ಸಿದ್ದಗಂಗಾ ಶ್ರೀಗಳಿಗೆ ಭಾರತ ರತ್ನ ಸಿಗದಿದ್ದಕ್ಕೆ ತೀವ್ರ ಆಕ್ರೋಶ
ಬೆಂಗಳೂರು, ಜನವರಿ 26: ನಿನ್ನೆಯಷ್ಟೆ ಭಾರತದ ಮೂರು ಸಾಧಕರಿಗೆ ಕೇಂದ್ರ ಸರ್ಕಾರವು ಭಾರತ ರತ್ನ ಗೌರವವನ್ನು ಘೋಷಿಸಿದೆ. ಆದರೆ ಈ ಪಟ್ಟಿಯಲ್ಲಿ 'ನಡೆದಾಡುವ ದೇವರು' ಸಿದ್ದಗಂಗಾ ಶ್ರೀಗಳ ಹೆಸರು ಇಲ್ಲದಿರುವುದು ರಾಜ್ಯದ ಜನರಲ್ಲಿ ಆಕ್ರೋಶ ಮೂಡಿಸಿದೆ.
ಮಾಜಿ ರಾಷ್ಟ್ರಪತಿ ಪ್ರಣವ್ ಮುಖರ್ಜಿ, ಸಂಗೀತ ಮಾಂತ್ರಿಕ ಭೂಪೇನ್ ಹಜಾರಿಕಾ, ಜೆಪಿ ಅವರ ಸಂಗಾತಿ ಆಗಿದ್ದ, ಗ್ರಾಮ ಸ್ವರಾಜ್ಯಕ್ಕೆ ತಮ್ಮನ್ನು ಅರ್ಪಿಸಿದ್ದ ನಾನಾಜಿ ದೇಶ್ಮುಖ್ ಅವರಿಗೆ ದೇಶದ ಅತ್ಯುತ್ತಮ ನಾಗರೀಕ ಗೌರವವಾದ ಭಾರತ ರತ್ನ ಗೌರವ ನೀಡಲಾಗಿದೆ.
ಪ್ರಣಬ್ ಮುಖರ್ಜಿ, ನಾನಾಜಿ, ಭೂಪೇನ್ ಹಜಾರಿಕಾಗೆ ಭಾರತರತ್ನ
ಸೋಮವಾರವಷ್ಟೆ ಇಹಲೋಕ ತ್ಯಜಿಸಿದ ಸೇವಾರತ್ನ ಸಿದ್ದಗಂಗಾ ಶ್ರೀಗಳಿಗೆ ಭಾರತ ರತ್ನ ಕೊಡಬೇಕೆಂದು ಬಹು ವರ್ಷಗಳ ಒತ್ತಾಯವಾಗಿದ್ದು, ಈ ಬಾರಿಯೂ ಅವರಿಗೆ ಭಾರತ ರತ್ನ ನೀಡದಿರುವ ಬಗ್ಗೆ ಸಾರ್ವಜನಿಕರಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
ಶ್ರೀಗಳನ್ನು ಭಾರತ ರತ್ನಕ್ಕೆ ಪರಿಗಣಿಸದಿರುವುದನ್ನು ಟೀಕಿಸಿ ಸಾಮಾಜಿಕ ಜಾಲತಾಣದಲ್ಲಿ ಕೇಂದ್ರದ ವಿರುದ್ಧ ಆಕ್ರೋಶ ಹೊರಹಾಕುತ್ತಿದ್ದಾರೆ. ಮುಖ್ಯಮಂತ್ರಿ ಕಚೇರಿ ಸಹ ಸಿದ್ದಗಂಗಾ ಶ್ರೀಗಳಿಗೆ ಭಾರತ ರತ್ನ ನೀಡದಿರುವ ಬಗ್ಗೆ ಆಕ್ಷೇಪಣೆ ವ್ಯಕ್ತಪಡಿಸಿದೆ.
ಭಾರತ ರತ್ನತ್ರಯರನ್ನು ಪ್ರಧಾನಿ ನರೇಂದ್ರ ಮೋದಿ ಅಭಿನಂದಿಸಿದ್ದು ಹೀಗೆ...
ಸಿದ್ದಗಂಗಾ ಶ್ರೀಗಳಿಗೆ ಭಾರತ ರತ್ನ ಸೇರಿದಂತೆ ಇನ್ನೂ ಹಲವು ಅರ್ಹ ಸಾಧಕರಿಗೆ ಪದ್ಮ ಪ್ರಶಸ್ತಿ ನಿರೀಕ್ಷಿಸಿದ್ದೆವು ಆದರೆ ದೊರಕದಿದ್ದಕ್ಕೆ ಬೇಸವಾರಿಗೆ ಎಂದು ಸಿಎಂ ಟ್ವೀಟ್ ಮಾಡಿದ್ದಾರೆ. ಜೊತೆಗೆ ಈಗ ಪ್ರಶಸ್ತಿ ಪಡೆದಿರುವ ಎಲ್ಲರಿಗೂ ಅವರು ಅಭಿನಂಧಿಸಿದ್ದಾರೆ.
ಕೆಲವು ಸಾಧಕರಿಗೆ ಮರಣೋತ್ತರವಾಗಿಯಾದರೂ ಈ ಪ್ರಶಸ್ತಿ ಘೋಷಣೆಯಾಗಿರುವುದು ಹರ್ಷ ತಂದಿದೆ.
— CM of Karnataka (@CMofKarnataka) January 25, 2019
ಆದರೆ ಸಿದ್ದಗಂಗಾ ಶ್ರೀಗಳಿಗೆ ಭಾರತರತ್ನ ಹಾಗೂ ಇನ್ನೂ ಹಲವು ಅರ್ಹ ಸಾಧಕರಿಗೆ ಪದ್ಮ ಪ್ರಶಸ್ತಿ ನಿರೀಕ್ಷಿಸಿದ್ದೆವು. ಇದು ಕೈಗೂಡದಿರುವುದು ನಿರಾಸೆ ತಂದಿದೆ.#ShivakumaraSwamiji
ಶ್ರೀಗಳಿಗೆ ಭಾರತ ರತ್ನವಿಲ್ಲ, ಎಚ್.ಡಿ.ಕುಮಾರಸ್ವಾಮಿ ಟ್ವೀಟ್
ಸಿದ್ದಗಂಗಾ ಶ್ರೀಗಳಿಗೆ ಭಾರತ ರತ್ನ ನೀಡಬೇಕು ಕಳೆದ ಕೆಲ ತಿಂಗಳಿನಿಂದಲೂ ರಾಜ್ಯದಲ್ಲಿ ಕೂಗು ಎದ್ದಿತ್ತು. ಶ್ರೀಗಳು ಅದಕ್ಕೆ ಅತ್ಯಂತ ಅರ್ಹರಾಗಿದ್ದರು ಕೂಡಾ. ಸಿಎಂ ಕುಮಾರಸ್ವಾಮಿ, ವಿರೋಧ ಪಕ್ಷ ನಾಯಕ ಯಡಿಯೂರಪ್ಪ ಸೇರಿ ಪಕ್ಷಭೇದವಿಲ್ಲದೆ ಎಲ್ಲ ರಾಜಕೀಯ ಮುಖಂಡರು ಸಿದ್ದಗಂಗಾ ಶ್ರೀಗಳಿಗೆ ಭಾರತ ರತ್ನ ನೀಡಬೇಕೆಂದು ಒತ್ತಾಯಿಸಿದ್ದರು.