ಮತ್ತೆ ಸಿದ್ದಗಂಗಾ ಶ್ರೀಗಳ ಆರೋಗ್ಯ ವ್ಯತ್ಯಯ, ವೈದ್ಯರ ತೀವ್ರ ನಿಗಾ
ತುಮಕೂರು, ಡಿಸೆಂಬರ್ 28: ಕೆಲವು ದಿನಗಳ ಹಿಂದಷ್ಟೆ ಚೆನ್ನೈ ನಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗಿ ವಾಪಸ್ಸಾಗಿದ್ದ ಸಿದ್ದಗಂಗಾ ಶ್ರೀಗಳ ಆರೋಗ್ಯದಲ್ಲಿ ಮತ್ತೆ ಏರುಪೇರಾಗಿದೆ.
ಶ್ರೀಗಳಿಗೆ ಇಂದು ಬೆಳಿಗ್ಗೆ ಉಸಿರಾಟದ ಸಮಸ್ಯೆ ಎದುರಾಗಿದ್ದು, ಅವರಿಗೆ ಕೃತಕ ಉಸಿರಾಟದ ವ್ಯವಸ್ಥೆ ನೀಡಲಾಗಿದೆ. ಅವರಿಗೆ ಕಫ ಹೆಚ್ಚಾಗಿ ಉಸಿರಾಟದ ಸಮಸ್ಯೆ ಎದುರಾಗಿತ್ತು ಎನ್ನಲಾಗಿದೆ.
ಕೃತಕ ಉಸಿರಾಟ ನೀಡುವ ಜೊತೆಗೆ, ಮೂಗಿನ ಮೂಲಕ ಗ್ಲೂಕೋಸ್ ಸಹ ನೀಡಲಾಗುತ್ತಿದೆ. ತುಮಕೂರಿನ ಖಾಸಗಿ ಆಸ್ಪತ್ರೆಯಲ್ಲಿ ಶ್ರೀಗಳಿಗೆ ಚಿಕಿತ್ಸೆ ನೀಡಲಾಗುತ್ತಿದ್ದು, ಅವರನ್ನು ಬೆಂಗಳೂರಿಗೆ ಕರೆತರಬೇಕೆ ಎಂಬ ಬಗ್ಗೆ ವೈದ್ಯರು ಚಿಂತನೆ ನಡೆಸುತ್ತಿದ್ದಾರೆ.
ಸ್ವಾಮೀಜಿಗಳಿಗೆ ಹೈಯರ್ ಆಂಟಿಬಯೋಟಿಕ್ ಹಾಗೂ ಫಿಸಿಯೋತೆರಪಿ ಚಿಕಿತ್ಸೆ ನೀಡಲಾಗುತ್ತಿದೆ. ಸಿದ್ದಗಂಗಾ ಆಸ್ಪತ್ರೆ ವೈದ್ಯರು ಹಾಗೂ ಸಿಬ್ಬಂದಿ ಶ್ರೀಗಳ ಮೇಲೆ ನಿಗಾ ವಹಿಸಿದ್ದಾರೆ.
ಕೆಲವು ದಿನಗಳ ಹಿಂದೆ ಅಷ್ಟೆ ಶ್ರೀಗಳಿಗೆ ಚೆನ್ನೈನ ರೇಲಾ ಆಸ್ಪತ್ರೆಯಲ್ಲಿ ಹಲವು ಶಸ್ತ್ರ ಚಿಕಿತ್ಸೆ ಮಾಡಲಾಗಿತ್ತು. ಈಗ ಮತ್ತೆ ಅವರ ಆರೋಗ್ಯದಲ್ಲಿ ವ್ಯತ್ಯಯ ಆಗಿರುವುದು ಭಕ್ತರಲ್ಲಿ ಆತಂಕ ಮೂಡಿಸಿದೆ.