ಜೂಜು ಪ್ರಿಯರಿಗೆ ಬಿಜೆಪಿ ಸರ್ಕಾರ ಕೊಡುತ್ತಿರುವ ಕೊಡುಗೆಯಾದರೂ ಏನು?
ಬೆಂಗಳೂರು, ಫೆಬ್ರವರಿ 22; ಶ್ರೀಮಂತರ ಜೂಜು ಆಟ ಎಂದು ಪ್ರಸಿದ್ಧವಾದ ಕ್ಯಾಸಿನೋಗಳು ಇನ್ಮುಂದೆ ಕರ್ನಾಟಕದ ಊರೂರುಗಳಲ್ಲಿಯೂ ಕಾಣಿಸಿಕೊಳ್ಳುತ್ತವಾ? ಎಂಬ ಸಂಶಯ ಶುರುವಾಗಿದೆ.
ಹೌದು, ಕರ್ನಾಟಕಕ್ಕೆ ಶ್ರೀಮಂತ ರಾಷ್ಟ್ರಗಳಿಂದ ಮೋಜು ಮಸ್ತಿಗೆ ಎಂದು ಬರುವ ವಿದೇಶಿ ಪ್ರವಾಸಿಗರನ್ನು ಸೆಳೆಯುವ ನಿಟ್ಟಿನಲ್ಲಿ ಇಂತಹದೊಂದು ಪ್ರಯತ್ನಕ್ಕೆ ರಾಜ್ಯ ಸರ್ಕಾರ ಕೈ ಹಾಕಿದೆ. ಕರ್ನಾಟಕ ಪ್ರವಾಸೋದ್ಯಮ ಇಲಾಖೆ ರಾಜ್ಯದಲ್ಲಿಯೂ ಕ್ಯಾಸಿನೋ ಜೂಜು ಕೇಂದ್ರಗಳನ್ನು ತೆರೆಯಬೇಕು ಎಂದು ಸರ್ಕಾರಕ್ಕೆ ಪ್ರಸ್ತಾವನೆ ಮುಂದಿಟ್ಟಿದೆ.
ದೇಶ ವಿರೋಧಿಗಳಿಗೆ ಬಿರಿಯಾನಿ ಅಲ್ಲ, ಬುಲೆಟ್ ಕೊಡ್ಬೇಕು: ಸಿಟಿ ರವಿ
ಪ್ರವಾಸದ್ಯೋಮ ಇಲಾಖೆ ನೇತೃತ್ವ ವಹಿಸಿರುವ ಸಿ ಟಿ ರವಿ ಅವರೇ ಈ ವಿಷಯವನ್ನು ಬಹಿರಂಗಪಡಿಸಿದ್ದು, ಇನ್ಮುಂದೆ ರಾಜ್ಯದಲ್ಲಿ ಕ್ಯಾಸಿನೋಗಳು ತಲೆ ಎತ್ತಲಿವೆ ಎಂದು ಹೇಳಿದ್ದಾರೆ. ಆದರೆ, ಪ್ರವಾಸದ್ಯೋಮ ಇಲಾಖೆ ಈ ನಿರ್ಧಾರಕ್ಕೆ ಕೆಲವರು ವಿರೋಧ ವ್ಯಕ್ತಪಡಿಸಿದ್ದು, ಕ್ಯಾಸಿನೋ ತೆರೆಯುವ ಮೂಲಕ ರಾಜ್ಯ ಬಿಜೆಪಿ ಸರ್ಕಾರ ಯಾರಿಗೆ ಅನುಕೂಲ ಮಾಡಿ ಕೊಡಲು ಹೊರಟಿದೆ? ಇದರಿಂದ ಯುವಕರು ಹಾಳಾಗುತ್ತಾರೆ ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಏಕೆ ಕ್ಯಾಸಿನೋ?
ಕರ್ನಾಟಕ ಈಗಾಗಲೇ ಜಗತ್ತಿನಲ್ಲಿ ಪ್ರಮುಖ ಪ್ರವಾಸಿ ತಾಣವಾಗಿ ಗುರುತಿಸಿಕೊಂಡಿದೆ. ಇಲ್ಲಿಗೆ ಅನೇಕ ದೇಶಗಳಿಂದ ಪ್ರವಾಸಿಗರು ಮೋಜು ಮಸ್ತಿಗಾಗಿ ಆಗಮಿಸುತ್ತಾರೆ. ರಾಜ್ಯಕ್ಕೆ ಬರುವ ಪ್ರವಾಸಿಗರು ಮೋಜು ಜೂಜಿನ ಸಲುವಾಗಿ ಗೋವಾ ಕಡಗೆ ಹೋಗುತ್ತಾರೆ. ಇದನ್ನು ತಪ್ಪಿಸುವ ನಿಟ್ಟಿನಿಂದ ಪ್ರವಾಸಿಗರಿಗಾಗಿ ಕರ್ನಾಟಕದಲ್ಲೇ ಜೂಜು ಕೇಂದ್ರ ತೆರೆಯಲು ಹೊರಟಿದ್ದೇವೆ ಎಂದು ಪ್ರವಾಸೋದ್ಯಮ ಇಲಾಖೆ ಸಚಿವರು ಹೇಳಿದ್ದಾರೆ.
ಸಚಿವ ಸಿ ಟಿ ರವಿ ಹೇಳುವುದು ಏನು?
'ರಾಜ್ಯದ ಕೆಲ ಕಡೆಗೆ ಪ್ರವಾಸೋದ್ಯಮ ಹಿತ ದೃಷ್ಠಿಯಿಂದ ಕ್ಯಾಸಿನೋಗಳನ್ನು ತೆರೆಯಬೇಕು ಎಂಬ ನಿರ್ಧಾರವನ್ನು ನಮ್ಮ ಇಲಾಖೆ ಮಾಡಿದೆ. ಕೆಲವು ನಿರ್ದಿಷ್ಟ ಸ್ಥಳಗಳಲ್ಲಿ ಮಾತ್ರ ಆರಂಭಿಸಲು ಅನುಮತಿ ನೀಡಲಾಗುವುದು. ಆದರೆ, ಈ ಬಗ್ಗೆ ಅಂತಿಮ ತೀರ್ಮಾನ ತೆಗೆದುಕೊಂಡಿಲ್ಲ' ಎಂದು ಸಚಿವ ಸಿ.ಟಿ.ರವಿ ಉಡುಪಿಯಲ್ಲಿ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಇಲಾಖೆ ಬಂಡವಾಳ ತೊಡಗಿಸುವುದಿಲ್ಲ
'ಜೂಜು ಕೇಂದ್ರ ತೆರೆಯಲು ಪ್ರವಾಸೋದ್ಯಮ ಇಲಾಖೆ ಬಂಡವಾಳ ತೊಡಗಿಸುವುದಿಲ್ಲ. ಸರ್ಕಾರ ನೀತಿ, ನಿಯಮಗಳನ್ನು ಮಾತ್ರ ರೂಪಿಸುತ್ತದೆ. ಆಸಕ್ತರು ಸರ್ಕಾರದಿಂದ ಅನುಮತಿ ಪಡೆದು ಕೇಂದ್ರಗಳನ್ನು ತೆರೆಯಲು ಅವಕಾಶ ಕೊಡಲಾಗುತ್ತದೆ' ಎಂದಿದ್ದಾರೆ.
ಯಾರಿಗೋ ಲಾಭ ಮಾಡಿ ಕೊಡಬೇಕು
'ಸರ್ಕಾರವೇ ಮುಂದು ನಿಂತು ಜೂಜು ಕೇಂದ್ರಗಳನ್ನು ತೆರೆಯುತ್ತಿರುವುದು ನಾಚಿಕೆಗೇಡಿನ ಸಂಗತಿ' ಎಂದು ಹಲವರು ವಿರೋಧ ವ್ಯಕ್ತಪಡಿಸಿದ್ದಾರೆ. 'ಆರ್ಥಿಕತೆ ಕುಸಿತವಾಗಿದೆ, ಯುವಕರಿಗೆ ಉದ್ಯೋಗ ಇಲ್ಲ. ನಮ್ಮದು ಸಂಸ್ಕೃತಿ ಇರುವ ಪಕ್ಷ ಎಂದು ಹೇಳುವ ಬಿಜೆಪಿ ಸರ್ಕಾರವೇ ವಿದೇಶಿ ಸಂಸ್ಕೃತಿಗೆ ಪ್ರೋತ್ಸಾಹ ನೀಡುತ್ತಿರುವುದನ್ನು ನೋಡಿದರೆ ಇದರ ಹಿಂದೆ ಯಾರಿಗೋ ಲಾಭ ಮಾಡಿ ಕೊಡಬೇಕು ಎನ್ನುವ ಹುನ್ನಾರ ಅಡಗಿದೆ' ಎಂದು ಕಾಂಗ್ರೆಸ್ ಜೆಡಿಎಸ್ ಮುಖಂಡರು ವಿರೋಧ ವ್ಯಕ್ತಪಡಿಸಿದ್ದಾರೆ.
ಎಲ್ಲಾ ಕಡೆಗೂ ಅಲ್ಲಾ ರೀ
ಇನ್ನು ಕ್ಯಾಸಿನೋಗಳನ್ನು ಸರ್ಕಾರವೇ ತೆರೆಯುತ್ತದೆ ಎಂದು ಸುದ್ದಿಗಳು ಹರಿದಾಡುತ್ತಿರುವ ಬಗ್ಗೆ ಉಡುಪಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಸಿ ಟಿ ರವಿ, 'ಊರುರಲ್ಲಿ ಕ್ಯಾಸಿನೋಗಳನ್ನು ತೆರೆಯುವುದಿಲ್ಲ ರೀ. ಇದಿನ್ನು ಅಂತಿಮವಾಗಿಲ್ಲ ಈಗಾಗಲೇ ಅಪಪ್ರಚಾರ ಬೇಡ' ಎಂದು ಹೇಳಿದರು.