ಬ್ರಾಹ್ಮಣರಿಗೆ ವಧುವಿನ ಕೊರತೆ : ಕಲ್ಯಾಣಕ್ಕೆ ಹೊಸ ಪ್ಲಾನ್!
Recommended Video
ಅವಳು ಕಪ್ಪು..ಇವಳು ಉದ್ದ ಜಾಸ್ತಿ, ಉಪ್ಪಿಟ್ಟು ಸರಿಯಿಲ್ಲ ಹೀಗೆ ಏನೇನೋ ಕಾರಣಗಳನ್ನು ನೀಡಿ, ಬಂದ ಸಂಬಂಧಗಳನ್ನೆಲ್ಲಾ ರಿಜೆಕ್ಟ್ ಮಾಡುತ್ತಿದ್ದ ಗಂಡಿನ ಕಡೆಯವರಿಗೆ, ಈಗ ಹೆಣ್ಣು ಅನ್ನೋದು ಸಿಕ್ಕಿದರೆ ಸಾಕಪ್ಪಾ.. ಸಾಕು ಎನ್ನುವಂತಹ ಪರಿಸ್ಥಿತಿ ನಿರ್ಮಾಣವಾಗಿರುವುದು ಬರೀ ಬ್ರಾಹ್ಮಣ ಸಮುದಾಯಕ್ಕೆ ಸೀಮಿತವಲ್ಲ.
ಬ್ರಾಹ್ಮಣ ಹುಡುಗರಿಗೆ ಮದುವೆಗೆ ಹೆಣ್ಣು ಹುಡುಕಿಕೊಡಿ...
ಹಾಗಂತ, ಎಲ್ಲಾ ಕುಟುಂಬದವರು ಕುಂಟನೆಪಯಿಟ್ಟುಕೊಂಡು ಬಂದ ಸಂಬಂಧವನ್ನೆಲ್ಲಾ ತಿರಸ್ಕರಿಸಿದ್ದಾರೆಂತ ಹೇಳುತ್ತಿಲ್ಲ. ಒಟ್ಟಿನಲ್ಲಿ, ಬ್ರಾಹ್ಮಣ ಸಮುದಾಯದಲ್ಲಿ ವಧು ಸಮಸ್ಯೆ ಎಷ್ಟು ಗಂಭೀರವಾಗಿ ಕೂತಿದೆಯೋ, ಅಷ್ಟೇ ಸಮಸ್ಯೆ ಒಕ್ಕಲಿಗ ಮತ್ತು ಲಿಂಗಾಯಿತ ಸಮುದಾಯದಲ್ಲೂ ಇದೆ.
ವರದಕ್ಷಿಣೆ ವಿಚಾರ ಬಿಡಿ..ಮದುವೆ ಖರ್ಚು ನಾವೇ ನೋಡ್ಕೋತೀವಿ ಅಂದರೂ ಹೆಣ್ಣು ಸಿಗುತ್ತಿಲ್ಲ ಅನ್ನೋದು ಈಗಿನ ವಸ್ತುಸ್ಥಿತಿ. ಬೇರೆ ಜಾತಿಯ ವಧುವನ್ನು ಬ್ರಾಹ್ಮಣ ಹುಡುಗರು ಮದುವೆಯಾದ ಎಷ್ಟೋ ಉದಾಹರಣೆಗಳು ನಮ್ಮ ಮುಂದಿವೆ, ಅದು ಮುಂದುವರಿಯುತ್ತಲೇ ಇದೆ..
ಅರ್ಚಕರ ಮದುವೆಯಾದರೆ ಸರಕಾರದಿಂದ 3 ಲಕ್ಷ, ಮದುವೆ ಖರ್ಚಿಗೆ 1 ಲಕ್ಷ
ಪುರೋಹಿತರಿಗಾಗಿ ತೆಲಂಗಾಣ ಸರಕಾರ ಹೊಸ ಯೋಜನೆ ಆರಂಭಿಸಿರುವುದು ವಾರದ ಕೆಳಗಿನ ಸುದ್ದಿ. ಅರ್ಚಕರು, ಪುರೋಹಿತರನ್ನು ಮದುವೆಯಾದರೆ, ಮದುವೆಯ ನಂತರ ದಂಪತಿ ಹೆಸರಿನಲ್ಲಿ ಬ್ಯಾಂಕ್ನಲ್ಲಿ ಖಾತೆ ತೆರೆದು 3ಲಕ್ಷ ರೂಪಾಯಿ ನಿಗದಿತ ಠೇವಣಿ ನೀಡುವ ಯೋಜನೆಯನ್ನು ತೆಲಂಗಾಣ ಸರಕಾರ ಆರಂಭಿಸಿದೆ. ಅಂತಾ, ಆಲೋಚನೆ ನಮ್ಮ ಮುಖ್ಯಮಂತ್ರಿಗಳಿಗೆ ಏನಾದರೂ ಇದೆಯಾ, ಗೊತ್ತಿಲ್ಲಾ! ಚುನಾವಣಾ ಹೊಸ್ತಿಲಲ್ಲಿ ಬಂದರೂ ಬರಬಹುದು..
ವಯಸ್ಸು ನಲವತ್ತಾದರೂ, ಮದುವೆಯಾಗದೇ ಮುಜುಗರ ಅನುಭವಿಸುತ್ತಿರುವ ಬ್ರಾಹ್ಮಣರಿಗೆ, ಉತ್ತರ ಭಾರತದಿಂದ ವಧುವನ್ನು ತರುವ ಪ್ರಯತ್ನ ಹಿಂದೆಯೂ ನಡೆದಿತ್ತು. ಅದು ತಕ್ಕ ಮಟ್ಟಿನ ಯಶಸ್ಸೂ ಪಡೆದಿತ್ತು. ಬೆಂಗಳೂರು, ಉಡುಪಿಯಲ್ಲಿ ನಡೆದ ಈ ಪ್ರಯತ್ನವನ್ನು ಮೈಸೂರಿನ ಸರಕಾರೇತರ ಸಂಸ್ಥೆ (NGO) ನಡೆಸಲು ಮುಂದಾಗಿದೆ. ಈ ಬಗ್ಗೆ, ಮುಂದೆ ಓದಿ..
ವಿಪ್ರ ಪರಸ್ಪರ ಸಹಾಯ ಸಮಿತಿ ಮತ್ತು ಕೇಂದ್ರೀಯ ಬ್ರಾಹ್ಮಣ ಮಹಾಸಭಾ
ಮೈಸೂರು ಮತ್ತು ವಾರಣಾಸಿಯ NGO ಸಂಸ್ಥೆಗಳಾದ 'ವಿಪ್ರ ಪರಸ್ಪರ ಸಹಾಯ ಸಮಿತಿ' ಮತ್ತು 'ಕೇಂದ್ರೀಯ ಬ್ರಾಹ್ಮಣ ಮಹಾಸಭಾ' ಜಂಟಿಯಾಗಿ ಮೈಸೂರಿನಲ್ಲಿ ಕಾರ್ಯಕ್ರಮವೊಂದನ್ನು ಇತ್ತೀಚೆಗೆ ಆಯೋಜಿಸಿತ್ತು. ಈ ಕಾರ್ಯಕ್ರಮದ ಉದ್ದೇಶ, ಉತ್ತರಭಾರತದಿಂದ ಹೆಣ್ಣನ್ನು ತರುವ ಅನಿವಾರ್ಯತೆಯ ಬಗ್ಗೆ ಸಭೆಯಲ್ಲಿ ವಿವರಿಸಲಾಯಿತು.
ವಾರಣಾಸಿಯ ಸುಮಾರು 500ಕ್ಕೂ ಹೆಚ್ಚು ಪೋಷಕರು ಈ ಕಾರ್ಯಕ್ರಮದಲ್ಲಿ ಭಾಗಿ
ವಾರಣಾಸಿಯ ಬ್ರಾಹ್ಮಣ ಮಹಾಸಭಾದ ಪರವಾಗಿ ಐವರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಕರ್ನಾಟಕಕ್ಕಿಂತ ಹೆಚ್ಚಾಗಿ ವಾರಣಾಸಿಯ ಸುಮಾರು ಐನೂರಕ್ಕೂ ಹೆಚ್ಚು ಪೋಷಕರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು ವಿಶೇಷ. ಇಲ್ಲಿನ ವರನಿಗೆ, ಅಲ್ಲಿನ ವಧುವನ್ನು ಮತ್ತು ಅಲ್ಲಿಂದ ಇಲ್ಲಿಗೆ ತರುವ ಪ್ರಯತ್ನಕ್ಕೆ ಆಶಾದಾಯಕ ವಾತಾವರಣವಂತೂ ಸೃಷ್ಟಿಯಾಗಿದೆ.
ಹೆಣ್ಣು ಮತ್ತು ಗಂಡಿನ ಜಾತಕ ಹೊಂದಿಕೊಂಡರೆ ಮಾತ್ರ ಮುಂದುವರಿಯುವ ತೀರ್ಮಾನ
ಅಲ್ಲಿಂದ ಇಲ್ಲಿಗೆ ಮತ್ತು ಇಲ್ಲಿಂದ ಅಲ್ಲಿಗೆ ಹೋಗುವ ಹೆಣ್ಣು ಮಕ್ಕಳನ್ನು ಅವರವರ ಅತ್ತೆ, ಮಾವನ ಮನೆಯಲ್ಲಿ ಸಂಪೂರ್ಣ ಪ್ರೀತಿ, ವಿಶ್ವಾಸ, ಜವಾಬ್ದಾರಿಯಿಂದ ನೋಡಿಕೊಳ್ಳಲಾಗುವುದಕ್ಕೆ, ಮೈಸೂರು ಮತ್ತು ವಾರಣಾಸಿಯ NGO ಸಂಸ್ಥೆಗಳು ಗ್ಯಾರಂಟಿ ವಹಿಸಿಕೊಂಡಿವೆ. ಹೆಣ್ಣು ಮತ್ತು ಗಂಡಿನ ಜಾತಕ ಹೊಂದಿಕೊಂಡರೆ ಮಾತ್ರ ಮುಂದುವರಿಯುವ ತೀರ್ಮಾನಕ್ಕೆ ಬರಲಾಗಿದೆ.
ಅನುರಾಗ್ ಮಾಟ್ರಿಮೋನಿ ಸಂಸ್ಥೆ ಇದರ ಜವಾಬ್ದಾರಿ ವಹಿಸಿಕೊಂಡಿದೆ
ಮೈಸೂರು ಮತ್ತು ವಾರಣಾಸಿ ನಡುವಿನ ಸಾಂಸ್ಕೃತಿಕ ಮತ್ತು ದೈನಂದಿನ ಪದ್ದತಿ, ಹುಡುಗ ಮತ್ತು ಹುಡುಗಿಯ ಫೋಟೋ ಮತ್ತು ಜಾತಕವನ್ನು ವಿನಿಮಯ ಮಾಡಿಕೊಳ್ಳುವುದು ಹೇಗೆ ಎನ್ನುವುದರ ಬಗ್ಗೆ ಚರ್ಚೆ ನಡೆದಿದೆ. ಅನುರಾಗ್ ಮಾಟ್ರಿಮೋನಿ ಅನ್ನೋ ಸಂಸ್ಥೆ ಇದರ ಜವಾಬ್ದಾರಿಯನ್ನೆಲ್ಲಾ ವಹಿಸಿಕೊಂಡಿದೆ.
ಉ.ಭಾದಿಂದ ಹೆಣ್ಮಕ್ಳನ್ನು ತರುವ ಪ್ರಯತ್ನ ಎರಡ್ಮೂರು ವರ್ಷದ ಹಿಂದೇನೂ ನಡೆದಿದೆ
ಉತ್ತರ ಭಾರತದಿಂದ ಹೆಣ್ಣನ್ನು ತರುವ ಪ್ರಯತ್ನ ಎರಡ್ಮೂರು ವರ್ಷದ ಹಿಂದೇನೂ ನಡೆದಿದೆ. ಬೆಂಗಳೂರಿನ ಪೂರ್ಣಪ್ರಜ್ಞ ವಿದ್ಯಾಪೀಠದಲ್ಲಿ ವಧುವರ ಅನ್ವೇಷಣೆ ಕೇಂದ್ರದ ಪ್ರಕಾರ, ಇದೊಂದು ಉತ್ತಮ ಪ್ರಯತ್ನ. ಆದರೆ, ಉತ್ತರ ಭಾರತದ ಕುಟುಂಬದವರು, ಕರುನಾಡಿಗೆ ಹೆಣ್ಣು ಕೊಡಲು ಇನ್ನೂ ಮನಃಪೂರ್ವಕವಾಗಿ ಒಪ್ಪಿಕೊಳ್ಳುತ್ತಿಲ್ಲ ಎನ್ನುವುದಂತೂ ಸತ್ಯ ಅಂತಾರೆ ವಧೂವರ ಅನ್ವೇಷಣೆ ಕೇಂದ್ರದ ಸದಸ್ಯರೊಬ್ಬರು.