ದೊಡ್ಡವರ ಸಾವು ರೋಚಕ ತಿರುವನ್ನೇ ಪಡೆಯುವುದೇಕೆ?
ಶೀರೂರು ಮಠದ ಲಕ್ಷ್ಮೀವರತೀರ್ಥ ಶ್ರೀಗಳು ದೈವಾಧೀನರಾಗಿದ್ದಾರೆ. ಅಷ್ಠಮಠದ ಶ್ರೀಗಳಲ್ಲಿ ಭಿನ್ನವಾದ ಸ್ವಭಾವದ, ಅಷ್ಠಮಠಗಳ ಇತರ ಸ್ವಾಮಿಗಳ ವಿರುದ್ಧ ಬಹಿರಂಗವಾಗಿ ಕಿಡಿಕಾರಿದ್ದ ಶ್ರೀಗಳು ಸದಾ ನೇರವಾದಿ.
ನಿಷ್ಠುರ ನಡೆಯ ಶ್ರೀಗಳು ನಿಧನ ಹೊಂದಿದ ಬೆನ್ನಲ್ಲೆ ಸುದ್ದಿಯೊಂದು ಹರಿದಾಡುತ್ತಿದೆ. ಶ್ರೀಗಳಿಗೆ ವಿಷಪ್ರಾಶನ ಮಾಡಿ ಕೊಲ್ಲಲಾಗಿದೆ. ಅವರನ್ನು ಕೊಲೆ ಮಾಡಲಾಗಿದೆ ಎಂಬ ಅನುಮಾನಗಳನ್ನು ಕೆಲವು ಸ್ವಾಮಿಗಳು ಮತ್ತು ಭಕ್ತಾಧಿಗಳು ವ್ಯಕ್ತಪಡಿಸಿದ್ದಾರೆ. ಮಾಧ್ಯಮಗಳು ಇದಕ್ಕೆ ತುಪ್ಪ ಸುರಿಯುತ್ತಿವೆ.
ಶೀರೂರು ಶ್ರೀಗಳ ವಕೀಲರಿಂದ ಸ್ಫೋಟಕ ಮಾಹಿತಿ
ಸುದ್ದಿ ನಿಜವಿದ್ದರೂ ಇರಬಹುದೇನೋ ಆದರೆ ವಿಷಯ ಅದಲ್ಲ. ಸಾಮಾನ್ಯವಾಗಿ ನೇರ ನುಡಿಯವರೋ, ಪ್ರಾಮಾಣಿಕರು ಎಂದು ಕರೆಸಿಕೊಂಡು ಸುದ್ದಿಯಾದವರೋ, ದೊಡ್ಡವರನ್ನು ಎದುರುಹಾಕಿಕೊಂಡು ಸುದ್ದಿಯಾದವರು ಸತ್ತಾಗ ಹೀಗೊಂದು ಸುದ್ದಿ ಸಾಮಾನ್ಯವಾಗಿ ಹರಡುತ್ತದೆ.
ಕೋಲಾರ ಜಿಲ್ಲಾಧಿಕಾರಿಯಾಗಿದ್ದ ಡಿ.ಕೆ.ರವಿ ಅವರು ನಿಧನರಾದಾಗಲಂತೂ ಇಂತಹಾ ಸುದ್ದಿಗಳು ಪುಂಖಾನುಪುಂಕವಾಗಿ ಹರದಾಡಿದ್ದವು. ಈಗಲೂ ಅದು ನಿಂತಿಲ್ಲ.
ಡಿ.ಕೆ.ರವಿ ಅವರಿಗೆ ವಿಷನೀಡಿ ಕೊಂದು ಆ ನಂತರ ನೇಣು ಹಾಕಲಾಗಿದೆ, ಅವರ ಮರಣೋತ್ತರ ಪರೀಕ್ಷೆ ವೇಳೆ ಆಗಿನ ಮುಖ್ಯಮಂತ್ರಿಗಳು ಹಿಂದಿನ ಬಾಗಿಲಿನಿಂದ ಪರೀಕ್ಷಾ ಕೊಠಡಿಗೆ ಹೋಗಿದ್ದರು. ರವಿ ಅವರ ಉಗುರಿನಲ್ಲಿ ವಿಷದ ಅಂಶ ಪತ್ತೆಯಾಗಿದೆ. ಕತ್ತಿನ ಬಾಗದಲ್ಲಿ ಸೂಜಿ ಚುಚ್ಚಿದ ಗುರುತಿದೆ ಹೀಗೆ ಹಲವು ಊಹಾಪೋಹಗಳು ವಿಪರೀತ ಎನಿಸುವಷ್ಟರ ಮಟ್ಟಿಗೆ ಹರಿದಾಡಿದ್ದವು.
ಶಿರೂರು ಶ್ರೀಗಳಿಗೆ ವಿಷಪ್ರಾಶನ? ಉಡುಪಿ ಶ್ರೀಕೃಷ್ಣನೇ ಬಲ್ಲ!
ಸಿಬಿಐ ತನಿಖೆ ನಡೆದು ರವಿ ಅವರದ್ದು ಆತ್ಮಹತ್ಯೆಯೇ ಎಂದು ವರದಿ ಕೊಟ್ಟ ಮೇಲೆಯೂ ಕೂಡ, ಈಗಲೂ ಎಷ್ಟೋ ಜನ ಅದು ಕೊಲೆಯಲ್ಲ ಆತ್ಮಹತ್ಯೆ ಎಂದು ನಂಬಲು ತಯಾರೇ ಇಲ್ಲ. ಸಿಬಿಐ ತನಿಖೆಯನ್ನೂ, ನ್ಯಾಯಾಲಯದ ತೀರ್ಪನ್ನು ಸುಳ್ಳೆಂದು ತಮ್ಮ ನಂಬಿಕೆಯೇ ಸತ್ಯವೆಂದು ಮೊಂಡು ವಾದ ಮಂಡಿಸುತ್ತಾರೆ. ಈ ವರ್ತನೆಗೆ ಕಾರಣವೇನು ಎಂಬುದು ಪ್ರಶ್ನೆ.
ಸಹಜ ಸಾವಿನ ಸುದ್ದಿಯಲ್ಲಿ ಅಥವಾ ಆತ್ಮಹತ್ಯೆ ಸುದ್ದಿಯಲ್ಲಿ ಸಿನಿಮೀಯ ಅಂಶ ಇರುವುದಿಲ್ಲ. ಅದೇ ಕೊಲೆಯ ಸುದ್ದಿಯಲ್ಲಿ ಆ ಅಂಶವಿದೆ. ಕೊಲೆಯ ಸುದ್ದಿಯನ್ನು ಕೇಳುಗ ಕಿವಿ ತೆರದು, ಕಣ್ಣರಳಸಿ ಕೇಳುತ್ತಾನೆ, ಹೇಳುವವನೂ ಸಹ ಹುಬ್ಬು ಏರಿಸಿ ಹೇಳುತ್ತಾನೆ. ಒಟ್ಟಿನಲ್ಲಿ ಕೊಲೆ ಸುದ್ದಿಯಲ್ಲಿರುವ 'ರುಚಿ' ಸಹಜ ಸಾವಿನ ಸುದ್ದಿಯಲ್ಲಿ ಇಲ್ಲ ಹಾಗಾಗಿ ಸಹಜ ಸಾವುಗಳೂ ಸಹ ಕೊಲೆಯ ರೂಪ ಪಡೆದುಕೊಳ್ಳುತ್ತವೆ.
ಈಗ ಶೀರೂರು ಶ್ರೀಗಳನ್ನು ವಿಷವಿಕ್ಕಿ ಕೊಲ್ಲಲಾಗಿದೆ ಎಂದು ಕೆಲವರು ಆರೋಪಿಸಿದ್ದಾರೆ. ಅವರು ತಿಂದ ಆಹಾರದಲ್ಲಿ ವಿಷ ಬೆರೆಸಲಾಗಿದೆ ಎಂದು ಆರೋಪಿಸಿದ್ದಾರೆ. ಒಂದು ವೇಳೆ ಹಾಗಾಗಿದ್ದಲ್ಲಿ ಎಲ್ಲರಿಗೂ ಆರೋಗ್ಯ ವ್ಯತ್ಯವಾಗಬೇಕಿತ್ತಲ್ಲವೆ?.
ಇರಲಿ ಇದು ಕೊಲೆಯೋ, ಅಥವಾ ಅನಾರೋಗ್ಯದಿಂದ ಆದ ಸಾವೋ ವರದಿ ಬಂದ ತಿಳಿಯುತ್ತದೆ ಈಗಲೇ ಯಾವುದೇ ನಿರ್ದಿಷ್ಟವಾಗಿ ತೀರ್ಮಾನಕ್ಕೆ ಬರುವುದು ಬೇಡ. ಅಷ್ಟೆ ಅಲ್ಲ ಸುಖಾಸುಮ್ಮನೆ ವದಂತಿಗಳನ್ನು ಸುಳ್ಳು ಸುದ್ದಿಗಳನ್ನೂ ಹರಡುವುದು ಬೇಡ.