ಯಡಿಯೂರಪ್ಪ-ಶೋಭಾ ಕೆಜೆಪಿಯಿಂದ ಉಚ್ಛಾಟನೆ!
ಅದೂ ನಿನ್ನೆಯಷ್ಟೇ ಲೋಕಸಭೆಗೆ ಚುನಾವಣಾ ವೇಳಾಪಟ್ಟಿ ಪ್ರಕಟವಾಗಿರುವುದಾಗ ಬಿಎಸ್ವೈ, ಶೋಭಾ ವಗೈರೆಗಳನ್ನು ಹೀಗೆ ಸಾರಾಸಗಟಾಗಿ ಪಕ್ಷದಿಂದ ಒಗಾಯಿಸಿಬಿಟ್ಟರೆ ಹೇಗೆ? ಪಾಪ ಮೋದಿಯನ್ನು ಪ್ರಧಾನಿಯಾಗಿಸಬೇಕೆಂಬ ಧಾವಂತದಲ್ಲಿರುವ ಈ ನಾಯಕರ ಮುಂದಿನ ಗತಿಯೇನು?
ಏನೂ ಇಲ್ಲ. ಅವರೆಲ್ಲಾ ಆರಾಮವಾಗಿಯೇ ಇದ್ದಾರೆ. ಏಕೆಂದರೆ ಅವರನ್ನೆಲ್ಲ ಯಾವ ಪಕ್ಷದಿಂದ ಹೊರಹಾಕಲಾಗಿದೆ ಎಂಬುದು ಇಲ್ಲಿ ಮುಖ್ಯವಾಗುತ್ತದೆ. ಹೌದು ಕರ್ನಾಟಕ ಜನತಾ ಪಕ್ಷದ ಪದ್ಮನಾಭ ಪ್ರಸನ್ನ ಎಂಬ ಅರೆಕಾಲಿಕ ರಾಜಕಾರಣಿ ತಮ್ಮ ಕೆಜೆಪಿ ಪಕ್ಷದಿಂದ ಇವರನ್ನೆಲ್ಲಾ ಪಕ್ಷ ವಿರೋಧಿ ಚಟುವಟಿಕೆ ಹಾಗೂ ಇತರ ಪಕ್ಷಗಳೊಡನೆ ಸಂಬಂಧ ಹೊಂದಿರುವ ಆರೋಪ/ಆಧಾರದ ಮೇಲೆ ಹೊರಹಾಕಿದ್ದಾರೆ.
ಕರ್ನಾಟಕ ಜನತಾ ಪಕ್ಷದಲ್ಲಿ ಇದ್ದುಕೊಂಡು ಬೇರೆ ಪಕ್ಷಗಳೊಂದಿಗೆ ಸಂಬಂಧ ಹೊಂದಿರುವ ಹಲವು ಪದಾಧಿಕಾರಿಗಳು ಪಕ್ಷಕ್ಕೆ ದ್ರೋಹ ಬಗೆದಿದ್ದಾರೆ ಎಂದು ಪದ್ಮನಾಭ ಪ್ರಸನ್ನಕುಮಾರ್ ಕಿಡಿಕಾರಿದ್ದಾರೆ.
ಯಾರೆಲ್ಲಾ ಉಚ್ಚಾಟಿತರು!: ತಕ್ಷಣದಿಂದಲೇ ಜಾರಿಗೆ ಬರುವಂತೆ KJP ಪಕ್ಷದಿಂದ ಉಚ್ಛಾಟಿತಗೊಂಡಿರುವ ಪ್ರಮುಖ ನಾಯಕರೆಂದರೆ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ, ವಿಶ್ವನಾಥ ಪಾಟೀಲ್, ಗುರುಪಾದಪ್ಪ ನಾಗಮಾರಪಲ್ಲಿ, ಯುಬಿ ಬಣಕಾರ್, ಶೋಭಾ ಕರಂದ್ಲಾಜೆ, ಸಿಎಂ ಉದಾಸಿ, ಎಂಪಿ ರೇಣುಕಾಚಾರ್ಯ, ಎಂಡಿ ಲಕ್ಷ್ಮೀನಾರಾಯಣ, ಶಂಕರಗೌಡ ಪಾಟೀಲ್, ಮಂಜುನಾಥ ಗೌಡ, ಬಿವೈ ವಿಜಯೇಂದ್ರ, ಗೋಕುಲೆ ಹಾಗೂ ಮಂಜುಳಾ.