ನಂದಾ ದೀಪ ಆರಿದ ಸುದ್ದಿ: ಧರ್ಮಸ್ಥಳ ದೇವಾಲಯದ ಪ್ರಕಟಣೆ
ಮಂಗಳೂರು, ಮಾರ್ಚ್ 27: ಐತಿಹಾಸಿಕ ಶ್ರೀ.ಧರ್ಮಸ್ಥಳ ಮಂಜುನಾಥಸ್ವಾಮಿ ದೇವಾಲಯದ ನಂದಾ ದೀಪ ಆರಿದ ವದಂತಿಯ ಬಗ್ಗೆ ಶ್ರೀಕ್ಷೇತ್ರ ಸ್ಪಷ್ಟೀಕರಣ ನೀಡಿದೆ.
"ಇದೆಲ್ಲಾ ಸುಳ್ಳುಸುದ್ದಿ, ವದಂತಿ, ಇದಕ್ಕೆ ಯಾರೂ ಕಿವಿಗೊಡಬಾರದು, ಇವೆಲ್ಲಾ ಅಪಪ್ರಚಾರದ ಮಾತುಗಳು" ಎಂದು ಕ್ಷೇತ್ರದ ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗ್ಗಡೆಯವರು ಹೇಳಿದ್ದಾರೆ.
ರಾತ್ರೋರಾತ್ರಿ ಧರ್ಮಸ್ಥಳದ ಬಗ್ಗೆ ಬಂತು ಅಶುಭ ಸುದ್ದಿ!
ಧರ್ಮಸ್ಥಳ ಮಂಜುನಾಥ ಸ್ವಾಮಿ ದೇವಾಲಯದ ನಂದ ದೀಪಾ ನಂದಿ ಹೋಗಿದೆ. ಹೀಗಾಗಿ, ಎಲ್ಲರೂ ತಮ್ಮ ಮನೆಯ ಮುಂದೆ ದೀಪ ಹಚ್ಚಿ ಇಡಬೇಕು ಎನ್ನುವ ಸುದ್ದಿ ರಾತ್ರೋರಾತ್ರಿ ಹರಿದಾಡಿ, ಭಕ್ತರು ತಬ್ಬಿಬ್ಬಾಗಿದ್ದರು.
ಈ ಸುದ್ದಿಯ ಸತ್ಯಾಸತ್ಯತೆಯ ಪರೀಕ್ಷೆ ಮಾಡಲು ಹೋಗದ ಭಕ್ತರು, ಎದ್ದೋಬಿದ್ದೋನಂತೆ, ಮನೆಯ ಮುಂದೆ ದೀಪವನ್ನು ಹಚ್ಚಿದ್ದರು. ಧರ್ಮಸ್ಥಳ ದೇವಾಲಯದ ಪ್ರಕಟಣೆ ಹೀಗಿದೆ:
ಶ್ರೀಕ್ಷೇತ್ರ ಧರ್ಮಸ್ಥಳದ ಮಂಜುನಾಥಸ್ವಾಮಿ ದೇವಸ್ಥಾನ
"ಸಾಮಾಜಿಕ ತಾಣ ಮತ್ತು ಟಿವಿ ಮಾಧ್ಯಮಗಳಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳದ ಮಂಜುನಾಥಸ್ವಾಮಿ ದೇವಸ್ಥಾನದಲ್ಲಿ ದೇವರ ನಂದಾದೀಪ ನಂದಿ ಹೋಗಿದೆ ಎಂಬ ಅಪಪ್ರಚಾರದ ಮಾತುಗಳು ಹರಿದಾಡುತ್ತಿವೆ. ಪ್ರಪ್ರಥವಾಗಿ ಈ ವದಂತಿಗೆ ಯಾರೂ ಕಿವಿಗೊಡಬೇಡಿ" - ದೇವಾಲಯದ ಪ್ರಕಟಣೆ.
ದೇವಸ್ಥಾನದಲ್ಲಿ ರಾತ್ರಿ ಎಂಟು ಗಂಟೆಗೆ ಬಾಗಿಲು ಹಾಕಲಾಗುತ್ತದೆ
"ದೇವಸ್ಥಾನದಲ್ಲಿ ರಾತ್ರಿ ಎಂಟು ಗಂಟೆಗೆ ಬಾಗಿಲು ಹಾಕಲಾಗುತ್ತದೆ. ಮರುದಿನ ಐದು ಗಂಟೆಗೆ ಬಾಗಿಲು ತೆಗೆಯಲಾಗುತ್ತದೆ. ಮಧ್ಯದಲ್ಲಿ ಯಾರೊಬ್ಬರಿಗೂ ಪ್ರವೇಶಿಸಲು ಅವಕಾಶ ಇರುವುದಿಲ್ಲ. ನಂತರ ಯಾರು ದೇವಸ್ಥಾನವನ್ನು ಪ್ರವೇಶಿಸಿದವರು? ನಂದಾದೀಪ ನಂದಿ ಹೋಗಿದೆ ಎಂದು ನೋಡಿದವರು ಯಾರು? ಕ್ಷೇತ್ರದ ಭಕ್ತಾದಿಗಳ ಭಾವನೆ ಮತ್ತು ನಂಬಿಕೆಗಳೊಂದಿಗೆ ಕಿಡಿಗೇಡಿಗಳು ಮಾಡಿರುವ ಸುಳ್ಳು ವದಂತಿ" - ದೇವಾಲಯದ ಪ್ರಕಟಣೆ.
ಭಗವಂತನ ಸಾನಿಧ್ಯಕ್ಕೆ ಮಾಡುತ್ತಿರುವ ನಿಂದಾಸ್ತುತಿಯಾಗಿರಬಹುದು
"ಈ ವದಂತಿಯಿಂದ ನೀವೆಲ್ಲಾ ದೂರವಿದ್ದು ಲೋಕಕ್ಕೆ ಬಂದಿರುವ ಕೊರೊನಾ ಎಂಬ ಮಹಾಮಾರಿಯನ್ನು ಮನುಜ ಕುಲದಿಂದ ದೂರಮಾಡಲು ಎಲ್ಲರೂ ಅವರವರ ಮನೆಯ ಒಳಗಡೆಯೇ ಇದ್ದು, ಶ್ರೀ.ಮಂಜುನಾಥಸ್ವಾಮಿಯನ್ನು ಪ್ರಾರ್ಥಿಸಿಕೊಳ್ಳಿ. ಇದು ಭಗವಂತನ ಸಾನಿಧ್ಯಕ್ಕೆ ಮಾಡುತ್ತಿರುವ ನಿಂದಾಸ್ತುತಿಯಾಗಿರಬಹುದು" - ದೇವಾಲಯದ ಪ್ರಕಟಣೆ.
ರಾತ್ರಿಯೆಲ್ಲಾ ಭಕ್ತರನ್ನು ಜಾಗರಣೆಯನ್ನಾಗಿಸಿತ್ತು
ಶ್ರೀಕ್ಷೇತ್ರ ಧರ್ಮಸ್ಥಳದ ದೇವಾಲಯದಲ್ಲಿ ಶ್ರೀಮಂಜುನಾಥನ ನಂದಾ ದೀಪ ಇದ್ದಕ್ಕಿದ್ದಂತೆ ನಂದಿ ಹೋಗಿದೆ. ದೇವಾಲಯದ ದೀಪ ಈ ಹಿಂದೆ ಎಂದೂ ನಂದಿ ಹೋಗಿರಲಿಲ್ಲ. ಹೀಗಾಗಿ, ಇದು ಅಶುಭ ಸೂಚನೆಯಾಗಿದೆ. ಎಲ್ಲಾ ಭಕ್ತರು ತಮ್ಮ ಮನೆ ಮುಂದೆ ದೀಪ ಹಚ್ಚಿ ಇಡಬೇಕು ಎನ್ನುವ ಸುದ್ದಿ ಫೋನ್ ಕರೆಗಳ ಮೂಲಕ, ವಾರ್ಟ್ಸ್ ಅಪ್ ಸಂದೇಶಗಳ ಮೂಲಕ ಹರಿದಾಡಿ, ರಾತ್ರಿಯೆಲ್ಲಾ ಭಕ್ತರನ್ನು ಜಾಗರಣೆಯನ್ನಾಗಿಸಿತ್ತು.