8 ಎಕರೆ ಕಬ್ಬಿನ ಗದ್ದೆಗೆ ಬೆಂಕಿ, ರೈತನಿಗೆ ಸಂಕಷ್ಟ
ಮಂಡ್ಯ,ಫೆಬ್ರವರಿ, 03: ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಕೆ.ಆರ್.ಪೇಟೆ ತಾಲೂಕು ವ್ಯಾಪ್ತಿಯಲ್ಲಿ ಸುಮಾರು ಎಂಟು ಎಕರೆಗೂ ಹೆಚ್ಚು ಪ್ರದೇಶದಲ್ಲಿ ಕಟಾವಿಗೆ ಬಂದಿದ್ದ 250 ಟನ್ ಕಬ್ಬು ನಾಶವಾಗಿದ್ದು, ರೈತರಿಗೆ ಸಂಕಷ್ಟ ಎದುರಾಗಿದೆ.
ಬೂಕನಕೆರೆ ಹೋಬಳಿ ಬಳ್ಳೇಕೆರೆ ಗ್ರಾಮದ ಬಿ.ಟಿ.ಚಂದ್ರಶೇಖರ್ ಅವರಿಗೆ ಸೇರಿದ ಸುಮಾರು 4ಎಕರೆ ಕೃಷಿ ಜಮೀನಿನಲ್ಲಿ ಏಕಾಏಕಿ ಶಾರ್ಟ್ ಸರ್ಕ್ಯೂಟ್ ಸಂಭವಿಸಿತು. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಅಧಿಕಾರಿಗಳು ಬೆಂಕಿಯನ್ನು ನಂದಿಸಿ ಹೆಚ್ಚಿನ ಅನಾಹುತವನ್ನು ತಪ್ಪಿಸಿದ್ದಾರೆ.[ಕೆಆರ್ಎಸ್ ಡ್ಯಾಂ ಖಾಲಿ, ಬೆಂಗಳೂರು ಬೇಸಿಗೆ ಬಲು ಭೀಕರ!]
ಯಾರ ಕಬ್ಬಿನ ಗದ್ದೆ ನಾಶವಾಗಿದೆ?
ಕೆ.ಆರ್.ಪೇಟೆ ಪಟ್ಟಣದ ಅಗ್ರಹಾರ ಬಡಾವಣೆಯ ನಿಂಗೇಗೌಡ ಅವರ ಮಗ ಸಿದ್ದೇಗೌಡ ಅವರಿಗೆ ಸೇರಿದ ಹಳೆ ಗ್ರಾಮದ ಎಲ್ಲೆಯಲ್ಲಿರುವ 1ಎಕರೆ 10ಗುಂಟೆ ಜಮೀನಿನಲ್ಲಿ ಕಟಾವಿಗೆ ಬಂದಿದ್ದ ಕಬ್ಬಿನ ಗದ್ದೆಗೆ ಆಕಸ್ಮಿಕವಾಗಿ ಬೆಂಕಿ ಬಿದ್ದು ಕಬ್ಬು ನಾಶವಾಗಿದೆ.[ನಂಜನಗೂಡು: ಸಕ್ಕರೆ ಕಾರ್ಖಾನೆ ವಿರುದ್ಧ ರೈತರು ಕೆಂಡಮಂಡಲ]
ಕೆ.ಆರ್.ಪೇಟೆ ತಾಲೂಕಿನ ಅಕ್ಕಿಹೆಬ್ಬಾಳು ಹೋಬಳಿ ಚಿಕ್ಕಮಂದಗೆರೆ ಗ್ರಾಮದ ಬಸವರಾಜು ಅವರ ಪತ್ನಿ ಶಶಿಕಲಾ ಅವರು ತಮ್ಮ 3 ಎಕರೆ ಪ್ರದೇಶದಲ್ಲಿ ಬೆಳೆದಿದ್ದ ಕಬ್ಬು ಮತ್ತು 80 ತೆಂಗಿನ ಮರಗಳು ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದಾಗಿ ಬೆಂಕಿ ಹೊತ್ತಿಕೊಂಡಿದ್ದು, ಸುಮಾರು 150 ಟನ್ ಕಬ್ಬು ನಾಶವಾಗಿದೆ.