ಕೊವ್ಯಾಕ್ಸಿನ್ಗೆ ಹಾಹಾಕಾರ: 90 ಲಕ್ಷ ಮಂದಿ 2ನೇ ಡೋಸ್ ಲಸಿಕೆಗಾಗಿ ಪರದಾಟ
ಬೆಂಗಳೂರು, ಮೇ. 18: ಸರ್ಕಾರ ಮಾಡಿದ ಎಡವಟ್ಟಿನಿಂದ ಇದೀಗ ಜನ ಸಾಮಾನ್ಯರು ಲಸಿಕೆಗಾಗಿ ಬಾಯಿ ಬಡಿದುಕೊಳ್ಳುವಂತಾಗಿದೆ. ಬೆಂಗಳೂರಿನಲ್ಲಿ ತೆರೆದಿದ್ದ ಲಸಿಕಾ ಕೇಂದ್ರಗಳು ಲಸಿಕೆ ಕೇಂದ್ರಗಳು ಒಂದೊಂದಾಗಿ ಬಾಗಿಲು ಹಾಕಿಕೊಳ್ಳುತ್ತಿವೆ. ಕೊರೊನಾ ಸೋಂಕಿತರನ್ನೇ ತುಂಬಿಕೊಂಡಿರುವ ವಿಕ್ಟೋರಿಯಾ, ವಾಣಿವಿಲಾಸ, ಕೆ.ಜಿ.ಜನರಲ್ ನಾನಾ ಆಸ್ಪತ್ರೆಗಳಿಗೆ ಅಲೆದರೂ ಲಸಿಕೆ ಸಿಗುತ್ತಿಲ್ಲ. ಒಂದಡೆ ವ್ಯಾಕ್ಸಿನ್ ಲಭ್ಯವಿಲ್ಲ. ಇನ್ನೂ ಕೆಲವು ಕಡೆ ಕೋ ವ್ಯಾಕ್ಸಿನ್ ಲಸಿಕೆ ಲಭ್ಯವಿಲ್ಲ. ಲಸಿಕೆ ಅಭಿಯಾನ ವಿಚಾರದಲ್ಲಿ ಸರ್ಕಾರ ಅನುಸರಿಸಿದ ಎಡ್ಡ ನೀತಿಯಿಂದಾಗಿ ಎರಡನೇ ಡೋಸ್ ನ್ನು ಕಾಲಮಿತಿಯಲ್ಲಿ ಪಡೆಯಲಾಗದೇ ಒದ್ದಾಡುವಂತಾಗಿದೆ. ವೈದ್ಯರನ್ನೇ ಆರೋಗ್ಯ ಸಚಿವರನ್ನಾಗಿ ಪಡೆದರೂ ಕೊರೊನಾ ಸ್ಥಿತಿಯಲ್ಲಿ ರಾಜ್ಯಕ್ಕೆ ಯಾವ ದುಸ್ಥಿತಿ ಒದಗಿ ಬಂದಿದೆ ಇಲ್ಲಿದೆ ನೋಡಿ.
ರಾಜ್ಯ ಲಸಿಕೆ ಅಭಿಯಾನ ವಿವರ
ಕೇಂದ್ರ ಸರ್ಕಾರದ ಅಂಕಿ ಅಂಶಗಳ ಪ್ರಕಾರ ರಾಜ್ಯದಲ್ಲಿ ಈವರೆಗೂ 1.15,96,391 ಮಂದಿ ಲಸಿಕೆ ಹಾಕಿಸಿಕೊಂಡಿದ್ದಾರೆ. ಅದರಲ್ಲಿ ಎರಡನೇ ಡೋಸ್ ಲಸಿಕೆ ಹಾಕಿಸಿಕೊಂಡವರು ಕೇವಲ 25 ಲಕ್ಷ ಮಂದಿ ಮಾತ್ರ. ಉಳಿದ 90 ಲಕ್ಷ ಮಂದಿ ಎರಡನೇ ಡೋಸ್ ಮುಂದಿನ ಹದಿನೈದು ದಿನದೊಳಗಾಗಿ ಪಡೆಯಬೇಕಿದೆ. ಆದರೆ, ವಾಸ್ತವದಲ್ಲಿ ಎದುರಾಗಿರುವ ಬಹುದೊಡ್ಡ ಸಮಸ್ಯೆ ಕೋ ವ್ಯಾಕ್ಸಿನ್ ದು. ಕೇವಲ 45 ವರ್ಷ ಮೇಲ್ಪಟ್ಟವರಿಗೆ ಮೊದಲ ಲಸಿಕೆ ಎಂದು ಸರ್ಕಾರ ಕೊಟ್ಟ ಕೋ ವ್ಯಾಕ್ಸಿನ್ ನಿರೀಕ್ಷಿತ ಪ್ರಮಾಣದಲ್ಲಿ ಪೂರೈಕೆ ಆಗುತ್ತಿಲ್ಲ. ಈಗ ಎರಡನೇ ಡೋಸ್ ಗಾಗಿ ಕಾಯುತ್ತಿರುವ ಶೇ. ರಷ್ಟು ಮಂದಿ ಕೋವ್ಯಾಕ್ಸಿನ್ ಮೊದಲ ಡೋಸ್ ಪಡೆದವರು. ಸದ್ಯ ಮಾರುಕಟ್ಟೆಯಲ್ಲಿ ಕೊವಿಶೀಲ್ಡ್ ಲಭ್ಯವಿದೆ. ರಷ್ಯಾ ಮೂಲದ ಸ್ಪುಟ್ನಿಕ್ ಮಾರುಕಟ್ಟೆಯಲ್ಲಿ ಲಭ್ಯವಾಗುತ್ತಿದೆ. ಯಾವುದೇ ಲಸಿಕೆ ಬಂದರೂ ಮೊದಲ ಡೋಸ್ ಯಾವುದು ಪಡೆಯಲಾಗಿದೆಯೋ ಎರಡನೇ ಡೋಸ್ ಕೂಡ ಕಾಲಮಿತಿಯಲ್ಲಿ ಪಡೆಯಬೇಕಾಗಿದೆ. ಆದರೆ, ರಾಜ್ಯಕ್ಕೆ ಕೋ ವ್ಯಾಕ್ಸಿನ್ ಪೂರೈಕೆಯಾಗದ ಕಾರಣ ಮೊದಲ ಡೋಸ್ ವ್ಯಾಕ್ಸಿನ್ ನಿರುಪಯುಕ್ತವಾಗುವ ಆತಂಕ ಎದುರಾಗಿದೆ.
ಈಗಾಗಲೇ ನಿರುಪಯುಕ್ತ
ಕೋಲಾರ, ಚಿಕ್ಕಬಳ್ಳಾಪುರ ಸೇರಿದಂತೆ ಜಿಲ್ಲೆಗಳಲ್ಲಿ ಸರಾಸರಿ ಸರಿ 2 ಲಕ್ಷ ದಿಂದ 3 ಲಕ್ಷ ವರೆಗೂ ಮೊದಲ ಡೋಸ್ ನ್ನು ಕೋವಿಶೀಲ್ಡ್ ಲಸಿಕೆ ಹಾಕಲಾಗಿದೆ. ಆರೋಗ್ಯ ಸಚಿವ ಸುಧಾಕರ್ ಅವರ ಜಿಲ್ಲೆಯನ್ನೇ ಮಾದರಿಯಾಗಿ ಪರಿಗಣಿಸಿದರೆ ಅಲ್ಲಿ ಈವರೆಗೆ 2.75 ಲಕ್ಷ ಮಂದಿ ಮೊದಲ ಡೋಸ್ ಲಸಿಕೆ ಪಡೆದಿದ್ದಾರೆ. ಎರಡನೇ ಡೋಸ್ ಪಡೆದವರು ಕೇವಲ 48 ಸಾವಿರ ಮಾತ್ರ. ಉಳಿದ ಎರಡು ಲಕ್ಷ ಮಂದಿಯಲ್ಲಿ ಶೇ. 25 ರಷ್ಟು ಮಂದಿಯ ಕಾಲಮಿತಿ ಮುಗಿದಿದೆ.
ಮೊದಲ ಡೋಸ್ ಪಡೆದ 28 ದಿನದಲ್ಲಿ ವ್ಯಾಕ್ಸಿನ್ ಪಡೆದಿಲ್ಲ. ಕೆಲವರು ನಿರ್ಲಕ್ಷತೆ ವಹಿಸಿದರೆ, ಬಹುತೇಕರಿಗೆ ಕೋ ವ್ಯಾಕ್ಸಿನ್ ಲಸಿಕೆ ಲಭ್ಯವಾಗಿಲ್ಲ. ಇದು ಚಿಕ್ಕಬಳ್ಳಾಪುರ ಕಥೆಯಲ್ಲ, ಇಡೀ ಕರ್ನಾಟಕವೇ ಇಂತಹ ಸಮಸ್ಯೆ ಎದುರಿಸುತ್ತಿದೆ. ಲಸಿಕೆ ಅಭಿಯಾನ ಕೈಗೊಳ್ಳುವ ಮಂದಿ ಮೊದಲೇ ಆಲೋಚನೆ ಮಾಡಿ, ಶೇ. 50 ರಷ್ಟು ಲಸಿಕೆಯನ್ನು ಎರಡನೇ ಡೋಸ್ ಗಾಗಿ ಮೀಸಲಿಟ್ಟಿದ್ದಲ್ಲಿ ಈ ಸಮಸ್ಯೆ ತಲೆ ದೋರುತ್ತಿರಲಿಲ್ಲ. ಇದೀಗ ಬೇಡಿದರೂ ಕೇಂದ್ರದಿಂದ ಕೋ ವ್ಯಾಕ್ಸಿನ್ ಡ್ರಗ್ ಲಭ್ಯವಾಗುತ್ತಿಲ್ಲ. ಆದರೆ, ಇತ್ತ ಮೊದಲ ಡೋಸ್ ಪಡೆದು 28 ದಿನಗಳು ಕಳೆದು ಹೋಗಿವೆ. ಎಲ್ಲಿ ಹೋಗಿ ವಿಚಾರಿಸಿದರೂ 2 ನೇ ಡೋಸ್ ಕೋವ್ಯಾಕ್ಸಿನ್ ಸಿಗುತ್ತಿಲ್ಲ. ಬೇರೆ ಲಸಿಕೆ ತೆಗೆದುಕೊಳ್ಳಬಬಹುದು ಎಂಬುದನ್ನು ಈವರೆಗೂ ಸರ್ಕಾರವಾಗಲೀ ವೈದ್ಯರಾಗಲೀ ಸ್ಪಷ್ಟಪಡಿಸಿಲ್ಲ. ಲಸಿಕೆ ಅಭಿಯಾನ ವಿಚಾರದಲ್ಲಿ ಎದುರಾಗಿರುವ ಈ ಸಮಸ್ಯೆಗೆ ಪರಿಹಾರ ಹುಡುಕುವ ನಿಟ್ಟಿನಲ್ಲಿ ಸರ್ಕಾರ ಕೂಡ ಮುಂದಾಗಿಲ್ಲ.
2 ನೇ ಡೋಸ್ ಗೆ ಬೇಕಿದ್ದು 90 ಲಕ್ಷ ಡೋಸ್, ಬಂದಿದ್ದು 75 ಸಾವಿರ
ಇನ್ನು ರಾಜ್ಯದಲ್ಲಿ ಎರಡನೇ ಡೋಸ್ ಸೂಕ್ತ ಕಾಲದಲ್ಲಿ ಜನರಿಗೆ ನೀಡದಿದ್ದರೆ ಮೊದಲ ಡೋಸ್ ನ್ಯಾಷನಲ್ ವೇಸ್ಟ್ ಆಗುತ್ತದೆ ಎಂದು ಹೈಕೋರ್ಟ್ ಕೂಡ ಕಿಡಿ ಕಾರಿತ್ತು. ಸರ್ಕಾರವನ್ನು ಹೈಕೋರ್ಟ್ ತರಾಟೆಗೆ ತೆಗೆದುಕೊಂಡ ಕೂಡಲೇ ರಾಜ್ಯಕ್ಕೆ 75 ಸಾವಿರ ಡೋಸ್ ಕೋ ವ್ಯಾಕ್ಸಿನ್ ಬರುತ್ತಿರುವುದಾಗಿ ಆರೋಗ್ಯ ಸಚಿವ ಸುಧಾಕರ್ ಕೆ. ಅವರು ಸ್ಪಷ್ಟ ಪಡಿಸಿದ್ದರು. ವಾಸ್ತವದಲ್ಲಿ ಕರ್ನಾಟಕಕ್ಕೆ ಎರಡನೇ ಡೋಸ್ ಗೆ ಕಾಯುತ್ತಿರುವ ಮಂದಿ 90 ಲಕ್ಷ ಜನರು. ಅದರಲ್ಲಿ 70 ಲಕ್ಷ ಮಂದಿ ಕೋ ವ್ಯಾಕ್ಸಿನ್ ಮೊದಲ ಡೋಸ್ ಪಡೆದವರೇ. ಇದೀಗ ಅವರಿಗೆ ಕೋ ವ್ಯಾಕ್ಸಿನ್ 28 ದಿನ ಒಳಗೆ ಕೊಡಬೇಕಿತ್ತು. ಅಗತ್ಯಕ್ಕೆ ಅನುಗುಣವಾಗಿ ಕೋ ವ್ಯಾಕ್ಸಿನ್ ಲಸಿಕೆ ಲಭ್ಯವಾಗದ ಕಾರಣ ರಾಜ್ಯದಲ್ಲಿ ಈವರೆಗೂ ನಡೆಸಿದ ಲಸಿಕೆ ಅಭಿಯಾನ ಸಂಪೂರ್ಣ ವಿಫಲವಾಗುವ ಲಕ್ಷಣ ಗೋಚರಿಸುತ್ತಿದೆ. ಈಗಾಗಲೇ ತಜ್ಞ ವೈದ್ಯರು ಹೇಳಿರುವ ಪ್ರಕಾರ ಕಾಲಮಿತಿಯಲ್ಲಿ ಎರಡನೇ ಡೋಸ್ ಕೊಡಬೇಕು. ಮೊದಲು ಯಾವ ಡೋಸ್ ಪಡೆದಿದ್ದಾರೋ ಎರಡನೇ ಡೋಸ್ ಕೂಡ ಅದನ್ನೇ ನೀಡಬೇಕು. ಕೋವಿಡ್ ನಿರ್ವಹಣೆಯಲ್ಲಿ ಸಂಪೂರ್ಣ ವಿಫಲವಾಗಿರುವ ರಾಜ್ಯ ಸರ್ಕಾರ ಕೋವಿಡ್ ಲಸಿಕೆ ಅಭಿಯಾನದಲ್ಲಿ ಬಹುದೊಡ್ಡ ಪ್ರಮಾದ ಮಾಡಿದೆ.
ಜನರ ದಿನ ನಿತ್ಯದ ಅಲೆದಾಟ
ನನ್ನ ತಾಯಿಗೆ ಕೋ ವ್ಯಾಕ್ಸಿನ್ ಎರಡನೇ ಡೋಸ್ ಕೊಡಿಸಲು ಇನ್ನೆರಡು ದಿನ ಬಾಕಿಯಿದೆ. ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಹೋದರೆ ಅಲ್ಲಿ ವ್ಯಾಕ್ಸಿನ್ ಇಲ್ಲ. ಇನ್ನು ಕೆ.ಜಿ. ಜನರಲ್ ಆಸ್ಪತ್ರೆ ಸಮೀಪ ಬಂದೆವು. ಇಲ್ಲಿ ಕ್ಯೂ ಟೋಕನ್ ತೆಗೆದುಕೊಳ್ಳಬೇಕಂತೆ. ದಿನಕ್ಕೆ ಇಂತಿಷ್ಟು ಮಂದಿಗೆ ಮಾತ್ರ ಕೊಡುತ್ತಾರಂತೆ. ಹೀಗಾಗಿ ಇಲ್ಲಿದ್ದು ಏನು ಮಾಡೋದು. ಹಣೆಬರಹ ಬರೆದಂಗೆ ಆಗಲಿ ಎಂದು ಕೆ.ಜಿ. ಜನರಲ್ ಆಸ್ಪತ್ರೆಯಿಂದ ಹೊರ ನಡೆದರು. ಇದು ಒಬ್ಬರ ಕಥೆಯಲ್ಲ, ದಿನಕ್ಕೆ ಸಾವಿರಾರು ಮಂದಿ ಎರಡನೇ ಡೋಸ್ ಕೋ ವ್ಯಾಕ್ಸಿನ್ ಗಾಗಿ ಅಲೆಯುತ್ತಿದ್ದಾರೆ. ಅದರೆ, ಎಲ್ಲೂ ಲಭ್ಯವಾಗದ ಕಾರಣ ಜನ ಸಾಮಾನ್ಯರು ಇದೀಗ ಆತಂಕದಲ್ಲಿದ್ದಾರೆ. ಅದರಲ್ಲೂ ಒಂದು ಡೋಸ್ ಪಡೆದು ಎರಡನೇ ಡೋಸ್ ಕೋವ್ಯಾಕ್ಸಿನ್ ಪಡೆಯಲಾಗದವರು ಮಾತ್ರ ಅಂತಕದಲ್ಲಿ ದಿನ ದೂಡುತ್ತಿದ್ದಾರೆ.
ವೈದ್ಯರೇ ಆರೋಗ್ಯ ಸಚಿವರಾಗಿ ರಾಜ್ಯಕ್ಕೆ ಏನು ಪ್ರಯೋಜನ
ಕೊರೊನಾ ಮೊದಲನೇ ಅಲೆ ಎದುರಾದಾಗ ಆರೋಗ್ಯ ಸಚಿವರಾಗಿದ್ದ ಶ್ರಿರಾಮುಲು ಪರಿಸ್ಥಿತಿ ನೋಡಿ " ದೇವರು ನಮ್ಮನ್ನು ಕಾಪಾಡಬೇಕು" ಎಂದು ದೈವತ್ವ ಹೇಳಿಕೆ ನೀಡಿದ್ದರು. ಅದನ್ನೇ ಮುಂದಿಟ್ಟುಕೊಂಡು ಬಹುದೊಡ್ಡ ಲಾಭಿ ಶುರುವಾಯಿತು. ಆರೋಗ್ಯ ಸಚಿವ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ವೈದ್ಯರ ಕೈಯಲ್ಲಿರಬೇಕು. ಡಾ. ಸುಧಾಕರ್ ವೈದ್ಯ ಹಿನ್ನೆಲೆಯುಳ್ಳವರು, ಅವರು ಆರೋಗ್ಯ ಖಾತೆ ನಿಭಾಯಿಸಲು ಸಮರ್ಥರು ಎಂಬಂತೆ ಬಿಂಬಿಸಲಾಯಿತು. ಕೊನೆಗೆ ಆರೋಗ್ಯ ಖಾತೆ ಮತ್ತು ವೈದ್ಯಕೀಯ ಖಾತೆ ಎರಡೂ ಸುಧಾಕರ್ ಅವರಿಗೆ ವಹಿಸಲಾಯಿತು. ಯಾವ ವಿವಿಯಲ್ಲಿ ಸುಧಾಕರ್ ವೈದ್ಯ ಪದವಿ ಪಡೆದರೋ ಭಗವಂತನಿಗೆ ಗೊತ್ತು. ಇವರನ್ನು ವೈದ್ಯಕೀಯ ಕಾಲೇಜಿಗೆ ಸೇರಿಸಿದ ಚಿಕ್ಕಬಳ್ಳಾಪರ ವಕೀಲ ನಾರಾಯಣಸ್ವಾಮಿಗೆ ಗೊತ್ತು. ವೈದ್ಯರಾಗಿ ಇವತ್ತಿನ ವರೆಗೂ ಒಬ್ಬರಿಗೆ ಚುಚ್ಚು ಮದ್ದು ನೀಡಿದ್ದು ಸ್ಥಳೀಯರಾಗಿ ಯಾರೂ ಕಂಡಿಲ್ಲ!. ಕನಿಷ್ಠ ಪಕ್ಷ ವೈದ್ಯ ಲೋಕದ ಸತ್ಯಗಳನ್ನು ಅರಿತು ಕಾರ್ಯ ನಿರ್ವಹಣೆ ಮಾಡಿದ್ದರೆ, ಕೊರೊನಾ ಸೋಂಕಿನಿಂದ ಕರ್ನಾಟಕ ಈ ದುರಂತ ಪರಿಸ್ಥಿತಿಗೆ ಸಾಕ್ಷಿಯಾಗುತ್ತಿರಲಿಲ್ಲ.
Recommended Video
ಕೊರೊನಾ ದಲ್ಲಿ ಹೆಜ್ಜೆ ಹೆಜ್ಜೆಗೂ ದಂಧೆ
ಕೊರೊನಾ ಎರಡನೇ ಅಲೆ ಆರಂಭವಾಗುತ್ತಿದ್ದಂತೆ ವೈದ್ಯಕೀಯ ಲೋಕದಲ್ಲಿ ದೇಶದಲ್ಲಿ ಎಲ್ಲೂ ಕಾಣಿಸದ ಸುಲಿಗೆ ಇಲ್ಲಿ ನಡೆಯುತ್ತಿದೆ. ಆರೋಗ್ಯ ಸಚಿವರೊಬ್ಬರು ನಿಷ್ಠಾವಂತಿಕೆಯಿಂದ, ಬುದ್ಧಿವಂತಿಕೆಯಿಂದ , ಜನರ ಹಿತಾಸಕ್ತಿ ವಹಿಸಿ ತೀರ್ಮಾನ ತೆಗೆದುಕೊಂಡಿದ್ದಲ್ಲಿ, ಕೇವಲ 12 ಸಾವಿರಕ್ಕೆ ಲಭ್ಯವಾಗುತ್ತಿದ್ದ ಐಸಿಯು ದರ ಈಗ 40 ಸಾವಿರ ಆಗುತ್ತಿರಲಿಲ್ಲ. ಕಾರ್ಪೋರೇಟ್ ಆಸ್ಪತ್ರೆಗಳಲ್ಲಿ ಕೊರೊನಾ ಸೋಂಕಿತರೊಬ್ಬರು ಚಿಕಿತ್ಸೆ ಪಡೆಯುವ ವೆಚ್ಚ 30 ರಂದ 40 ಲಕ್ಷ ರೂ ಪಡೆಯುತ್ತಿರಲಿಲ್ಲ. 2 ಸಾವಿರ ಬೆಲೆಯ ರೆಮ್ಡಿಸಿವಿಆರ್ ಕಾಳಸಂತೆಯಲ್ಲಿ 25 ಸಾವಿರ ಕೊಟ್ಟು ತೆಗೆದುಕೊಳ್ಳುವ ಅಗತ್ಯ ಇರಲಿಲ್ಲ. ಆಕ್ಸಿಜನ್ ಇಲ್ಲದೇ ಜನರು ಸಾಯುತ್ತಿರಲಿಲ್ಲ. ಲಸಿಕೆ ಕೊಡುವುದಲ್ಲಿ ಈ ಪರಿಯ ಎಡ್ಡತನ ಆಗುತ್ತಿರಲಿಲ್ಲ. ಸಮಸ್ಯೆಗಳು ಒಂದಾ ಎರಡಾ ? ಒಬ್ಬ ವೈದ್ಯನೇ ಆರೋಗ್ಯ ಸಚಿವರಾಗಿದ್ದರೂ ಇಷ್ಟೆಲ್ಲಾ ಅವಾಂತರಗಳು ಎದುರಾಗಿರುವುದು ಕನ್ನಡಗಿರ ದುರಾದೃಷ್ಟ ವಲ್ಲದೇ ಮತ್ತೇನು ?