ಶೋಭಾ ಗೌಡ ಆಗುತ್ತಾರಾ ಕೇಂದ್ರ ಸಚಿವೆ ಕರಂದ್ಲಾಜೆ?
ಬೆಂಗಳೂರು, ಸೆ. 29: ಕೇಂದ್ರ ಸಚಿವೆ ಹಾಗೂ ಬಿಜೆಪಿ ನಾಯಕಿ ಶೋಭಾ ಕರಂದ್ಲಾಜೆ ತಮ್ಮ ಹೆಸರಿಗೆ ಗೌಡ ಹೆಸರನ್ನು ಸೇರಿಸಿಕೊಳ್ಳುತ್ತಿದ್ದಾರೆ ಎಂದು ಕೆಲ ಮಾಧ್ಯಮಗಳಲ್ಲಿ ವರದಿಯಾಗಿದೆ.
ಆಕೆಗೆ ಹತ್ತಿರ ಇರುವ ಮೂಲವೊಂದರ ಪ್ರಕಾರ ಶೋಭಾ ಕರಂದ್ಲಾಜೆ ಇನ್ಮುಂದೆ ಶೋಭಾ ಗೌಡ ಆಗಿ ಹೆಸರು ಬದಲಾವಣೆ ಮಾಡಿಕೊಳ್ಳುವ ಸಾಧ್ಯತೆ ಇದೆ. ಮಂಗಳೂರಿನ ಶೋಭಾ ಕರಂದ್ಲಾಜೆ ಒಕ್ಕಲಿಗರಾದರೂ ಜಾತಿ ಗುರುತು ಅಥವಾ ಜಾತಿ ಬಲ ಅವರಿಗೆ ಅಷ್ಟಾಗಿ ಸಿಕ್ಕಿರಲಿಲ್ಲ.
ಬಹುದಿನಗಳ ನಂತರ ಒಂದೇ ವೇದಿಕೆಯಲ್ಲಿ ಯಡಿಯೂರಪ್ಪ - ಶೋಭಾ ಕರಂದ್ಲಾಜೆ
ಈ ಕಾರಣಕ್ಕೆ ಅವರು ತಮ್ಮ ಒಕ್ಕಲಿಗ ಜಾತಿ ಪ್ರದರ್ಶನವನ್ನು ಹೆಸರಿನ ಮೂಲಕವೇ ಮಾಡಲು ಮುಂದಾಗಿದ್ದಾರೆ. ರಾಷ್ಟ್ರೀಯ ನಾಯಕರೂ ಕೂಡ ಈ ಹೆಸರು ಬದಲಾವಣೆಗೆ ಸೂಚಿಸಿದ್ದಾರೆ ಎನ್ನಲಾಗಿದೆ.
ಶೋಭಾ ಕರಂದ್ಲಾಜೆ ತಂದೆ ಹೆಸರು ಮೋನಪ್ಪ ಗೌಡ. ಹೀಗಾಗಿ, ಕರಂದ್ಲಾಜೆ ಬದಲು ಗೌಡ ಎಂದು ಬದಲಾಯಿಸಿಕೊಳ್ಳುತ್ತಿದ್ದಾರೆ. 2023ರ ಚುನಾವಣೆಯಲ್ಲಿ ಒಕ್ಕಲಿಗ ಸಮುದಾಯವನ್ನು ಸೆಳೆಯುವ ಪ್ರಯತ್ನವಾಗಿ ಈ ನಾಮ ಬದಲಾವಣೆ ನಡೆಯುತ್ತಿದೆ ಎಂಬುದು ಅವರ ಆಪ್ತರಿಗೆ ಹತ್ತಿರ ಇರುವ ಮೂಲಗಳು ಹೇಳುತ್ತವೆ.
ಪಿಎಫ್ಐ ಕಾರ್ಯಕರಿಗೆ ಸಿರಿಯಾ, ಪಾಕ್ನಲ್ಲಿ ತರಬೇತಿ: ಶೋಭಾ ಕರಂದ್ಲಾಜೆ ಆರೋಪ
ಒಕ್ಕಲಿಗ ಐಡೆಂಟಿಟಿ
ಇನ್ನೊಂದು ಪ್ರಮುಖ ವಿಚಾರ ಎಂದರೆ, ಶೋಭಾ ಕರಂದ್ಲಾಜೆ ಅವರನ್ನು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷರನ್ನಾಗಿ ಮಾಡುವ ಸಾಧ್ಯತೆ ಇದೆ. ಒಕ್ಕಲಿಗರೊಬ್ಬರು ಅಧ್ಯಕ್ಷರಾದರೆ ಆ ಸಮುದಾಯದ ಮತದಾರರನ್ನು ಆಕರ್ಷಿಸುವುದು ಸುಲಭವಾಗುತ್ತದೆ. ಶೋಭಾ ಹೆಸರಿನ ಮುಂದೆ ಇರುವ ಕರಂದ್ಲಾಜೆಯಿಂದ ಒಕ್ಕಲಿಗ ಗುರುತು ಸ್ಪಷ್ಟವಾಗುವುದಿಲ್ಲ. ಹೀಗಾಗಿ ಗೌಡ ಹೆಸರನ್ನು ಸೇರಿಸಿದರೆ ಒಕ್ಕಲಿಗ ಐಡೆಂಟಿಟಿ ಸುಲಭವಾಗುತ್ತದೆ ಎಂಬುದು ಲೆಕ್ಕಾಚಾರ.
ಮೂಲ ಬಿಜೆಪಿಗರ ಪೈಕಿ ಪ್ರಮುಖ ಒಕ್ಕಲಿಗ ನಾಯಕರೆಂದರೆ ಸಿ.ಟಿ. ರವಿ, ಆರ್ ಅಶೋಕ್, ಶೋಭಾ ಕರಂದ್ಲಾಜೆ, ಡಿವಿ ಸದಾನಂದ ಗೌಡ, ಡಾ. ಅಶ್ವತ್ಥನಾರಾಯಣ ಅವರು. ಇವರ ಪೈಕಿ ಬಿಜೆಪಿ ರಾಜ್ಯ ಅಧ್ಯಕ್ಷ ಸ್ಥಾನಕ್ಕೆ ಸಿ. ಟಿ. ರವಿ ಮತ್ತು ಶೋಭಾ ಕರಂದ್ಲಾಜೆ ಹೆಸರು ಕೇಳಿಬರುತ್ತಿದೆ. ಜೊತೆಗೆ ಸುನೀಲ್ ಕುಮಾರ್, ಅರವಿಂದ್ ಲಿಂಬಾವಳಿ ಹೆಸರೂ ಚಾಲನೆಯಲ್ಲಿದೆ.
ಸಿ.ಟಿ. ರವಿ, ಸುನೀಲ್ ಕುಮಾರ್ ಮತ್ತು ಶೋಭಾ ಕರಂದ್ಲಾಜೆ ಈ ಮೂವರೂ ಕೂಡ ಹಿಂದುತ್ವವನ್ನು ಬಲವಾಗಿ ಪ್ರತಿಪಾದಿಸುವವರು. ವಿಪಕ್ಷಗಳ ದಾಳಿಯನ್ನು ಹಿಂದುತ್ವದ ಮೂಲಕ ಎದುರಿಸುವುದು ಸದ್ಯ ಬಿಜೆಪಿ ಮುಂದಿರುವ ಪ್ರಮುಖ ಆಯ್ಕೆ. ಹೀಗಾಗಿ, ಈ ಮೂವರಲ್ಲಿ ಒಬ್ಬರಿಗೆ ರಾಜ್ಯಾಧ್ಯಕ್ಷ ಪಟ್ಟ ಸಿಕ್ಕರೆ ಅಚ್ಚರಿ ಇಲ್ಲ.
ಒಕ್ಕಲಿಗರ ಪ್ರದೇಶದಲ್ಲಿ...
ಶೋಭಾ ಕರಂದ್ಲಾಜೆ ರಾಜ್ಯ ಬಿಜೆಪಿ ಅಧ್ಯಕ್ಷೆಯಾಗದೇ ಹೋದರೂ ಕೂಡ 2023ರ ಚುನಾವಣೆಯಲ್ಲಿ ಶೋಭಾ ಗೌಡ ಆಗಿ ಪ್ರಮುಖ ಪಾತ್ರ ವಹಿಸುವುದು ಹೌದು. ಮೈಸೂರು ಸೀಮೆ ಭಾಗದಲ್ಲಿ ಒಕ್ಕಲಿಗರು ಹೆಚ್ಚಿದ್ದಾರೆ. ಇಲ್ಲಿ ಬಿಜೆಪಿಗಿಂತ ಕಾಂಗ್ರೆಸ್ ಮತ್ತು ಜೆಡಿಎಸ್ ಬಲವಾಗಿದೆ. ದೇವೇಗೌಡ ಕುಟುಂಬ, ಡಿಕೆ ಶಿವಕುಮಾರ್ ಅವರ ಪ್ರಾಬಲ್ಯ ಇಲ್ಲಿ ಹೆಚ್ಚು. ಇಲ್ಲಿ ಬಿಜೆಪಿ ಬಲವಾಗಿ ಬೇರೂರಬೇಕಾದರೆ ಒಕ್ಕಲಿಗ ನಾಯಕರಿಗೆ ಬಿಜೆಪಿ ಆದ್ಯತೆ ಕೊಡುವುದು ಅಗತ್ಯ.
ಮೊದಲಿಂದಲೂ ಆರೆಸ್ಸೆಸ್ ಜೊತೆ ಗುರುತಿಸಿಕೊಂಡಿರುವ, ಮತ್ತು ಆರೆಸ್ಸೆಸ್ನ ವಿವಿಧ ವಿಭಾಗಗಳಲ್ಲಿ ತೊಡಗಿಸಿಕೊಂಡಿದ್ದ ಶೋಭಾ ಕರಂದ್ಲಾಜೆ ಯಡಿಯೂರಪ್ಪ ಅವರ ಆಪ್ತೆ. ಬಿಎಸ್ವೈ ಸರಕಾರದಲ್ಲಿ ಇಂಧನ ಸಚಿವೆಯಾಗಿ ಗಮನ ಸೆಳೆಯುವ ಕೆಲಸ ಮಾಡಿದ್ದರು. ಒಂದು ಸಮಯದಲ್ಲಿ ಶೋಭಾ ಕರಂದ್ಲಾಜೆ ಸಿಎಂ ಆಗಬಹುದು ಎನ್ನುವಂತಹ ಸುದ್ದಿಗಳಿದ್ದವು. ಅಷ್ಟರಮಟ್ಟಿಗೆ ಅವರು ಪ್ರಭಾವಶಾಲಿ.
ಬಿಜೆಪಿಯ ಜಾತಿ ಪ್ರಯೋಗ
ಕರ್ನಾಟಕದಲ್ಲಿ ಆಡಳಿತವನ್ನು ಉಳಿಸಿಕೊಳ್ಳುವುದು ಈಗ ಬಿಜೆಪಿಗೆ ಬಹಳ ದೊಡ್ಡ ಸವಾಲಾಗಿದೆ. ಉತ್ತರಪ್ರದೇಶದಲ್ಲಿ ಬಿಜೆಪಿ ಸತತ ಎರಡನೇ ಬಾರಿ ಅಧಿಕಾರ ಪಡೆದಿದೆ. ಅದಕ್ಕೆ ಕಾರಣ ಅಲ್ಲಿ ಜಾತಿ ವಿಚಾರದಲ್ಲಿ ಬಹಳ ಆಳಕ್ಕಿಳಿದು ವಿವಿಧ ತಂತ್ರಗಳನ್ನು ಬಿಜೆಪಿ ರೂಪಿಸಿದ್ದು ವರ್ಕೌಟ್ ಆಗಿತ್ತು. ಅಂಥದ್ದೇ ಜಾತಿ ಪ್ರಯೋಗವನ್ನು ಕರ್ನಾಟಕದಲ್ಲಿ ಮಾಡಲು ಬಿಜೆಪಿ ವರಿಷ್ಠರು ಉತ್ಸುಕರಾಗಿದ್ದಾರೆ. ಬಿಜೆಪಿಗೆ ಮತ ಹಾಕಲು ಸಾಧ್ಯವಿರಬಹುದಾದ ಪ್ರಬಲ ಸಮುದಾಯಗಳನ್ನು ಗುರುತಿಸಿ ಅದಕ್ಕೆ ತಕ್ಕಂತೆ ಕಾರ್ಯತಂತ್ರ ರೂಪಿಸುವ ಕೆಲ ಮಾಡಲಿದ್ದಾರೆ.
ಜ್ಯೋತಿಷಿ ಸಂಪರ್ಕ?
ಇದೇ ಕಾರಣಕ್ಕೆ ಕೇಂದ್ರ ಬಿಜೆಪಿ ನಾಯಕರು ಶೋಭಾ ಕರಂದ್ಲಾಜೆಗೆ ಹೆಸರು ಬದಲಾಯಿಸಿಕೊಳ್ಳಲು ತಿಳಿಸಿದ್ದಿರಬಹುದು. ಇನ್ನು, ಸುದ್ದಿಯ ಪ್ರಕಾರ, ಶೋಭಾ ಕರಂದ್ಲಾಜೆ ಸಂಖ್ಯಾಶಾಸ್ತ್ರದ ಪ್ರಕಾರ ತಮ್ಮ ಹೆಸರು ಬದಲಾಯಿಸಿಕೊಳ್ಳಲು ಜ್ಯೋತಿಷಿಯೊಬ್ಬರನ್ನು ಸಂಪರ್ಕಿಸಿದ್ದಾರೆ. ಶೀಘ್ರದಲ್ಲೇ ಅವರು ಹೆಸರು ಬದಲಾವಣೆಗೆ ಅಫಿಡವಿಟ್ ಸಲ್ಲಿಸಬಹುದು ಎಂದು ಮೂಲಗಳು ಹೇಳುತ್ತಿವೆ.
(ಒನ್ಇಂಡಿಯಾ ಸುದ್ದಿ)