ಸರಕಾರದ ಹಗರಣದ ಆರೋಪಕ್ಕೆ ಮತ್ತೊಂದು ಕಪ್ಪುಚುಕ್ಕೆ: ಬಿಜೆಪಿ ಹೊಸ ಬಾಂಬ್
ರಾಜ್ಯ ಸರಕಾರದ ಮತ್ತೊಂದು ಹಗರಣವನ್ನು ಬಯಲು ಮಾಡುವುದಾಗಿ, ಬಿಜೆಪಿ ಮುಖಂಡ ಸಿ ಟಿ ರವಿ ಎಚ್ಚರಿಕೆ.
ಬೆಂಗಳೂರು, ಮಾ 2: ಕಿಕ್ ಬ್ಯಾಕ್ ಬಯಲಾಗುತ್ತೆ ಎಂದು ಸ್ಟೀಲ್ ಬ್ರಿಡ್ಜ್ ಯೋಜನೆಯನ್ನು ಸಿದ್ದರಾಮಯ್ಯ ಸರಕಾರ ಕೈಬಿಟ್ಟಿತು ಎನ್ನುತ್ತಿರುವ ಬಿಜೆಪಿ, ಸಿದ್ದರಾಮಯ್ಯ ಸರಕಾರದ ಮತ್ತೊಂದು ಹಗರಣ ಬಯಲು ಮಾಡುವುದಾಗಿ ಬಾಂಬ್ ಸಿಡಿಸಿದೆ.
ವಿದ್ಯುತ್ ಹಂಚಿಕೆ ಗುತ್ತಿಗೆಯಲ್ಲಿ ರಾಜ್ಯ ಕಾಂಗ್ರೆಸ್ಸಿನ ಪ್ರಭಾವಿ ಮುಖಂಡರೊಬ್ಬರು 'ಹಸ್ತ'ಕ್ಷೇಪ ನಡೆಸಿರುವ ವಿಚಾರ ಮೇಲ್ನೋಟಕ್ಕೆ ಸಾಬೀತಾಗಿರುವುದು, ಸದ್ಯದಲ್ಲೇ ಈ ಸಂಬಂಧ ದಾಖಲೆ ಬಿಡುಗಡೆ ಮಾಡುವುದಾಗಿ ಬಿಜೆಪಿ ಮುಖಂಡ ಸಿ ಟಿ ರವಿ ಹೇಳಿದ್ದಾರೆ.
ನಗರದಲ್ಲಿ ಬುಧವಾರ (ಮಾ 2) ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಿದ್ದ ರವಿ, KREDಯ ಮುನ್ನೂರು ಮೆಗಾವ್ಯಾಟ್ ಯೋಜನೆಯಲ್ಲಿ ರಾಜ್ಯ ಕಾಂಗ್ರೆಸ್ ಘಟಕದ ಪ್ರಭಾವಿ ಮಹಿಳೆಯೊಬ್ಬರು ಕಾನೂನನ್ನು ಉಲ್ಲಂಘಿಸಿ ಗುತ್ತಿಗೆ ಪಡೆದಿದ್ದಾರೆಂದು ರವಿ ಆರೋಪಿಸಿದ್ದಾರೆ.
ರೈತರ ಹೆಸರಿನಲ್ಲಿ ಬೋಗಸ್ ದಾಖಲೆ ಸೃಷ್ಟಿಸಿ, ಈ ಯೋಜನೆಯಲ್ಲಿ ಭಾರೀ ಪ್ರಮಾಣದ ಹಣವನ್ನು ಗುಳುಂ ಮಾಡಲಾಗಿದೆ ಎಂದು ಆರೋಪಿಸಿರುವ ಸಿ ಟಿ ರವಿ, ರಾಜ್ಯ ಸರಕಾರದ ಪ್ರಭಾವಿ ಸಚಿವರೊಬ್ಬರೂ ಇದರಲ್ಲಿ ಶಾಮೀಲಾಗಿದ್ದಾರೆಂದು ಗಂಭೀರ ಆರೋಪ ಮಾಡಿದ್ದಾರೆ.
ಇದಲ್ಲದೇ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ (ಕೆಪಿಟಿಸಿಎಲ್) ಸಂಸ್ಥೆಯ ಸುಪರ್ದಿಗೆ ಬರುವ ಕಲ್ಲಿದ್ದಲು ಖರೀದಿಯ ಟೆಂಡರ್ ನಲ್ಲೂ ಭಾರೀ ಅವ್ಯವಹಾರ ನಡೆಡಿದೆ ಎಂದು ರವಿ ಆರೋಪಿಸುವ ಮೂಲಕ ಸಿಎಂ ಸಿದ್ದರಾಮಯ್ಯ ತಮ್ಮ ಹೆಗಲಿನ ಮೇಲಿನ ಬಿಳಿ ಟವಲನ್ನು ಮತ್ತೊಮ್ಮೆ ಕೊಡವಿಕೊಳ್ಳುವಂತೆ ಮಾಡಿದ್ದಾರೆ.
ರಾಜ್ಯ ಬಿಜೆಪಿ ಘಟಕದ ಗುಮಾನಿ ಯಾರ ಮೇಲೆ? ಮುಂದೆ ಓದಿ..
ರಾಜ್ಯ ಸರಕಾರದ ಮೇಲೆ ನಿರಂತರ ಆರೋಪ
ದಾಖಲೆ ಸಮೇತ ಹೇಳಿಕೆ ನೀಡುವಲ್ಲಿ ಎತ್ತಿದ ಕೈಯಾಗಿರುವ ಕುಮಾರಸ್ವಾಮಿ ನಾಚುವಂತೆ, ಆರೋಪದ ಸರಮಾಲೆಯನ್ನೇ ಹೊರಿಸುತ್ತಿರುವ ರಾಜ್ಯ ಬಿಜೆಪಿ ಮುಖಂಡರು, ಸಿದ್ದರಾಮಯ್ಯ ಸರಕಾರದ ವಿರುದ್ದ ಸಾಲುಸಾಲು ಭ್ರಷ್ಟಾಚಾರದ ಆರೋಪ ಹೊರಿಸುತ್ತಿದ್ದರೆ, ಕಾಂಗ್ರೆಸ್ ಕೂಡಾ ಅದಕ್ಕೆ ತಿರುಗೇಟು ನೀಡುತ್ತಿದೆ.
ಬಿಜೆಪಿ ಗುಮಾನಿ ಯಾರ ಮೇಲೆ?
ಗುತ್ತಿಗೆಯ ಮುನ್ನೂರು ಮೆಗಾವ್ಯಾಟ್ ವಿದ್ಯುತ್ ಯೋಜನೆಯಲ್ಲಿ ರಾಜ್ಯ ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷರಾದ ಲಕ್ಷ್ಮಿ ಹೆಬ್ಬಾಳ್ಕರ್ ತಮ್ಮ ಪ್ರಭಾವವನ್ನು ಬಳಸಿಕೊಂಡು, ತಮ್ಮವರಿಗೇ ಗುತ್ತಿಗೆ ಕೊಡಿಸಿದ್ದಾರೆಂದು, ಸಿ ಟಿ ಆರೋಪಿಸಿದ್ದಾರೆ.
ದಾಖಲೆ ಬಿಡುಗಡೆ ಮಾಡುತ್ತೇನೆಂದ್ರು ರವಿ
ಲಕ್ಷ್ಮಿ ಹೆಬಾಳ್ಕರ್ ತಮ್ಮ ಕುಟುಂಬಕ್ಕೆ ವಿದ್ಯುತ್ ಉತ್ಪಾದಿಸುವ ಗುತ್ತಿಗೆಯನ್ನು ತಮ್ಮ ಸಂಬಂಧಿಕರ ಹೆಸರಿನಲ್ಲಿ ಒಂದು ನಿಮಿಷದೊಳಗೆ ಅರ್ಜಿ ಭರ್ತಿ ತುಂಬಿಸಿ ಗುತ್ತಿಗೆ ಪಡೆದುಕೊಂಡಿದ್ದಾರೆ. ಬೇನಾಮಿ ಹೆಸರಿನಲ್ಲಿ ಈ ಟೆಂಡರ್ ಅನ್ನು ಲಕ್ಷ್ಮಿ ತಮ್ಮದಾಗಿಸಿಕೊಂಡಿದ್ದಾರೆ - ಸಿ ಟಿ ರವಿ.
ಆದಾಯ ತೆರಿಗೆ ದಾಳಿ
ಕೆಲವು ದಿನಗಳ ಹಿಂದೆ ಬೆಳಗಾವಿಯ ಲಕ್ಷ್ಮಿ ಹೆಬಾಳ್ಕರ್ ನಿವಾಸದಲ್ಲಿ ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ದಾಳಿ ನಡೆಸಿದ್ದರು. ದಾಳಿಯ ವೇಳೆ ಭಾರೀ ಪ್ರಮಾಣದ ಆಸ್ತಿಪತ್ರ, ನಗದು ವಶಪಡಿಸಿಕೊಳ್ಳಲಾಗಿತ್ತು ಎನ್ನುವ ಸುದ್ದಿ ಹರಿದಾಡುತ್ತಿದ್ದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದಾಗಿದೆ.
ಯಡಿಯೂರಪ್ಪ ನೇರ ವಾಗ್ದಾಳಿ
ಕಿಕ್ ಬ್ಯಾಕಿಗೆ ಹೆದರಿ ಸಿದ್ದರಾಮಯ್ಯ, ಸ್ಟೀಲ್ ಬ್ರಿಡ್ಜ್ ಯೋಜನೆ ವಾಪಸ್ ಪಡೆದುಕೊಂಡರು ಎಂದು ನೇರ ಆರೋಪಿಸಿರುವ ಯಡಿಯೂರಪ್ಪ, ರಾಜ್ಯ ಸರಕಾರದ ಇನ್ನಷ್ಟು ಹಗರಣವನ್ನು ಬಯಲು ಮಾಡುವುದಾಗಿ ಸರಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.