ಶೋಭಾ ಕರಂದ್ಲಾಜೆಗೆ ಮತ ಹಾಕದಂತೆ ನಾಗಲಕ್ಷ್ಮಿ ಕರೆ
ಉಡುಪಿ, ಏ.11: ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶೋಭಾ ಕರಂದ್ಲಾಜೆ ಅವರು ಮಹಿಳಾ ದ್ವೇಷಿ, ಭ್ರಷ್ಟ ರಾಜಕಾರಣಿ ಅವರಿಗೆ ಮತ ಹಾಕಬೇಡಿ ಎಂದು ಆರ್ ಟಿಐ ಹಾಗೂ ಸಾಮಾಜಿಕ ಕಾರ್ಯಕರ್ತೆ ಹಾಗೂ ಪತ್ರಕರ್ತೆ ನಾಗಲಕ್ಷ್ಮೀ ಬಾಯಿ ಹೇಳಿದ್ದಾರೆ.
ಧಾರವಾಡದ ಸಮಾಜ ಪರಿವರ್ತನಾ ಸಮುದಾಯ ಇತ್ತೀಚೆಗೆ ಪ್ರಕಟಿಸಿದ ರಾಜ್ಯದ 11 ಅತ್ಯಂತ ಭ್ರಷ್ಟ ಲೋಕಸಭಾ ಅಭ್ಯರ್ಥಿಗಳ ಪಟ್ಟಿಯಲ್ಲಿ ಶೋಭಾ ಕರಂದ್ಲಾಜೆ ಅವರು ಸ್ಥಾನ ಪಡೆದಿರುವುದನ್ನು ಇಲ್ಲಿ ಸ್ಮರಿಸಬಹುದು. ಉಡುಪಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ನಾಗಲಕ್ಷ್ಮಿ ಬಾಯಿ ಅವರು ಶೋಭಾ ಕರಂದ್ಲಾಜೆ ಅವರ ಜಾತಕ ಬಿಚ್ಚಿಟ್ಟರು.
ಶೋಭಾ ಮಹಿಳಾ ದ್ವೇಷಿ: ಮಹಿಳಾ ದ್ವೇಷಿಯಾದ ಆಕೆ, ಪಕ್ಷದಲ್ಲಿ ಯಾವೊಬ್ಬ ಮಹಿಳೆಯನ್ನೂ ಬೆಳೆಯಲು ಬಿಟ್ಟಿಲ್ಲ. ಯಡಿಯೂರಪ್ಪರಿಗೆ ನಿಕಟ ವಾಗಿದ್ದು ಪಡೆದ ಅವಕಾಶವನ್ನು ಬೇರೆ ಯಾರೂ ಪಡೆಯಲಾಗಿಲ್ಲ. ಆಕೆಯ ಸಹೋದ್ಯೋಗಿಗಳೇ ಮಹಿಳೆಯರ ಮೇಲೆ ದೌರ್ಜನ್ಯ ನಡೆಸಿದಾಗ ಆಕೆ ಮಹಿಳೆಯರ ಪರವಾಗಿ ಒಂದು ಮಾತೂ ಆಡಿಲ್ಲ. ಆಕೆಯ ಸಹೋದ್ಯೋಗಿಗಳೇ ಸದನದಲ್ಲಿ ಬ್ಲೂಫಿಲಂ ವೀಕ್ಷಿಸಿದರೂ ಆಕೆ ಅವರ ವಿರುದ್ಧ ಒಂದು ಹೇಳಿಕೆ ನೀಡಿಲ್ಲ. ಇಂಥವರಿಂದ ಮಹಿಳೆಯರಿಗೆ ರಕ್ಷಣೆ ಸಿಗಲು ಹೇಗೆ ಸಾಧ್ಯ. ಇಂಥ ವ್ಯಕ್ತಿಗಳಿಗೆ ಜನತೆ ಮತ ಹಾಕಬಾರದು ಎಂದು ಅವರು ನುಡಿದರು.
ಭ್ರಷ್ಟರ ವಿರುದ್ಧದ ಹೋರಾಟದಲ್ಲಿ ಈಗ ಸಮಾಜ ಪರಿವರ್ತನಾ ಸಮುದಾಯದ ಎಸ್.ಆರ್. ಹಿರೇಮಠರೊಂದಿಗೆ ಕೈಜೋಡಿಸಿ ರುವ ನಾಗಲಕ್ಷ್ಮೀ, ಈ ಬಾರಿಯ ಚುನಾವಣೆ ಯಲ್ಲಿ ಸ್ಪರ್ಧಿಸಿರುವ 11 ಅಭ್ಯರ್ಥಿಗಳ ವಿರುದ್ಧ ಇರುವ ಅಕ್ರಮಗಳ ವಿವರಗಳನ್ನು ನೀಡುತ್ತಿರುವ ಹಿನ್ನೆಲೆಯಲ್ಲಿ ಶೋಭಾ ಕುರಿತು ಮಾಹಿತಿಗಳನ್ನು ಬಹಿರಂಗಪಡಿಸಿದರು.
ಪತ್ರಕರ್ತೆ ನಾಗಲಕ್ಷ್ಮಿ ಬಾಯಿ ಪಟ್ಟಿಯಲ್ಲಿ ಹಲವರು
ಪಟ್ಟಿಯಲ್ಲಿರುವ ಉಳಿದ ಅಭ್ಯರ್ಥಿಗಳಾದ ಬಿ.ಎಸ್.ಯಡಿಯೂರಪ್ಪ, ಎಚ್.ಡಿ. ಕುಮಾರಸ್ವಾಮಿ, ವೀರಪ್ಪ ಮೊಯ್ಲಿ, ಧರಂಸಿಂಗ್, ಅನಂತ್ಕುಮಾರ್, ಅಶೋಕ್, ಪ್ರಹ್ಲಾದ ಜೋಶಿ, ಶ್ರೀರಾಮುಲು, ಪ್ರಶಾಂತ್ ದೇಶಪಾಂಡೆ ಹಾಗೂ ಡಿ.ಕೆ.ಸುರೇಶ್ ರ ಬಗ್ಗೆಯೂ ವಿವರಗಳನ್ನು ನೀಡಲಾಗುತ್ತದೆ ಎಂದು ನಾಗಲಕ್ಷ್ಮಿ ಬಾಯಿ ಹೇಳಿದರು.
ನಾಗಲಕ್ಷ್ಮಿ ಬಾಯಿ ಅವರು ಈ ಹಿಂದೆ ಕುಮಾರಸ್ವಾಮಿ ಅವರ ಘೋಷಿತಾ ಪತ್ನಿ ರಾಧಿಕಾ ಕುಮಾರಸ್ವಾಮಿ ಅವರ ಬಗ್ಗೆ ಕೋರ್ಟಿಗೆ ಅರ್ಜಿ ಹಾಕಿದ್ದರು. ಡಿವಿ ಸದಾನಂದ ಗೌಡ ಅವರು ಭೂ ಒತ್ತುವರಿ ಮಾಡಿದ್ದಾರೆ ಎಂದು ಆರೋಪಿಸಿದ್ದನ್ನು ಇಲ್ಲಿ ಸ್ಮರಿಸಬಹುದು.
ಪರಿಚಾರಿಕೆಯಾಗಿ ಕೆಲಸಕ್ಕೆ ಸೇರಿದ ಶೋಭಾ
ಬೆಂಗಳೂರು ಬಿಜೆಪಿ ಕಚೇರಿಯಲ್ಲಿ ತಿಂಗಳಿಗೆ 2,000 ರೂ. ಸಂಬಳಕ್ಕೆ ಕಚೇರಿ ಪರಿಚಾರಿಕೆಯಾಗಿ ಕೆಲಸಕ್ಕೆ ಸೇರಿದ ಶೋಭಾ, ಈಗ ನೂರಾರು ಕೋಟಿ ರೂ. ವೌಲ್ಯದ ಆಸ್ತಿಯ ಒಡತಿ. ಇಷ್ಟೊಂದು ಆಸ್ತಿ ಕೆಲವೇ ವರ್ಷಗಳಲ್ಲಿ ಹೇಗೆ ಮತ್ತು ಎಲ್ಲಿಂದ ಬಂತು ಎಂದು ನಾಗಲಕ್ಷ್ಮೀ ಪ್ರಶ್ನಿಸಿದರು.
ದಿಢೀರನೇ ವಿಧಾನಪರಿಷತ್ ಸದಸ್ಯೆಯಾದ ಶೋಭಾ
2005ರಲ್ಲಿ ದಿಢೀರನೇ ವಿಧಾನಪರಿಷತ್ ಸದಸ್ಯೆಯಾಗಿ ಆಯ್ಕೆಯಾದ ಶೋಭಾ, ಕೇವಲ ಮೂರೇ ತಿಂಗಳಲ್ಲಿ ಬಿಡಿಎಯಿಂದ ಬೆಂಗಳೂರಿನ ಎಚ್ ಎಸ್ ಆರ್ ಲೇಔಟ್ ನಲ್ಲಿ 50X80 ಸೈಟ್ ಪಡೆದರು. ಇದರ ಈಗಿನ ಮಾರುಕಟ್ಟೆ ಬೆಲೆ 2 ಕೋಟಿ ರು. ಎಂದು ಮೊನ್ನೆ ಚುನಾವಣಾ ನಾಮಪತ್ರ ಸಲ್ಲಿಸುವ ಸಮಯದಲ್ಲಿ ನೀಡಿದ ಅಫಿಡವಿಟ್ ನಲ್ಲಿ ತಿಳಿಸಿದ್ದಾರೆ. ಬೆಂಗಳೂರಿನಲ್ಲಿ ಬಿಡಿಎನಿಂದ ಒಂದು ಸೈಟ್ ಗಾಗಿ 25 ವರ್ಷ ಗಳಿಂದ ಕಾಯುತ್ತಿರುವವರು ಇರುವಾಗ ಶೋಭಾ, ಶಾಸಕಿಯಾದ ಮೂರೇ ತಿಂಗಳಿಗೆ ಈ ಸೈಟ್ ನ್ನು ಹೇಗೆ ಪಡೆದರು
ಬಿಡಿಎ ಸೈಟ್ ಮನೆ ಕಟ್ಟಲಿಕ್ಕೆ ಮಾರಾಟಕ್ಕಲ್ಲ
ಬಿಡಿಎಯಿಂದ ಪಡೆದ ಸೈಟ್ ನಲ್ಲಿ ಮನೆಯನ್ನು ಮಾತ್ರ ನಿರ್ಮಿಸಬೇಕು. ಅದನ್ನು ಹತ್ತು ವರ್ಷಗಳ ಕಾಲ ಮಾರಾಟ ಮಾಡುವಂತಿಲ್ಲ. ಅದು ಹತ್ತು ವರ್ಷ 'ಲಾಕಿಂಗ್ ಪಿರಿಯೇಡ್ 'ನಲ್ಲಿರುತ್ತದೆ. ಆದರೆ ಈ ಸೈಟ್ ನ್ನು ಪಡೆದ ಕೆಲವೇ ತಿಂಗಳಲ್ಲಿ ಅದನ್ನು ಬೆಂಗಳೂರಿನ ಫೆಡರಲ್ ಬ್ಯಾಂಕಿಗೆ ಅಡವಿಟ್ಟು ಶೋಭಾ 5 ಕೋಟಿ ರೂ.ಸಾಲ ಪಡೆದಿದ್ದರು.
ಸೇಲ್ ಡೀಡ್ ಏನೂ ಇಲ್ಲದೇ ಸಾಲ ಪಡೆದಿದ್ದಾರೆ
ಅದೇ ಸೈಟ್ ನ್ನು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾಕ್ಕೆ ಅಡವಿಟ್ಟು ಶೋಭಾ 3.5 ಕೋಟಿ ರೂ.ಸಾಲ ಪಡೆದಿರುವುದು. ಸೇಲ್ ಡೀಡ್ ಏನೂ ಇಲ್ಲದೇ ಒಂದೇ ಸೈಟ್ ಗೆ ಎರಡು ಬ್ಯಾಂಕ್ಗಳು ಕೋಟಿಗಟ್ಟಲೆ ಸಾಲ ನೀಡಲು ಹೇಗೆ ಸಾಧ್ಯ. ಅದೂ ಸೈಟ್ನ ವೌಲ್ಯ ಅದರ ಅರ್ಧಕ್ಕೂ ಇಲ್ಲದಿರುವಾಗ ಎಂದು ನಾಗಲಕ್ಷ್ಮೀ ಅಚ್ಚರಿ ವ್ಯಕ್ತಪಡಿಸಿದರು.
ಶೋಭಾ ಆದರ್ಶ ಡೆವಲಪರ್ಸ್ ಎಂಬ ಕಂಪೆನಿ
ಎಂಎಲ್ ಸಿ ಆಗಿರುವಾಗಲೇ ಶೋಭಾ ಆದರ್ಶ ಡೆವಲಪರ್ಸ್ ಎಂಬ ಕಂಪೆನಿಯಿಂದ ಯಾವುದೇ ಗ್ಯಾರಂಟಿ ಇಲ್ಲದೆ 3.6 ಕೋಟಿ ರೂ. ಸಾಲ ಪಡೆದಿದ್ದಾರೆ. ಇಡೀ ಬೆಂಗಳೂರನ್ನು ಜಾಲಾಡಿದರೂ ಅಂಥ ಒಂದು ಕಂಪೆನಿಯೇ ಇರುವುದು ಯಾರಿಗೂ ಗೊತ್ತಿಲ್ಲ. ಅದರ ವಿಳಾಸ ಎಲ್ಲಿಯೂ ಪತ್ತೆಯಾಗಿಲ್ಲ. ಹಾಗಿದ್ದರೆ ಅವರಿಗೆ ಸಾಲ ಕೊಟ್ಟವರು ಯಾರು ಎಂಬುದು ನಿಗೂಢ ಪ್ರಶ್ನೆ ಎಂದು ನಾಗಲಕ್ಷ್ಮೀ ಹೇಳಿದರು.
ಮಡಿಕೇರಿಯಲ್ಲಿ ಕಾಫಿ ತೋಟ ಖರೀದಿ
ಯಶವಂತಪುರದಿಂದ ಶಾಸಕಿಯಾಗಿ ಆಯ್ಕೆಯಾಗಿ ಸಚಿವೆಯೂ ಆದ ಶೋಭಾ 2-3 ತಿಂಗಳಿಗೇ ಮಡಿಕೇರಿಯಲ್ಲಿ 166 ಎಕರೆ ಕಾಫಿತೋಟವನ್ನು ಎಕರೆಗೆ 3.5 ಲಕ್ಷ ರೂ.ನಂತೆ ಖರೀದಿಸಿದರು. ಅದಕ್ಕೆ ಬೇಕಾದ ಸುಮಾರು 16 ಕೋಟಿ ರೂ.ಹಣ ಎಲ್ಲಿಂದ ಬಂತು ಎಂದು ಅವರು ಪ್ರಶ್ನಿಸಿದರು.
ಯಡಿಯೂರಪ್ಪರ ಅಳಿಯ ಶೋಧನ ಕುಮಾರ್ ಅವರ ಕಪಿಲ ಮಂಜುಶ್ರಿ ಅಪಾರಲ್ಸ್ ಕಂಪೆನಿಗೆ 3.36 ಕೋಟಿ ರೂ. ಸಾಲ ನೀಡಿರುವುದಾಗಿಯೂ ಶೋಭಾ ತನ್ನ ಚುನಾವಣಾ ಅಫಿಡವಿಟ್ ಬಹಿರಂಗ ಪಡಿಸಿದ್ದಾರೆಶೋಭಾ ಒಳ್ಳೆಯ ಲೇವಾದೇವಿ ವ್ಯವಹಾರಸ್ಥೆ
ಶೋಭಾ ಒಳ್ಳೆಯ ಲೇವಾದೇವಿ ವ್ಯವಹಾರ ನಡೆಸುವುದು ದಾಖಲೆಗಳ ಪರಿಶೀಲನೆಯಿಂದ ತಿಳಿಯುತ್ತದೆ. ಇನ್ನು ಉಡುಪಿ, ಮಂಗಳೂರಿನಲ್ಲೂ ಆಕೆ ಆಸ್ತಿ ಹೊಂದಿರುವ ಸಾಧ್ಯತೆ ಇದೆ. ಇನ್ನು ಇಂಧನ ಸಚಿವೆಯಾಗಿ ಆಕೆ ಹಲವಾರು ಅಕ್ರಮಗಳನ್ನು ನಡೆಸಿದ್ದಾರೆ. ವಿವಿಧ ಕಂಪೆನಿಗಳೊಂದಿಗೆ ವಿದ್ಯುತ್ ಖರೀದಿ ಮತ್ತು ಮಾರಾಟಕ್ಕೆ ಒಪ್ಪಂದ ಮಾಡಿಕೊಂಡು ಕಮಿಷನ್ ಸಂಪಾದಿಸಿರುವುದು ದಾಖಲೆಗಳಿಂದ ಗೊತ್ತಾಗುತ್ತದೆ
ಶೋಭಾರಿಂದ ವಿದ್ಯುತ್ ಖರೀದಿಯಲ್ಲೂ ಅಕ್ರಮ
ಹೈದರಾಬಾದ್ ಮೂಲದ ವಿದ್ಯುತ್ ಕಂಪೆನಿಯೊಂದಿಗೆ ನಡೆಸಿದ 25 ಕೋಟಿ ರೂ. ವ್ಯವಹಾರದಲ್ಲಿ ಶೇ.10 ಕಮಿಷನ್ ಹಣ ಸಂದಾಯಕ್ಕೆ ಸಂಬಂಧಿಸಿದಂತೆ ವಿಧಾನಸೌಧದಲ್ಲಿ ವಿಧಾನಮಂಡಲ ಅಧಿವೇಶನ ಸಮಯದಲ್ಲೇ ವಿವಾದ ಉಂಟಾಗಿತ್ತು. ಕೊನೆಗೆ ಆಕೆ ಸಹಾಯಕನ ವಿರುದ್ಧ ಹಾಗೂ ಮೂರು ಟಿವಿ ಪತ್ರಕರ್ತರ ವಿರುದ್ಧ ಕೇಸು ದಾಖಲಿಸಿದ್ದು, ಅದರ ಕುರಿತು ತನಿಖೆ ನಡೆಸದೆ ಮುಚ್ಚಿ ಹಾಕಲಾಗಿದೆ. ತಾನು ಶೋಭಾರ ಅಣತಿಯಂತೆ ಕಮಿಷನ್ ಹಣ ತರುತ್ತಿದ್ದೆ ಎಂದು ಸಹಾಯಕ ಹೇಳಿರುವುದು ವರದಿಯಾಗಿದೆ. ಇದರ ತನಿಖೆಯನ್ನು ಸಿಬಿಐಗೆ ಒಪ್ಪಿಸಿದರೆ ದೊಡ್ಡ ಹಗರಣ ಹೊರಬರುವುದು ನಿಶ್ಚಿತ ಎಂದು ಅವರು ನುಡಿದರು.