ಬೆಳಗಾವಿ ಲೋಕಸಭಾ ಚುನಾವಣೆ: ಶ್ರದ್ಧಾ ಶೆಟ್ಟರ್ Vs ಅನಿಲ್ ಲಾಡ್?
ಬೆಂಗಳೂರು, ಜ. 09: ಕಳೆದ ಎಲ್ಲ ಉಪ ಚುನಾವಣೆಗಳಲ್ಲಿ ರಾಜ್ಯದಲ್ಲಿ ಬಿಜೆಪಿ ಭರ್ಜರಿ ಜಯಗಳಿಸಿದೆ. ಆದರೂ ಸಂಪುಟ ವಿಸ್ತರಣೆ ಭಾಗ್ಯವನ್ನು ಮಾತ್ರ ಬಿಜೆಪಿ ಹೈಕಮಾಂಡ್ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಕರುಣಿಸಿಲ್ಲ. ಹೀಗಾಗಿ ರಾಜ್ಯದ ಹಿರಿಯ ಬಿಜೆಪಿ ಶಾಸಕರಲ್ಲಿ ಅಸಮಧಾನ ಒಳಗೊಳಗೆ ಹೆಚ್ಚಾಗುತ್ತಲೇ ಇದೆ. ಆದರೂ ಹೈಕಮಾಂಡ್ ಭೀತಿಯಿಂದ ಕೆಲ ಶಾಸಕರನ್ನು ಹೊರತು ಪಡಿಸಿದರೆ ಬೇರೆಯವರು ಬಾಯಿ ಬಿಡುತ್ತಿಲ್ಲ. ಈ ಮಧ್ಯೆ ಮತ್ತೊಂದು ಉಪ ಚುನಾವಣೆ ಅಧಿಸೂಚನೆ ಹೊರಗೆ ಬರುವ ಸಾಧ್ಯತೆಯಿದೆ. ಹೀಗಾಗಿ ಮತ್ತೆ ಸಂಪುಟ ವಿಸ್ತರಣೆ ಬಹುತೇಕ ಖಚಿತವಾಗಿದೆ.
ಬೆಳಗಾವಿ ಲೋಕಸಭಾ ಕ್ಷೇತ್ರದ ಉಪ ಚುನಾವಣೆ ಕುರಿತು ಅಧಿಸೂಚನೆ ಶೀಘ್ರದಲ್ಲಿಯೇ ಪ್ರಕಟವಾಗಲಿದೆ ಎಂಬ ಮಾಹಿತಿಯಿದೆ. ಅದು ನಿರೀಕ್ಷಿತ ಕೂಡ. ಬೆಳಗಾವಿ ಲೋಕಸಭಾ ಕ್ಷೇತ್ರ ಕಾಂಗ್ರೆಸ್ ಹಾಗೂ ಬಿಜೆಪಿ ಎರಡೂ ರಾಜಕೀಯ ಪಕ್ಷಗಳಿಗೆ ಪ್ರತಿಷ್ಠೆಯ ಕಣವಾಗಿದೆ. ಮರಾಠಾ ಭಾಷಿಗರ ಮತಗಳು ನಿರ್ಣಾಯಕವಾಗಿರುವುದರಿಂದ ಆ ನಿಟ್ಟಿನಲ್ಲಿ ಚಿಂತನೆ ನಡೆಸಿ ಅಭ್ಯರ್ಥಿ ಆಯ್ಕೆಯನ್ನು ಎರಡೂ ಪಕ್ಷಗಳು ಮಾಡಿವೆ ಎನ್ನಲಾಗಿದೆ. ಹೀಗಾಗಿ ಬೆಳಗಾವಿ ಲೋಕಸಭಾ ಕ್ಷೇತ್ರಕ್ಕೆ ಕಾಂಗ್ರೆಸ್-ಬಿಜೆಪಿ ಅಭ್ಯರ್ಥಿಗಳು ಅಂತಿಮವಾಗಿದ್ದು ಅಧಿಕೃತ ಪ್ರಕಟಣೆ ಮಾತ್ರ ಬಾಕಿಯಿದೆ.
ಇದೇ ಸಂದರ್ಭದಲ್ಲಿ ಪ್ರಾದೇಶಿಕ ಪಕ್ಷ ಜೆಡಿಎಸ್ ಯಾವ ನಿಲುವನ್ನು ತಾಳಿದೆ ಎಂಬುದು ಕುತೂಹಲ ಮೂಡಿಸಿದೆ. ಆದರೂ ಬೆಳಗಾವಿಯಲ್ಲಿ ಎರಡೂ ರಾಷ್ಟ್ರೀಯ ಪಕ್ಷಗಳ ಮಧ್ಯೆ ನೇರಹಣಾಹಣಿ ಇರುವುದು ಈಗಲೇ ಕಂಡು ಬರುತ್ತಿದೆ.
ಬಿಜೆಪಿ ಹೈಕಮಾಂಡ್ ಅಚ್ಚರಿಯ ನಿರ್ಧಾರ
ಬಿಜೆಪಿ ಹೈಕಮಾಂಡ್ ಕೈಗೊಳ್ಳುವ ನಿರ್ಧಾರದಿಂದ ವಿರೋಧ ಪಕ್ಷ ಕಾಂಗ್ರೆಸ್ ಒತ್ತಟ್ಟಿಗಿರಲಿ, ಬಿಜೆಪಿ ನಾಯಕರೇ ಕೆಲ ಬಾರಿ ಗಲಿಬಿಲಿಗೊಳ್ಳುತ್ತಾರೆ. ಚುನಾವಣೆಯಲ್ಲಿ ಸೋತಿದ್ದ ಲಕ್ಷ್ಮಣ ಸವದಿ ಅವರನ್ನು ಉಪ ಮುಖ್ಯಮಂತ್ರಿ ಮಾಡಿದ್ದು ಅಂತಹ ಒಂದು ನಿರ್ಧಾರ. ಅದರೊಂದಿಗೆ ದಿ. ಮಾಜಿ ಸಂಸದ ಸುರೇಶ್ ಅಂಗಡಿ ಅವರನ್ನು ರಾಜ್ಯದ ಮುಖ್ಯಮಂತ್ರಿ ಎಂದು ನಿಯೋಜಿಸಲು ಬಿಜೆಪಿ ಹೈಕಮಾಂಡ್ ಮುಂದಾಗಿತ್ತು. ಆದರೆ ಅವರು ಅಕಾಲಿಕ ಮರಣಕ್ಕೆ ತುತ್ತಾದರು.
ಸಿಎಂ ಯಡಿಯೂರಪ್ಪ ಅವರ ಬಳಿಕ ಸುರೇಶ್ ಅಂಗಡಿ ಅವರನ್ನು ಸಿಎಂ ಮಾಡಲಾಗುತ್ತದೆ ಎಂಬ ಸಣ್ಣ ಸುಳಿವು ರಾಜ್ಯದ ನಾಯಕರಿಗೆ ಸಿಕ್ಕಿರಲಿಲ್ಲ. ಇದೀಗ ಬೆಳಗಾವಿ ಲೋಕಸಭಾ ಕ್ಷೇತ್ರದ ಉಪ ಚುನಾವಣೆಗೆ ಬಿಜೆಪಿ ಹೈಕಮಾಂಡ್ ತನ್ನ ಅಭ್ಯರ್ಥಿಯನ್ನು ಗುರುತಿಸಿದೆ.
ಇವರೇ ಬಿಜೆಪಿ ಅಭ್ಯರ್ಥಿ
ಸುರೇಶ ಅಂಗಡಿ ಅವರ ನಿಧನದಿಂದ ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ ಈಗ ಉಪ ಚುನಾವಣೆ ಎದುರಾಗಿದೆ. ಚುನಾವಣೆಯ ದಿನಾಂಕ ಇದೇ ವಾರದಲ್ಲಿ ಪ್ರಕಟವಾಗುವ ಸಾಧ್ಯತೆ ಇದ್ದು, ದಿವಂಗತ ಸುರೇಶ ಅಂಗಡಿ ಅವರ ವಾರಸುದಾರ ಯಾರಾಗಬಹುದು? ಎಂಬ ಪ್ರಶ್ನೆ ಈಗ ಬಿಜೆಪಿ ಕಾರ್ಯಕರ್ತರು ಹಾಗೂ ನಾಯಕರಲ್ಲಿದೆ. ಅದಕ್ಕೆ ಬಿಜೆಪಿ ಹೈಕಮಾಂಡ್ ಬೆಳಗಾವಿಗೆ ಬಿಜೆಪಿ ಅಭ್ಯರ್ಥಿಯನ್ನು ಗುರುತಿಸಿದ್ದು, ಅಧಿಕೃತವಾಗಿ ಪ್ರಕಟಿಸುವುದು ಬಾಕಿಯಿದೆ.
ಸುರೇಶ
ಅಂಗಡಿ
ಅವರ
ಪುತ್ರಿ
ಶ್ರದ್ಧಾ
ಶೆಟ್ಟರ್
ಅವರು
ಬೆಳಗಾವಿ
ಲೋಕಸಭಾ
ಕ್ಷೇತ್ರದ
ಅಭ್ಯರ್ಥಿಯಾಗಿ
ಕಣಕ್ಕಿಳಿಯಲಿದ್ದಾರೆ
ಎನ್ನಲಾಗಿದೆ.
ಹಾಗಾದಲ್ಲಿ
ಮಾಜಿ
ಸಚಿವ
ಸಂತೋಷ್
ಲಾಡ್
ಅವರು
ಕಾಂಗ್ರೆಸ್
ಅಭ್ಯರ್ಥಿಯಾಗಿ
ಕಣಕ್ಕಿಳಿಯಲಿದ್ದಾರೆ.
ಇವರೇ ಕಾಂಗ್ರೆಸ್ ಅಭ್ಯರ್ಥಿ
ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಮಾಜಿ ಶಾಸಕ ಅನಿಲ್ ಲಾಡ್ ಅವರು ಕಣಕ್ಕಿಳಿಯಲಿದ್ದಾರೆ ಎನ್ನಲಾಗಿದೆ. ಅದಕ್ಕೆ ಕಾರಣವೂ ಇದೆ. ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ ಮರಾಠ ಮತಗಳು ನಿರ್ಣಾಯಕವಾಗಿವೆ. ಗಡಿ ವಿವಾದದ ಹೊರತಾಗಿಯೂ ದಿ. ಮಾಜಿ ಸಂಸದ ಸುರೇಶ್ ಅಂಗಡಿ ಅವರಿಗೆ ಮರಾಠ ಮತದಾರರ ಬೆಂಬಲವಿತ್ತು. ಅದಕ್ಕೆ ಕಾರಣವಾಗಿದ್ದು ಹಿಂದುತ್ವದ ಅಜೆಂಡಾ. ಈಗ ಅದನ್ನು ಉಳಿಸಿಕೊಳ್ಳಲು ಬಿಜೆಪಿ ಅಂಗಡಿ ಕುಟುಂಬದವರಿಗೆ ಟಿಕೆಟ್ ಕೊಡಲು ತೀರ್ಮಾನ ಮಾಡಿದೆ. ಅನಿಲ್ ಲಾಡ್ ಅವರು ಮರಾಠ ಸಮುದಾಯಕ್ಕೆ ಸೇರಿರುವುದರಿಂದ ಶ್ರದ್ಧಾ ಅಂಗಡಿ ಶೆಟ್ಟರ್ ಅವರು ಬಿಜೆಪಿ ಅಭ್ಯರ್ಥಿಯಾದಲ್ಲಿ, ಅನಿಲ್ ಲಾಡ್ ಕಾಂಗ್ರೆಸ್ ಅಭ್ಯರ್ಥಿ ಆಗಲಿದ್ದಾರೆ.
ನಿರ್ಣಾಯಕ ಮರಾಠಾ ಮತಗಳು
ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ ಸುಮಾರು 4 ಲಕ್ಷ ಮರಾಠಾ ಸಮಾಜದ ಮತಗಳಿವೆ. ಆ ಸಮಾಜದ ಬಹುತೇಕ ಮತಗಳು ದಿ. ಸುರೇಶ ಅಂಗಡಿ ಅವರಿಗೆ ಬೀಳುತ್ತಿದ್ದವು. ಭಗವಾ ಧ್ವಜ, ಹಿಂದುತ್ವ ಹಾಗೂ ಭಾಷಾ ಸಾಮರಸ್ಯ ಅದಕ್ಕೆ ಕಾರಣವಾಗಿತ್ತು ಎನ್ನಲಾಗಿತ್ತು. ಇದೀಗ ಬಿಜೆಪಿ ಅಭ್ಯರ್ಥಿಯಾಗಿ ಶ್ರದ್ದಾ ಪಾಟೀಲ್ ಕಣಕ್ಕಿಳಿದರೆ, ಕಾಂಗ್ರೆಸ್ ಪಕ್ಷದಿಂದ ಅನಿಲ್ ಲಾಡ್ ಅವರು ಸ್ಪರ್ಧೆ ಮಾಡಲಿದ್ದಾರೆ. ಅದಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹಾಗೂ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಬೆಂಬಲ ಕೊಟ್ಟಿದ್ದಾರೆ ಎನ್ನಲಾಗಿದೆ. ಎರಡೂ ಪಕ್ಷಗಳು ಅಧಿಕೃತವಾಗಿ ಅಭ್ಯರ್ಥಿಗಳ ಘೋಷಣೆ ಮಾಡಬೇಕಿದೆ.