ಸಿಎಂ ರೈತರ ಮೂಗಿಗೆ ತುಪ್ಪ ಸವರಿದ್ದಾರೆ: ಶೋಭಾ ಕರಂದ್ಲಾಜೆ
Recommended Video
ಚಿಕ್ಕಮಗಳೂರು, ಜುಲೈ.13: ಮುಖ್ಯಮಂತ್ರಿ ಕುಮಾರಸ್ವಾಮಿ ಮಂಡಿಸಿರುವ ಬಜೆಟ್ ಸುಳ್ಳಿನ ಬಜೆಟ್. ಈ ರೀತಿಯ ಬಜೆಟ್ ಮಂಡಿಸುವ ಮೂಲಕ ಸಿಎಂ ಜನರ ಹಾಗೂ ರೈತರ ಮೂಗಿಗೆ ತುಪ್ಪ ಹಚ್ಚುವ ಕೆಲಸ ಮಾಡಿದ್ದಾರೆ ಎಂದು ಸಂಸದೆ ಶೋಭಾ ಕರಂದ್ಲಾಜೆ ಸಿಎಂ ವಿರುದ್ಧ ಕಿಡಿಕಾರಿದರು.
ಚಿಕ್ಕಮಗಳೂರಿನಲ್ಲಿ ಶುಕ್ರವಾರ ಮಾತನಾಡಿದ ಅವರು, ಬಜೆಟ್ ನಲ್ಲಿ ಸಿಎಂ ಸಾಲಮನ್ನಾ ಘೋಷಣೆ ಮಾಡಿದ್ದು, ಎಷ್ಟು ಸಾಲ ಮನ್ನಾ ಆಗುತ್ತೆ ಎಂಬ ಸ್ಪಷ್ಟತೆ ಇಲ್ಲ. ಹಾಗಾಗಿ ಸಿಎಂ ಸುಳ್ಳು ಹೇಳಿದ್ದಾರೆ ಎಂದು ದೂರಿದರು.
ಬಜೆಟ್ ಬಗ್ಗೆ ವಿರೋಧ ಪಕ್ಷದ ಪ್ರಶ್ನೆಗಳಿಗೆ ಕುಮಾರಸ್ವಾಮಿ ಖಡಕ್ ಉತ್ತರ
ಲೋಕಸಭಾ ಚುನಾವಣೆಯಲ್ಲಿ ಟಿಕೇಟ್ ಕೈ ತಪ್ಪುವ ವಿಷಯಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ನನಗೆ ಪಕ್ಷ ಯಾವ ಜವಾಬ್ದಾರಿ ಕೊಟ್ಟರೂ ನಿರ್ವಹಿಸುತ್ತೇನೆ. ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುವುದು ಬೇಡ ಎಂದರು ನಾನು ರೆಡಿ. ಚುನಾವಣೆಗೆ ಸ್ಪರ್ಧೆ ಮಾಡಿ ಎಂದರೆ ಅದಕ್ಕೂ ರೆಡಿ.
ರಾಷ್ಟ್ರದ ನಾಯಕತ್ವ, ರಾಜ್ಯದ ನಾಯಕತ್ವ ಯಾವುದು ಕೊಟ್ಟರು ನಿಭಾಯಿಸುತ್ತೇನೆ ಎಂದು ಸ್ಪಷ್ಟಪಡಿಸಿದರು.
ಈ ಹಿಂದೆ ಉಡುಪಿಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ್ದ ಅವರು ಬಿಜೆಪಿ ರಾಜ್ಯದಲ್ಲಿ ಅಪರೇಷನ್ ಕಮಲ ಮಾಡಲ್ಲ. ನಮಗೆ ಹೈಕಮಾಂಡ್ ಆದೇಶವಿದೆ. ಹಾಗಾಗಿ ನಾವು ಸರ್ಕಾರ ಬೀಳಿಸಲ್ಲ. ಜೆಡಿಎಸ್ ಕಾಂಗ್ರೆಸ್ ಅನ್ನು ಒಂದು ದಿನ ತಿಂದು ಹಾಕುತ್ತೆ ಅನ್ನುವ ಭಯದಲ್ಲಿದ್ದಾರೆ ಶಾಸಕರು.
ಕಾಂಗ್ರೆಸ್ ಹಿಂಬಾಗಿಲಿನ ಮೂಲಕ ಪಾಪದ ಕೃತ್ಯ ಎಸಗಿದೆ. ನಮ್ಮೊಂದಿಗೆ ಹತ್ತಾರು ಕಾಂಗ್ರೆಸ್ ಶಾಸಕರು ಸಂಪರ್ಕದಲ್ಲಿದ್ದಾರೆ ಎಂದು ಶೋಭಾ ಕರಂದ್ಲಾಜೆ ಸುಳಿವು ನೀಡಿದ್ದರು.