ಮತ್ತೊಂದು ಬರಗಾಲದ ಹೊಡೆತಕ್ಕೆ ಸಜ್ಜಾಗಬೇಕಿದೆ ಕರ್ನಾಟಕ!
ಬೆಂಗಳೂರು, ಸೆಪ್ಟೆಂಬರ್ 21: ಕರ್ನಾಟಕದಲ್ಲೀಗ ನದಿ ವಿಚಾರವಾಗಿಯೇ ಹಲವು ಪ್ರತಿಭಟನೆಗಳಾಗುತ್ತಿವೆ. ಕಾವೇರಿ, ಮಹದಾಯಿ ಮತ್ತು ನೇತ್ರಾವತಿ ನೀರಿನ ವಿಚಾರದಲ್ಲಿ ಧರಣಿ, ಪ್ರತಿಭಟನೆಗಳು: ಒಂದರ ಬೆನ್ನಿಗೆ ಒಂದರಂತೆ ಸತತ ಮೂರು ಬರಗಾಲ. ಇದೀಗ ನಾಲ್ಕನೆಯದರ ಸಾಧ್ಯತೆ ದಟ್ಟವಾಗಿ ಗೋಚರಿಸುತ್ತಿದೆ.
ಪಶ್ಚಿಮ ಘಟ್ಟದ ಮಲೆನಾಡು ಭಾಗದಲ್ಲೇ ಪರಿಸ್ಥಿತಿ ಗಂಭೀರವಾಗಿದೆ. ಈ ಬಗ್ಗೆ ಚರ್ಚೆ ನಡೆಸುವುದಕ್ಕೆ ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಸೆ.28ಕ್ಕೆ ಸಭೆಯೊಂದನ್ನು ಕರೆದಿದ್ದಾರೆ. ಅಧಿಕಾರಿಯೊಬ್ಬರು ನೀಡಿದ ಮಾಹಿತಿ ಪ್ರಕಾರ ಕರ್ನಾಟಕ ದಕ್ಷಿಣ ಒಳನಾಡಿನಲ್ಲಿ ಪರಿಸ್ಥಿತಿ ಗಂಭೀರವಾಗಿದೆ. ಈ ವರ್ಷವೂ ಬರಗಾಲ ಎದುರಿಸಬೇಕಾಗಬಹುದು.[ಭೀಕರ ಬರ, ಜನರ ಸುಲಿಗೆ ಮಾಡುತ್ತಿರುವ ಟ್ಯಾಂಕರ್ ಮಾಫಿಯಾ]
ನೈರುತ್ಯ ಮುಂಗಾರು ದುರ್ಬಲವಾಗಿದ್ದು, ಈ ಬಗ್ಗೆಯೇ ಪರಾಮರ್ಶಿಸಲು ಸಂಪುಟ ಉಪಸಮಿತಿ ಸಭೆ ನಡೆಯಲಿದೆ. ಸೆಪ್ಟೆಂಬರ್ ಮೊದಲ ವಾರದ ಪರಿಸ್ಥಿತಿ ನೋಡಿದರೆ ಕರ್ನಾಟಕ ಉತ್ತರ ಒಳನಾಡಿನಲ್ಲೂ ಬರದ ಪರಿಸ್ಥಿತಿಯಂತೆಯೇ ಇದೆ. ಕಳೆದ ಕೆಲ ವಾರಗಳು ಮಳೆಯಾಗಿದ್ದರಿಂದ ಪರಿಸ್ಥಿತಿ ಹತೋಟಿಯಲ್ಲಿದೆ. ಮಲೆನಾಡಿನ ಭಾಗದಲ್ಲಿ ನಿರೀಕ್ಷೆಗಿಂತ ಕಡಿಮೆ ಆಗಿದ್ದರಿಂದ ದಕ್ಷಿಣ ಒಳನಾಡಿನಲ್ಲಿ ಪರಿಸ್ಥಿತಿ ಚೆನ್ನಾಗಿಲ್ಲ ಎಂದು ಅಧಿಕಾರಿಯೊಬ್ಬರು ಹೇಳುತ್ತಾರೆ.
ಸರಾಸರಿ ಮಳೆಗಿಂತ ಶೇ 20 ರಷ್ಟು ಕಡಿಮೆಯಾದರೆ, ಮಣ್ಣಿನ ತೇವಾಂಶ ಸಾಮಾನ್ಯಕ್ಕಿಂತ ಶೇ 50ರಷ್ಟು ಕಡಿಮೆಯಾದರೆ, ಬೆಳೆಯ ಆರೋಗ್ಯ ಪರೀಕ್ಷೆಯಲ್ಲಿ ಗುಣಮಟ್ಟ ಕಡಿಮೆ ಆಗಿರುವುದು ಕಂಡುಬಂದರೆ, ಬೆಳೆ ಇಳುವರಿ ವಾಡಿಕೆಗಿಂತ ಶೇ 50ರಷ್ಟು ಕಡಿಮೆಯಾದರೆ-ಈ ಪೈಕಿ ಯಾವುದೇ ಎರಡು ಅಂಶ ಸಾಬೀತಾದಲ್ಲಿ ಬರ ಪರಿಸ್ಥಿತಿ ಘೋಷಣೆ ಮಾಡಲಾಗುತ್ತದೆ.[ಉತ್ತರ ಕರ್ನಾಟಕದಲ್ಲಿ 62 ತಾಲೂಕುಗಳಲ್ಲಿ ಬರ]
ಕಳೆದ ವರ್ಷ ಕರ್ನಾಟಕದ ಒಟ್ಟು ಜನಸಂಖ್ಯೆಯ ಶೇ 50ರಷ್ಟು ಮಂದಿ ಬರಗಾಲದ ಪರಿಣಾಮ ಎದುರಿಸಿದರು. ರಾಜ್ಯದ 30 ಜಿಲ್ಲೆಗಳ ಪೈಕಿ 27 ಬರಗಾಲಕ್ಕೆ ತುತ್ತಾಗಿದ್ದವು. ರಾಜಸ್ತಾನದ ನಂತರ ತೀವ್ರ ಬರಗಾಲಕ್ಕೆ ತುತ್ಟಾದ ರಾಜ್ಯ ಕರ್ನಾಟಕ. ಕೆರೆ, ಕೊಳವೆಬಾವಿ, ನದಿಗಳಲ್ಲಿ ನೀರಿನ ಮಟ್ಟ ಕುಸಿಯುತ್ತಿದ್ದು, ಜನರಿಗೆ ಕುಡಿಯುವ ನೀರು ಸಿಗುವುದು ಕೂಡ ಕಷ್ಟವಾಗಿದೆ. ದಿನ ಬಳಕೆಗೆ, ಕೃಷಿಗೆ ಹಾಗೂ ಜಾನುವಾರಿಗಳಿಗೂ ನೀರಿಲ್ಲ ಎಂಬ ಸ್ಥಿತಿ ಇದೆ.