ಕರ್ನಾಟಕದ ಸರ್ಕಾರ ರದ್ದು ಮಾಡಿ: ಕೇಂದ್ರಕ್ಕೆ ಶಿವಸೇನಾ ಆಗ್ರಹ
ನವದೆಹಲಿ, ಜುಲೈ 22: ಕರ್ನಾಟಕದಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರವು ಅಲ್ಪಮತಕ್ಕೆ ಕುಸಿದಿದೆ.ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ಬಹುಮತ ಸಾಬೀತು ಪಡಿಸಲು ಯತ್ನಿಸುವ ಬದಲು ರಾಜೀನಾಮೆ ನೀಡುವುದೇ ಸರಿಯಾದ ಕ್ರಮ. ರಾಜಕೀಯ ಅಸ್ಥಿರತೆ ಉಂಟಾಗಿದ್ದು, ಕೈ-ತೆನೆ ಸರ್ಕಾರವನ್ನು ರದ್ದುಗೊಳಿಸಿ ಅಥವಾ ರಾಷ್ಟ್ರಪತಿ ಆಡಳಿತವನ್ನು ಹೇರುವುದು ಒಳ್ಳೆಯದು ಎಂದು ಕೇಂದ್ರ ಸರ್ಕಾರಕ್ಕೆ ಮಿತಪಕ್ಷ ಶಿವಸೇನೆ ಆಗ್ರಹಿಸಿದೆ.
ಶಾಸಕರ ರಾಜೀನಾಮೆ, ಅನರ್ಹತೆ, ವಿಪ್, ವಿಶ್ವಾಸಮತ ಯಾಚನೆ ವಿಳಂಬ, ಕೈ ತೆನೆ ಸರ್ಕಾರದ ಅಳಿವು ಉಳಿವು ಎಲ್ಲಾ ಲೆಕ್ಕಾಚಾರ, ಸುಪ್ರೀಂಕೋರ್ಟ್ ತೀರ್ಪು, ಸಾಂವಿಧಾನಿಕ ಹುದ್ದೆಗಳ ನಡುವಿನ ತಿಕ್ಕಾಟ ಕರ್ನಾಟಕ ದೇಶದ ಗಮನ ಸೆಳೆದಿದೆ. ಈ ಬಗ್ಗೆ ಶಿವಸೇನಾದ ಮುಖವಾಣಿ ಸಾಮ್ನಾದಲ್ಲಿ ಖಂಡಿಸಿ ಬರೆಯಲಾಗಿದೆ.
ಅತೃಪ್ತರಿಗೆ ಅನರ್ಹತೆ ಭೀತಿ, ವಿಪ್ ಬಗ್ಗೆ ಸ್ಪೀಕರ್ ಮಹತ್ವದ ರೂಲಿಂಗ್
"ಕರ್ನಾಟಕದಲ್ಲಿ ಎಲ್ಲರೂ ಪ್ರಜಾಪ್ರಭುತ್ವ ಹಾಳುಗೆಡವುತ್ತಿದ್ದಾರೆ. ಎರಡು ಕಡೆಗಳ ನಾಟಕವನ್ನು ನೋಡುತ್ತಾ ಕೇಂದ್ರ ಸರ್ಕಾರ ಸುಮ್ಮನಿದೆ ಏಕೆ? ರಾಷ್ಟ್ರಪತಿ ಆಳ್ವಿಕೆ ಜಾರಿಗೊಳಿಸುವುದು ಅಥವಾ ಕರ್ನಾಟಕ ವಿಧಾನಸಭೆ ವಿಸರ್ಜನೆ ಮಾಡುವುದೊಂದೆ ಮಾರ್ಗೋಪಾಯ, ಏನಾದರೂ ಮಾಡಿ ಕರ್ನಾಟಕದಲ್ಲಿನ ಈ ನಾಟಕ ನಿಲ್ಲಿಸಿ" ಎಂದು ಸಾಮ್ನಾದಲ್ಲಿ ಹೇಳಲಾಗಿದೆ.
"ಬಹಮತ ಇಲ್ಲದಿದ್ದರೂ ಕುರ್ಚಿಗೆ ಅಂಟಿಕೊಂಡಿರುವ ಕುಮಾರಸ್ವಾಮಿ ಅವರ ನಡೆಯನ್ನು ಇಡೀ ದೇಶ ಕುತೂಹಲದಿಂದ ನೋಡುತ್ತಿದ್ದಾರೆ" ಎಂದು ಸಾಮ್ನಾ ಹೇಳಿದೆ.ಬಿಜೆಪಿಯ ಬಳಿ 105 ಶಾಸಕರಿದ್ದು ಎರಡು ಪಕ್ಷೇತರ ಶಾಸಕರ ಬೆಂಬಲವೂ ದೊರೆತಿದೆ.ಹೀಗಾಗಿ ಮೇಲ್ನೋಟಕ್ಕೆ ದೋಸ್ತಿ ಸರ್ಕಾರ ಬಹುಮತ ಕಳೆದುಕೊಂಡಿರುವುದು ನಿಶ್ಚತವಾಗಿದೆ. ಆದರೆ ಕೊನೆಯ ಕ್ಷಣದಲ್ಲಿ ವಿಧಾನಸಭಾ ಕಲಾಪದಲ್ಲಿ ಯಾವ ಯಾವ ನಾಟಕಗಳು ನಡೆಯಲಿದೆ ಎನ್ನುವುದು ದೇಶದ ಜನರ ಕುತೂಹಲ ಕೆರಳಿಸಿದೆ.