ಕಾರ್ಮಿಕರಿಗೆ ಸಿಹಿಸುದ್ದಿ ಕೊಟ್ಟ ಸಚಿವ ಶಿವರಾಂ ಹೆಬ್ಬಾರ್!
ಬೆಂಗಳೂರು, ಫೆ. 04: ಕೊರೊನಾವೈರಸ್ ಸಂಕಷ್ಟದ ಸಂದರ್ಭದಲ್ಲಿ ರಾಜ್ಯ ಕಾರ್ಮಿಕ ಇಲಾಖೆಯು ಶ್ರಮಿಕ ವರ್ಗದ ಬೆನ್ನೆಲುಬಾಗಿ ನಿಂತು ಕಾರ್ಯನಿರ್ವಹಿಸಿದೆ ಎಂದು ಕಾರ್ಮಿಕ ಸಚಿವ ಶಿವರಾಂ ಹೆಬ್ಬಾರ್ ಅವರು ಹೇಳಿದ್ದಾರೆ. ಬೆಂಗಳೂರಿನ ನೃಪತುಂಗ ರಸ್ತೆಯ ಯವನಿಕ ಸಭಾಂಗಣದಲ್ಲಿ ಆಯೋಜಿಸಿದ್ದ ಕಲಿಕಾ ಗುರುತಿಸುವಿಕೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಪರಿಹಾರ ಕಾರ್ಯಗಳಿಗೆ ಸರಿ ಸುಮಾರು ಒಂದು ಸಾವಿರ ಕೋಟಿ ರೂ. ವೆಚ್ಚವನ್ನು ಕಾರ್ಮಿಕ ಇಲಾಖೆ ಆ ಸಂದರ್ಭದಲ್ಲಿ ಮಾಡಿದೆ ಎಂದು ಅವರು ಮಾಹಿತಿ ನೀಡಿದರು. ಕರ್ನಾಟಕದ ಕಟ್ಟಡ ಮತ್ತು ನಿರ್ಮಾಣ ಕಾರ್ಮಿಕರ ಸುರಕ್ಷತೆ, ಆರೋಗ್ಯ ಮತ್ತು ಕಲ್ಯಾಣ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುವ ಸಲುವಾಗಿ ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯನ್ನು ರಚಿಸಲಾಗಿದೆ.
ಕೊರೊನಾವೈರಸ್ ಸಂಕಷ್ಟದ ಸಂದರ್ಭದಲ್ಲಿ ಇಲಾಖೆಯ ಕಾರ್ಯ ಚಟುವಟಿಕೆಗಳನ್ನು ಚುರುಕುಗೊಳಿಸಿ ಸಂತ್ರಸ್ತ ಫಲಾನುಭವಿಗಳ ಖಾತೆಗಳಿಗೆ 800 ಕೋಟಿ ರೂಪಾಯಿಗಳನ್ನು ನೇರವಾಗಿ ವರ್ಗಾವಣೆ ಮಾಡಿ ಮಧ್ಯವರ್ತಿಗಳ ಹಾವಳಿಯನ್ನು ತಡೆ ಹಾಕಲಾಗಿದೆ ಎಂದು ಸಚಿವ ಹೆಬ್ಬಾರ್ ವಿವರಿಸಿದರು.
ರಾಜ್ಯದಲ್ಲಿ ಕಲಿಕಾ ಗುರುತಿಸುವಿಕೆ ಯೋಜನೆ ಜಾರಿ ಮಾಡುವ ಸಂಸ್ಥೆಗಳ ಜೊತೆಯಲ್ಲಿ ಜಂಟಿ ಸಹಯೋಗದ ಮೂಲಕ ಪ್ರಮಾಣ ಪತ್ರವಿಲ್ಲದ ಕಾರ್ಮಿಕರು ಅಂದರೆ ಎಲೆಕ್ಟ್ರಿಷಿಯನ್, ಬಾರ್ ಬೆಂಡರ್, ಸ್ಟೀಲ್ ಫಿಕ್ಸರ್, ಮೇಸನ್, ಕಟ್ಟಡ ಕಾರ್ಮಿಕರು, ಪೇಂಟರ್, ಸ್ಕಫೋಲ್ಡರ್, ಪ್ಲಂಬರ್ ಹಾಗೂ ಕಾರ್ಪೆಂಟರ್ ಅಂತಹ ವಿವಿಧ ಪ್ರವರ್ಗದವರಿಗೆ ಕೌಶಲ್ಯಾಭಿವೃದ್ಧಿ ತರಬೇತಿಯನ್ನು ಆಯೋಜಿಸಲಾಗುತ್ತಿದೆ.
ಈ ತರಬೇತಿಯು ಕಾರ್ಮಿಕರಿಗೆ ತಮ್ಮ ತಿಳುವಳಿಕೆಯನ್ನು ವೃದ್ಧಿಸಿಕೊಳ್ಳಲು, ಸುರಕ್ಷತಾ ಕ್ಷೇತ್ರದಲ್ಲಿನ ಉತ್ತಮ ಅಭ್ಯಾಸಗಳನ್ನು ಅಳವಡಿಸಿಕೊಳ್ಳಲು ಹಾಗೂ ಉತ್ಪಾದಕತೆಯನ್ನು ಸುಧಾರಿಸಲು ಸಹಾಯಕವಾಗುತ್ತದೆ.
ಸುರಕ್ಷಿತ ಕಾರ್ಯವಿಧಾನವನ್ನು ಅಳವಡಿಸಿಕೊಳ್ಳುವ, ಉದ್ಯಮದ ಅಗತ್ಯಕ್ಕೆ ತಕ್ಕಂತಹ ಪರಿಕರಗಳು, ಸಲಕರಣೆಗಳು ಹಾಗೂ ಸಾಧನಗಳನ್ನು ನಿರ್ವಹಿಸುವ ತರಬೇತಿ ಹೊಂದಿದ ಮತ್ತು ಪ್ರಮಾಣಿತ ಕಾರ್ಯಪಡೆಯ ಮೇಲೆ ಕಟ್ಟಡ ನಿರ್ಮಾಣ ಉದ್ಯಮವು ಭರವಸೆ ಇಡಬಹುದಾಗಿದೆ ಎಂದು ಶಿವರಾಂ ಹೆಬ್ಬಾರ್ ಅಭಿಪ್ರಾಯಪಟ್ಟರು.
Recommended Video
ಕಾರ್ಮಿಕ ಇಲಾಖೆಯ ಆಯುಕ್ತ ಅಕ್ರಂ ಪಾಷಾ, ಜಂಟಿ ಕಾರ್ಯದರ್ಶಿ ಎಸ್. ರಾಜಶೇಖರ್, ಸಚಿವರ ಆಪ್ತ ಕಾರ್ಯದರ್ಶಿ ಮಂಜುನಾಥ್ ಬಳ್ಳಾರಿ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.