕ್ಕೆ ದೊಡ್ಡ ಸಂದೇಶ ರವಾನೆ ಮಾಡಲಿದೆ. ಈ ಕಾರ್ಯಕ್ರಮ 'ಹುಲಿಯ ಸಿಎಂ ಹುದ್ದೆ ಕ್ಲಿಯರ್' ಮಾಡಲಿದೆ ಎಂದೇ ರಾಜಕೀಯ ವಲಯದಲ್ಲಿ ವಿಶ್ಲೇಷಣೆ ಮಾಡಲಾಗುತ್ತಿದೆ. 75 ವಸಂತಕ್ಕೆ ಕಾಲಿಡುತ್ತಿರುವ ಸಿದ್ದರಾಮಯ್ಯ ಅವರ ಅಮೃತ ಮಹೋತ್ಸವ ಹಾಗೂ ರಾಜ್ಯ ರಾಜಕೀಯ ವಲಯದ ತಲ್ಲಣಗಳ ಸಮಗ್ರ ವಿವರ ಇಲ್ಲಿದೆ.
ರಾಜ್ಯದಲ್ಲಿ 2023 ಕ್ಕೆ ವಿಧಾನಸಭೆ ಚುನಾವಣೆ ಎದುರಾಗಲಿದೆ. ಅಪರೇಷನ್ ಕಮಲದ ಮೂಲಕ ಸಿಎಂ ಆದ ಯಡಿಯೂರಪ್ಪ ಅವರು ಮಾಜಿಯಾಗಿ ಬಿಜೆಪಿ ಮೇಲೆ ಮುನಿಸಿಕೊಂಡಿದ್ದಾರೆ. ವಿಜಯೇಂದ್ರ ವಿಚಾರದಲ್ಲಿ ಬಿಜೆಪಿ ನಡೆದುಕೊಂಡಿರುವ ವಿಚಾರ ಯಡಿಯೂರಪ್ಪ ಮರೆತಂತೆ ಕಾಣುತ್ತಿಲ್ಲ. ಸದ್ಯ ಮೌನದಲ್ಲಿರುವ ಯಡಿಯೂರಪ್ಪ ಯಾವ ಕ್ಷಣ ಬೆಕಾದರೂ ತನ್ನ ಸಿಟ್ಟು ಹೊರ ಹಾಕಬಹುದು. ಇನ್ನು ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರ 40 % ಕಮೀಷನ್ , ಅಸಮರ್ಥ ಆಡಳಿತ, ಭ್ರಷ್ಟಾಚಾರ ಆರೋಪಕ್ಕೆ ಗುರಿಯಾಗಿದೆ. ಇದನ್ನು ಬಳಿಸಿಕೊಂಡು ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರ ಚುಕ್ಕಾಣಿ ಹಿಡಿಯುವಂತಹ ವಾತಾವರಣ ನಿರ್ಮಿಸಿದೆ. ಇದು ಬಿಜೆಪಿ ಪಕ್ಷದ ಪರಿಸ್ಥಿತಿಯಾದರೆ, ಕಾಂಗ್ರೆಸ್ ಪಕ್ಷದ ಅಂತರಿಕ ಬೆಳವಣಿಗೆಗಳು ಸಿದ್ದರಾಮಯ್ಯ ನಾಯಕತ್ವಕ್ಕೆ ಅನುಕೂಲಕರ ವಾತಾವರಣ ನಿರ್ಮಾಣಮಾಡಿದೆ. ಈ ಸಂದರ್ಭದಲ್ಲಿಯೇ ಹುಲಿಯಾ ಅಮೃತ ಮಹೋತ್ಸವ ನಡೆಯುತ್ತಿರುವುದು ರಾಜಕೀಯ ವಲಯದಲ್ಲಿ ಬಾರೀ ಸಂಚಲನ ಹುಟ್ಟು ಹಾಕಿದೆ.
ಕೈ ಪಕ್ಷದಲ್ಲಿ ಸಿದ್ದು ನಾಯಕತ್ವದತ್ತ ನಾಯಕರು:
ಕಾಂಗ್ರೆಸ್ ಪಕ್ಷ ತುಂಬಾ ಹಿರಿತಲೆಗಳು ಹೊಂದಿರುವ ಪಕ್ಷ. ಆ ಸೀನಿಯಾರಿಟಿ ಪ್ರಕಾರ ಸಿಎಂ ಹುದ್ದೆ ಕೊಡುವುದಿದ್ದರೆ ಕನಿಷ್ಠ ಹತ್ತು ಮಂದಿ ಸಾಲಲ್ಲಿ ನಿಲ್ಲುತ್ತಾರೆ. ಮಲ್ಲಿಕಾರ್ಜುನ ಖರ್ಗೆ, ಡಾ. ಜಿ. ಪರಮೇಶ್ವರ, ಶ್ಯಾಮನೂರು ಶಿವಶಂಕರಪ್ಪ, ಎಂ.ಬಿ. ಪಾಟೀಲ್, ಡಿ.ಕೆ. ಶಿವಕುಮಾರ್, ಬಿ.ಕೆ. ಹರಿಪ್ರಸಾದ್ ಹೀಗೆ ಸಾಲು - ಸಾಲು ನಾಯಕರು ಅಕಾಂಕ್ಷಿಗಳಿದ್ದಾರೆ. ಜೆಡಿಎಸ್ ನಿಂದ ಬಂದರೂ ಸಿದ್ದರಾಮಯ್ಯ ಸಿಎಂ ಆಗ್ತಾರೆ ಎಂದರೆ ಅಡ್ಡ ಗಾಲು ಹಾಕುವರೆ ಇಲ್ಲದಂತಾಗಿದೆ. ಇದೀಗ ವಿಧಾನಸಭೆ ಚುನಾವಣೆ ಸಮೀಪಿಸುತ್ತಿದ್ದಂತೆ ಬಹುತೇಕ ನಾಯಕರು ಸಿದ್ದರಾಮಯ್ಯ ಬೆಂಬಲಕ್ಕೆ ನಿಂತಿದ್ದಾರೆ. ಒಂದೆಡೆ ಬಿಜೆಪಿ ವಿರೋಧಿ ಅಲೆ, ಸಿದ್ದರಾಮಯ್ಯ ನಾಯಕತ್ವದ ಪರ ಒಲವು ಹೆಚ್ಚಾಗುತ್ತಿದೆ. ಐದು ವರ್ಷ ವಿವಾದ ರಹಿತ ಸಮರ್ಥ ಆಡಳಿತ ನೀಡಿದ್ದ ಸಿದ್ದರಾಮಯ್ಯ ರಾಜಕೀಯ ನಿವೃತ್ತಿ ಮುನ್ನ ಕೊನೆ ಬಾರಿ ಸಿಎಂ ಆಗುವತ್ತ ಹೆಜ್ಜೆ ಇಟ್ಟಿದ್ದಾರೆ.
ಪಕ್ಷದ ಕಾರ್ಯಕ್ರಮವಲ್ಲ, ಸಿದ್ದು ಬೆಂಬಲಿಗ ಕೈ ನಾಯಕರ ಕಾರ್ಯಕ್ರಮ:
ಅಂದಹಾಗೆ ಸಿದ್ದರಾಮಯ್ಯ ಅವರ ಹುಟ್ಟುಹಬ್ಬ ಅಚರಣೆ ರಾಜ್ಯ ರಾಜಕೀಯದಲ್ಲಿ ಬಹುದೊಡ್ಡ ಸಂದೇಶ ರವಾನೆ ಮಾಡಲಿದೆ ಎಂದೇ ವಿಶ್ಲೇಷಣೆ ಮಾಡಲಾಗುತ್ತಿದೆ. ಸಿದ್ದರಾಮಯ್ಯ ಅವರ ಹುಟ್ಟುಹಬ್ಬ ಆಚರಣೆ ಕಾರ್ಯಕ್ರಮಕ್ಕೆ ಐದು ಲಕ್ಷಕ್ಕಿಂತಲೂ ಹೆಚ್ಚು ಮಂದಿ ಅಗಮಿಸಲಿದ್ದಾರೆ ಎಂದು ಅಂದಾಜಿಸಲಾಗಿದೆ. ಕಾಂಗ್ರೆಸ್ ವರಿಷ್ಠ ನಾಯಕ ರಾಹುಲ್ ಗಾಂಧಿ ಕಾರ್ಯಕ್ರಮಕ್ಕೆ ಭಾಗವಹಿಸಲಿದ್ದಾರೆ. ಸಿದ್ದರಾಮಯ್ಯ ಬೆಂಬಲಿಗ ಕಾಂಗ್ರೆಸ್ ನಾಯಕರೇ ಆಯೋಜಿಸಿರುವ ಈ ಕಾರ್ಯಕ್ರಮ ಸಿದ್ದರಾಮಯ್ಯ ಅವರ ವರ್ಚಸ್ಸು ಮತ್ತಷ್ಟು ಹೆಚ್ಚಾಗುವಲ್ಲಿ ಎರಡು ಮಾತಿಲ್ಲ. ಈ ಮೂಲಕ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಪಕ್ಷ ಗೆದ್ದರೆ ಸಿದ್ದರಾಮಯ್ಯ ಸಿಎಂ ಎಂಬ ಸ್ಪಷ್ಟ ಸಂದೇಶವನ್ನು ಈ ಕಾರ್ಯಕ್ರಮ ರವಾನಿಸಲಿದೆ. ಇದು ಡಿ.ಕೆ. ಶಿವಕುಮಾರ್ ಬಣದ ಪಾಲಿಗೆ ಬೇಸರ ತರಿಸಿದೆ. ಈ ಸಲ ಪಕ್ಷ ಗೆದ್ದು ಸಿಎಂ ಆಗದಿದ್ದರೆ ಭವಿಷ್ಯದಲ್ಲಿ ಸಿಎಂ ಆಗುವುದು ಕನಸಿನ ಮಾತು ಎಂಬ ವಾಸ್ತವ ಅರಿತಿರುವ ಡಿ.ಕೆ. ಶಿವಕುಮಾರ್ ಪಾದಯಾತ್ರೆ, ಹೋರಾಟಗಳನ್ನು ರೂಪಿಸಿ ಜನ ಬೆಂಬಲ ಗಳಿಸುವ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದರು. ಇದೀಗ ಸಿದ್ದರಾಮಯ್ಯ ಅವರ ಹುಟ್ಟುಹಬ್ಬದ ಕಾರ್ಯಕ್ರಮದ ಬೆಳವಣಿಗೆ ನೋಡಿ ಕೆಪಿಸಿಸಿ ರಾಜ್ಯಾಧ್ಯಕ್ಷ ಡಿ.ಕೆ. ಶಿವಕುಮಾರ್ ಮೌನಕ್ಕೆ ಶರಣಾಗಿದ್ದಾರೆ. ರಾಜಕೀಯ ತಂತ್ರಗಾರಿಕೆಯತ್ತ ಚಿಂತನೆ ನಡೆಸಿದ್ದಾರೆ.
ಸಿದ್ದು ಹುಟ್ಟುಹಬ್ಬ ಕಾರ್ಯಕ್ರಮ ಅಯೋಜಕರು:
ಮಾಜಿ ಸಿಎಂ ಸಿದ್ದರಾಮಯ್ಯ ಅವರ ಹುಟ್ಟುಹಬ್ಬ ಆಚರಣೆಗಾಗಿ ಪ್ರತ್ಯೇಕ ಸಮಿತಿ ರಚನೆ ಮಾಡಲಾಗಿದೆ. ಸಮಿತಿ ಅಧ್ಯಕ್ಷರಾಗಿ ಅರ್.ವಿ. ದೇಶಪಾಂಡೆ ಒಂದಷ್ಟು ಜವಾಬ್ದಾರಿ ವಹಿಸಿಕೊಂಡಿದ್ದಾರೆ. ಬಸವರಾಜ ರಾಯರೆಡ್ಡಿ, ಕೆ.ಎನ್. ರಾಜಣ್ಣ ಪ್ರಧಾನ ಕಾರ್ಯದರ್ಶಿಗಳಾಗಿದ್ದಾರೆ. ಶಾಮನೂರು ಶಿವಶಂಕರಪ್ಪ ಮತ್ತು ಎಚ್.ಸಿ. ಮಹದೇವಪ್ಪ ಅವರು ಸ್ವಾಗತ ಕಮಿಟಿ ನೇತೃತ್ವ ವಹಿಸಿದ್ದಾರೆ. ಸಿದ್ದರಾಮಯ್ಯ ಜೀವನದಲ್ಲಿ ಈವರೆಗೂ ನಡೆಯದ, ಇನ್ನೆಂದೂ ನಡೆಯುದ ಬೃಹತ್ ಕಾರ್ಯಕ್ರಮ ಪಕ್ಷದಲ್ಲಿ ದೊಡ್ಡ ಸಂಚಲನ ಮೂಡಿಸಿದೆ. ಹುಲಿಯಾ ಹುಟ್ಟುಹಬ್ಬ ಕಾರ್ಯಕ್ರಮ ಸಹಜವಾಗಿ ಕೆಪಿಸಿಸಿ ಅಧ್ಯಕ್ಷರಲ್ಲಿ ಬೇಸರ ತರಿಸಿದೆ. ಇದು ಪಕ್ಷದ ಕಾರ್ಯಕ್ರಮವಲ್ಲ. ಪ್ರತಿಯೊಬ್ಬರು ಅವರ ಹುಟ್ಟುಹಬ್ಬ ಅಚರಿಸಿಕೊಳ್ಳಲು ಸರ್ವ ಸ್ವತಂತ್ರರು ಎಂಬ ಹೇಳಿಕೆ ನೀಡುವ ಮೂಲಕ ಸಿದ್ದು ಹುಟ್ಟುಹಬ್ಬದ ಹವಾ ಬಗ್ಗೆ ಡಿಕೆಶಿ ತಮ್ಮ ಅಸಂತೃಪ್ತಿಯನ್ನು ಹೊರ ಹಾಕಿದ್ದಾರೆ.
ಹೈಕಮಾಂಡ್ಗೆ ಸ್ಪಷ್ಟ ಸಂದೇಶ
ಸಿದ್ದರಾಮಯ್ಯ ಹುಟ್ಟುಹಬ್ಬದಿಂದ ಕಾಂಗ್ರೆಸ್ ಪಕ್ಷಕ್ಕೆ ದೊಡ್ಡ ಸಂದೇಶ ರವಾನೆಯಾಗಲಿದೆ. ಹುಲಿಯಾ ಹುಟ್ಟುಹಬ್ಬ ಕಾರ್ಯಕ್ರಮ ಕೈ ಪಕ್ಷದ ಹೈಕಮಾಂಡ್ ಹಾಗೂ ಎದುರಾಳಿ ಪಕ್ಷಕ್ಕೂ ಸ್ಪಷ್ಟ ಸಂದೇಶ ರವಾನೆಯಾಗಲಿದೆ ಎಂಬುದರಲ್ಲಿ ಅನುಮಾನವೇ ಇಲ್ಲ. ಹುಲಿಯಾ ಹುಟ್ಟುಹಬ್ಬ ರಾಜ್ಯ ರಾಜಕೀಯದಲ್ಲಿ ಭಾರಿ ಸಂಚಲನ ಮೂಡಿಸಿದೆ. ಉತ್ತರ ಕರ್ನಾಟಕ, ಮಧ್ಯ ಕರ್ನಾಟಕದಲ್ಲಿ ಸಿದ್ದು ಹವಾ ಎನೆಂಬುದು ಹೈಕಮಾಂಡ್ ಗೆ ಸಂದೇಶ ರವಾನೆಯಾಗಲಿದೆ. ಇನ್ನು ರಾಜ್ಯದಲ್ಲಿ ವಿವಾದ ಸ್ವರೂಪ ಪಡೆದ ಪಠ್ಯ ಪುಸ್ತಕ, ಹಿಜಾಬ್, 40 ಪರ್ಸೆಂಟ್ ಕಮೀಷನ್ ವಿಚಾರದಲ್ಲಿ ಅಗ್ರಸಾಲಿನಲ್ಲಿ ನಿಂತು ಹುಲಿಯಾ ಹೋರಾಟ ಮಾಡಿದ್ದಾರೆ. ದೇವೇಗೌಡರ ಗರಡಿಯಲ್ಲಿ ಪಳಗಿದ ಹುಲಿಯಾ ಹುಟ್ಟುಹಬ್ಬದ ಮೂಲಕ ಒಂದೇ ಏಟಿಗೆ ಎರಡು ಹಕ್ಕಿ ಹೊಡೆಯಲಿದ್ದಾರೆ. ಕೈ ಪಕ್ಷದಲ್ಲಿ ನಾನೇ ಸಿಎಂಗೆ ಅರ್ಹ ಲೀಡರ್ ಎಂಬ ಸಂದೇಶ ಜತೆಗೆ ವಿರೋಧಿಗಳಿಗೂ ತನ್ನ ಜನ ಬೆಂಬಲದ ಸಂದೇಶ ರವಾನೆಯಾಗಲಿದೆ.
Recommended Video